ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಕುಂತಲಾ ಶ್ರೀಧರ


 ಶಕುಂತಲಾ ಶ್ರೀಧರ


ನಮ್ಮೆಲ್ಲರ ಆತ್ಮೀಯರಾಗಿದ್ದ ನಾಡಿನ ಪ್ರೊ. ಶಕುಂತಲಾ ಶ್ರೀಧರ ಅವರು ಪ್ರಸಿದ್ಧ ಕೃಷಿ ವಿಜ್ಞಾನಿಯಾಗಿದ್ದವರು. 


ಕೃಷಿ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಅಮೂಲ್ಯ ಸೇವೆ ಸಲ್ಲಿಸಿದ್ದ  ಶಕುಂತಲಾ ಅವರು ವಿಶ್ವದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಅಹ್ವಾನಿತರಾಗಿದ್ದವರು. ಕರ್ನಾಟಕದ ರಾಜ್ಯಪಾಲರಿಂದ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ನಿಯುಕ್ತರಾದ ಪ್ರಥಮ ಮಹಿಳಾ ಕೃಷಿ ವಿಜ್ಞಾನಿ ಎಂಬ ಕೀರ್ತಿಗೆ ಪಾತ್ರಾರಾಗಿದ್ದವರು. 


ಶಕುಂತಲಾ ಅವರು1947ರ ಏಪ್ರಿಲ್ 10ರಂದು ಜನಿಸಿದರು.  ಮಲ್ಲೇಶ್ವರದ ಹೆಣ್ಣುಮಕ್ಕಳ ಶಾಲೆಯಲ್ಲಿ ಓದಿ ಮುಂದೆ ಬೆಂಗಳೂರು ವಿಶ್ವವಿದ್ಯಾಲಯಲ್ಲಿ ವಿಜ್ಞಾನದಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿ ಗಳಿಸಿದರು.  ಪ್ರಾಣಿ ಶರೀರಶಾಸ್ತ್ರದಲ್ಲಿ ಸಂಶೋಧನೆ ಮಾಡಿ ಪಿಎಚ್.ಡಿ ಗಳಿಸಿದರು. 


ಕೃಷಿ ವಿಶ್ವವಿದ್ಯಾಲಯಕ್ಕೆ ಕೀಟಗಳು ಮತ್ತು ದಂಶಕ ಪ್ರಾಣಿಗಳ ಪರಿಣಾಮಗಳ ಕುರಿತಾಗಿ ಬೋಧಕರಾಗಿ ಸೇರಿದ ಶಕುಂತಲಾ ಅವರು ಫೋರ್ಡ್ ಫೌಂಡೇಶನ್ ಯೋಜನೆ ಅಡಿಯಲ್ಲಿ ಕೃಷಿಯಲ್ಲಿ ಕಶೇರುಕ ಕೀಟಗಳಿಂದಾದ ಪರಿಸ್ಥಿತಿಯ ಅವಲೋಕನ ಮತ್ತು ಪರಿಸ್ಥಿತಿ ನಿರ್ವಹಣೆಯ ಕ್ಷೇತ್ರದಲ್ಲಿ ತೊಡಗಿಕೊಂಡರು. ಹೀಗೆ ಅವರು ನಾಲ್ಕು ದಶಕಗಳ ಕಾಲ ಕೃಷಿ ಕ್ಷೇತ್ರದಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದರು.  ಅವರ ಸಂಶೋಧನೆಯು, ವ್ಯಾಪ್ತಿ ಕೃಷಿಕ್ಷೇತ್ರದಲ್ಲಿ ಇಲಿ ಮುಂತಾದ ದಂಶಕ ಪ್ರಾಣಿಗಳು ಮತ್ತು ಕೀಟಗಳಿಂದುಂಟಾಗುವ ಪರಿಣಾಮಗಳ ಕುರಿತಾಗಿ ವಿಶಾಲ ವ್ಯಾಪ್ತಿಯಿಂದ  ಕೂಡಿದ್ದೆನಿಸಿದೆ. 


