ಭಾರತಕಥಾಮಂಜರಿ121
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಕರ್ಣ ಪರ್ವ - ಹನ್ನೊಂದನೆಯ ಸಂಧಿ
ಸೂ.
ರಾಯರಿಪುರವಿರಾಹು ಪಾಂಡವ
ರಾಯಸೇನಾಜಲಧಿವಡಬನ
ಜೇಯ ರವಿನಂದನನು ಗೆಲಿದನು ಧರ್ಮನಂದನನ
ಮಗನ ತೊಲಗಿಸಿ ಮಿಗುವ ಚೂಣಿಯ
ತೆಗಸಿ ಬಲವಂಕದ ಭಟಾಳಿಗೆ
ಮೊಗದ ಸನ್ನೆಯ ಮಾಡುತೆಡವಂಕದ ಕಟಾಕ್ಷದಲಿ
ತೆಗೆದು ತೂರಂಬಿನಲಿ ಭೀಮನ
ಬಿಗಿದನಾವೆಡೆ ಧರಣಿಯಾವೆಡೆ
ಗಗನವಾವೆಡೆ ದೆಸೆಗಳೆನೆ ತುರುಗಿದವು ಶರಜಾಳ ೧
ಭೀಮನೋ ನಿಮಿಷಾರ್ಧದಲಿ ನಿ
ರ್ನಾಮನೋ ತಡವೇಕೆ ರಿಪುವೇ
ಕಾಮನೋ ಕರ್ಣನೆ ಕಪರ್ದಿ ವಿಚಾರವೇಕೆನುತ
ತಾಮಸದ ಭುಲ್ಲವಣೆಯಲಿ ಕುರು
ಭೂಮಿಪನ ಬಲವೊದರಿ ವೈರಿ
ಸ್ತೋಮ ಕಂಡುದು ಪವನತನಯನ ರಣದ ಭಾರಣೆಯ ೨
ಉಲಿವುತಿದೆ ಕೌರವನ ಸೇನಾ
ಜಲಧಿ ಹರುಷದಲಿತ್ತಲನಿಲಜ
ನಳುಕದೊಬ್ಬನೆ ಕಾದುತೈದನೆ ಕರ್ಣನೊಡನೆನುತ
ತಳಿತ ಧವಳಚ್ಛತ್ರ ಚಮರಾ
ವಳಿಯ ಮಧ್ಯದಲವನಿಪತಿ ನಿಜ
ಬಲಸಹಿತ ನೂಕಿದನು ಬಹುವಿಧವಾದ್ಯ ರಭಸದಲಿ ೩
ಒಂದು ಕಡೆಯಲಿ ಭೀಮ ಸಾತ್ಯಕಿ
ಯೊಂದು ಕಡೆಯಲಿ ನಕುಳ ದ್ರೌಪದ
ರೊಂದು ಕಡೆಯಲಿ ಚೇಕಿತಾನ ಶಿಖಂಡಿ ಸೃಂಜಯರು
ಒಂದು ಕಡೆ ಸಹದೇವನೀ ಪರಿ
ಹಿಂದೆ ಮುಂದಿಕ್ಕೆಲದೊಳೀತನ
ಸಂದಣಿಸಿ ಮುತ್ತಿದರು ಮುಕ್ಕುರಿಕಿತ್ತು ರಿಪುಸೇನೆ ೪
ರಾಯದಳವುಬ್ಬೆದ್ದುದೋ ಪಡಿ
ನಾಯಕರುನಪ್ಪಳಿಸುವೆನು ರಿಪು
ವಾಯುಜನ ಗಾಢಣೆಯ ಗರ್ವಗ್ರಹವ ಕಳಚುವೆನು
ರಾಯಕೌರವ ಸಹಿತ ನೀವ್ ನಿ
ಮ್ಮಾಯತದಲಿರಿಯೆನುತ ಸಾರದ
ಸಾಯಕದ ಸರಿವಳೆಯ ಸುರಿದನು ಭಾನುಸುತ ಮುಳಿದು ೫
ಧನುವಿನಲಿ ಸಾತ್ಯಕಿಯ ಮಾದ್ರೀ
ತನುಜರನು ತೇರಿನಲಿ ದ್ರುಪದನ
ತನಯನನು ಸಾರಥಿಗಳಲಿ ಜೋಡಿನಲಿ ಪವನಜನ
ಬಿನುಗರವರವರಂಗದಲಿ ಕೈ
ಮನವ ಖಂಡಿಸಿ ಸಕಲ ರಿಪುಸಾ
ಧನವನೊಬ್ಬನೆ ಕರ್ಣ ಗೆಲಿದನು ನೃಪತಿ ಕೇಳೆಂದ ೬
ಮುಂದುಗೆಟ್ಟುದು ದೊರೆಗಳೆನೆ ರವಿ
ನಂದನನ ರಥಕಾಗಿ ಸೇನಾ
ವೃಂದ ಕವಿದುದು ಚೈದ್ಯ ಶೃಂಜಯ ಮತ್ಸ್ಯ ಕೈಕಯರು
ಸಂದಣಿಸಿ ಪಾಂಚಾಲ ಕೇರಳ
ವಿಂದ ಮಗಧ ದ್ರವಿಡ ವಂಗ ಪು
ಳಿಂದ ಬಲ ಬಹಳಾಬ್ಧಿ ಮುತ್ತಿತು ಮತ್ತೆ ಮೂದಲಿಸಿ ೭
ಒದೆವ ಮಂದರವನು ತರಂಗದ
ಲುದಧಿ ಹೊಯ್ವಂದದಲಿ ಹೊಕ್ಕವು
ಕುದುರೆ ತೂಳಿದವಾನೆ ಕವಿದರು ರಥಿಕರೊಳಬಿದ್ದು
ಒದರಿ ವಿವಿಧಾಯುಧದ ಕಾಲಾ
ಳೊದಗಿ ಕೈದೋರಿಸಿದರಿನಿಬರ
ಸದೆದನೊಬ್ಬನೆ ಕರ್ಣ ಕೆದರಿದನಾ ಮಹಾಬಲವ ೮
