ಭಾರತಕಥಾಮಂಜರಿ109
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ದ್ರೋಣ ಪರ್ವ - ಹದಿನೆಂಟನೆಯ ಸಂಧಿ
ಸೂ.
ರಿಪುಬಲವ ಗೆಲುವಲ್ಲಿ ಶಾಪಾ
ದಪಿ ಶರಾದಪಿಯೆಂಬ ಜಯ ಲೋ
ಲುಪನು ಸಂಗ್ರಾಮದಲಿ ಮಡಿದನು ಪುತ್ರಮೋಹದಲಿ
ಸಾಲದೇ ಸಮರಂಗವಿರುಳಿನ
ಕಾಳೆಗದ ಜಯ ನಮ್ಮದರಿಭೂ
ಪಾಲಕನ ಥಟ್ಟಿನಲಿ ಮಡಿದುದು ಬೇಹ ಬೇಹವರು
ಮೇಲುಗಾಳೆಗ ನಮ್ಮದೀಸರ
ಮೇಲೆ ತೆಗೆಸುವುದತಿಮಥನದಲಿ
ಕಾಳಹುದು ಬಳಿಕೆನಲು ನೃಪತಿಗೆ ನುಡಿದನಾಚಾರ್ಯ ೧
ಅವನಿಪಾಲರು ಕಂಗಳಿಂದವೆ
ಕಿವಿಗೆ ಕರವೊಳ್ಳಿದರು ಕಂಡುದ
ನವರು ನಂಬರು ಕೊಂಡೆಯರ ನುಡಿಗೇಳ್ದು ನಂಬುವರು
ನಿವಗೆ ಹೇಳುವುದಲ್ಲ ಲೋಕದ
ಹವಣನೆಂದೆವು ನಾವು ಪಾಂಡವ
ರವರು ನಿನ್ನವರೆಂಬುದನು ನೀನಿಂದು ನೋಡೆಂದ ೨
ಬಿಲ್ಲನೊದರಿಸಿ ವೈರಿ ಭಟರಿಗೆ
ಚೆಲ್ಲಿದನು ಭೀತಿಯನು ಬರಸಿಡಿ
ಲೆಲ್ಲಿ ತುಡುಕುವುದಾರು ಬಲ್ಲರು ದ್ರೋಣನುರವಣೆಯ
ಘಲ್ಲಣೆಯ ಖುರಪುಟದ ತುರಗದ
ಹಲ್ಲಣೆಯ ಹೇಷಿತಕೆ ಹಗೆಯೆದೆ
ಝಲ್ಲೆನಲು ಕಣೆ ಜಾಡಿ ಕವಿದುದು ಕಟಕದಗಲದಲಿ ೩
ಇಳೆಯೊಳದುಭುತವಿದು ಕೃತಾಂತನ
ಫಲಿತ ಶಾಳೀವನವ ಮುತ್ತಿದ
ಗಿಳಿಗಳೋ ಆಚಾರ್ಯನಂಬುಗಳೋ ಮಹಾದೇವ
ನಿಳಿನಿಳಿಲು ಭುಗಿಲೆಂಬ ಛಿಳಿಛಿಳಿ
ಛಿಳಿಛಿಟಿಲು ಭೋರೆಂಬ ಖಣಿಖಟಿ
ಖಳಿಲು ಖಳಿಲೆಂಬಂಬುಗಳ ದನಿ ತುಂಬಿತಂಬರವ ೪
ಕಡಿದು ಬೀಳುವ ಕೈದುಗಳನರೆ
ಗಡಿದು ಜೋಲುವ ಜೋಡುಗಳ ನೆರೆ
ಸಿಡಿದು ಹಾರುವ ಸೀಸಕದ ನುಗ್ಗಾದ ಹಲಗೆಗಳ
ಉಡಿದ ಸಿಂಧದ ನೆಲಕೆ ಹರಹಿದ
ಕೊಡೆಯ ಚಮರದ ತಾರು ಥಟ್ಟಿಗೆ
ಕೆಡೆದ ಚಾತುರ್ಬಲವನಭಿವರ್ಣಿಸುವನಾರೆಂದ ೫
ಅಳಿದವೈನೂರಾನೆ ಮಗ್ಗುಲ
ನೆಲಕೆ ಕೀಲಿಸಿ ಪಾಡಿಗೈದವು
ಬಲುಗುದುರೆ ಹದಿನೈದು ಸಾವಿರವೇಳುನೂರು ರಥ
ಮಲಗಿದವು ಕಾಲಾಳು ಲೆಕ್ಕದ
ಕಲೆಯ ತೊಡಸಿತು ರಾಜಪುತ್ರರು
ಹಲಬರವರಲಿ ಹೊಯ್ದು ಹೊಕ್ಕರು ಸುರರ ಪಟ್ಟಣವ ೬
ಸಾಲ ಮೇಘದ ಮನೆಗಳಿಗೆ ಬಿರು
ಗಾಳಿ ಬಿದ್ದಿನನಾಗಿ ಬರಲವ
ರಾಲಯದ ಸಿರಿ ಮೆರೆವುದೇ ಧೃತರಾಷ್ಟ್ರ ಚಿತ್ತಯಿಸು
ಬೀಳಹೊಯ್ದರು ಹೊಕ್ಕು ಭೂಮೀ
ಪಾಲನೆಯನಿವರೊಲ್ಲೆವೆಂಬವೊ
ಲೂಳಿಗವ ಮಾಡಿದನು ಪರಬಲದೊಳಗೆ ಕಲಿದ್ರೋಣ ೭
ಮುರಿದು ಬರುತಿದೆ ಸೇನೆ ಸಾಕೀ
ಪರಿಯ ಸೈರಣೆ ನಿಮ್ಮ ಮಾವನ
ಕುರಿದರಿಗೆ ಖತಿಗೊಂಡು ಕಾದಿ ವಿರಾಟ ಕೈಕೆಯರು
ತುರುಗಿದರು ತೆತ್ತೀಸರಲಿ ತೆಗೆ
ಮರೆಯ ಮಾತೇ ವಿಜಯಲಕ್ಷ್ಮಿಯ
ಸೆರಗ ಹಿಡಿದನು ದ್ರೋಣನೆಂದರು ಚರರು ಭೂಪತಿಗೆ ೮
ಹೊಳೆಹೊಳೆದು ತಂಬುಲದ ರಸದಲಿ
ಮುಳುಗಿ ಮೂಡುವ ಢಗೆಯ ತೊಡೆಹದ
ಮೆಲುನಗೆಯ ಕಳವಳವನರೆಮುಕ್ಕುಳಿಸಿದಾಲಿಗಳ
ಹಿಳಿದ ಛಲದ ವಿಡಾಯಿ ಧೈರ್ಯದ
ತಳಿತ ಭೀತಿಗೆ ಕಾಲುವೊಳೆಯಾ
ದಳಿಮನದ ಭೂಪಾಲನಿರವನು ಕಂಡನಾ ಪಾರ್ಥ ೯
ನಾಯಿಗಳ ಹೊಯ್ ನೂಕು ರಣದಲಿ
ಸಾಯಬೇಡಾ ಕ್ಷತ್ರಿಯರು ತಾ
ವಾಯುಧಂಗಳ ಹಿಡಿದರೋ ಮೇಣೇಕದಂಡಿಗಳೊ
ಜೀಯ ಖಾತಿಯಿದೇಕೆ ಬೀಳಲಿ
ನಾಯಕರು ನಿನಗೇನು ಹರನಡ
