ಸಂಪತ್ ಗಿರಿರಾವ್
ಕೆ. ಸಂಪತ್ ಗಿರಿ ರಾವ್
ಲೇಖನ ಕೃಪೆ: ಡಾ.ರುಕ್ಮಿಣಿ ರಘುರಾಮ್
ಬೆಂಗಳೂರಿನ ಅತಿ ಹೆಸರಾಂತ ವಿದ್ಯಾಸಂಸ್ಥೆಯಾದ ನ್ಯಾಷನಲ್ ಕಾಲೇಜು ಹಾಗೂ ನ್ಯಾಷನಲ್ ಹೈಸ್ಕೂಲಿನಲ್ಲಿ ಓದಿದ ವಿದ್ಯಾರ್ಥಿಗಳಿಗೆ ಚಿರಪರಿಚಿತವಾದ ಹೆಸರು ಪ್ರೊಫೆಸರ್ ಕೆ. ಸಂಪತ್ ಗಿರಿ ರಾವ್. (ಕೋಲಾರ ಸಂಪತ್ಗಿರಿ ರಾಯರು).
ಸಂಪತ್ ಗಿರಿ ರಾಯರು 1897ರ ಏಪ್ರಿಲ್ 4ರಂದು ತಮಿಳುನಾಡಿನ ಪೋಳೂರಿನಲ್ಲಿ ಜನಿಸಿದರು. ತಂದೆ ಶೇಷಗಿರಿರಾಯರು. ತಾಯಿ ನರಸಮ್ಮನವರು. ಪೋಳೂರಿನಲ್ಲಿ ಸಂಪತ್ ಗಿರಿ ಎಂಬ ನರಸಿಂಹಸ್ವಾಮಿಯ ಬೆಟ್ಟ ಇತ್ತು. ಇದರಿಂದಲೇ ಅವರಿಗೆ ಸಂಪತ್ ಗಿರಿ ರಾವ್ ಎಂದು ನಾಮಕರಣ ಮಾಡಿದರು. ಇವರಿಗೆ ನಾಲ್ಕು ಜನ ತಂಗಿಯರು. ಇವರ ತಂದೆ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರಿಂದ ಬಾಲಕನ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಅವರ ತಂದೆ ಶೇಷಗಿರಿರಾಯರು ಸಂಪತ್ ಗಿರಿ ರಾಯರನ್ನು ಕಾಳಹಸ್ತಿಯಲ್ಲಿ ಇದ್ದ ತಮ್ಮ ಅಣ್ಣನ ಮನೆಯಲ್ಲಿ ಕೆಲವು ಕಾಲ ಬಿಟ್ಟಿದ್ದರು.1906ನೆ ಇಸವಿಯಲ್ಲಿ ಶೇಷಗಿರಿರಾಯರು ಮದರಾಸಿನಲ್ಲಿ ಕೆಲಸಕ್ಕೆ ಸೇರಿದರು. ಇವರ ಮನೆ ಎದುರುಗಡೆ ಹಿಂದೂ ಸ್ಕೂಲಿನ ಪ್ರಾಧ್ಯಾಪಕರಾಗಿದ್ದ ರೈಟ್ ಆನರಬಲ್ ವಿ .ಎಸ್. ಶ್ರೀನಿವಾಸ ಶಾಸ್ತ್ರಿಗಳ ಮನೆ ಇತ್ತು. ಮನೆಯಲ್ಲಿ ರಾಯರನ್ನು ಹಿಂದೂ ಸ್ಕೂಲಿಗೆ ಸೇರಿಸಲು ನಿರ್ಧರಿಸಿದರು. ಆದರೆ ಆ ದಿನ ಅಮಾವಾಸ್ಯೆ ಆಗಿತ್ತು. ಮರುದಿನ ಹೋಗುವ ವೇಳೆಗೆ ಶಾಲೆಯಲ್ಲಿ ಸೀಟು ಭರ್ತಿಯಾಗಿತ್ತು. ಹಾಗಾಗಿ ರಾಯರು ಕೆಲ್ಲೆಟ್ ಮಿಷನ್ ಸ್ಕೂಲಿಗೆ ಸೇರಿದರು. ಆನರ್ಸ್ ಪದವಿಯನ್ನು ಹಾಗೂ ಇಂಗ್ಲಿಷ್ ಎಂ. ಎ. ಪದವಿಯನ್ನು ಪಡೆದರು. ಅವರು ಇದೇ ಸುಮಾರಿನಲ್ಲಿ ಕೆಲಸವನ್ನು ಹುಡುಕುತ್ತ ಬೆಂಗಳೂರಿಗೆ ಬಂದರು.
ಈ ವೇಳೆಗೆ ಅನಿಬೆಸೆಂಟ್ ಅವರು ದೇಶೀಯ ವಿದ್ಯಾಶಾಲೆಯನ್ನು ಪ್ರಾರಂಭಿಸಿದ್ದರು. ಆದರೆ ಒಂದೆರಡು ವರ್ಷ ನಡೆಸುವುದರೊಳಗಾಗಿ ಆರ್ಥಿಕ ಕಷ್ಟಗಳನ್ನು ಎದುರಿಸಲಾಗದೆ ಶಾಲೆಯು ಮುಚ್ಚುವ ಸ್ಥಿತಿಗೆ ಬಂದಿತು. ಆಗ ಶಾಲೆ ಮುಚ್ಚುವುದು ಬೇಡವೆಂದು ಬಿ.ಕೆ. ಗರುಡಾಚಾರ್, ರಾಮಚಂದ್ರರಾವ್ ಸಿಂಧ್ಯ ಹಾಗೂ ಎಸ್. ಕೆ. ನರಸಿಂಹಯ್ಯನವರು ಶಾಲೆಯನ್ನು ನಡೆಸುವ ಉತ್ಸಾಹ ತೋರಿಸಿದರು. 1919 ರಲ್ಲಿ ನ್ಯಾಷನಲ್ ಹೈಸ್ಕೂಲ್ ಕಾನೂನಾತ್ಮಕವಾಗಿ ನೋಂದಣಿ ಹೊಂದಿತು. ಅದರ ಮೊದಲ ಹೆಡ್ಮಾಸ್ಟರ್ ಆದರು ಕೆ. ಸಂಪತ್ ಗಿರಿ ರಾಯರು. ಇದಕ್ಕೂ ಮೊದಲು ರಾಯರು ಲಂಡನ್ ಮಿಷನ್ ಸ್ಕೂಲಿನಲ್ಲಿ ಹಾಗೂ ಸೆಂಟ್ರಲ್ ಕಾಲೇಜಿನಲ್ಲಿಯೂ ಕೆಲಸ ಮಾಡಿದರು.