ಬೀಳುವಂಬಿನ ಹೊಯ್ವ ಖಡ್ಗದ
ತೂಳುವಾನೆಯ ತೂಕಿ ತಾಗುವ
ಶೂಲಿಗೆಯ ತುಂಡಿಸುವ ವಂಕಿಯ ನೆಡುವ ಬಲ್ಲೆಹದ
ಸೀಳುವಿಟ್ಟಿಯ ಮುರಿವ ಪರಿಘದ
ಪಾಳಿಸುವ ಪರಶುವಿನ ಧಾಳಾ
ಧೂಳಿ ಮಸಗಿತು ಮತ್ತೆ ಕರ್ಣನ ರಥದ ಬಳಸಿನಲಿ ೯
ತುರಗ ರಾವ್ತರಿಗವರ ಖಡ್ಗಕೆ
ಕರಿಗೆ ಜೋಧರಿಗವರ ಶಸ್ತ್ರಕೆ
ವರ ರಥಕೆ ಸಾರಥಿಗೆ ರಥಿಕರು ಚಾಪ ಮಾರ್ಗಣಕೆ
ಸರಳನೊಂದೊಂದೆಚ್ಚು ನೆರೆ ಕ
ತ್ತರಿಸಿದನು ಕಾಲಾಳನೊಂದೇ
ಸರಳಲೈನೂರಳಿಯೆ ಕೊಂದನು ಕರ್ಣ ಪರಬಲವ ೧೦
ನಕುಳನನು ಹದಿನೆಂಟರಲಿ ಸಾ
ತ್ಯಕಿಯನೈದಂಬಿನಲಿ ಸಹದೇ
ವಕನನೊಂಬತ್ತರಲಿ ಭೀಮನನೆಂಟು ಕೋಲಿನಲಿ
ಸಕಲ ರಥಿಕರನೆಲ್ಲ ಶತ ಸಾ
ಯಕದಲೊರಗಿಸಿ ಚೈದ್ಯ ಪಾಂಚಾ
ಲಕರ ಥಟ್ಟಿನೊಳೊಕ್ಕಲಿಕ್ಕಿದನರಸ ಕೇಳೆಂದ ೧೧
ಅದು ಬಳಿಕ ಹೇರಾಳ ದಳವಾಂ
ತುದು ಮಹಾರಥರೆಸುಗೆಯಲಿ ಹೂ
ಳಿದುದು ನಭ ನುಗ್ಗಾಯ್ತು ನೆಲ ಚತುರಂಗ ಪದಹತಿಗೆ
ಕುದುರೆ ಕರಿ ತೇರಾಳ ತೆಕ್ಕೆಯ
ಹೊದರಿನಲಿ ಮುಳುಗಿದನು ನಿನ್ನವ
ನದುಭುತವನೇನೆಂಬೆನೈ ಧೃತರಾಷ್ಟ್ರ ಕೇಳೆಂದ ೧೨
ತಾರಕನ ಥಟ್ಟಿನಲಿ ಹರನ ಕು
ಮಾರ ಹೊಕ್ಕಂದದಲಿ ವೃತ್ರನ
ತಾರಕಾಕ್ಷನ ಜೋಡಿಯನು ಜಂಭಾರಿ ತರಿವಂತೆ
ಆರಿದೆಚ್ಚನು ಶಿವಶಿವಾ ಕಾ
ಮಾರಿಯೋ ಪಾಂಡವ ಬಲದ ಹೆ
ಮ್ಮಾರಿಯೋ ನಿನ್ನಾನೆ ಸವರಿತು ವೈರಿಭಟವನವ ೧೩
ವಾಘೆ ಸರಿಸದ ರಾವುತೋ ದೃಢ
ವಾಘೆಯೆನುತೇರಿದ ಹಯೌಘದ
ಮೇಘಪಟಲದ ಪಾಡೆ ಫಡಯೆನೆ ಹೊಕ್ಕ ಗಜದಳದ
ಲಾಘವದ ಲುಳಿಸಾರತನದ ಶ
ರೌಘ ರಚನೆಯ ರಥಿಕಯೂಥ
ಶ್ಲಾಘೆಗಳ ನಾ ಕಾಣೆನೊಂದು ವಿಘಳಿಗೆ ಮಾತ್ರದಲಿ ೧೪
ಬೇರೆ ಲಗ್ಗೆಯ ಮಾಡಿ ಭೋಯೆಂ
ದೇರೆ ಹಳಚುವ ರಭಸ ಕಿವಿಗಳ
ಕೀರಿದುದು ಬಳಿಕವರು ಕರ್ಣನ ತಾಗಿದಾಕ್ಷಣಕೆ
ತಾರುಥಟ್ಟಿಗೆ ಹರೆದು ರೌದ್ರವ
ಹಾಱಿದವು ಕಣ್ಣುಗಳು ರಿಪುಬಲ
ದೇರ ನಾಲಗೆ ಹೊಗಳಲಮ್ಮದು ನೃಪತಿ ಕೇಳೆಂದ ೧೫
ಆಳ ಕೊಂದನು ಲಕ್ಕವನು ತುರ
ಗಾಳಿಯನು ನಾಲ್ಸಾವಿರವ ಶುಂ
ಡಾಲ ಘಟೆಗಳ ತುಂಡಿಸಿದನೊಂದೆರಡು ಸಾವಿರವ
ಮೌಳಿಮಣಿಯಲಿ ಹೊಳೆಹೊಳೆವ ನರ
ಪಾಲರನು ನಾನೂರೋಲೆಯ
ಸೀಳಿದನಲೈ ಚೈದ್ಯ ಪಾಂಚಾಲರಲಿ ಕಲಿಕರ್ಣ ೧೬
ತೆರಳಿದನು ಸಹದೇವ ನಸು ಪೈ
ಸರಿಸಿದನು ನಕುಳನು ಶಿಖಂಡಿಯ
ಕರಣ ತಲೆಕೆಳಕಾಯ್ತು ಕಾಣೆನು ಸಾತ್ಯಕಿಯ ರಥವ
ಮುರಿವ ಕಂಡೆನು ಭೀಮ ದುಗುಡದ
ಭರದಲಿದ್ದನು ಮಿಕ್ಕ ಬಲ ನಾ