ಹಾಯಲಿಂದರಿಬಲವನುರುಹುವೆನೆಂದನಾ ಪಾರ್ಥ ೧೦
ನಿಲ್ಲು ಫಲುಗುಣ ನಿನ್ನ ಪರಿಯಂ
ತೆಲ್ಲಿಯದು ರಣವಕಟ ಹಾರುವ
ನಲ್ಲಿ ಕೆಲಬರ ಹೊಯ್ದು ಕೊಂದನು ಬಿನುಗು ಬಿಚ್ಚಟೆಯ
ಬಲ್ಲೆನಾತನ ಬಲುಹನೀಶ್ವರ
ನಲ್ಲಿ ಹರಿಮೇಖಳೆಯೆ ಸಾಕಿ
ನ್ನೆಲ್ಲವೇತಕೆಯೆನುತ ಧೃಷ್ಟದ್ಯುಮ್ನನನುವಾದ ೧೧
ನೇಮವಾಯಿತು ಸಾತ್ಯಕಿಗೆ ಶ್ರುತ
ಸೋಮಕಾದಿ ಕುಮಾರರಿಗೆ ಸಂ
ಗ್ರಾಮವೀರ ಶಿಖಂಡಿ ಸೃಂಜಯ ಚೇಕಿತಾನರಿಗೆ
ಆ ಮಹಾರಥರೈದಿದರು ಘನ
ತೋಮರದಿ ತುರುಗಿದ ವರೂಥ
ಸ್ತೋಮದಲಿ ಬಹುವಿಧದ ವಾದ್ಯ ವಿಡಾಯಿ ರಭಸದಲಿ ೧೨
ಸರಕಟಸಿ ನೂಕಿತು ಚತುರ್ಬಲ
ವರರೆ ಹಾರುವನೆಲ್ಲಿ ಯಾವೆಡೆ
ದೊರೆ ಸುಯೋಧನನೆಲ್ಲಿ ರಾಧೆಯ ಮಗನ ಬರಹೇಳು
ಗುರುಸುತನ ಕರೆ ಕಾದ ಹೇಳೋ
ದುರುಳ ದುಶ್ಯಾಸನನನೆನುತ
ಬ್ಬರಿಸಿ ಕವಿದುದು ವೈರಿಬಲವಾಚಾರ್ಯನಿದಿರಿನಲಿ ೧೩
ಅಂಗವಣೆಯೊಳ್ಳಿತು ಮಹಾದೇ
ವಂಗೆ ಮೊಗಸುವಡರಿದು ಮೊದಲಲಿ
ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ
ಭಂಗವಿಲ್ಲದೆ ಬಿದ್ದ ನಿಮ್ಮ
ಯ್ಯಂಗೆ ಹಳಿವನು ಹೊರಿಸದಿಹ ಮನ
ದಂಗವಣೆಯುಂಟಾಗೆ ಮೆಚ್ಚುವೆನೆಂದನಾ ದ್ರೋಣ ೧೪
ಗಳಹತನ ನಿಮ್ಮಲ್ಲಿ ನೆಲೆ ನೀವ್
ಕಲಿತ ವಿದ್ಯವು ಮಾತಿನಲಿ ನೀವ್
ಗೆಲುವುದಿದು ತಪ್ಪಲ್ಲ ಮುಖದಿಂ ದ್ವಿಜರು ಜನಿಸಿದಿರಿ
ಗೆಲವು ತೋಳಿಂದೆಮಗೆ ಜನ್ಮ
ಸ್ಥಳವಲೇ ಭುಜವರಸುಗಳಿಗಿ
ನ್ನಳುಕದಿದಿರಲಿ ನಿಂದಿರಾದಡೆ ಗೆಲವು ನಿಮಗೆಂದ ೧೫
ಎನ್ನು ಮತ್ತೊಮ್ಮೆನ್ನು ತನ್ನಾ
ಣೆನ್ನು ಗೆಲವೇ ನಮಗೆ ನಿಂದರೆ
ನಿನ್ನ ಸಮ್ಮುಖದಲಿ ಮಹಾದೇವಹುದು ಬಳಿಕೇನು
ತನ್ನಲುಂಟೇ ಖರೆಯತನ ಬರಿ
ದೆನ್ನನಿವನಿದ ಹಲವು ಬಾರಿಯ
ಮುನ್ನ ಬಲ್ಲೈ ನೀನೆನುತ ಸಾರಥಿಯ ಕೈವೊಯ್ದ ೧೬
ಈತ ಸೇನಾಪತಿ ಕಣಾ ತಾ
ನೀತನೈವರ ಮೈದುನನು ವಿ
ಖ್ಯಾತನಿವ ಪಾಂಚಾಲಕುಲದಲಿ ದ್ರುಪದತನುಜನಿವ
ಈತ ಸಾತ್ಯಕಿ ಯಾದವರ ಕುಲ
ದಾತನೀತ ಶಿಖಂಡಿ ಮೊದಲಾ
ದೀತಗಳು ನೆರೆ ಖರೆಯರೆಂದನು ನಗುತ ಸಾರಥಿಗೆ ೧೭
ಮುಟ್ಟಿ ಬಂದುದು ಸೇನೆ ಕವಿದುದು
ಕಟ್ಟಳವಿಯಲಿ ಕಲಿಗಳೆದು ಬಳಿ
ಕಟ್ಟಿ ತಿಂಬ ಮಹಾಂತಕಂಗೌತಣವ ಹೇಳ್ವಂತೆ
ಕಟ್ಟೆಯೊಡೆದಂಬುಧಿಯೊ ಮೇಣ್ ಜಗ
ಜಟ್ಟಿ ಸುರಿದಂಬುಗಳೊ ನಿಮಿಷಕೆ
ಕೆಟ್ಟುದಾಚೆಯ ಬಲದ ತರಹರವರಸ ಕೇಳೆಂದ ೧೮
ನುಡಿಗೆ ಮುಂಚುವ ಬಾಣ ಮಾರುತ
ನಡಸಿ ಬೀಸುವ ಲಾಗು ತಲೆಗಳ
ತೊಡಬೆಗಳಚುವ ಬೇಗವನು ಬಣ್ಣಿಸುವರೆನ್ನಳವೆ
ಕಡಲ ಕಡಹದಲುರಿವ ಗರಳವ
ನುಡುಗಿದವರಿವರೋ ಶಿವಾಯೆಂ
ದೊಡನೊಡನೆ ಪಡೆ ನಡುಗಲೊರಸಿದನಾ ಮಹಾರಥರ |೧೯
ಕರಿಗಳೈಸಾವಿರ ತುರಂಗಮ
ವೆರಡು ಸಾವಿರವೆಂಟು ಸಾವಿರ
ವರವರೂಥದ ಥಟ್ಟು ಮುರಿದುದು ಲಕ್ಷ ಪಾಯದಳ
ಅರಸುಗಳು ಮೂನೂರು ಪುನರಪಿ
ಕರಿ ತುರಗ ರಥ ಮತ್ತೆ ಮೂವ
ತ್ತೆರಡು ಸಾವಿರವಳಿದುದರಿ ಪಾಂಚಾಲ ಸೇನೆಯಲಿ ೨೦
ಮತ್ತೆ ಕವಿದುದು ಹೆಣನ ತುಳಿದೊ
ತ್ತೊತ್ತೆಯಲಿ ರಿಪುಸೇನೆ ಮಂಜಿನ
