ಭಾರತಕಥಾಮಂಜರಿ122
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಕರ್ಣ ಪರ್ವ - ಹನ್ನೆರಡನೆಯ ಸಂಧಿ
ಸೂ.
ರಾಯದಳದುಳಕಾರ ಕೌರವ
ರಾಯಸೇನಾಸೂರೆಕಾರನ
ಜೇಯನೋ ಕಲಿಭೀಮ ಗೆಲಿದನು ಭಾನುನಂದನನ
ಏನ ಹೇಳುವೆನರಸ ಪಾಂಡವ
ಸೇನೆಗಾದ ವಿಪತ್ತನರಸನ
ಹಾನಿಯನು ನಿನ್ನವರ ಸುಮ್ಮಾನದ ಸಘಾಡಿಕೆಯ
ಭಾನುಸುತನೋ ಕೌರವನ ಮದ
ದಾನೆಯೋ ಕುರುಸೈನ್ಯನಳಿನೀ
ಭಾನು ಮಝ ಭಾಪೆಂದು ಹೊಗಳಿತು ಕೂಡೆ ಪರಿವಾರ ೧
ಇವರ ಹರುಷದ ನಗೆಯನಾ ಬಲ
ದವರ ಮೋರೆಯ ಹೊಗೆಯನೀ ಬಲ
ದವರ ಭುಜದುರೆವೊಯ್ಲನಾ ಬಲದವರ ಬಿಸುಸುಯ್ಲ
ಇವರೊಸಗೆ ಕೈಗುಡಿಯನಾಬಲ
ದವರ ಗೆಲುವಿನ ಗಡಿಯ ನೀ ಚಿ
ತ್ತವಿಸಿದೈ ಧೃತರಾಷ್ಟ್ರ ಎಂದನು ಸಂಜಯನು ನಗುತ ೨
ಅಳುವವರ ನಗಿಸುವುದು ನಗುವರ
ನಳಿಸುವುದು ಗೆಲಿದವರ ಸೋಲಿಸಿ
ಗೆಲಿಸುವುದು ಸೋತವರನೀ ವಿಪರೀತಗತಿ ವಿಧಿಗೆ
ಅಳಲದಿರು ಸುಮ್ಮಾನದಲಿ ವೆ
ಗ್ಗಳಿಸದಿರು ನಿನ್ನವರು ನಿಮಿಷದೊ
ಳಳಲುದೊರೆಯಲಿ ಮುಳುಗುವಂದವನಿನ್ನು ಕೇಳೆಂದ ೩
ಲಳಿಯ ಲಹರಿಯಲಬ್ಬರದ ಕಳ
ಕಳದ ವಾದ್ಯದ ಲಗ್ಗೆಯಲಿ ಪರ
ಬಲವ ಹೊಕ್ಕನು ಮತ್ತೆ ಮೂದಲಿಸುತ್ತ ಮಹಿಪತಿಯ
ಎಲೆಲೆ ರಾಯನ ರಣಕೆ ಮಾರಿದ
ತಲೆಯ ಕದ್ದಿರೆ ಕುನ್ನಿಗಳಿರೆನು
ತೊಳಗೊಳಗೆ ಬಿಡೆ ಜರೆದು ಜೋಡಿಸಿ ನೂಕಿತರಿಸೇನೆ ೪
ಅಕಟ ರಾಯನ ಹರಿಬದಲಿ ಸೇ
ವಕರಿಗಾದುದು ಸೂರೆ ವೃಂದಾ
ರಕ ವಧೂವರ್ಗದಲಿ ಚಾಳಿಸಬೇಡ ವಿಗ್ರಹಕೆ
ವಿಕಳಬಲನಿವನೇನು ಭಾಳಾಂ
ಬಕನೊ ಬಲಿಬಂಧಕನೊ ಸುರಪಾ
ಲಕನೋ ಫಡಫಡ ಎನುತ ಕವಿದುದು ಕರ್ಣನಿದಿರಿನಲಿ ೫
ಅರಸ ಕೇಳಾಕ್ಷಣಕೆ ರುಧಿರದ
ಬಿರುವೊನಲ ಬಲುಗೆಸರ ನೆಣವಸೆ