ಲ್ಕೆರಡೊ ನಾಲ್ಕೊಂದೋ ನಿಧಾನಿಸಲರಿಯೆ ನಾನೆಂದ ೧೭
ಇಟ್ಟಣಿಸಿಕೊಂಡೊತ್ತಿ ರಾಯನ
ಥಟ್ಟ ಹೊಕ್ಕನು ಜರುಹಿದನು ಜಗ
ಜಟ್ಟಿ ಜೋಡಿಸಿದಂಗಸುಯ್ದಾನದ ಮಹಾರಥರ
ಕೆಟ್ಟ ದಳವನಘಾಟದವರೊಳ
ಗಿಟ್ಟುಕೊಳ್ಳರದೇನು ರಾಯನ
ಮುಟ್ಟುತಿದಲಾ ರೌದ್ರರಣವೆನುತೆಚ್ಚನಾ ಕರ್ಣ ೧೮
ಕುರುಬಲದ ಸುಮ್ಮಾನ ಕಹಳೆಯ
ಬಿರಿವ ನಿಸ್ಸಾಳದ ನೃಪಾಲರ
ಹರುಷಪುಳಕದ ಭುಜದ ಹೊಯ್ಲಿನ ಬೊಬ್ಬೆಯಬ್ಬರದ
ಅರಿಬಲದೊಳಕಟಕಟ ವಿಧಿ ನಿ
ಷ್ಕರುಣಿ ಹಾಹಾಯೆಂಬ ರವದ
ಬ್ಬರದ ನಿಬ್ಬರ ಕೇಳಲಾದುದು ನೃಪತಿ ಕೇಳೆಂದ ೧೯
ಎಲೆಲೆ ರಾಯನ ಮೇಲೆ ಬಿದ್ದುದು
ಕಲಹವಕಟಾ ಹೋಗಬೇಡಿ
ಟ್ಟಳಿಸಿದವ ಹಗೆ ನಮ್ಮ ಭೀಷ್ಮ ದ್ರೋಣನಿವನಲ್ಲ
ಅಳುಕದಿರಿ ಕವಿಕವಿಯೆನುತ ಹೆ
ಬ್ಬಲ ಸಘಾಡದಲೌಕಿ ಕರ್ಣನ
ಹೊಲಬುಗೆಡಿಸಿದುದಂಬುಗಳ ಸಾರಾಯ ಸೋನೆಯಲಿ ೨೦
ಕೊಂಬನೇ ಬಳಿಕೀ ಮಹಾರಥ
ರಂಬುಗಿಂಬನು ನಿಮ್ಮ ಹಿರಿಯರ
ಡೊಂಬಿನಾಹವವಲ್ಲಲೇ ತಮತಮಗೆ ತುಡುಕುವಡೆ
ಅಂಬುನಿಧಿ ಮಕರಂದವಾದರೆ
ತುಂಬಿಯಾಗನೆ ವಡಬನೀತನ
ನೆಂಬ ಖುಲ್ಲರು ಸುಭಟರೇ ಧೃತರಾಷ್ಟ್ರ ಕೇಳೆಂದ ೨೧
ರಾಯದಳದೊಳು ಮಡಿವ ಕರಿ ವಾ
ನಾಯುಜಕೆ ಕಡೆಯಿಲ್ಲ ರಥಿಕರು
ಪಾಯದಳವೆನಿತಳಿದುದೋ ನಾನರಿಯೆನದರೊಳಗೆ
ಬಾಯಬಿಟ್ಟುದು ಸೇನೆ ಕಡಿಖಂ
ಡಾಯತದ ಹೆಣನೊಟ್ಟಲಿನ ಮುರಿ
ದಾಯುಧದ ಸಂದಣಿಯೆ ನಿಲಿಸಿತು ಬಳಿಕ ರವಿಸುತನ ೨೨
ತರಿದ ಹೊಸ ಕುಮ್ಮರಿಯೊಳಗೆ ರಥ
ಹರಿಯಬಲ್ಲುದೆ ಕರ್ಣ ನಾವಿಂ
ದರಿದೆವೈ ನೀ ನೆಟ್ಟನೋಲೆಯಕಾರನೆಂಬುದನು
ಇರಿತಕಿವರಾರಿದಿರಹರು ನಿ
ನ್ನುರವಣೆಯನಾರಾನುವರು ಮ
ತ್ಸರವ ಬಿಸುಟೆನು ಪೂತು ರವಿಸುತ ಎಂದನಾ ಶಲ್ಯ ೨೩
ಕಾಲಿಡುವಡಿದು ದುರ್ಗವೆನುತಾ
ಸಾಲ ಬಿಟ್ಟನು ದಕ್ಷಿಣಕೆ ದು
ವ್ವಾಳಿಸಿದನಾ ರಥವನವನೀಪತಿಯ ಮೋಹರಕೆ
ಏಳು ಕಲಿಯಾಗಿನ್ನು ಕೆಲಬಲ
ದಾಳ ಹಾರದಿರೆನುತ ರಾಯನ
ಮೇಲೆ ಕರೆದನು ಕರ್ಣ ಖತಿಯಲಿ ಕಣೆಯ ಬಿರುವಳೆಯ ೨೪
ಗಳಹದಿರು ಕೆಲಬಲದ ಹಂಗಿನ
ಬಳಕೆಯೇ ಫಡ ಸೂತಸುತ ಬಾ
ಳ್ಗೊಲೆಯ ಬಾಹಿರ ಬಿನುಗ ಬೆದರಿಸಿ ಬರಿದೆ ಬೆರತೆಯಲ
ಉಲುಹಿದರೆ ನಾಲಗೆಯ ತೊಡಬೆಯ
ಕಳಚುವೆನು ನಿಲ್ಲೆನುತಲಾಕುಂ
ಡಳಿತ ಕಾರ್ಮುಕನೆಚ್ಚು ಕಡಿದನು ಕರ್ಣನಂಬುಗಳ ೨೫
ಆಲಿಕಲುಗಳು ಸಿಡಿಲಮರಿಗಳ
ಮೇಲುವಾಯ್ದವು ಗಡ ಯುಧಿಷ್ಠಿರ
ನಾಳುತನದಲಿ ನಮ್ಮ ಜರೆದನು ಶಲ್ಯ ನೋಡೆನುತ
ಬೋಳೆಯಂಬೈದರಲಿ ರಾಯನ
ತೋಳನೆಚ್ಚನು ಜಡಿವ ಜೋಡಿನ