ಮುತ್ತಿಗೆಯ ರವಿಯಂತೆ ಕಾಣೆನು ಕಳಶಸಂಭವನ
ಮತ್ತೆ ನಿಮಿಷಾರ್ಧದಲಿ ಕಾಲನ
ತುತ್ತು ಜೋಡಿಸಿತೇನನೆಂಬೆನು
ಹತ್ತು ಕೋಟಿಯನಿಳುಹಿದನು ರಿಪುಚಾತುರಂಗದಲಿ ೨೧
ಘಾಸಿಯಾದುದು ಸೇನೆ ಸುಡಲೆನು
ತಾ ಸುಭಟರಿದಿರಾಗಿ ಕಾದಿದ
ರೈಸೆ ಬಳಿಕೇನವರ ಸತ್ವ ತ್ರಾಣವೇನಲ್ಲಿ
ಸೂಸುಗಣೆಗಳ ಸೊಗಡು ಹೊಯ್ದುಪ
ಹಾಸಕೊಳಗಾದರು ಮಹಾರಥ
ರೀಸು ಭಂಗಕೆ ಬಂದುದಿಲ್ಲ ನೃಪಾಲ ಕೇಳೆಂದ ೨೨
ಕಂಡುದಿವರನು ರಾಯ ಮೋಹರ
ವಂಡುಗೊಂಡುದು ದೊರೆಗಳಿದು ಕೋ
ದಂಡ ರುದ್ರನ ರಣ ಕಣಾ ತಾವೇನನೊದಗುವರು
ಉಂಡ ಬಾದಣದೇರುಮದ್ದಿನ
ಗಂಡನೋ ದ್ರೋಣಾಸ್ತ್ರವನು ಸವಿ
ಗಂಡನೋ ಸಾತ್ಯಕಿಯೆನುತ ಗರ್ಜಿಸಿದನಾ ಭೀಮ ೨೩
ನುಡಿದು ಭಂಗಿಸಲೇಕೆ ಸದರವ
ಕೊಡುವುದಾಹವವೊಮ್ಮೆ ಮಗುಳವ
ಗಡಿಸುವುದು ವಿಕ್ರಮಕೆ ಕುಂದೇನಿದು ಮುಹೂರ್ತ ವಶ
ಪಡೆ ಸವೆದುದಿನ್ನೇನೆನುತ ಬಿಲು
ದುಡುಕಿ ಹೊಕ್ಕನು ಪಾರ್ಥನನಿಲಜ
ನೊಡನೆ ಬಳಿಸಂಧಿಸಿತು ಸನ್ನಾಹದಲಿ ಪರಿವಾರ ೨೪
ಭೀತಿ ಮಾಣಲಿ ಭೀಮ ಫಲುಗುಣ
ರಾತುಕೊಂಡರು ಬವರವನು ನೆರೆ
ಸೋತವರು ಸಂವರಿಸಿ ಕೊಂಬುದೆನುತ್ತ ಚರರುಲಿಯೆ
ಚಾತುರಂಗದ ಚರಣಹತಿ ನಿ
ರ್ಧೂತ ಧೂಳೀಮಯವಖಿಳ ದಿಗು
ಜಾತವೆನೆ ಥಟ್ಟಣೆಯಲೇರಿತು ಪಾಂಡುಸುತಸೇನೆ ೨೫
ಆಳಿಯೇ ನಿಮಗೆನ್ನ ಸರಳಿಂ
ದಾಳು ಕುದುರೆಯ ಕೊಲಿಸುವುದು ನಿಮ
ಗಾಳುತನವುಂಟೆಂಬ ರ್ವವನಿಲ್ಲಿ ತೋರಿಸಿರೆ
ಆಳು ನೋಡುತ್ತಿರಲಿ ನಮ್ಮೀ
ಕಾಳೆಗವನೆಲೆ ಪಾರ್ಥ ಪವನಜ
ಹೇಳೆನುತ ಕೈವರ್ತಿಸಿದನಂಬುಗಳಿಗಿವರೊಡಲ ೨೬
ನರನನೆಚ್ಚನು ಪವನಜನ ತನು
ಬಿರಿಯಲೆಚ್ಚನು ಸಾರಥಿಗಳಿ
ಬ್ಬರಲಿ ಹೂಳಿದನಂಬ ನೆರೆ ನೋಯಿಸಿದ ರಥ ಹಯವ
ನರನ ಕಣೆಯನು ಭೀಮನಂಬನು
ಹರೆಗಡಿದು ಮಗುಳೆಚ್ಚನವರನು
ಸರಳ ಪುನರಪಿ ಸವರಿ ಸೆಕ್ಕಿದನೊಡಲೊಳಂಬುಗಳ ೨೭
ದಿಟ್ಟಿ ಮುಷ್ಟಿಯ ಸರಿಸದಲಿ ತಲೆ
ಮಟ್ಟು ಕವಿದರು ಭೀಮ ಫಲುಗುಣ
ರಿಟ್ಟ ತೊಡರಿನೊಳಾರು ಸಿಲುಕರು ದಿವಿಜ ದನುಜರಲಿ
ನೆಟ್ಟನೈದುವ ಹಿಳುಕುಗಳ ತರಿ
ದೊಟ್ಟಿದನು ದೆಖ್ಖಾಯಿಯಲಿ ಗರಿ
ಗಟ್ಟಿತೀತನ ಖಾತಿ ಮೆರೆದುದು ಕೇಣವಿಲ್ಲೆನಿಸಿ ೨೮
ರಾಯನನು ಬರಹೇಳು ನಾವ್ ಕೈ
ಗಾಯೆವೋ ಕಾಯಿದೆವೊ ಕಾಣಲಿ
ಬಾಯಿಬಡುಕರು ಬಂದು ನೋಡಲಿ ಕರ್ಣ ಶಕುನಿಗಳು
ಆಯುಧವ ಹಿಡಿದವರು ಮೇಣಿವ
ರಾಯತದೊಳೊಡವೆರಸಿ ನೋಡಲಿ
ರಾಯನಾಣೆಯೆನುತ್ತ ಮೂದಲಿಸಿದನು ತನ್ನವರ ೨೯
ಬಾಲಸೂರ್ಯನವೊಲ್ ಪ್ರತಿಕ್ಷಣ
ದೇಳಿಗೆಯ ತೇಜದ ವಿಕಾರ ಚ
ಡಾಳಿಸಿತು ವಿಕ್ರಮದ ಝಳ ಜಗವಳುಕೆ ಝೊಂಪಿಸಿತು
ಹೇಳಲೇನರ್ಜುನನ ಭೀಮನ
ಸೋಲವದು ತಾ ಮೃತ್ಯುವೀ ಪರಿ
ಕಾಳೆಗವ ನಾನರಿಯೆನಮರಾಸುರರ ಥಟ್ಟಿನಲಿ ೩೦
ಸಾಕು ನಿಮಗಾಗದು ವೃಥಾ ನೀ
ವೇಕಹಂಕರಿಸುವಿರಿ ಸೇನಾ
ನೀಕ ಹೊದ್ದಲಿ ಹೊಗಲಿ ಧೃಷ್ಟದ್ಯುಮ್ನ ಮೊದಲಾಗಿ
ಆಕೆವಾಳರು ನಿಲಲಿ ಕುಪಿತ ಪಿ
ನಾಕಿಯರಿಯಾ ದ್ರೋಣನೆನುತ ನ
ರಾಕೃತಿಯ ಪರಬೊಮ್ಮರೂಪನು ತಿರುಹಿದನು ರಥವ ೩೧
ಮೇಲೆ ಬಿದ್ದುದು ಮುಳಿಸಿನಲಿ ಪಾಂ