ಯರಿಲ ನೆಲದಲಿ ಧೂಳಿಯೆದ್ದುದು ದಳದ ಪದಹತಿಗೆ
ಸರಕಟಿಸಿ ರಿಪು ಸರ್ವದಳ ಸಂ
ವರಿಸಿ ನೂಕಿತು ಕಲ್ಪಮೇಘದ
ಸರಿವಳೆಗೆ ಸಿಗುರೆದ್ದು ಕೊಬ್ಬಿದ ಕಡಲಿನಂದದಲಿ ೬
ನೊಂದನೇ ಧರ್ಮಜನು ಭಂಗಕೆ
ತಂದನೇ ರಾಧೇಯನಕಟಕ
ಟಿಂದು ಮಡಿದರೆ ಭೀಮಪಾರ್ಥರು ಭೀತಿಯೇಕಿದಕೆ
ನೊಂದನೀ ಪರಿ ತನ್ನ ಕಂಗಳ
ಮುಂದೆ ನರಪತಿ ಪಾರ್ಥನಿನ್ನೇ
ನೆಂದು ಮುನಿವನೊ ಶಿವಶಿವಾ ಎಂದಳಲಿದನು ಭೀಮ ೭
ಅರಸ ಮುರಿವಡೆದಲ್ಲಿ ದಿಕ್ಕನೆ
ಬೆರಸಿದನೆ ಬವರವನೆನುತ ನ
ಮ್ಮರಸಿ ನಗಳೇ ಭಂಡವೀರನ ಮಾತ ತೆಗೆಯೆನುತ
ಅರಸ ತಾನಿನ್ನಾವ ಪರಿ ಹೇ
ವರಿಸುವನೊ ತಾ ಮುನ್ನ ಕರ್ಣನ
ಶರಹತಿಯಲೇಕಳಿದುದಿಲ್ಲಾ ಎನುತ ಚಿಂತಿಸಿದ ೮
ನರನ ಖಾತಿಗೆ ದ್ರೌಪದಿಯ ತೊ
ತ್ತಿರುಗಳುಪಹಾಸ್ಯಕ್ಕೆ ನೃಪತಿಯ
ಮರಣ ಸಾದೃಶ್ಯ ಪ್ರಹಾರವ್ಯಥೆಯ ಕಾಣಿಕೆಗೆ
ಅರರೆ ಭಾಜನವಾದೆನೈ ಹರ
ಹರ ಮಹಾದೇವಾ ಎನುತ ತುದಿ
ವೆರಳಲಾಲಿಯ ನೀರ ಮಿಡಿದಳಲಿದನು ಕಲಿಭೀಮ ೯
ಅರಸ ಕೇಳೈ ಶೋಕರಸಸಾ
ಗರದೊಳದ್ದುದೊ ವಡಬನೆನೆ ಕ
ಣ್ಣರಳಿದವು ಕುಡಿಮೀಸೆ ಕುಣಿದವು ಸುಯ್ಲ ಹೊಗೆ ಮಸಗೆ
ಕರ ನಡುಗೆ ಮೈ ಬಲಿಯೆ ಹುಬ್ಬುಗ
ಳುರೆ ಬಿಗಿಯೆ ಕಂಗಳಲಿ ಕೆಂಗಿಡಿ
ಸುರಿಯೆ ವೀರಾವೇಶದಲಿ ಮಸಗಿದನು ಕಲಿಭೀಮ ೧೦
ಧರಣಿಪನ ಸಂರಕ್ಷೆಗೈಸಾ
ವಿರ ರಥವನಿಪ್ಪತ್ತು ಸಾವಿರ
ತುರಗವನು ಹದಿನಾರು ಸಾವಿರ ಮತ್ತಗಜಘಟೆಯ
ದೊರೆಗಳನು ಸಹದೇವ ಸಾತ್ಯಕಿ
ವರನಕುಳ ಸುತಸೋಮ ಪಾಂಚಾ
ಲರ ಕುಮಾರಾನೀಕವನು ಕರೆಕರೆದು ನೇಮಿಸಿದ ೧೧
ವೈರಿ ಕರ್ಣನ ಕಾಂತೆಯರ ದೃಗು
ವಾರಿ ಧಾರೆಯಲೆನ್ನ ಭಾರಿಯ
ಭೂರಿ ಕೋಪಾನಳನ ಲಳಿಯನು ತಗ್ಗಿಸುವೆನೆನುತ
ಧಾರುಣೀಪತಿಗೆರಗಿ ನಿಜ ಪರಿ