ಮೇಲೆ ಮುರಿದವು ಬಾಣ ನೃಪ ಮಗುಳೆಚ್ಚನಿನಸುತನ ೨೬
ಬಲುಹು ಕೈಗಳಲುಂಟೆ ತೋರುವು
ದುಲಿವ ಹೊತ್ತದು ಬೇರೆನುತ ಮುಂ
ಕೊಳಿಸಿ ಕರ್ಣನ ಶರವ ಕಡಿದೀರೇಳು ಬಾಣದಲಿ
ಅಳುಕದೆಚ್ಚನು ತೇರು ತುರಗಾ
ವಳಿಯ ಧವಳಚ್ಛತ್ರ ಚಮರಿಯ
ನಿಳುಹಿದನು ಧ್ವಜದಂಡ ಸಹಿತೈವತ್ತು ಬಾಣದಲಿ ೨೭
ಬೇಗೆವರಿ ಬೆಳುದಿಂಗಳಲಿ ನಮ
ಗೀಗ ತೋರಿತಲಾ ಎನುತ ಮುರಿ
ದಾಗಳೇ ಸಂಧಿಸಿದ ತನ್ನಯ ಹಯ ರಥಾದಿಗಳ
ಈಗಲರಿಯಾದರೆಯೆನುತ ಕಿವಿ
ಗಾಗಿ ತೆಗೆದನು ನಿಶಿತಬಾಣವ
ತೂಗಿ ಬಿಟ್ಟನು ಬೀಳೆನುತ ಕಲಿಕರ್ಣ ಬೊಬ್ಬಿರಿದ ೨೮
ಅರಸ ಕೇಳಾಶ್ಚರಿಯವನು ರಿಪು
ಶರವನೆಡೆಯಲಿ ಕಡಿದು ರವಿಸುತ
ನುರವನೆಚ್ಚನು ಧರ್ಮನಂದನನೆಂಟು ಬಾಣದಲಿ
ಬಿರಿಯೆ ಬಲುವಜ್ರಾಂಗಿ ಹಾಯ್ದವು
ಗರಿಸಹಿತಲುಚ್ಚಳಿಸಿ ನೆಲದಲಿ
ಸರಳು ನೆಟ್ಟವು ಕರ್ಣ ನನೆದನು ರುಧಿರಧಾರೆಯಲಿ ೨೯
ತೂಗುವೊಡಲರೆಮುಚ್ಚುಗಂಗಳ
ಸೂಗುರಿಸುವಂಗದಲಿ ತಾಳದ
ಮೂಗಿನುಸುರಿನ ಮೂರ್ಛೆಯಲಿ ರವಿಸೂನು ಮೈಮರೆದ
ಆಗಳಂತಿರೆ ಹೊರೆಯವರ ಕೈ
ಲಾಗುಮದ್ದಿನ ಕಮಳಜಲ ಮಂ
ತ್ರಾಗಮದಲೆಚ್ಚೆತ್ತನೊಂದೇ ನಿಮಿಷದಲಿ ಕರ್ಣ ೩೦
ಬಸಿವ ರಕುತವ ತೊಳೆತೊಳೆದು ಮಂ
ತ್ರಿಸಿದ ಸಲಿಲವ ಮುಕ್ಕುಳಿಸಿಯುಗು
ಳ್ದಸಮ ಸಾಹಸಿ ಕೊಂಡ ವರಕರ್ಪುರದ ವೀಳೆಯವ
ಮುಸುಡ ದುಗುಡದ ತನ್ನ ಸೇನಾ
ಪ್ರಸರಕಭಯವನಿತ್ತು ಮಾರಿಯ
ಮುಸುಕನುಗಿದನ ತೋರೆನುತ ತಾಗಿದನು ಭೂಪತಿಯ ೩೧
ಮಂದಿ ಕವಿಯಲಿ ಘಾಯ ತಾಗಿದ
ಹಂದಿಯೋ ರಾಧೇಯನರಸನ
ಮುಂದುಗೆಡಿಸದೆ ಮಾಣನೋ ತೆಗೆ ನೂಕು ನೂಕೆನುತ
ಸಂದಣಿಸಿತತಿರಥರು ರಾಯನ
ಮುಂದೆ ತಲೆವರಿಗೆಯಲಿ ಸೇನಾ
ವೃಂದ ತುಡುಕಿತು ಕುಪಿತಕಾಳೋರಗನ ನಾಲಗೆಯ ೩೨
ರಾಯನಳಲಿಗರಿವರಘಾಟದ
ನಾಯಕರು ಕಾಣಿರೆ ಸಮೀರನ
ಲಾಯದಲಿ ಲಂಬಿಸಿದವಕಟ ತುಷಾರ ವಾಜಿಗಳು
ಆಯಿತದು ತಪ್ಪೇನೆನುತ ಕ
ರ್ಣಾಯತಾಸ್ತ್ರದಿ ಹರೆಗಡಿದು ರಿಪು
ರಾಯನಲ್ಲಿಗೆ ರಥವ ಬಿಟ್ಟನು ಸೂಠಿಯಲಿ ಕರ್ಣ ೩೩
ಹೊಟ್ಟ ನೂಕಿ ವೃಥಾಹವದ ಜಗ
ಜಟ್ಟಿ ನೀ ಹೊರಕಾಲುಗೊಂಡರೆ
ಬಿಟ್ಟೆನೇ ತಾ ಕರ್ಣನರಿಯಾ ಕಾಯ್ದುಕೊಳ್ಳೆನುತ
ಕಟ್ಟಳವಿಯಲಿ ವೈರಿರಾಯನ
ನಿಟ್ಟಳಿಸಿ ಮುರಿಯೆಸುತ ಬರಲಡ
ಗಟ್ಟಿ ತಡೆದರು ಮತ್ತೆ ಸಕಲ ಮಹಾರಥರು ಭಟನ ೩೪
ನಿಲ್ಲು ಸೈರಿಸು ಸೂತಸುತ ಜವ
ನಲ್ಲಿ ಮೇಳವೆ ಜೀವರಿಗೆ ಭೂ
ವಲ್ಲಭನ ಸಮಜೋಳಿಯೇ ನೀ ಸಾರು ಸಾರೆನುತ
ಚೆಲ್ಲಿದರು ಕೂರಂಬುಗಳನೆಡ