ಚಾಲರಾಯನ ಥಟ್ಟು ನಿಶಿತ ಶ
ರಾಳಿಯಲಿ ಹೂಳಿದನು ಧೃಷ್ಟದ್ಯುಮ್ನನಂಬರವ
ಬಾಲಕರಲೇ ಖಡ್ಗಧಾರೆಯ
ಮೇಲೆ ಮೋಹಿದ ಮಧುವ ಸವಿಯಲಿ
ನಾಲಗೆಯಲಿವರೊಲ್ಲರೆಂದನು ನಗುತ ಕಲಿದ್ರೋಣ ೩೨
ತೆರಹ ಕೊಟ್ಟೊಳಹೊಗಿಸಿ ಸದೆದನು
ಬರಸಿಡಿಲು ಜಡಿವಂತೆ ರಿಪುಬಲ
ವೊರಲಿ ಕೆಡೆದುದು ಘಾಯವಡೆದುದು ಬೇಹ ನಾಯಕರು
ದುರುದುರಿಪ ತಲೆಮಿದುಳ ದಂಡೆಯ
ಹರಿಗರುಳ ನೆಣವಸೆಯ ಮೂಳೆಯ
ಮುರಿಕುಗಳ ಕಡಿಖಂಡಮಯವಾಯ್ತಖಿಳ ಚತುರಂಗ ೩೩
ಬೆರಳ ಬಾಯ್ಗಳ ಬಿಸುಟ ಕೈದುಗ
ಳರೆಗಿರಿದ ಹಲ್ಲುಗಳ ಕೂಡಿದ
ಕರಪುಟದ ಬಿಡುದಲೆಯ ಬಸಿವೇರುಗಳ ಶೋಣಿತದ
ನರಳುವಾರೋಹಕರ ರಾವ್ತರ
ವರ ಮಹಾರಥ ಪಾಯದಳದು
ಬ್ಬರದ ಭಂಗವನೇನನೆಂಬೆನು ವೈರಿಸೇನೆಯಲಿ ೩೪
ಮುಂದೆ ಹೊಗುವತಿಬಳರು ಹಾರಿತು
ಹಿಂದಣವರನು ಹಿಂದೆ ನಿಲುವರು
ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ
ಅಂದು ಪಾರ್ಥನು ಕೃಷ್ಣ ಬಲದಲಿ
ನಿಂದನೇವೇಳುವೆನು ನಿನ್ನವ
ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ ೩೫
ಆರು ಸಾವಿರ ತೇರು ಗಜ ಹದಿ
ನಾರುಸಾವಿರ ಲಕ್ಷ ಕುದುರೆಗ
ಳಾರು ಕೋಟಿ ಪದಾತಿ ಮುಗ್ಗಿತು ಮತ್ತೆ ಸಂದಣಿಸಿ
ಆರಿ ಲಕ್ಷ ತುರಂಗ ನೃಪರೈ
ನೂರು ಗಜಘಟೆ ಲಕ್ಷ ರಥ ಹದಿ
ಮೂರು ಸಾವಿರವಳಿದುದರಿಪಾಂಚಾಲ ಸೇನೆಯಲಿ |೩೬
ಅಂಗವಿಸುವವರಿಲ್ಲ ಭಟರಿಗೆ
ಭಂಗವಿಕ್ಕಿತು ಕೌರವೇಂದ್ರಗೆ
ಸಂಗರದ ಸಿರಿ ಸೊಗಸಿನಲಿ ಕಡೆಗಣ್ಣ ಸೂಸಿದಳು
ಮುಂಗುಡಿಯಲಿನ್ನಾರು ನಮಗಾ
ವಂಗದಲಿ ಜಯವೇನು ಹದನರ
ಸಂಗೆ ಬಿನ್ನಹ ಮಾಡಿಯೆಂದರು ನಿಖಿಳ ಮಂತ್ರಿಗಳು ೩೭
ಕರಸಿದನು ಹರಿ ಧರ್ಮಪುತ್ರನ
ನರಸ ಕೇಳಿಂದಿನಲಿ ಗುರುವನು
ಸರಳ ಮೊನೆಯಲಿ ಗೆಲಲು ನೂಕದು ಭೂತನಾಥಂಗೆ
ತೆರಳಿ ಬರುತಿದೆ ನಮ್ಮ ಬಲ ಸಂ
ಗರದ ಜಯವಹುದೆಂತು ಹೇಳೈ
ಧರಣಿಪತಿ ನೀನೆನಲು ನೀವೇ ಬಲ್ಲಿರಿದನೆಂದ ೩೮
ಧುರದ ಜಯವಹುದೊಂದು ಪರಿಯಲಿ
ನಿರುತವಲ್ಲದ ನುಡಿಯ ನುಡಿದರೆ
ಪರಿಹರಿಸಬಹುದೆಂದನಸುರಾರಾತಿ ನಸುನಗುತ
ನರನದೆಂತೆನೆ ಗುರುತನುಜ ಸಂ
ಗರದೊಳೊರಗಿದನೆಂದು ದ್ರೋಣಂ
ಗರುಹು ಫಲುಗುಣ ಮನದೊಳಳುಕದೆ ಬೇಗ ಮಾಡೆಂದ ೩೯
ಕಿವಿಯ ಮುಚ್ಚಿದನರ್ಜುನನು ಹರಿ
ಯವಗಡಿಸೆ ಕೈಕೊಂಡನರಸನು
ಪವನಸುತನಾ ಮಾತಕೊಂಡನು ಹೊಕ್ಕನಾಹವವ
ತವಕದಲಿ ತೆಗೆದೆಸುತ ರಿಪುಶರ
ನಿವಹವನು ಖಂಡಿಸುತಲಿಂದಿನ
ಬವರದಲಿ ಕಡಿವಡೆದುದಶ್ವತ್ಥಾಮ ಕೇಳೆಂದ ೪೦
ಶಿವ ಶಿವಾ ಕರ್ಣಜ್ವರಾಯತ
ರವವಿದೆತ್ತಣದೋ ಕುಮಾರನ
ತಿವಿದರಾರೋ ತಾನಿದದುಭುತವೆನುತ ತನ್ನೊಳಗೆ
ತವಕಿಸುತ ತಿಳಿದನು ವೃಕೋದರ
ನಿವ ದುರಾತ್ಮನು ತನ್ನ ಮಗನಾ
ಶಿವನೊಡನೆ ಸಮಜೋಳಿ ಹುಸಿ ಹೋಗೆಂದನಾ ದ್ರೋಣ ೪೧
ಮತ್ತೆ ಮಸೆದುದು ಖಾತಿ ಕರ್ಬೊಗೆ
ಸುತ್ತಿದುಸುರಲಿ ಮೀಸೆಗಡಿದೌ
ಡೊತ್ತಿ ಸೆಳೆದನು ಶರವನೆಚ್ಚನು ಪವನನಂದನನ
ಹತ್ತೆಗಡಿದನು ಭೀಮ ಮಗುಳಿವ
ನೊತ್ತಿ ಹೊಕ್ಕರೆ ಕೈ ನೆರವ ಹಾ