ಇವರೊಂದಿಗೆ ಹೈಸ್ಕೂಲಿನಲ್ಲಿದ್ದ ಸಹ ಶಿಕ್ಷಕರು ಕೆ.ಎಸ್. ಕೃಷ್ಣ ಅಯ್ಯಂಗಾರ್, ಹರಪನಹಳ್ಳಿ ರಾಮರಾವ್, ಕೆಂದಾಳೆ ಕೃಷ್ಣ ಅಯ್ಯಂಗಾರ್, ಕೆ.ಎಂ. ರಾಘವಾಚಾರ್, ನಂಜುಂಡಯ್ಯ, ಸರ್ದಾರ್ ವೆಂಕಟರಾಮಯ್ಯ, ಹೆಚ್ .ಎಸ್. ಶಿವರಾಂ ಮುಂತಾದವರು. ಸೆಂಟ್ರಲ್ ಕಾಲೇಜಿನಲ್ಲಿ ರಾಯರ ಶಿಷ್ಯರಾಗಿದ್ದ ನಿಟ್ಟೂರು ಶ್ರೀನಿವಾಸರಾಯರೂ ಕೆಲಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಮಕ್ಕಳು ಹೈಸ್ಕೂಲಿಗೆ ಬರುವ ವೇಳೆಗೆ ಸಾಧಾರಣವಾಗಿ ಅವರಿಗೆ 13- 14 ವರ್ಷ ವಯಸ್ಸಾಗಿರುತ್ತದೆ. ಸುತ್ತಲಿನ ಪ್ರಪಂಚ ತಿಳಿದುಕೊಳ್ಳುವ ವಯಸ್ಸು. ಹಾಗಾಗಿ ಅವರ ವ್ಯಕ್ತಿತ್ವ ರೂಪುಗೊಳ್ಳುವ ಸಮಯದಲ್ಲಿ ಒಳ್ಳೆಯ ಶಾಲೆ, ಒಳ್ಳೆಯ ಅಧ್ಯಾಪಕರ ಪಾತ್ರ ಬಹಳ ಮುಖ್ಯ. ನ್ಯಾಷನಲ್ ಹೈಸ್ಕೂಲ್ ನಲ್ಲಿ ವಿದ್ಯಾರ್ಥಿಗಳ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಅಲ್ಲಿನ ಮಾರ್ಚ್ ಪಾಸ್ಟ್, ಲೆಜಿಮ್ ಇವುಗಳನ್ನು ವೀಕ್ಷಿಸಲು ಸಾರ್ವಜನಿಕರು ಕಿಕ್ಕಿರಿದು ನೆರೆಯುತ್ತಿದ್ದರು. ಜಿಮ್ನಾಷಿಯಂ, ಮಲ್ಲಕಂಬ ಎಲ್ಲವೂ ಶಾಲೆಯ ಆವರಣದಲ್ಲಿ ಇತ್ತು. ವಿದ್ಯಾರ್ಥಿಗಳಿಗಾಗಿ ಚರ್ಚಾಸ್ಪರ್ಧೆ, ಲೇಖನ ಸ್ಪರ್ಧೆ, ಕ್ರೀಡಾ ಸ್ಪರ್ಧೆ, ಎನ್ಎಸ್ಎಸ್ ಚಟುವಟಿಕೆಗಳು ಅಲ್ಲದೆ ಬೆಂಗಳೂರಿನ ಪ್ರಮುಖ ಸಾಹಿತಿಗಳು, ಸಾಧಕರು, ವಿಜ್ಞಾನಿಗಳೂ ಮಕ್ಕಳನ್ನು ಕುರಿತು ಮಾತನಾಡುತ್ತಿದ್ದರು. ಇದು ಮಕ್ಕಳಿಗೆ ಬಾಹ್ಯ ಪ್ರಪಂಚದ ಅರಿವನ್ನು ಮೂಡಿಸುತ್ತಿತ್ತು . ಪ್ರಸಿದ್ಧ ಸಾಹಿತಿ ಸಾಧಕರು ಹಿರಿಯರು ಮಾತನಾಡಿದ್ದು ಅವರ ಮನಸ್ಸುಗಳ ಮೇಲೆ ಪರಿಣಾಮ ಬೀರುತ್ತಿತ್ತು. ಪ್ರತಿ ಎರಡು ವರ್ಷಗಳಿಗೊಮ್ಮೆ ಒಬ್ಬೊಬ್ಬರು ಅಧ್ಯಾಪಕರು ಹೆಡ್ಮಾಸ್ಟರ್ ಆಗುವುದು ಎಂಬುದು ನ್ಯಾಷನಲ್ ಹೈಸ್ಕೂಲಿನ ನಿಯಮವಾಗಿತ್ತು. ಆದರೆ ಸಹ ಅಧ್ಯಾಪಕರು ಯಾವಾಗಲೂ ಸಂಪತ್ ಗಿರಿ ರಾಯರೇ ಹೆಡ್ಮಾಸ್ಟರ್ ಆಗಬೇಕೆಂದು ಹೇಳಿ ರಾಯರೇ ಸುಮಾರು ಮೂವತ್ತು ವರ್ಷ ಕಾಲ ಹೆಡ್ಮಾಸ್ಟರ್ ಆಗಿ ಸೇವೆ ಸಲ್ಲಿಸಿದರು.