ಶಕುಂತಲಾ ಅವರು ಭಾರತದಲ್ಲಿ ದಂಶಕಗಳ ಸಾಂದ್ರತೆ ಮತ್ತು ವೈವಿಧ್ಯತೆ, ಅವುಗಳಿಂದ ಉಂಟಾದ ಹಾನಿಯ ಪ್ರಮಾಣ, ಹಾಗ ಈ ಕೀಟಗಳ ಜನಸಂಖ್ಯೆಯ ಏರಿಳಿತವನ್ನು ಗುರುತಿಸುವ ಸಂಶೋಧನೆಯನ್ನು ಕೈಗೊಂಡರು.  ಕರ್ನಾಟಕದ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆ ಬೀಜಗಳು, ತೋಟಗಾರಿಕೆ ಮತ್ತು ತೋಟಗಾರಿಕಾ ಬೆಳೆಗಳ ಕ್ಷೇತ್ರಗಳಲ್ಲಿ ದಂಶಕ ಕೀಟಕ ನಾಶಕಗಳನ್ನು ಮೌಲ್ಯಮಾಪನ ಮಾಡಿದರು. ಬೆಳೆ ಕ್ಷೇತ್ರಗಳು, ಗೋದಾಮುಗಳು, ಕೋಳಿ ಸಾಕಣೆ ಕೇಂದ್ರಗಳು ಮತ್ತು ವಸತಿ ಆವರಣದಲ್ಲಿ ದಂಶಕಗಳ ನಿಯಂತ್ರಣ ಕಾರ್ಯತಂತ್ರಗಳ ಪರಿಣಾಮಕಾರಿ ಸೂತ್ರೀಕರಣದಲ್ಲಿ ಅವರ ಸಂಶೋಧನೆಯು ಅಪಾರ ಕೊಡುಗೆ ನೀಡಿದೆ. ದಕ್ಷಿಣ ಕರ್ನಾಟಕದ ಸುಮಾರು 50 ಹಳ್ಳಿಗಳಲ್ಲಿ ರೈತರು ಮತ್ತು ಕೃಷಿ ಮಹಿಳೆಯರಿಗೆ ಸಂಶೋಧನೆಗಳುಂಟಾದ ಲಾಭಗಳ ಪಾಲನೆಯನ್ನು ಕಲಿಸಿಕೊಡುವ ಕಾರ್ಯಕ್ರಮಗಳಲ್ಲಿ ನೇರ ಪ್ರಮುಖ ಪಾತ್ರ ನಿರ್ವಹಿಸಿದ್ದರು. 


ಶಕುಂತಲಾ ಅವರು ಹಲವಾರು ವೈಜ್ಞಾನಿಕ ಸಂಸ್ಥೆಗಳ ಪ್ರತಿಷ್ಠಿತ ಸ್ಥಾನಗಳ ಜವಾಬ್ದಾರಿ ನಿರ್ವಹಿಸಿದ್ದರು. ನವದೆಹಲಿಯ ಐಸಿಎಆರ್ ಎಮಿರಿಟಸ್ ಸೈಂಟಿಸ್ಟ್ (ದಂಶಕ ನಿಯಂತ್ರಣ), ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್ ಪ್ರತಿನಿಧಿತ್ವ, ಎಥೋಲಾಜಿಕಲ್ (ಅನಿಮಲ್ ಬಿಹೇವಿಯರ್) ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷತೆ, ಕರ್ನಾಟಕ ಅಸೋಸಿಯೇಶನ್ ಫಾರ್ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ (ಸೆಂಟ್ರಲ್ ಕಾಲೇಜು) ಉಪಾಧ್ಯಕ್ಷತೆ, 

ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಎಥಾಲಜಿಸ್ಟ್ಸ್, ಇನ್ಸ್ಟಿಟ್ಯೂಟ್ ಇನ್ ವಾಷಿಂಗ್ಟನ್ ಡಿಸಿ , ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ, ಮೋನೆಲ್ ಕೆಮಿಕಲ್ ಕಂಟ್ರೋಲ್ ಇತ್ಯಾದಿಗಳ ಸದಸ್ಯತ್ವ ಇವುಗಳಲ್ಲಿ ಸೇರಿದ್ದವು. 


ಶಕುಂತಲಾ ಅವರು ಆಕ್ಸ್‌ಫರ್ಡ್, ನಾಟಿಂಗ್‌ಹ್ಯಾಮ್, ಮ್ಯೂನಿಚ್, ಕೋಪನ್‌ಹೇಗನ್, ವಿಶ್ವ ಆರೋಗ್ಯ ಸಂಸ್ಥೆ, ಆಸ್ಟ್ರಿಯಾ, ಹವಾಯಿ, ಟ್ಯೂಬಿಂಗೆನ್, ಬರ್ಕ್ಲಿ ಮತ್ತು ಡೇವಿಸ್‌ನಲ್ಲಿರುವ ಯಸಿಎಲ್ಎ, ಡೆನ್ವರ್ ವೈಲ್ಡ್‌ಲೈಫ್ ರಿಸರ್ಚ್ ಸೆಂಟರ್, ನಾಕ್ಸ್ ವಿಲ್ಲೆ, ಸ್ಮಿತ್ಸೋನಿಯನ್ ರಾಷ್ಟ್ರೀಯ ಝೂಲಾಜಿಕಲ್ ಪಾರ್ಕ್, ಬೌಲಿಂಗ್ ಗ್ರೀನ್ ಸ್ಟೇಟ್‌ನಂತಹ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಆಹ್ವಾನಿತರಾಗಿ ಉಪನ್ಯಾಸಗಳನ್ನು ನೀಡಿದ್ದರು.‍


ಶಕುಂತಲಾ ಅವರು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡಿದ್ದರಲ್ಲದೆ, ತಾವೂ ಅಂತಹ ಸಂಕಿರಣಗಳನ್ನು ಸಂಯೋಜಿಸಿದ್ದರು. ಪ್ರಾಣಿಗಳ ನಡವಳಿಕೆ ಮತ್ತು ಮಾನವ-ವನ್ಯಜೀವಿ ಸಂಘರ್ಷದ ಸ್ವರೂಪಗಳ ಕುರಿತಾಗಿ ಅವರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದರು.


ಡಾ.ಶಕುಂತಲಾ ಶ್ರೀಧರ ಅವರು ಕೃಷಿಯಲ್ಲಿ ದಂಶಕಗಳು, ಕೀಟಗಳು ಮತ್ತು ಕಶೇರುಕ ಕೀಟಗಳ ಕುರಿತು ಅನೇಕ ಮಹತ್ವದ ಪುಸ್ತಕಗಳನ್ನು ಬರೆದಿದ್ದಾರೆ. ಅವರ ವೈಜ್ಞಾನಿಕ ಪ್ರಕಟಣೆಗಳು ನೂರಕ್ಕೂ ಹೆಚ್ಚಿವೆ.  ಸೇವೆಯ ಸಮಯದಲ್ಲಿ ಅವರು ಹಲವಾರು ವರ್ಷಗಳ ಕಾಲ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಅಧಿಕೃತ ನಿವಾಸಗಳಾದ ರಾಜಭವನ ಮತ್ತು ಕೃಷ್ಣಾದಲ್ಲಿ ದಂಶಕಗಳ ನಿಯಂತ್ರಣದ ಮೇಲ್ವಿಚಾರಣೆಯನ್ನು ನಿರಂತರವಾಗಿ ನಿರ್ವಹಿಸಿದ್ದರು.


ಶಕುಂತಲಾ ಶ್ರೀಧರ ಅವರು ನಿವೃತ್ತಿಯ ನಂತರದಲ್ಲಿ ಲಾಭರಹಿತ ವೈಜ್ಞಾನಿಕ ಸಂಸ್ಥೆಗಳ ಆಡಳಿತ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿಮರ್ಶೆಗಳು ಮತ್ತು ಪುಸ್ತಕಗಳನ್ನು ಬರೆದರು, ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ಮುಖ್ಯವಾಗಿ ವಿಜ್ಞಾನಿಗಳ ಯುವ ಪಡೆಯನ್ನು ರೂಪಿಸುತ್ತಿದ್ದರು.


ಶಕುಂತಲಾ ಶ್ರೀಧರ ಅವರು 2023ರ ನವೆಂಬರ್ 7ರಂದು ನಿಧನರಾದರು.


ಫೆಸ್ಬುಕ್ ವಲಯದಲ್ಲಿ ನಮಗೆಲ್ಲ ಆತ್ಮೀಯರಾಗಿದ್ದ ಶಕುಂತಲಾ ಅವರು ನಮಗೆಲ್ಲ ತೋರಿದ ಪ್ರೀತಿ ಅಪಾರವಾದದ್ದು.  ಅವರ ಹುಟ್ಟುಹಬ್ಬದ ಸಂದರ್ಭದಲ್ಲಿನ ನನ್ನ ಲೇಖನಕ್ಕೆ ಅವರು ಹರಿಸಿದ ಪ್ರೀತಿ ಹೀಗಿತ್ತು "Thank you ಶ್ರೀಧರ್ ಆವರೆ. ಕೇವಲ ಹುಟ್ಟುದಿನದ ಶುಭ ಕೋರಿಕೆಗಾಗಿ ಮಾತ್ರವಲ್ಲ, ನನ್ನ ಬಗ್ಗೆ ಅಷ್ಟೊಂದು ಆತ್ಮೀಯವಾಗಿ ಬರೆದಿರುವುದಕ್ಕೆ. ನಾನೇ ನನ್ನ ಬಗ್ಗೆ ಬರೆದುಕೊಂಡಿದ್ದರೂ ಇಷ್ಟು ಚಂದದ ವ್ಯಕ್ತಿ ಚಿತ್ರಣ ಹೊರಹೋಮ್ಮತ್ತಿರಲಿಲ್ಲ. Salute to your passion and commitment to introducing achievers of Karnataka. You made my day by writing about me. I truly feel proud to be myself. You have written so well, I could not have written better about myself. You are gifted to sieve out achievements of people and package it attractively.”


ಹೀಗೆ ಕಳೆದುಕೊಳ್ಳುತ್ತಿರುವ ಪ್ರೀತಿಯನ್ನು ಮುಂದೆ ಅರಸುವುದೆಂತು. ಆ ಆತ್ಮೀಯ ಚೇತನಕ್ಕೆ ನಮನ. 


On Remembrance Day of Agriculture Scientist Shakunthala Sridhara  🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