ರುತ್ತ ಮುರಿದನು ಬಳಿಕ ಧೃಷ್ಟದ್ಯುಮ್ನನಿದಿರಾದ ೪೨
ಎನಿತು ಬಾರಿ ಪಲಾಯನದ ಸಿರಿ
ನಿನಗೆ ಸೇರಿತು ವೀರ ಭಂಡನೊ
ಳೆನಗೆ ನೂಕದು ಸಾಕು ಧೃಷ್ಟದ್ಯುಮ್ನ ನಿಲ್ಲೆನುತ
ಅನಿಲ ಜವದಲಿ ರಥವ ಬಿಟ್ಟನು
ಜನಪತಿಯ ಮೋಹರಕೆ ಕವಿದುದು
ತನತನಗೆ ರಾಯನ ವಿಪತ್ತಿನೊಳಖಿಳ ಭಟನಿಕರ ೪೩
ಒಲೆದು ಗಜವಿಟ್ಟಣಿಸಿದವು ತಲೆ
ವಲಗೆಯಲಿ ಕಲಿ ಪಾಯದಳ ಪಡಿ
ತಳಿಸಿತೊಳಹೊಕ್ಕೌಕಿದವು ಬದ್ಧರದ ಬಂಡಿಗಳು
ಸೆಳೆದಡಾಯ್ದದ ರಾವುತರು ಕೈ
ನಿಲುಕಿದರು ಮುತ್ತಿದರು ಪರಿಮಂ
ಡಳಿಸಿ ಬೊಬ್ಬಿರಿದಾರಿದರು ಸಿಕ್ಕಿದನು ಹಗೆಯೆನುತ ೪೪
ಸಾರಥಿಯ ತುಡುಕಿದರು ತಿವಿದರು
ತೇರ ಕುದುರೆಯನಿಭದ ಬರಿಕೈ
ತೇರ ಹಿಡಿದವು ಘಲ್ಲಿಸಿದವನುಕರುಷ ಕೂಬರವ
ಭಾರಿಯೀಚಿನ ಮೇಲೆ ಬಿದ್ದವು
ವಾರುವಂಗಳ ಖುರನಿಕರವಸಿ
ಧಾರೆ ಮೊಗದಲಿ ಮಿಂಚಿದವು ಮುತ್ತಿದವು ಕಳಶಜನ ೪೫
ದ್ರೋಹಿ ಸಿಲುಕಿದನೆನುತೆ ಜೀವ
ಗ್ರಾಹವೋ ಸಾಹಸ ವಿಚಾರಿಸು
ಬೇಹವರನೆನುತೊರಲಿ ಧೃಷ್ಟದ್ಯುಮ್ನನಿದಿರಾಗೆ
ಸಾಹಸಿಕರಳುಕಿದರು ಕೌರವ
ಮೋಹರದ ಮೊನೆಯಾಳುಗಳು ಸ
ನ್ನಾಹದಲಿ ಪಡಿತಳಿಸಿ ಕರ್ಣ ಕೃಪಾದಿ ನಾಯಕರು ೪೬
ಗಾಳ ಗಂಟಲಲಿಳಿವುದೇ ಮ
ತ್ಸ್ಯಾಳಿಗಕಟೀ ದೊದ್ದೆ ಕವಿದರೆ
ಕೋಲಗುರು ಕಳವಳಿಸುವನೆ ಬಯಸುವನೆ ಕೆಲಬಲನ
ಮೇಲುಗಾಣದೆ ಕವಿದಡಿದಿರೇ
ಬಾಲಹರಿಣನ ಹಿಂಡು ಹೆಬ್ಬುಲಿ
ಗಾಳ ತತ್ತರಿದರಿದು ತಳಪಟ ಮಾಡಿದನು ದ್ರೋಣ ೪೭
ಆರ ನೆರವಿಯೊಳಂಧಕಾರದ
ಭಾರವನು ರವಿ ಗೆಲುವನಿನ್ನೀ
ವೈರಿಬಲಭಂಜನಕೆ ಗುರು ಹಂಗಹನೆ ಕೆಲಬಲಕೆ
ಭೂರಿ ರಿಪುಚತುರಂಗಬಲಸಂ
ಹಾರದಲಿ ಒರವೆದ್ದ ರಕುತದ
ಪೂರದಲಿ ಮುಳುಗಿದರು ಪಾಂಚಾಲಾದಿ ನಾಯಕರು ೪೮
ಘಾಯವಾಯ್ತರ್ಜುನಗೆ ಮಿಗೆ ಪೂ
ರಾಯದೇರಿನೊಳೊದೆದು ಕೊಂಡರು
ವಾಯುತನುಜ ಶಿಖಂಡಿ ಸಾತ್ಯಕಿ ದ್ರುಪದನಂದನರು
ಬಾಯ ಬಿಟ್ಟುದು ಭೀತಿಯಲಿ ಕೌಂ
ತೇಯಸುತರಿನ್ನುಳಿದ ಸುಭಟರ
ನಾಯಕರ ಪಾಡೇನು ನಸಿದುದು ಪಾಂಡುಸುತಸೇನೆ ೪೯
ಮೊದಲಲೌಕಿದ ಚಾತುರಂಗವ
ಸದೆದನೊಂದೇ ಲಕ್ಷವನು ಮೀ
ರಿದರೆ ಮೋದಿದನೆಂಟುಲಕ್ಷವನೊಂದು ನಿಮಿಷದಲಿ
ಕದನದಲಿ ದಿಗ್ದೇವಿಯರಿಗಿ
ಕ್ಕಿದನು ಲಕ್ಷವನೇಳು ಲಕ್ಷವ
ನೊದಗಿಸಿದನಂತಕನ ಪುರಿಗವನೀಶ ಕೇಳೆಂದ ೫೦
ಧಾರುಣೀಶರು ಮಡಿದರೊಂದೇ
ಸಾರಿಗೆಯಲೈನೂರು ಮತ್ತೆ ಮ
ಹಾರಥರು ಮೂನೂರು ಪುನರಪಿ ನೂರು ನಾನೂರು
ಮಾರಿ ಬಿರುದೇಗಿದಳು ಯಮನವ
ರಾರದೊಯ್ಯಲು ನಾಕದಲಿ ಹೊರ
ಕೇರಿಗಟ್ಟಿದುದೆನಲು ಕೊಂದನು ರಿಪುಚತುರ್ಬಲವ ೫೧
ಇಳಿದರಿತ್ತಲು ಗಗನದಿಂ ಹೊಳೆ
ಹೊಳೆವ ಢಾಳದ ಝಾಢಿಯಲಿ ಜಗ
ಮುಳುಗೆ ಭಸ್ಮವಿಭೂಷಿತಾಂಗದ ಜಡಿವ ಕೆಂಜೆಡೆಯ
ಪುಲಿದೊಗಲ ಸುಲಿಪಲ್ಲ ಮುಕ್ತಾ
ವಳಿಯ ಮಣಿ ಜಪಮಾಲಿಕೆಯ ನಿ
ರ್ಮಳ ತಪೋಧನರೈದಿದರು ಸಂಗ್ರಾಮಭೂಮಿಯನು [ ೫೨
ಅತ್ರಿ ಭಾರದ್ವಾಜ ವಿಶ್ವಾ
ಮಿತ್ರ ಗೌತಮ ಕಣ್ವ ಕಶ್ಯಪ
ಮಿತ್ರಸೂನು ವಸಿಷ್ಠ ಗಾರ್ಗ್ಯಾಂಗಿರಸ ಭಾರ್ಗವರು
ಅತ್ರಿಸುತ ವರ ವಾಲಖಿಲ್ಯರು