21-11 -1944 ರಲ್ಲಿ ನ್ಯಾಷನಲ್ ಹೈಸ್ಕೂಲಿಗೆ ಇಪ್ಪತ್ತೈದು ವರ್ಷಗಳು ತುಂಬಿದ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ರೈಟ್ ಆನರಬಲ್ ವಿ.ಎಸ್. ಶ್ರೀನಿವಾಸ ಶಾಸ್ತ್ರಿಗಳನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು . ಶ್ರೀನಿವಾಸ ಶಾಸ್ತ್ರಿಗಳೂ ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದವರು. ರಾಯರನ್ನು ಚಿಕ್ಕ ವಯಸ್ಸಿನಿಂದಲೂ ಬಲ್ಲವರಾಗಿದ್ದರು. ನ್ಯಾಷನಲ್ ಹೈಸ್ಕೂಲಿನ ಅಭಿವೃದ್ಧಿಯನ್ನು ಕಂಡು, ಅವರು ಅದರ ಸಾರಥ್ಯವನ್ನು ವಹಿಸಿಕೊಂಡು ಯಶಸ್ವಿಯಾಗಿ ನಡೆಸಿದ ಸಂಪತ್ ಗಿರಿ ರಾಯರನ್ನು “ಪ್ರಿನ್ಸ್ ಆಫ್ ಹೆಡ್ಮಾಸ್ಟರ್ಸ್” ಎಂಬ ಬಿರುದಿತ್ತು ಹಾಡಿ ಹೊಗಳಿದರು. ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಉನ್ನತ ಅಧಿಕಾರ ಪಡೆಯುವ ಅವಕಾಶ ಇದ್ದರೂ ಹೈಸ್ಕೂಲ್ ಮಕ್ಕಳಿಗೆ ಸುಮಾರು 30 ವರ್ಷಗಳ ಪಾಠ ಹೇಳಿದರು. ಇಂಥ ಅಧ್ಯಾಪಕರನ್ನು ಪಡೆದ ಅವರ ವಿದ್ಯಾರ್ಥಿಗಳೇ ಧನ್ಯರು.
ಮಹಾತ್ಮ ಗಾಂಧಿಯವರ ತತ್ವಗಳು ಚಿಂತನೆಗಳು ಹಾಗೂ ಖಾದಿ ಚಳವಳಿ ಇವುಗಳು ರಾಯರ ಮೇಲೆ ಬಹಳ ಪ್ರಭಾವ ಬೀರಿದ್ದವು. ಹಾಗಾಗಿ ಅವರು ಸ್ವದೇಶಿ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಶಾಲೆಯಲ್ಲೇ ಅಲ್ಲದೆ ಬೇರೆ ಬೇರೆ ಶಾಲೆಗಳಿಗೆ ಹೋಗಿ ಗಾಂಧಿಯವರ ವಿಚಾರಸರಣಿ ಹಾಗೂ ಸ್ವಾತಂತ್ರ್ಯ ಸಂಗ್ರಾಮವನ್ನು ಕುರಿತು ಭಾಷಣಗಳನ್ನು ಮಾಡುತ್ತಿದ್ದರು. ಗಾಂಧಿಯವರು ಎಲ್ಲರಿಗೂ ಮೂಲ ಶಿಕ್ಷಣ ದೊರಕುವಂತಾಗಬೇಕು ಎಂದು ಹೇಳುತ್ತಿದ್ದರು. ರಾಯರೂ ಗಾಂಧೀಜಿಯವರ ಮೂಲ ಶಿಕ್ಷಣ ಸೂತ್ರವನ್ನು ಬೆಂಬಲಿಸುತ್ತಿದ್ದರು. ಮೂಲ ಶಿಕ್ಷಣದಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಜೀವನ ಮೌಲ್ಯಗಳಾದ ಸಮಾನತೆ, ಸಹಭಾಗಿತ್ವ ಮುಂತಾದವುಗಳಿಗೆ ಆದ್ಯತೆ ನೀಡಿದರೆ ಅವರು ವೈಜ್ಞಾನಿಕ ಶಿಕ್ಷಣವನ್ನು ಪಡೆದ ನಂತರ ಅವರ ವ್ಯಕ್ತಿತ್ವ ಪರಿಪೂರ್ಣವಾಗಿರುತ್ತದೆ ಎಂಬುದು ಅವರ ಆಲೋಚನೆಯಾಗಿತ್ತು.