ದಲ್ಲಿ ಬಲದಲಿ ಹಿಂದೆ ಮುಂದೆಸೆ
ಝಲ್ಲರಿಯ ಶರಜಾಳ ಝೊಂಪಿಸಿತಬುಜಸಖಸುತನ ೩೫
ತುರಗದಳವೊಂದೆಸೆಯಲೌಕಿತು
ಕರಿಘಟೆಗಳೊಂದೆಸೆಯಲತಿರಥ
ರುರವಣೆಯ ಪದಹತಿಯ ಧೂಳಿಯ ಮಬ್ಬಿನುಬ್ಬರದ
ಧರಧುರವದೊಂದೆಸೆ ಪದಾತಿಯ
ಹೊರಳಿಗಳದೊಂದೆಸೆ ವಿಘಾತಿಸಿ
ತರಿಭಟನನೇನೆಂಬೆನೈ ಧೃತರಾಷ್ಟ್ರ ಕೇಳೆಂದ ೩೬
ಮುಸುಕುವುದು ಮುಗಿಲೊಮ್ಮೆ ಸೂರ್ಯನ
ಮಸಕ ಮಿಗಿಲಹುದೊಮ್ಮೆ ಮೇಘ
ಪ್ರಸರಕೊಳಗಹನೊಮ್ಮೆ ರವಿ ತೋರುವನು ಮತ್ತೊಮ್ಮೆ
ಅಸಮಸಮರದೊಳೀತನಾ ಪರಿ
ಮಸುಳುವನು ತೋರುವನು ತೊಡೆವನು
ದೆಸೆಗೆಡಿಸುವನು ಬಳಿಕ ಮುಳಿಸಿನೊಳಾ ಮಹಾರಥರ ೩೭
ಬಿದ್ದುದೈನೂರಾನೆ ರುಧಿರದೊ
ಳದ್ದರಿನ್ನೂರರಸು ಮಕ್ಕಳು
ಕದ್ದನಂತಕನಾರು ಸಾವಿರ ಕುದುರೆಯುಸುರುಗಳ
ಬಿದ್ದವರನೊಡೆತುಳಿದು ಮೇಲು
ಬ್ಬೆದ್ದು ಕವಿಕವಿದಾಳುಕುದುರೆಯ
ಬಿದ್ದಿನಲಿ ಬೇಸರಿಸಿದನು ಪಿತೃಪತಿಯ ಪರಿಜನವ ೩೮
ಆಳ ನೋಯಿಸಿ ನೋಡುತಿಹ ಹೀ
ಹಾಳಿ ತಾನೇಕಕಟಕಟ ದೊರೆ
ಯಾಳ ಧೀವಶವೆನುತ ಸಹದೇವಾದಿಗಳು ಜರೆದು
ತೋಳು ಬಳಲದೆ ತೆಗೆದೆಸುತ ಸಮ
ಜೋಳಿಯಲಿ ನೂಕಿದರು ಕರ್ಣನ
ಮೇಲೆ ಸಾತ್ಯಕಿ ಭೀಮರವನೀಪಾಲನಿದಿರಿನಲಿ ೩೯
ಪೂತು ಮಝರೇ ಭೀಮ ಸಾತ್ಯಕಿ
ಯಾತರೋ ತಮ್ಮೊಡೆಯನಿದಿರಲಿ
ಘಾತಕರು ಘಟ್ಟಿಸುವೆನೀಗಳೆ ಶಲ್ಯ ನೋಡೆನುತ
ಭೂತನಾಥನ ಭಾಳನಯನೋ
ದ್ಧೂತಧೂಮಧ್ವಜ ಶಿಖಾ ಸಂ
ಘಾತವಿವೆಯೆನೆ ಕೆದರಿದನು ಮಾರ್ಗಣ ಮಹೋದಧಿಯ ೪೦
ಪವನಸುತ ಮುಖದಿರುಹಿದನು ಯಾ
ದವನ ಕಂಡವರಾರು ಸೇನಾ
ನಿವಹಗಿವಹದ ಪಾಡೆ ಕರ್ಣನ ಖಾತಿ ಖೊಪ್ಪರಿಸೆ
ಬವರ ಮುರಿದುದು ವಿಜಯಲಕ್ಷ್ಮಿಯ
ಸವತಿ ಸೇರಿತು ಸುಭಟರಿಗೆ ಬಳಿ
ಕವನಿಪತಿಯೇ ತರುಬಿ ನಿಂದನು ಭಾನುನಂದನನ ೪೧
ಅಂಜುವೆವು ನಿಮಗರಸರೇ ಬಲ
ಪಂಜರದ ಗಿಣಿ ನೀವು ನಿಮಗೀ
ಮಂಜರನ ಪಡಿಮುಖಕೆ ನಿಲುವುದು ನೀತಿಯೇ ನಿಮಗೆ
ಭಂಜನೆಗೆ ಬಲುಹುಳ್ಳಡೆಯು ನಿಮ
ಗಂಜುವರು ಗುರು ಭೀಷ್ಮರಾ ಪರಿ
ರಂಜಕರು ತಾವಲ್ಲೆನುತ ತಾಗಿದನು ಭೂಪತಿಯ ೪೨
ಕಲಿತನವೆ ಹೃದಯದಲಿ ಕಾರ್ಯದ
ಬಳಕೆ ಕೈಯಲಿ ನಡುವೆ ನಾಲಗೆ
ಯುಲಿದಡೇನಗ್ಗಳಿಕೆಯಹುದೋ ವೀರಸಿರಿಯಹುದೊ
ಕಲಿತನದ ಕೆಚ್ಚುಳ್ಳಡೆಸುಗೆಯ
ಸುಳಿವ ತೋರಾದರೆಯೆನುತ ನೃಪ
ತಿಲಕ ಬತ್ತಳಿಕೆಯಲಿ ಸೆಳೆದನು ಹೂಡಿದನು ಶರವ ೪೩
ರೂಪಿದೊಳ್ಳಿತು ರೇಖೆಯುಚಿತ ಕ
ಳಾಪವತಿ ಹಸನಾಯ್ತು ಬಾಣ
ಸ್ಥಾಪನಕೆ ಮೆಚ್ಚಿದೆನು ಮೇಲಣ ತೂಕದಾಳವನು