ಚಿತ್ರಚರಿತರು ಬಂದರಲ್ಲಿಗೆ
ಮಿತ್ರಭಾವದಲವರನಭಿವಂದಿಸಿದನಾಚಾರ್ಯ ೫೩
ವರಮುನೀಶ್ವರರವನಿಯಲಿ ಮೂ
ವರಿಗೆ ಗೋಚರವಾದರಿತ್ತಲು
ಮುರವಿರೋಧಿಗೆ ನರಗೆ ಕುರುಸೇನಾಧಿನಾಥಂಗೆ
ಅರಿಯರುಳಿದವರೀತನಿಂ ಸ
ತ್ಕರಿಸಿಕೊಂಡರು ನುಡಿದರಾ ಮುನಿ
ವರರು ಕಡಿದರು ಕೌರವಾನ್ವಯ ಕಲ್ಪಭೂರುಹವ ೫೪
ಪಾತಕವಲಾ ದ್ರೋಣ ನಿನಗೀ
ಭೂತಹಿಂಸೆಯದೇಕೆ ಪಾರ್ಥಿವ
ಜಾತಿಯಲಿ ಜನಿಸಿದವರೀ ನಿನ್ನಂತೆ ನಿರ್ದಯರೆ
ಸೋತರೇನದು ಋಷಿತನಕಪ
ಖ್ಯಾತಿಯೇ ಶಸ್ತ್ರೋಪಜೀವನ
ವೇತಕಿದು ನಿನಗೆಂದು ಭಾರದ್ವಾಜಮುನಿ ನುಡಿದ ೫೫
ಲೋಕವೆಂಬುದು ವರ್ಣಧರ್ಮವ
ನೌಕಿ ನಡೆವುದು ವೈದಿಕಕೆ ನಾ
ವಾಕೆವಾಳರು ತಪ್ಪಿ ನಡೆದರೆ ಭ್ರಮಿಸುವರು ಬುಧರು
ಲೋಕ ನಮ್ಮನುದಾಹರಿಸುವುದು
ಕಾಕನೇ ಬಳಸುವುದು ದುರ್ಯಶ
ವೇಕೆ ನಿಮಗಿದು ವಿಹಿತಕರ್ಮಶ್ರುತಿಪರಿತ್ಯಾಗ ೫೬
ಶ್ರುತಿಪಠಣವೋ ತರ್ಪಣವೊ ಮೇ
ಣತಿಥಿ ಪೂಜೆಯೊ ಭೂತಯಜ್ಞವೊ
ಹುತವಹಾರಾಧನೆಯೊ ರಣವೀಯೈಯ್ದರೊಳಗೇನು
ಶ್ರುತಿ ತದರ್ಥಸ್ಮೃತಿಗಳಲಿ ಪಂ
ಡಿತರು ನಡೆವುದ ಮಾದು ಮೂರ್ಖರ
ಗತಿಯನನುಕರಿಸಿದರೆ ಬಳಿಕ ವಿಶೇಷವೇನೆಂದ ೫೭
ಆದುದವಿವೇಕದಲಿ ಸತ್ಪಥ
ವೈದಿಕಾತಿಕ್ರಮಣವಿನ್ನು ಗ
ತೋದಕದಲುರೆ ಸೇತುಸಂಬಂಧದಲಿ ಫಲವೇನು
ಈ ದುರಾಗ್ರಹ ನಿಲಲಿ ಹಾಯಿಕು
ಕೈದುವನು ಸುಸಮಾಧಿ ಯೋಗದ
ಲೈದು ನಿಜವನು ದೇಹ ನಿಸ್ಪೃಹನಾಗು ನೀನೆಂದ ೫೮
ದೇಹವಿದು ಭೂತೇಂದ್ರಿಯಾದಿಯ
ಗೇಹವುಪಚಿತ ಕರ್ಮ ಫಲ ಸಂ
ದೋಹದಲಿ ತಿರುಗುವುವು ಸುರ ನರ ತಿರ್ಯಗಾದಿಯಲಿ
ದೇಹ ಕರಣಾದಿ ಪ್ರಪಂಚವು
ನಾಹಮೆನಲಳಿದುಳಿದ ನಿತ್ಯ ನಿ
ರೀಹ ವಿಮಳ ಜ್ಞಾನರೂಪನು ನಿನ್ನ ನೋಡೆಂದ ೫೯
ನನೆದುದಂತಃಕರಣ ರೋಮಾಂ
ಚನದಲಾನಂದಾಶ್ರುಜಲದಲಿ
ನನೆದು ಹೊಂಪುಳಿಯೋಗಿ ಕಣ್ಣೆವೆ ಮುಚ್ಚಿ ಹೊರೆಹೆಚ್ಚಿ
ನೆನೆದೆನೆನ್ನನು ನಿಮ್ಮ ಪದದರು
ಶನದಿ ಧನ್ಯನು ಬಿಜಯಮಾಡುವು
ದೆನುತ ಕಂದೆರೆದೀಕ್ಷಿಸಿದನಂದುಭಯಸೈನಿಕವ ೬೦
ತಿರುಗಿದುದು ಮುನಿನಿಕರವತ್ತಲು
ಮರಳಿತೀತನ ಬುದ್ಧಿಯಿತ್ತಲು
ತೆರೆಯ ಹಿಡಿದುದು ಮರವೆ ಸಮ್ಯಜ್ಞಾನದೀಧಿತಿಗೆ
ಅರಸನನು ಬೆಸಗೊಂಬ ತನುಜನ
ಮರಣ ಹುಸಿಯೋ ದಿಟವೊ ಭೀಮನ
ಸೊರಹ ನಂಬೆನೆನುತ್ತ ರಾಯನನರಸುತೈತಂದ ೬೧
ಎಲೆ ಯುಧಿಷ್ಠಿರ ನನ್ನ ಸುತನೇ
ನಳಿದನೇ ಹುಸಿಯಲ್ಲಲೇ ನಿ
ರ್ಮಳವಚೋನಿಧಿ ನೀನು ಹೇಳೆನಲಸುರಹರ ನಗುತ
ಎಲೆಲೆ ನುಡಿಯಾ ಪಾಪಿ ಕದನದೊ
ಳಳಿದುದಶ್ವತ್ಥಾಮನೆಂಬ
ಗ್ಗಳೆಯ ಕರಿ ಮಾಳವರ ಥಟ್ಟಿನೊಳಂಜಬೇಡೆಂದ ೬೨
ಆದರಶ್ವತ್ಥಾಮ ಗಜವಿದಿ
ರಾದುದಳಿದುದು ದಿಟವೆನಲು ಬಿಸು
ಸುಯ್ದನರಸನ ನುಡಿಗೆ ನಂಬಿದನಕಟ ಮಗನೆನುತ
ಕೈದು ಕಯ್ಯಲಿ ಜಾರೆ ಝೊಂಪಿಸಿ
ಖೇದದಲಿ ಕಾತರಿಸಿ ಚಿತ್ತವಿ
ಭೇದದಲಿ ಕಳವಳಿಸಿ ಕರೆದನು ರೋಷತಾಮಸವ ೬೩
ಬಿಲುದುಡುಕಿ ಬಲುಸರಳ ತಿರುವಾಯ್
ಗೊಳಿಸಿ ಮಲೆತನು ಮಾರ್ಬಲಕೆ ಬಲೆ
ಕಳಚಿದರೆ ಮೃಗ ಬಿದ್ದುದಿರುಬಿನ ಕುಳಿಯೊಳೆಂಬಂತೆ
ತಿಳುಹಿ ಹೋದರು ಮುನಿಗಳೀತನ