ರಾಯರ ಶಿಷ್ಯರಲ್ಲಿ ಅನೇಕರು ಅವರ ಬಗ್ಗೆ ಬಹಳ ಗೌರವಾದರಗಳಿಂದ ಅವರನ್ನು ನೆನಪಿಸಿಕೊಂಡಿದ್ದಾರೆ. ಮುಂದೆ ಅವರು ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾದರು. ಆಗ ಒಂದು ದಿನ ತರಗತಿಯಲ್ಲಿ “ಈದಿನ ಟೆಕ್ಸ್ಟ್ ಬುಕ್ ಪಾಠ ಬೇಡ. ಹೋಮರ್ ಕವಿಯ ಇಲಿಯಡ್ ಬಗ್ಗೆ ಹೇಳುತ್ತೇನೆ” ಎಂದು ಹೇಳಿ ನಿರರ್ಗಳವಾಗಿ ಒಂದು ಘಂಟೆ ಇಂಗ್ಲಿಷ್ನ ಮಹಾಕಾವ್ಯದ ಬಗ್ಗೆ ವಿವರಿಸಿದರು. ಹೃದಯಸ್ಪರ್ಶಿ ಪ್ರಸಂಗಗಳನ್ನು ಭಾವಾವೇಶದಿಂದ ವರ್ಣಿಸಿದರು. ಈ ಪ್ರಸಂಗಗಳನ್ನು ಹೇಳುವಾಗ ಅವರು ಗದ್ಗದಿತರಾಗಿ ನಾವು ವಿದ್ಯಾರ್ಥಿಗಳೆಲ್ಲರೂ ಶೋಕದಲ್ಲಿ ಮುಳುಗುವಂತೆ ಆಯಿತು ಎಂದು ಅವರ ಶಿಷ್ಯರಾದ ನಾಡೋಜ.ಡಾ. ಎಸ್. ಆರ್. ರಾಮಸ್ವಾಮಿ ಅವರು ನೆನಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಬರೀ ಪಠ್ಯ ಪುಸ್ತಕ, ಪರೀಕ್ಷೆ, ಅಂಕಗಳು ಎಂಬ ಸೀಮಿತವಾದ ವರ್ತುಲವನ್ನು ಬಿಟ್ಟು ಉತ್ಕೃಷ್ಟ ಸಾಹಿತ್ಯವನ್ನು ಅಭ್ಯಾಸ ಮಾಡಬೇಕೆಂದು ಆಗಾಗ ಹೀಗೆ ತರಗತಿಯಲ್ಲಿ ಅದರ ಪರಿಚಯ ಮಾಡಿಸುತ್ತಿದ್ದರು. ಇದಲ್ಲದೆ ಸ್ವಾತಂತ್ರ್ಯ ಸಂಗ್ರಾಮ, ಸ್ವತಂತ್ರ ಹೋರಾಟಗಾರರ ಬಗ್ಗೆಯೂ ಅವರು ಕಾಲೇಜಿನ ತರಗತಿಗಳಲ್ಲಿ ಉಪನ್ಯಾಸ ನೀಡುತ್ತಿದ್ದರು. ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸಲು ಅವರ ಉಪನ್ಯಾಸಗಳು ಬಹಳ ಮುಖ್ಯ ಪಾತ್ರವಹಿಸಿತು. ಹೀಗೆ ಸುಮಾರು 30 -40 ವರ್ಷ ಕಾಲ ನ್ಯಾಷನಲ್ ಹೈಸ್ಕೂಲ್ ಹಾಗೂ ನ್ಯಾಷನಲ್ ಕಾಲೇಜಿನಲ್ಲಿ ಕೆಲಸ ಮಾಡಿ ಅವರು ಬಿಹಾರದ ರಾಂಚಿಯಲ್ಲಿ ವಿಕಾಸ ವಿದ್ಯಾಲಯದ ಮುಖ್ಯಸ್ಥರಾಗಿ ಎರಡು ವರ್ಷ ಕೆಲಸ ಮಾಡಿದರು.
ರಾಯರು ಓದಿದ್ದು ಇಂಗ್ಲಿಷ್ ಭಾಷೆ, ಹುಟ್ಟಿದ್ದು ತಮಿಳುನಾಡಿನಲ್ಲಿ. ಆದರೆ ಕನ್ನಡವನ್ನು ಕಲಿತರು. ಅವರು ಒಳ್ಳೆಯ ಭಾಷಣಕಾರರೆಂದು ಪ್ರಸಿದ್ಧರಾಗಿದ್ದರು ಅಲ್ಲದೆ ಉತ್ತಮ ಮಟ್ಟದ ಅನುವಾದಕರೂ ಆಗಿದ್ದರು. ಸಿ. ರಾಜಗೋಪಾಲಚಾರಿ (ರಾಜಾಜಿ) ಅವರಿಗೂ ರಾಯರಿಗೂ ಸ್ವದೇಶಿ ಚಳುವಳಿಯ ಕಾಲದಿಂದ ಆತ್ಮೀಯ ಸ್ನೇಹ ಸಂಬಂಧವಿತ್ತು. ರಾಜಾಜಿಯವರು ರಾಮಾಯಣ ಹಾಗೂ ಮಹಾಭಾರತಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ಈ ಮಹಾಕಾವ್ಯಗಳ ಬಗ್ಗೆ ಅವರಿಗೆ ಅಪಾರವಾದ ಗೌರವವಿತ್ತು ಅಭಿಮಾನವೂ ಇತ್ತು. ಅವರು ನಮ್ಮ ಸಾಹಿತ್ಯ ಎಷ್ಟು ಮೌಲ್ಯಯುತವಾದದ್ದು ಎಂದು ತಿಳಿದವರು. ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂಬ ಉದ್ದೇಶದಿಂದ ಈ ಮಹಾಕಾವ್ಯಗಳನ್ನು ತಮಿಳಿನಲ್ಲಿ ಬರೆದರು. ತಮಿಳಿನ ಈ ರಚನೆಗಳನ್ನು ಸಂಪತ್ ಗಿರಿ ರಾಯರು ಕನ್ನಡಕ್ಕೆ ಅನುವಾದ ಮಾಡಬೇಕೆಂದು “ಆಜ್ಞೆ ಇತ್ತರು” ಎಂದು ರಾಯರು ಪುಸ್ತಕದ ಮುನ್ನುಡಿಯಲ್ಲಿ ಬರೆದಿದ್ದಾರೆ. ರಾಜಾಜಿಯವರು ಬರೆದ ಉಪನಿಷತ್ತಿನ ಕಥೆಗಳು, ಶ್ರೀಕೃಷ್ಣನು ತೋರಿಸಿದ ದಾರಿ, ಶ್ರೀಮದ್ಭಗವದ್ಗೀತೆ, ರಾಜಾಜಿಯವರ ಕಥೆಗಳು, ಕಲ್ಪನೆಯ ಕಾಡು ಇವುಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಶ್ರೀ ರಾಮನ ದಿವ್ಯ ಕಥೆ ಮತ್ತು ಭಗವದ್ಗೀತೆ ಇವುಗಳಿಗೆ ಡಿವಿಜಿಯವರು ಮುನ್ನುಡಿ ಬರೆದಿದ್ದಾರೆ. ಸಂಪತ್ ಗಿರಿ ರಾಯರ ಸುಲಲಿತವಾದ ಭಾಷಾ ಶೈಲಿಯನ್ನು ಕೊಂಡಾಡಿದ್ದಾರೆ. ಈಚೆಗೆ 62 ವರ್ಷಗಳ ನಂತರ ಶ್ರೀ ರಾಮನ ದಿವ್ಯ ಕಥೆ ಮತ್ತೊಮ್ಮೆ ಪ್ರಕಟವಾಗಿದೆ. ಇದಕ್ಕೆ ರಾಯರ ನೆಚ್ಚಿನ ಶಿಷ್ಯರಾದ ನಾಡೋಜ ಡಾ. ಎಸ್ . ಆರ್. ರಾಮಸ್ವಾಮಿಯವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅನುವಾದ ಎಂಬುದು ಕಷ್ಟಕರವಾದ ಕೆಲಸ. ಅದರಲ್ಲೂ ಸಂಪತ್ ಗಿರಿ ರಾಯರು ಚಿಕ್ಕ ವಯಸ್ಸಿನಲ್ಲಿ ಕನ್ನಡವನ್ನು ಕಲಿತವರಲ್ಲ. ಅವರು ತಮಿಳು ಮೂಲಕ್ಕೆ ಯಾವುದೇ ಧಕ್ಕೆ ಬರದಂತೆ ಕನ್ನಡದ ಸೊಗಡನ್ನು ತಮ್ಮ ಅನುವಾದದಲ್ಲಿ ತಂದಿದ್ದಾರೆ. ಕನ್ನಡಿಗರೆಲ್ಲರೂ ಓದಲೇಬೇಕಾದ ಪುಸ್ತಕ ಇದು. ಸಂಪತ್ ಗಿರಿ ರಾಯರ ಸ್ವಂತ ಬರವಣಿಗೆಗಳಲ್ಲಿ ಮುಖ್ಯವಾದವು ಐಬಿಹೆಚ್ ನಿಂದ ಪ್ರಕಟವಾಗಿರುವ “ಹೊಯ್ಸಳ” , “ಸ್ವರಾಜ್ಯ” ಎಂಬ ಮಕ್ಕಳ ಪುಸ್ತಕಗಳು. ಭಾರತ-ಭಾರತಿ ಮಾಲಿಕೆಗಾಗಿ ಸುಬ್ರಹ್ಮಣ್ಯ ಭಾರತಿ ಅವರ ಬಗ್ಗೆ ಬರೆದಿರುವ ಕಿರು ಪುಸ್ತಕ, ಹರ್ಡಿಕರ್ ಅವರನ್ನು ಕುರಿತ ಇಂಗ್ಲೀಷ್ ಪುಸ್ತಕ “ಗ್ರೇ ಬಟ್ ಫ್ರೆಶ್”.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಸಭೆ 1924ರಲ್ಲಿ ಬೆಳಗಾವಿಯಲ್ಲಿ ನಡೆಯಿತು. ಕನ್ನಡ ನಾಡು-ನುಡಿ ಸಂಸ್ಕೃತಿ ಪರಂಪರೆಯನ್ನು ವಿಸ್ತಾರವಾಗಿ ವಿವರಿಸಲಾಗಿರುವ “ಕನ್ನಡ ಕೈಪಿಡಿ “ಎಂಬ ಪುಸ್ತಕದಲ್ಲಿ ಸಂಪತ್ ಗಿರಿ ರಾಯರು ಲೇಖನವನ್ನು ಬರೆದಿದ್ದಾರೆ. ಗಾಂಧಿ ಸ್ಮಾರಕ ನಿಧಿ ಗಾಂಧಿಯವರ ಕೃತಿಗಳ 20 ಸಂಪುಟಗಳನ್ನು ಪ್ರಕಟಿಸಲು ಯೋಜನೆ ರೂಪಿಸಿದಾಗ ಗಾಂಧಿಯವರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದ ಸಂಪತ್ ಗಿರಿ ರಾಯರು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹಾಗೂ ಕೆ .ಎಸ್. ನಾರಾಯಣಸ್ವಾಮಿ ಅವರೊಂದಿಗೆ ಕೆಲಸ ಮಾಡಿದರು. 1952ರಲ್ಲಿ ನ್ಯಾಯ ವಿಧಾಯಕ ಸಭೆಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದರು. ಶಿಕ್ಷಣ ಕ್ಷೇತ್ರದ ಉನ್ನತಿಗಾಗಿ ಕೆಲಸ ಮಾಡಿದರು. ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ತೀ.ತ. ಶರ್ಮರ ಮೈಸೂರು ಕ್ರಾನಿಕಲ್ ನಲ್ಲಿ ಇವರ ಅಗ್ರ ಲೇಖನಗಳು ಜನಪ್ರಿಯವಾದವು. ಆಂಧ್ರದ ರಾಮ ಕೋಟೇಶ್ವರ ರಾಯರು ಸಂಪತ್ಗಿರಿ ರಾಯರ ಆತ್ಮೀಯ ಸ್ನೇಹಿತರು. ಅವರು ತ್ರಿವೇಣಿ ಎಂಬ ತ್ರೈಮಾಸಿಕ ಪತ್ರಿಕೆಯನ್ನು ನಡೆಸುತ್ತಿದ್ದರು. “ಕ್ವಿಟ್ ಇಂಡಿಯಾ” ಚಳುವಳಿಯ ಸಂದರ್ಭದಲ್ಲಿ ಅವರನ್ನು ಬಂಧಿಸಲಾಯಿತು. ಆಗ ಸಂಪತ್ ಗಿರಿ ರಾಯರು ಪತ್ರಿಕೆಯನ್ನು ನಡೆಸಿದರು. ತ್ರೈಮಾಸಿಕಪತ್ರಿಕೆ ಯಾಗಿದ್ದು ಮಾಸಿಕ ಪತ್ರಿಕೆಯಾಗಿ ಜನಪ್ರಿಯವಾಯಿತು. ಕನ್ನಡ ನಾಡಿನ ಸಂಸ್ಕೃತಿ ಪರಂಪರೆ ಇವುಗಳ ವೈಶಿಷ್ಟ್ಯತೆಯನ್ನು ಬಿಂಬಿಸಲು ಕರ್ನಾಟಕ ಸರ್ಕಾರ “ಕರ್ನಾಟಕ ಪರಂಪರೆ” ಎಂಬ ಸಂಪುಟಗಳನ್ನು ಪ್ರಕಟಿಸಲು ಯೋಜನೆ ರೂಪಿಸಿತು .ಆ ಸಂಪುಟಗಳಿಗಾಗಿ ಹಲವಾರು ಪುಸ್ತಕಗಳನ್ನು ಓದಿ ವಿದ್ವಾಂಸರನ್ನು, ಪಂಡಿತರನ್ನು, ನುರಿತತಜ್ಞರನ್ನು ಭೇಟಿ ಮಾಡಿ ವಿಷಯವನ್ನು ಸಂಗ್ರಹಿಸಿದ ಕೀರ್ತಿ ಸಂಪತ್ ಗಿರಿ ರಾಯರಿಗೆ ಸಲ್ಲುತ್ತದೆ.