ಈ ಪರಿಯಲೆಂದರಿಯೆನಹುದೈ
ಚಾಪವಿದ್ಯಾಪಾತ್ರವಿಂದವ
ನೀಪತಿಯಲಾ ಪೂತು ಮಝ ಎಂದೆಚ್ಚನಾ ಕರ್ಣ ೪೪
ಗಂಡುಗರ್ವವನೆಮ್ಮೊಡನೆ ಕೋ
ದಂಡದಲಿ ಮೆರೆ ಸಾಕು ನಿನ್ನಯ
ಭಂಡವಿದ್ಯವ ಮೆರೆವಡದಲಾ ಕೌರವಾಸ್ಥಾನ
ದಿಂಡುದರಿವೆನು ಸೈರಿಸೆನುತವ
ಖಂಡಶರನಿಕರದಲಿ ರಿಪುಮಾ
ರ್ತಂಡತನಯನನೆಚ್ಚು ಬೊಬ್ಬಿರಿದನು ಮಹೀಪಾಲ ೪೫
ಇರಿತ ಮುನ್ನವೊ ಸುಭಟರಿಗೆ ಬೊ
ಬ್ಬಿರಿತ ಮುನ್ನವೊ ನಿಮ್ಮ ನುಡಿಯಲಿ
ಮುರಿವಡೆದಿರೈ ನೀವೆನುತ ನೃಪನಂಬ ಹರೆಗಡಿದು
ತೆರಹುಗೊಡದೆಚ್ಚನು ನೃಪಾಸ್ತ್ರವ
ತರಿದು ಮಗುಳೆಚ್ಚನು ಶರಾವಳಿ
ಯೆರಗಿದವು ತುರುಗಿದವು ತೆತ್ತಿಸಿದವು ರಥಾಂಗದಲಿ ೪೬
ಕಾಯಲಾಪರೆ ಕರೆದುಕೊಳ್ಳಾ
ವಾಯುಜನನರ್ಜುನನ ನಕುಲನ
ನಾಯಕರೊಳುಬ್ಬಾಳುಗಳನತಿರಥಮಹಾರಥರ
ಸಾಯಲಂಜುವಡಿಳುಹು ಧನುವನು
ನೋಯಿಸೆನು ನುಡಿಸಿದಡೆ ಕೌರವ
ರಾಯನಾಣೆ ನೃಪಾಲ ಕೇಳೆನುತೆಚ್ಚನಾ ಕರ್ಣ ೪೭
ಅರಸನೆಚ್ಚನು ಕರ್ಣ ಶರವನು
ಪರಿಹರಿಸಿ ಮಗುಳೆಚ್ಚನೀತನು
ಧರಣಿಪನನವನೀಶನೆಚ್ಚನು ಹಗೆಯ ರಥ ಹಯವ
ಮರಳಿ ಶಲ್ಯನನೆಚ್ಚಡೀತನ
ಹೊರೆಯವರನೆಚ್ಚನು ರಥಾಂಗವ
ಹುರುಳುಗೆಡಿಸಿ ಮಹೀಶನೆಚ್ಚನು ಭಾನುನಂದನನ ೪೮
ಅಕಟ ಚಂದ್ರಿಕೆ ಗೆದ್ದುದೋ ಪಾ
ವಕನ ಝಳವೀ ಧರ್ಮಪುತ್ರನ
ವಿಕಳಶರದಲಿ ಕರ್ಣ ನೊಂದನಲಾ ಮಹಾದೇವ
ಅಕುಟಿಲರು ನೀವೆಮ್ಮವೊಲು ಬಾ
ಧಕರೆ ಪರರಿಗೆ ಪರಶುಧರ ಸಾ
ಯಕದ ಸವಿ ನೋಡಾದಡೆನುತೆಚ್ಚನು ಮಹೀಪತಿಯ ೪೯
ಏನ ಹೇಳುವೆನವನಿಪತಿ ನಿ
ನ್ನಾನೆಯಗ್ಗಳಿಕೆಯನು ಪಾಂಡವ
ಸೇನೆ ಮಗುಳಡ್ಡವಿಸಿತವನೀಶನ ರಥಾಗ್ರದಲಿ
ಆನೆ ಹೊಕ್ಕವು ಬದ್ದರದ ಬಲು
ವಾನಿಸದ ಬಂಡಿಗಳನೊಡ್ಡಿದ
ರಾ ನಿರಂತರ ಶರವ ತಡೆದರು ತೆಕ್ಕೆವರಿಗೆಯಲಿ ೫೦
ಕಡಿದು ಬಿಸುಟನು ತೆಕ್ಕೆವರಿಗೆಯ
ಗಡಣವನು ಬದ್ದರದ ಬಂಡಿಗ
ಳಡಗಿದವು ನಿಜಸೇನೆಸಹಿತರುಣಾಂಬುಪೂರದಲಿ
ಅಡಿಗಡಿಗೆ ಮುಕ್ಕುರಿಕಿ ತನ್ನನು
ತಡೆವ ರಿಪುಚತುರಂಗವಿಪಿನದ
ಕಡಿತ ತೀರಿತು ಮತ್ತೆ ರಾಯನ ಕೆಣಕಿದನು ಕರ್ಣ ೫೧
ಕಾವನಾರೈ ಕರ್ಣ ಮುನಿದರೆ
ಜೀವದಲಿ ಕಕ್ಕುಲಿತೆಯೇಕೆ ಶ
ರಾವಳಿಗಳಿವಲಾ ಕರಾಗ್ರದಲುಗ್ರ ಧನುವಿದಲಾ
ನಾವು ಸೂತನ ಮಕ್ಕಳುಗಳೈ
ನೀವಲೇ ಕ್ಷತ್ರಿಯರು ನಿಮಗೆಮ
ಗಾವುದಂತರವತಿಬಳರು ನೀವೆನುತ ತೆಗೆದೆಚ್ಚ ೫೨
ಅರಿಯ ಶರಹತಿಗಡ್ಡವರಿಗೆಯ
ನರಸನಭಿಮುಖಕೊಡ್ಡಿದರು ರಥ
ತುರಗವನು ಚಪ್ಪರಿಸಿ ಸಾರಥಿ ನೂಕಿದನು ರಥವ