ತಿಳಿವು ತೊಟ್ಟುದು ಮರವೆಯನು ಮುಂ
ಕೊಳಿಸಿ ಮೊಗೆದನು ಮತ್ತೆ ಪಾಂಡವಸೈನ್ಯಸಾಗರವ ೬೪
ತಿರುಗಿ ಭೀಮನನೆಚ್ಚನಿತ್ತಲು
ನರನ ಮಸೆಗಾಣಿಸಿದನರಸನ
ಹೊರೆಯ ಬಿರುದರ ಬಸಿಯಲೆಚ್ಚನು ವಾಮದಕ್ಷಿಣವ
ಮರಳಿ ಧೃಷ್ಟದ್ಯುಮ್ನ ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರರಸು ಮಕ್ಕಳ ಹಲಬರನು ಮುರಿಯೆಚ್ಚು ಬೊಬ್ಬಿರಿದ ೬೫
ಈಸು ಭರದಲಿ ಭೂತಹಿಂಸಾ
ದೋಷವನು ನೆರೆ ಮಾಡಿ ಮಕ್ಕಳಿ
ಗೋಸುಗವಲೇ ಹಣವ ಗಳಿಸುವುದಾತ ತಾನಳಿಯೆ
ಆಸೆಯಿದರೊಳಗೇಕೆ ಧುರದಾ
ವೇಶವಳಿಯದು ಶಿವ ಶಿವಾ ಸುತ
ನಾಶವನು ಬಗೆಗೊಳ್ಳನೆಂದನು ಪವನಸುತ ನಗುತ ೬೬
ಕೇಳಿದನು ಕಡುನೊಂದನಡಿಗಡಿ
ಗಾಲಿ ನೀರೇರಿದವು ಕೈಯಲಿ
ಕೋಲು ಬಿಲು ಸಡಲಿದವು ಸಾಕೀ ದೇಹವೇಕೆನುತ
ಮೇಲು ದುಗುಡದ ಮೊಗದಲವನೀ
ಪಾಲ ಕರ್ಣ ಕೃಪಾದಿ ಭಟರಿಗೆ
ಹೇಳಿದನು ಮಗನಳಿದನಸ್ತ್ರ ತ್ಯಾಗ ತನಗೆಂದು ೬೭
ಎನುತ ರಥದೊಳು ರಚಿಸಿ ಪದ್ಮಾ
ಸನವನಿಂದ್ರಿಯ ಕರಣವೃತ್ತಿಯ
ನನಿತುವನು ತಡೆದೆತ್ತಿ ಮೂಲಾಧಾರ ಮಾರುತನ
ಇನ ಶಶಿಗಳೊಂದಾಗೆ ನಾಡಿಗ
ಳನಿಲನಿಕರವನುಗಿದು ಬಿಂದು
ಧ್ವನಿಕಳಾಪರಿಲುಳಿತನೆಸೆದನು ವರ ಸಮಾಧಿಯಲಿ ೬೮
ನಾಸಿಕಾಗ್ರದಲಿಟ್ಟ ಕಂಗಳ
ಸೂಸದುಸುರಿನ ಶಶಿಕಿರಣಪೀ
ಯೂಷಪಾನದ ರೋಮಪುಳಕದ ಗುಡಿಯ ಬೀಡುಗಳ
ಆ ಸುಷುಮ್ನಾ ನಾಡಿಯಲಿ ಕಾ
ಳಾಶಿಸಿದ ಪವನನ ಸಮಾಧಿ ವಿ
ಳಾಸನೆಸೆದನು ಸೌಖ್ಯ ಭಾವದ ಜಡಿವ ಝೊಮ್ಮಿನಲಿ ೬೯
ತನ್ನೊಳಿತರವನಿತರದೊಳು ನೆರೆ
ತನ್ನನೀಕ್ಷಿಸಿ ತಾನು ತನ್ನಿಂ
ದನ್ಯವೆರಡರೊಳೈಕ್ಯವೆಂಬುಪಚರಿತ ಭಾವವನು
ತನ್ನೊಳಗೆ ಹುಸಿಯೆಂದು ನಿತ್ಯನ
ನನ್ಯನಮಳಜ್ಞಾನರೂಪವೆ
ತನ್ನ ನಿಜವೆಂದರಿದು ತಾನಾಗಿರ್ದನಾ ದ್ರೋಣ ೭೦
ಒಡೆದು ನಡು ನೆತ್ತಿಯನು ಝಳಪಿಸಿ
ಕಡುವೆಳಗು ಥಳಥಳಿಸಿ ತರಣಿಯ
ತುಡುಕಿ ಹಾಯ್ದುದು ರಶ್ಮಿ ರಂಜಿಸಿತಖಿಳ ದಿಗುತಟವ
ಕುಡಿವೆಳಗನಸುರಾರಿ ಮುನಿಗಳ
ಗಡಣವರ್ಜುನ ಕೃಪರು ಕಂಡರು
ಪಡೆಯೊಳಗೆ ತಾನುಳಿಯೆ ಕಂಡವರಿಲ್ಲ ಕೇಳೆಂದ ೭೧
ತೀರಿತೇ ಮಗನುಬ್ಬಟೆಯ ಜ
ಜ್ಜಾರತನವಾಚುರ್ಯನಳಿದನ
ದಾರು ನಮಗಾಪ್ತಿಗರು ದೊರೆಯಿನ್ನಾರು ಸಂಗರಕೆ
ಆರು ನಿಮಗಿದ್ದೇಗುವರು ರಣ
ವೀರರಗ್ಗದ ದೈವವೇ ಮನ
ವಾರೆ ಮೆಚ್ಚಿಹುದವರನಿನ್ನೇನರಸ ಕೇಳೆಂದ ೭೨
ಸಂಕ್ಷಿಪ್ತ ಭಾವ
Lrphks Kolar
ಪುತ್ರನ ಮೇಲಿನ ಮೋಹದಿಂದ ದ್ರೋಣನ ಮರಣ.
ದ್ರೋಣರು ಬಲು ಪರಾಕ್ರಮದಿಂದ ಕಾದಿ ಪಾಂಡವರ ಕಡೆಯ ಅನೇಕ ಮುಖ್ಯರನ್ನು ಕೊಂದನಂತರ ಕೌರವರಾಯನಿಗೆ ಹೇಳಿದರು. ಇನ್ನಾದರೂ ನನ್ನನ್ನು ನಂಬುವೆಯಾ ಎಂದು. ಇಡೀ ರಣರಂಗ ದ್ರೋಣರದಾಯಿತು. ವರ್ಣಿಸಲು, ಅಥವಾ ಎಣಿಸಲು ಆಗದಷ್ಟು ಸಾವು ನೋವುಗಳು ನಡೆದವು. ಇನ್ನೇನು ವಿಜಯಲಕ್ಷ್ಮಿ ಕೌರವರಿಗೆ ಒಲಿದಳು ಎಂದು ಪಾಂಡವಸೈನ್ಯ ಕಳವಳಿಸಿತು. ಪಾರ್ಥ ಇದನ್ನು ಕಂಡು ಸಮರಕ್ಕೆ ಹೊರಡಲು ದುಷ್ಟದ್ಯುಮ್ನ ಅವನನ್ನು ತಡೆದು ತಾನು ಹೊರಟ.