ಸಂಪತ್ ಗಿರಿ ರಾಯರಿಗೆ ಸಂಗೀತ ಹಾಗೂ ನಾಟಕದಲ್ಲೂ ಅಭಿರುಚಿ ಇತ್ತು. ಅವರ ತಾಯಿ ಪುರಂದರ ದಾಸರ ಪದಗಳನ್ನು ಹಾಡುತ್ತಿದ್ದರು.ಹಾಗಾಗಿ ಅವರಿಗೆ ಚಿಕ್ಕವಯಸ್ಸಿನಿಂದಲೇ ದಾಸರ ಪದಗಳ ಪರಿಚಯವಿತ್ತು. 1964ರಲ್ಲಿ ದಾಸರ ನಾನೂರನೆಯ ವರ್ಷದ ಜಯಂತಿ ಉತ್ಸವ ಹಂಪೆಯಲ್ಲಿ ವೈಭವದಿಂದ ನಡೆಯಿತು. ಸಮಿತಿಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷತೆಯನ್ನು ರಾಯರು ವಹಿಸಿದ್ದರು. ದಾಸರ ಜೀವನ ಚರಿತ್ರೆಯನ್ನು ಕನ್ನಡ ಮತ್ತು ತೆಲುಗುಭಾಷೆಗಳಲ್ಲಿ ಪ್ರಕಟಿಸಲಾಯಿತು. ಅವರ ನೂರು ದೇವರ ನಾಮಗಳಿಗೆ ಸ್ವರಪ್ರಸ್ತಾರ ಹಾಕಿ ಪ್ರಕಟಿಸಲಾಯಿತು. ಅಮೆಚೂರ್ ನಾಟಕ ಕಂಪೆನಿಯಲ್ಲಿ ಟಿ. ಪಿ. ಕೈಲಾಸಂ ಅವರ “ಟೊಳ್ಳುಗಟ್ಟಿ” ನಾಟಕದಲ್ಲಿ ಕೈಲಾಸಂ, ಭೀಮರಾವ್, ಗುರುದತ್, ದೇವುಡು ನರಸಿಂಹ ಶಾಸ್ತ್ರಿ, ಬಿ.ಎಸ್. ಗರುಡಾಚಾರ್ ಅವರೊಂದಿಗೆ ಸಂಪತ್ ಗಿರಿ ರಾಯರೂ ಅಭಿನಯಿಸಿದ್ದರು. ಮುಂದೆಯೂ ಅವರು ಪರಶುರಾಮ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದ್ದರು.
ಸಂಪತ್ ಗಿರಿ ರಾಯರಿಗೆ ಬೆಂಗಳೂರಿನ ಹಲವಾರು ಸಂಘ-ಸಂಸ್ಥೆಗಳೊಂದಿಗೆ ಆತ್ಮೀಯವಾದ ಸ್ನೇಹ ಸಂಬಂಧವಿತ್ತು. ಗೋಖಲೆ ಸಾರ್ವಜನಿಕ ಸಂಸ್ಥೆಯು ಪ್ರಾರಂಭವಾದ ದಿನಗಳಿಂದ ಅವರು ಕಾರ್ಯಕಾರಿ ಸಮಿತಿಯಲ್ಲಿ ಕೆಲಸ ಮಾಡಿದರು. ಕರ್ನಾಟಕ ಸರ್ವೋದಯ ಸಂಘ ,ಕನ್ನಡ ಸಾಹಿತ್ಯ ಪರಿಷತ್ತು, ಗಾಂಧಿ ಸಾಹಿತ್ಯ ಸಂಘ, ಇವುಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಇವರಿಗೆ ಹಲವಾರು ಆತ್ಮೀಯ ಸ್ನೇಹಿತರಿದ್ದರು. ತಿ.ತಾ ಶರ್ಮ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಡಿ.ವಿ. ಗುಂಡಪ್ಪ, ನಿಟ್ಟೂರು ಶ್ರೀನಿವಾಸರಾಯರು, ಸ.ವೆಂಕಟಾಚಲಪತಿ, ಸಿದ್ದವನಹಳ್ಳಿ ಕೃಷ್ಣ ಶರ್ಮ, ಕೆ ಎಸ್ .ನಾರಾಯಣ ಸ್ವಾಮಿ, ಎಂ.ಎಸ್.ಸುಬ್ಬಲಕ್ಷ್ಮಿ-ಸದಾಶಿವಂ ದಂಪತಿಗಳು , ಭೋಲ.ಡಿ.ಪಂತ್ ಮುಂತಾದವರು.