ಧರಣಿಪತಿ ಕೇಳೈದು ಶರದಲಿ
ಹರಿಗೆಯನು ಮುರಿಯೆಚ್ಚು ಸೂತನ
ಶಿರವನಿಳುಹಿದಡೊದೆದುಕೊಂಡುದು ಮುಂಡ ಸಾರಥಿಯ ೫೩
ಕೆದರಿದನು ಮಾರ್ಗಣೆಯೊಳರಸನ
ಹೊದಸಿದನು ಹುಸಿಯೇಕೆ ರಾಯನ
ಹುದಿದ ಕವಚವ ಭೇದಿಸಿದವೊಳಬಿದ್ದವಂಬುಗಳು
ಎದೆಯಲೌಕಿದ ಬಾಣ ಬೆನ್ನಲಿ
ತುದಿಮೊನೆಯ ತೋರಿದವು ಪೂರಾ
ಯದ ವಿಘಾತಿಯಲರಸ ಕಳವಳಿಸಿದನು ಕಂಪಿಸುತ ೫೪
ಅರೆಮರಳುವಾಲಿಗಳ ಹೆಗಲಲಿ
ಮುರಿದ ಗೋಣಿನ ದುರುದುರಿಪ ನೆ
ತ್ತರನಿಹಾರದ ಮೈಯ ಸಡಲಿದ ಕೈಯ ಬಿಲುಸರಳ
ಅರಸನನು ಕಂಡಳಲಿದರು ಚಾ
ಮರದ ಛತ್ರದ ಹಡಪದವರಾ
ಪ್ತರು ವಿಘಾತಿಯಲಂಬ ಕಿತ್ತರು ಬಹಳ ಶೋಕದಲಿ ೫೫
ಮಂತ್ರಜಲದಲಿ ತೊಳೆದು ಘಾಯವ
ಮಂತ್ರಿಸುತ ಕರ್ಪುರದ ಕವಳದ
ಯಂತ್ರರಕ್ಷೆಯಲವನಿಪನ ಸಂತೈಸಿ ಮಲಗಿಸುತ
ತಂತ್ರ ತಲ್ಲಣಿಸದಿರಿ ಜಿತಶತ
ತಂತ್ರನೋ ಭೂಪತಿ ವಿರೋಧಿಭ
ಟಾಂತ್ರಭಂಜನನೀಗಳೆಂದುದು ರಾಯನಾಪ್ತಜನ ೫೬
ಸಿಕ್ಕಿದೆಯಲಾ ಸ್ವಾಮಿದ್ರೋಹಿಗ
ಳಿಕ್ಕಿ ಹೋದರೆ ಭೀಮಫಲುಗುಣ
ರೆಕ್ಕತುಳದಲಿ ತೊಡಕಿ ನೀಗಿದಲಾ ನಿಜೋನ್ನತಿಯ
ಚುಕ್ಕಿಗಳು ನಿನ್ನವರ ಮಡುವಿನ
ಲಿಕ್ಕಿ ಕೌರವರಾಯನನು ಮರೆ
ವೊಕ್ಕು ಬದುಕಾ ಧರ್ಮಸುತ ಬಾ ಎಂದನಾ ಕರ್ಣ ೫೭
ಸಾಳುವನ ಕೂಡರಗಿಳಿಗೆ ಸಮ
ಮೇಳವೇ ಶಸ್ತ್ರಜ್ಞನಾದಡೆ
ಸೋಲುವುದೆ ವರ ಶಸ್ತ್ರವಿದ್ಯಾ ಪ್ರೌಢಿಯದು ಬೇರೆ
ಆಳುತನದಭಿಮಾನವದು ಕರ
ವಾಳಧಾರಾಗಮನವರಸರೆ
ಖೂಳರಾದಿರಿ ನೀವೆನುತ ಭಂಗಿಸಿದನಾ ಕರ್ಣ ೫೮
ಶ್ರುತಿರಹಸ್ಯವನರಿವ ಧರ್ಮ
ಸ್ಥಿತಿಗತಿಯನಾರೈವ ಶಾಸ್ತ್ರ
ಪ್ರತತಿಯರ್ಥ ವಿಚಾರವಾಚರಣಾದಿ ಕರ್ಮದಲಿ
ಚತುರರಹ ದರುಶನದ ತರ್ಕದ
ಮತನಿಧಾನವನರಿವ ವರ ಪಂ
ಡಿತರು ನಿಮಗೀ ಕದನಕರ್ಕಶವಿದ್ಯೆಯೇಕೆಂದ ೫೯
ವರ ನದಿಗಳಲಿ ಮುಳುಗಿ ಮೂಗಿನ
ಬೆರಳಲೂರ್ಧ್ವಶ್ವಾಸ ಪವನನ
ಧರಿಸಿ ಕಾಲತ್ರಯಜಪಾನುಷ್ಠಾನಹೋಮದಲಿ
ಪರಮಋಷಿ ಮಧ್ಯದಲಿ ನೀವಾ
ಚರಿಸುವುದು ಬಿಸುಟುಗಿವಡಾಯ್ದದ
ಹೊರಳಿಗಿಡಿಗಳ ಹೊದರೊಳಾಚರಿಸುವರೆ ನೀವೆಂದ ೬೦
ಕೊಲುವಡವ್ವೆಗೆ ಕೊಟ್ಟ ಮಾತಿಂ
ಗಳುಕುವೆನು ನೀ ಹೋಗು ಹರಿಬಕೆ
ಮಲೆವರಾದರೆ ಕಳುಹು ಭೀಮಾರ್ಜುನರನಾಹವಕೆ
ಉಲುಕಿದರೆ ನಿನ್ನಾಣೆಯೆನುತ
ಗ್ಗಳಿಸಿ ನೃಪತಿಯ ಕೆಡೆನುಡಿದು ಪರ
ಬಲವ ಬರಹೇಳೆನುತ ನಿಂದನು ನುಡಿಸಿ ನಿಜಧನುವ ೬೧
ಸಂಕ್ಷಿಪ್ತ ಭಾವ
Lrphks Kolar
ರವಿನಂದನ ಧರ್ಮರಾಜನನ್ನು ಎದುರಿಸಿ ಕೊಲ್ಲದೆ ಬಿಟ್ಟದ್ದು...