ದ್ರೋಣರಿಗೂ ದುಷ್ಟದ್ಯುಮ್ನನಿಗೂ ಕಾಳಗ ಮೊದಲಾಯಿತು. ಸಾತ್ಯಕಿ ಮುಂತಾದವರು ಜೊತೆಗೂಡಿದರು. ಸಾವಿರಾರು ಆನೆಗಳು ಕುದುರೆಗಳು ಬಿದ್ದವು. ಹೆಣಗಳ ರಾಶಿಯನ್ನು ಮೆಟ್ಟಿ ಮುಂದೆ ಹೋಗಬೇಕಾಯಿತು. ಕೋಟಿಗಟ್ಟಲೆ ಸಂಖ್ಯೆಯ ಜನ ಸತ್ತರು. ಭೀಮ ಮತ್ತು ಪಾರ್ಥರು ನೆರವಿಗೆ ಹೊರಟರು. ಅವರನ್ನೂ ದ್ರೋಣನು ತನ್ನ ಪರಾಕ್ರಮದಿಂದ ನೋಯುವಂತೆ ಮಾಡಿದನು. ಬದುಕಿದರೆ ಸಾಕೆಂದು ಹಲವರು ಪಲಾಯನ ಹೂಡಿದರು.
ಕೃಷ್ಣನು ಧರ್ಮಜನನ್ನು ಕರೆಸಿ ಕೇಳಿದನು. ಇಂದು ಈ ದ್ರೋಣರನ್ನು ಕೊನೆಗಾಣಿಸದಿದ್ದರೆ ಕಷ್ಟವಿದೆಯೆನ್ನಲು ಧರ್ಮಜನು ಅದಕ್ಕೆ ಪರಿಹಾರ ನೀನೇ ಬಲ್ಲೆ. ಸಲಹು ಎಂದನು. ನಿರುತವಲ್ಲದ ಅಂದರೆ ಸತ್ಯವಲ್ಲದ ನುಡಿ ನುಡಿಯಬೆಕು. ಸಮರದಲ್ಲಿ ಗುರುಪುತ್ರ ಮರಣಹೊಂದಿದನೆಂದು ಹೇಳು ಎಂದು ಅರ್ಜುನನ ಕಡೆ ನೋಡಿದನು. ಅವನು ಆಗದೆಂದು ತಲೆಯಲ್ಲಾಡಿಸಲು ಭೀಮನಿಗೆ ವಹಿಸಿದರು. ಅವನು ಮುಂದೆ ಹೋಗಿ ಇಂದಿನ ಸಮರದಲ್ಲಿ ಕಡಿದುದಶ್ವತ್ಥಾಮನೆಂದು ಕೂಗಿದ.
ದ್ರೋಣರಿಗೆ ಇದು ಕೇಳಿಸಿ ಸ್ವಲ್ಪ ಗೊಂದಲವಾಯಿತಾದರೂ ಭೀಮನು ಹೇಳಿದ್ದರಿಂದ ಅದನ್ನು ನಂಬಲಿಲ್ಲ. ಮತ್ತೆ ಯುದ್ಧ ಮುಂದುವರಿಸಿದನು. ಎದುರಾದ ದುಷ್ಟದ್ಯುಮ್ನ ನನ್ನು ಕೆಣಕಿದನು. ಲಕ್ಷ ಸಂಖ್ಯೆಯ ಧರಣಿಪರು ಮರಣ ಹೊಂದಿದರು.
ಆ ಸಮಯದಲ್ಲಿ ಆಗಸದಿಂದ ಅತ್ರಿ, ಅಗಸ್ತ್ಯ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ವಸಿಷ್ಠ ಮುಂತಾದ ಮುಖ್ಯ ಮಹರ್ಷಿಗಳು ಇಳಿದರು. ಅವರು ಅರ್ಜುನ, ಕೃಷ್ಣ ಮತ್ತು ದ್ರೋಣರಿಗೆ ಮಾತ್ರ ಕಾಣಿಸಿದರು. ಉಳಿದವರಿಗಾರಿಗೂ ಇದರ ಅರಿವಿಲ್ಲ. ಅವರೆಲ್ಲರೂ ದ್ರೋಣರಿಗೆ ಬ್ರಹ್ಮಜ್ಞಾನವನ್ನು ತಿಳಿಹೇಳಿದರು. ಈ ಯುದ್ಧ, ಕೊಲೆ, ದ್ವೇಷ ಇವೆಲ್ಲ ನಿನಗಲ್ಲ. ನೀನು ಯಾರೆಂಬುದನ್ನು ಅರಿತುಕೋ ಎಂದು ಉಪದೇಶಿಸಿದರು. ಅದರಿಂದ ದ್ರೋಣರಲ್ಲಿ ವಿವೇಕ ಮೂಡಿತು. ಅವರನ್ನು ಕಳಿಸಿಕೊಟ್ಟು ಇತ್ತ ತಿರುಗಿದನು. ಆಹಾ..ಮತ್ತೆ ಮಾಯೆಯು ಮುಸುಕಿತು. ಮಗನ ಚಿಂತೆ ಕಾಡಿತು. ಧರ್ಮಜನ ಬಳಿಗೆ ಬಂದು ಕೇಳಿದನು.
ಅಶ್ವತ್ಥಾಮನೆಂಬ ಹಿರಿಯಾನೆ ಮಡಿದುದು ನಿಜವೆನ್ನಲು ಕಂಗೆಟ್ಟನು. ಅಶ್ವತ್ಥಾಮನ ಆನೆ ಎದುರಾಯಿತು. ಅಳಿಯಿತು ಎಂದು ಅರ್ಥವಾಗಲಿಲ್ಲ. ದುಃಖದಿಂದ ಕಡು ರೋಷಕ್ಕೆ ತಿರುಗಿತು ಅವನ ಬುದ್ಧಿ. ಭೀಮನು ಸುತನಾಶವನ್ನೂ ಬಗೆಯದೆ ಯುದ್ದ ಮಾಡುತ್ತಿರುವುದರ ಬಗ್ಗೆ ರೇಗಿಸಿದನು. ತಕ್ಷಣ ವೈರಾಗ್ಯ ಮೂಡಿತು. ಎಲ್ಲವನ್ನೂ ಬಿಸುಟು ಯೋಗಸಮಾಧಿಯಲ್ಲಿ ಮಗ್ನನಾಗಿ ದೇಹವನ್ನು ಬಿಟ್ಟನು. ಅವನ ಪ್ರಾಣ ಅನಂತದಲ್ಲಿ ಲೀನವಾದುದನ್ನು ಕೃಷ್ಣ, ಕೃಪ, ಅರ್ಜುನ ನೋಡಿದರು. ಇನ್ನಾರಿಗೂ ಅರಿವಾಗಲಿಲ್ಲ.ಅವನಂತಹ ರಣವೀರರಿನ್ನಾರು ಎಂದು ಕೌರವಸೈನ್ಯ ಮರುಗಿತು.
ಕಾಮೆಂಟ್ಗಳು