ಶಿಕ್ಷಣ ಕ್ಷೇತ್ರ, ಸ್ವತಂತ್ರ ಸಂಗ್ರಾಮ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರವೇ ಅಲ್ಲದೆ ಖಾದಿ ಪ್ರಚಾರ, ಹಿಂದಿ ಪ್ರಚಾರ ಇವುಗಳಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ 1967 ರಲ್ಲಿ ಹನ್ನೊಂದನೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1948 ರಲ್ಲಿ ಆಗಿನ ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರು ಸೇವಾ ಪದಕವನ್ನು ನೀಡಿ ಗೌರವಿಸಿದರು. 1973ರಲ್ಲಿ ”ಪತ್ರ ಪುಷ್ಪ” ಎಂಬ ಅಭಿನಂದನ ಗ್ರಂಥ ಸಮರ್ಪಿಸಲಾಯಿತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮಕ್ಕೆ ಕನ್ನಡದ ಅನೇಕ ಪ್ರಸಿದ್ಧ ಲೇಖಕರು, ಅವರ ಸಹ ಶಿಕ್ಷಕರು, ಶಿಷ್ಯರು ಹಾಜರಿದ್ದರು. ಸಂಪತ್ ಗಿರಿ ರಾಯರ ಆತ್ಮೀಯ ಸ್ನೇಹಿತ ರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಅಭಿನಂದನ ಪತ್ರ ವನ್ನು ಓದಿದರು.1981 ರಲ್ಲಿ ಐಬಿಎಚ್ ಪ್ರಕಾಶನವು ಕೆ. ಸಂಪತ್ ಗಿರಿರಾವ್ ಎಂಬ ಪುಸ್ತಕವನ್ನು ಪ್ರಕಟಿಸಿತು. ಇದನ್ನು ರಾಯರ ಆತ್ಮೀಯ ಸ್ನೇಹಿತರಾದ ಸ. ವೆಂಕಟಾಚಲಪತಿ ಅವರು ಬರೆದಿದ್ದಾರೆ.
ಸಂಪತ್ ಗಿರಿರಾಯರ ಪತ್ನಿ ಸೀತಮ್ಮನವರು ಇವರಿಗೆ ನಾಲ್ಕು ಜನ ಮಕ್ಕಳು. ರಂಗ ವಿಠ್ಠಲ್, ಕಸ್ತೂರಿ , ಆನಂದ, ಹಾಗೂ ರಾಘು. ದುರದೃಷ್ಟವಶಾತ್ ರಾಯರ ಪತ್ನಿ ಬಹಳ ಬೇಗ ತೀರಿಕೊಂಡರು .ಅವರ ತಾಯಿ ನರಸಮ್ಮನವರು ಈ ಪರಿವಾರವನ್ನು ನಡೆಸಿದರು. ಮುಂದೆ ರಾಯರ ತಂಗಿಯ ಮಗಳೂ, ಸೊಸೆಯೂ ಆದ ಶ್ರೀಮತಿ ಸುಶೀಲಮ್ಮನವರು ಸಂಸಾರದ ಜವಾಬ್ದಾರಿಯನ್ನು ವಹಿಸಿ ಕೊಂಡರು. ರಾಯರಿಗೆ ತಮ್ಮ ಸೊಸೆಯ ಬಗ್ಗೆ ಬಹಳ ಅಭಿಮಾನ ಮತ್ತು ಪ್ರೀತಿ ಇತ್ತು. ಅವರಿಗೆ ತಮ್ಮ ಮೊಮ್ಮಕ್ಕಳ ಮೇಲೆಯೂ ಬಹಳ ಮಮಕಾರ. ಅವರಿಗೆಲ್ಲ ಭಗವದ್ಗೀತೆಯನ್ನು ತಾವೇ ಹೇಳಿಕೊಡುತ್ತಿದ್ದರು. ನನ್ನ ತಂದೆ ಡಿ. ಆರ್. ವೆಂಕಟರಮಣನ್ ಹಾಗೂ ಅವರ ಸ್ನೇಹಿತರಾಗಿದ್ದ ಎಂ. ವಿ. ರಾಮ ಚೈತನ್ಯ ಅವರು ಸಂಪತ್ ಗಿರಿ ರಾಯರ ಮನೆಯಲ್ಲಿಯೇ ಸುಮಾರು 30 ವರ್ಷಗಳ ಕಾಲ ಬಾಡಿಗೆಗೆ ಇದ್ದರು. ಅವರೊಂದಿಗೆ ನನ್ನ ತಂದೆ ತಾಯಿಗೆ ಬಹಳ ಆತ್ಮೀಯವಾದ ಸಂಬಂಧ ಇತ್ತು. ನನ್ನ ತಂದೆ-ತಾಯಿ ಮದುವೆಯಾಗಿ ಈ ಮನೆಗೆ ಬಂದಾಗ ಹಿರಿಯರಾದ ಸಂಪತ್ ಗಿರಿ ರಾಯರು ಅವರನ್ನು ಎದುರುಗೊಂಡು ತಮ್ಮ ಸೊಸೆ ಸುಶೀಲಮ್ಮ ಹಾಗೂ ಮೊಮ್ಮಗಳು ಗೀತಾ ಇವರಿಂದ ಆರತಿಯನ್ನು ಬೆಳಗಿಸಿ ಶುಭ ಕೋರಿದ್ದರು. ರಾಯರು ತಮ್ಮ ತಂಗಿಯರ ಕಷ್ಟಕ್ಕೆ ನೆರವಾಗುತ್ತಿದ್ದರು. ತಮ್ಮ ಚಿಕ್ಕಪ್ಪ ಅಕಾಲ ಮರಣ ಹೊಂದಿದಾಗ, ಆ ಪರಿವಾರಕ್ಕೆ ಧೈರ್ಯ ತುಂಬಿ, ಅವರ ಮಕ್ಕಳನ್ನೂ ನೋಡಿಕೊಂಡರು.