ಕರ್ಣ ಮಗನ ಸಾವಿನ ದುಃಖದಲ್ಲಿಯೇ ಸೈನ್ಯವನ್ನು ಸಂಭಾಳಿಸಿ ಭೀಮನೆಡೆಗೆ ಬಿಟ್ಟ ಬಾಣಗಳಿಂದ ನೆಲಮುಗಿಲುಗಳ ಅಂತರ ತಿಳಿಯದಂತಾಯಿತು. ನಕುಲ, ಸಾತ್ಯಕಿ, ಸಹದೇವ, ಶಿಖಂಡಿ, ಭೀಮ ಇವರೆಲ್ಲರೂ ಸೇರಿ ಎಲ್ಲಾ ದಿಕ್ಕುಗಳಿಂದಲೂ ಮುತ್ತಿದರು. ಒಬ್ಬೊಬ್ಬರನ್ನೂ ವಿವಿಧ ಆಯುಧಗಳಿಂದ ತಡೆದ ಕರ್ಣ. ಎರಡೂ ಪಡೆಗಳಲ್ಲಿ ಭಯಂಕರ ಯುದ್ಧ ನಡೆಯಿತು. ಇದನ್ನು ವರ್ಣಿಸಲು ನಾಲಗೆ ಸಾಲದು.
ನಕುಲನು ಹಿಂದೆ ಸರಿದನು. ಸಹದೇವನ ಸೈನ್ಯ ಮುರಿಯಿತು. ಶಿಖಂಡಿಯ ಆಯುಧ ತಲೆಕೆಳಗಾಯಿತು. ಭೀಮ ದುಗುಡದಲ್ಲಿದ್ದನು. ಹೀಗೆ ಕೌರವರ ಸೇನೆ ಪರಾಕ್ರಮ ತೋರಿತು. ಇದೆಲ್ಲ ದಾಟಿ ಧರ್ಮಜನೆಡೆಗೆ ಕರ್ಣ ಸಾರಿದನು. ಹಾಹಾಕಾರವೆದ್ದಿತು. ಶಲ್ಯ ಕೂಡ ಕರ್ಣನ ಸಾಹಸವನ್ನು ಕಂಡು ಮತ್ಸರವನ್ಬು ಬಿಟ್ಟು ಹೊಗಳಿದನು.
ಧರ್ಮಜನು ಅನೇಕ ಬಾಣಗಳಲ್ಲಿ ಇವನ ರಥ, ಹಯಗಳನ್ನು ಕಡಿದನು. ಕರ್ಣನು ಗಾಯಗೊಂಡನು. ಕೆಲವು ಕ್ಷಣಗಳು ಮೂರ್ಛೆಗೆ ಸಂದನು. ತಕ್ಷಣ ಎಚ್ಚೆತ್ತು ವೀಳೆಯ ಹಾಕಿಕೊಂಡು ಮತ್ತೆ ಯುದ್ಧಕ್ಕೆ ನಿಂತನು. ಇನ್ನಷ್ಟು ರಭಸದಿಂದ ಎರಡೂ ಪಡೆಗಳ ಸೈನ್ಯ ಸವೆಯಿತು. ನೋಡಲಾರೆನೆಂಬಂತೆ ಸೂರ್ಯ ಮುಗಿಲಿನ ಮರೆ ಸೇರುವನು. ಮತ್ತೆ ಮೈದೋರುವನು. ಹೀಗೇ ಸಾಗಿತು.
ಧರ್ಮಜನ ನೆರವಿಗೆ ಭೀಮ ಸಾತ್ಯಕಿ, ಸಹದೇವರು ಬಂದರು. ಆದರೆ ಕರ್ಣನ ಪರಾಕ್ರಮದ ಮುಂದೆ ಅವರು ಹಿಂದೆ ಸರಿದರು. ಆಗ ಧರ್ಮಜನೇ ನೇರವಾಗಿ ಕರ್ಣನೊಡನೆ ಕಾದಿದನು. ಒಮ್ಮೆ ಅವನ ಪಡೆ, ಇನ್ನೊಮ್ಮೆ ಇವನ ಪಡೆ ಗೆಲುವು ಸಾಧಿಸುತ್ತ ಕಾದಿತು. ಅರಸನು ಶಲ್ಯನನ್ನು ತಿವಿದನು. ಇಬ್ಬರೂ ಸಮಬಲರು. ಪಾಂಡವ ಸೈನ್ಯ ಒಗ್ಗೂಡಿ ನುಗ್ಗಿತಾದರೂ ಕ್ಷಣದಲ್ಲಿ ಹಿಂದುಳಿಯಿತು. ಅರಸನ ಸಾರಥಿ ಮಡಿದನು. ಕವಚ ಬಿರಿಯಿತು. ಬಳಲಿದ ಧರ್ಮಜನನ್ನು ಕಂಡು ಇಡೀ ಸೈನ್ಯ ಕಳವಳಿಸಿತು. ಅವನನ್ನು ಮಂತ್ರಜಲದಿಂದ ತೊಳೆದು ಸುಷ್ರೂಷೆಗೈದರು.
ಕರ್ಣ ಇದೇ ಸಮಯವೆಂದು ಚೆನ್ನಾಗಿ ಭಂಗಿಸಿದನು. ನಿಮಗೇಕೆ ಕದನಕರ್ಕಶ ವಿದ್ಯೆಯೆಂದನು. ಅವನಿಗೆ ಅರ್ಜುನನ ಮೇಲೆ ಸೇಡು ಇತ್ತು ಮತ್ತು ಇತರರನ್ನು ಸಾಯಿಸುವುದಿಲ್ಲವೆಂದು ಕುಂತಿಗೆ ಮಾತು ಕೊಟ್ಟಿದ್ದನು. ಹೀಗಾಗಿ ಅವನು ಮತ್ತೆ ಧರ್ಮಜನ ಕಡೆ ಹೋಗಲಿಲ್ಲ. ಭೀಮಾರ್ಜುನರನ್ನು ಕಳಿಸು ಎಂದು ಕೂಗುತ್ತಾ ಸಿದ್ಧನಾಗಿ ನಿಂತನು ಕರ್ಣ.
ಕಾಮೆಂಟ್ಗಳು