ನನ್ನ ಚಿಕ್ಕ ವಯಸ್ಸಿನಲ್ಲಿ ನಡೆದ ಒಂದು ಪ್ರಸಂಗ ನೆನಪಿಗೆ ಬರುತ್ತಿದೆ. ಆಗ ಸುಮಾರು ನಾನು ಮೂರನೇ ತರಗತಿಯಲ್ಲಿ ಇದ್ದೆ ಎಂದು ಕಾಣುತ್ತದೆ. ಸಂಪತ್ ಗಿರಿ ರಾಯರನ್ನು ನಾನೂ ತಾತ ಎಂದೇ ಕರೆಯುತ್ತಿದ್ದೆ. ಅವರಿಗೆ ಯಾವುದೋ ಒಂದು ವಿಷಯ ಖಚಿತ ಪಡಿಸಿಕೊಳ್ಳಲು ಅಟ್ಲಾಸ್ ಬೇಕಾಗಿತ್ತು. ನನ್ನ ತಂದೆ “ತಾತ ಅವರಿಗೆ ಅಟ್ಲಾಸ್ ಕೊಡು” ಎಂದು ಹೇಳಿದರು. ಮೂರು ನಾಲ್ಕು ದಿನಗಳಾದ ಮೇಲೆ ಪ್ರತಿ ಸಂಜೆ ನಾನು ಹೋಗಿ “ತಾತ ನನ್ನ ಅಟ್ಲಾಸ್ ಕೊಡಿ“ ಎಂದು ಕೇಳುತ್ತಿದ್ದೆ. ಅವರು ಎಂದೂ ಬೇಸರಿಸಿ ಕೊಳ್ಳಲ್ಲಿಲ್ಲ. ಆದರೆ ಈ ವಿಷಯ ನನ್ನ ತಂದೆಗೆ ತಿಳಿಯಿತು .”ಅವರ ಕೆಲಸ ಇನ್ನೂ ಮುಗಿದಿಲ್ಲ, ದಿನವೂ ಏಕೆ ಹೋಗಿ ಕೇಳುತ್ತಿದ್ದೀಯ” ಎಂದು ಚೆನ್ನಾಗಿ ಗದರಿಸಿದ್ದರು.
ಸಂಪತ್ ಗಿರಿ ರಾಯರು ನಿಸ್ಪೃಹರು, ಸಾತ್ವಿಕರು, ಸ್ನೇ ಹಜೀವಿ. ಅಪಾರವಾದ ಪಾಂಡಿತ್ಯ ಹೊಂದಿದ್ದವರು. ಬ್ರಿಟಿಷರ ಬಳಿ ಇಂಗ್ಲಿಷ್ ಕಲಿತು ಅವರಿಗಿಂತ ಒಳ್ಳೆಯ ಇಂಗ್ಲಿಷ್ ಭಾಷೆಯನ್ನು ಕರಗತ ಮಾಡಿಕೊಂಡಿದ್ದರು. ಅವರದ್ದು ಸರಳ ಜೀವನ. ಜೀವನದಲ್ಲಿ ಬಂದ ಕಷ್ಟಗಳನ್ನು, ನಿರಾಶೆ, ನೋವುಗಳನ್ನು ಭಗವದ್ಗೀತೆಯಲ್ಲಿ ಬರುವ ಸ್ಥಿತ ಪ್ರಜ್ಞೆತೆಯನ್ನು ರೂಢಿಸಿಕೊಂಡು ಎದುರಿಸಿರಬಹುದು. ಸದಾ ಖಾದಿ ಜುಬ್ಬ, ಅದರ ಮೇಲೊಂದು ಖಾದಿ ಓವರ್ ಕೋಟ್, ಖಾದಿ ಪಂಚೆ, ಗಾಂಧಿ ಟೋಪಿ ಇದೇ ಅವರ ಉಡುಪು. ತಾವೇ ಚರಕದಲ್ಲಿ ನೇಯ್ದ ನೂಲಿನಿಂದ ಬಟ್ಟೆ ಖರೀದಿಸುತ್ತಿದ್ದರು. 1973 ರಲ್ಲಿ ಅವರ ಅಭಿನಂದನಾ ಸಮಾರಂಭ ನಡೆದ ಎರಡು ತಿಂಗಳಲ್ಲಿ 1973 ರಲ್ಲಿ ತೀವ್ರ ಅಸ್ವಸ್ಥತೆಯಿಂದ ದೈವಾಧೀನರಾದರು. ಆದರ್ಶ ಶಿಕ್ಷಕರು, ಅಪ್ಪಟ ಗಾಂಧಿವಾದಿಗಳು, ಉತ್ತಮ ಲೇಖಕರು ಆಗಿದ್ದ ಪ್ರೊ.ಕೆ. ಸಂಪತ್ ಗಿರಿ ರಾಯರನ್ನು ಆಚಾರ್ಯ. ಕೆ. ಸಂಪತ್ ಗಿರಿರಾವ್ ಎಂದೇ ಅವರ ಶಿಷ್ಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಒಳ್ಳೆಯ ಶಾಲೆಯನ್ನು ನಡೆಸಿ, ಅಲ್ಲಿ ಓದಿದ ಮಕ್ಕಳು ಅತ್ಯುತ್ತಮ ವಿದ್ಯಾಭ್ಯಾಸವನ್ನು ಪಡೆದರು. ಇದರ ಕೀರ್ತಿ ಸಂಪತ್ ಗಿರಿ ರಾಯರಿಗೆ ಸಲ್ಲುತ್ತದೆ.
ಈ ಲೇಖನವನ್ನು ತಯಾರಿಸಲು ನನಗೆ ಪ್ರೋತ್ಸಾಹ ನೀಡಿ ಮಾಹಿತಿ ಒದಗಿಸಿದ ನನ್ನ ಬಾಲ್ಯ ಸ್ನೇಹಿತೆಯರಾದ ಸಂಪತ್ ಗಿರಿ ರಾಯರ ಮೊಮ್ಮಕ್ಕಳೂ ಆದ ಮೀರ ಆಚಾರ್ಯ, ಆಶ ರಘುನಾಥ್, ಮೋಹನ್ ಕುಮಾರ್ ಮತ್ತು ಸುಕನ್ಯಾ ದಂಪತಿಗಳಿಗೆ ನಾನು ಆಭಾರಿ. ಅವರ 125 ನೇ ಜಯಂತಿಯ ದಿನ ನನ್ನ ವಿನಯಪೂರ್ವಕ ನಮನಗಳು.
ಕೃತಜ್ಞತೆಗಳು: ಡಾ.ರುಕ್ಮಿಣಿ ರಘುರಾಮ್ 🌷🙏🌷
On the birth anniversary of great teacher and scholar K. Sampath Giri Rao
ಕಾಮೆಂಟ್ಗಳು