ವಾರವನು ಸುಯ್ದಾನವರಸೆನು
ತಾರುಭಟೆಯಲಿ ಭೀಮ ಮೊಳಗಿದನಹಿತ ಮೋಹರಕೆ ೧೨
ಬೀಳ ಹೊಯ್ ಹೊಯ್ ಬಿಡೆಯದಲಿ ಹೊ
ಕ್ಕಾಳು ತೆಗೆಯಲಿ ಧರ್ಮಪುತ್ರನ
ಮೇಲುನೋಟದಲಿರಲಿ ನೋಡಲಿ ನಮ್ಮ ನಾಟಕವ
ಆಳ ನಿಲಿಸೋ ನಿಲಿಸೆನುತ ಸಂ
ಸ್ಥಾಳಿತೋದ್ಧತ ಚಪಳ ಚಾಪ ಕ
ರಾಳ ಮೌರ್ವೀನಾದ ಭೀಷಣನಾದನಾ ಭೀಮ ೧೩
ಪವನಸುತನಿಂಗಿತವ ಮನದಂ
ಘವಣೆಯನು ಮಾದ್ರೇಶ ಕಂಡನು
ರವಿಸುತನ ನೋಡಿದನು ಮುಖದಲಿ ಮುರಿದು ತೋರಿದನು
ಇವನ ಬಲ್ಲೈ ಭೀಮನೋ ಭೈ
ರವನೋ ಭರ್ಗನೊ ಮನುಜ ಕಂಠೀ
ರವನೊ ಕಾಲಾಂತಕನೊ ಕೋಳಾಹಳವಿದೇನೆಂದ ೧೪
ಉರಿಯ ಚೂಣಿಯಲುಸುರ ಹೊಗೆಯು
ಬ್ಬರಿಸುತದೆ ಕೆಂಪೇರಿದಕ್ಷಿಯ
ಲೆರಡು ಕೋಡಿಯಲೊಗುತಲದೆ ಕಿಡಿಗಳ ತುಷಾರಚಯ
ಸ್ಫುರದಹಂಕಾರ ಪ್ರತಾಪ
ಜ್ವರದಿ ಮೈ ಕಾಹೇರುತದೆ ನಿ
ಬ್ಬರದ ಬರವಿಂದೀತನದು ಕಲಿಕರ್ಣ ನೋಡೆಂದ ೧೫
ಕಾಯಲಳವೇ ಕರ್ಣ ಬರಿಯ ನ
ವಾಯಿಯಲಿ ಫಲವಿಲ್ಲ ದೇಹದ
ಬೀಯಕಿದು ಹೊತ್ತಲ್ಲ ಸಾಧಕವಿದಕೆ ಬೇರುಂಟು
ಸಾಯಲಡಸಿದ ಬಡತನಕ್ಕೆ ಪ
ಲಾಯನವೆ ನಿಕ್ಷೇಪವಿದೆ ಬಯ
ಲಾಯಸವು ನಮಗೇತಕೆಂದನು ಮಾದ್ರಪತಿ ನಗುತ ೧೬
ನೀ ಮರುಳಲಾ ಶಲ್ಯ ಫಡ ಸು
ತ್ರಾಮನೇ ಸಮವರ್ತಿಯೇ ಜಿತ
ಕಾಮನೇ ಬಡ ಭೀಮನುರುಬೆಗೆ ಖೇಡನಾದೆಯಲ
ತಾಮಸನ ತಡೆಗಡಿದು ಭೂತ
ಸ್ತೋಮಕುಣಬಡಿಸುವೆನು ಜಯ ಸಂ
ಗ್ರಾಮ ರುದ್ರನು ಕರ್ಣನಾರೆಂದರಿಯೆ ನೀನೆಂದ ೧೭
ಅಕಟ ಬಲುಗೈಯಹೆ ಕಣಾ ಸಾ
ಧಕನು ನಾನದಕೆನ್ನೆನಿಂದಿನ
ವಿಕಟ ಕೋಪಾಟೋಪ ಭೀಮನ ದಂಡಿಯದು ಬೇರೆ
ತ್ರಿಕಟುಕದ ಕಜ್ಜಾಯವಿದು ಬಾ
ಲಕರ ಸೊಗಸೇ ಕರ್ಣ ಹೇಳ್ ಕೌ
ತುಕದ ಮಾತೇ ನಿನ್ನ ಮೇಲಾಣೆಂದನಾ ಶಲ್ಯ ೧೮
ನುಡಿನುಡಿಗೆ ಭಂಗಿಸುವೆ ನೀ ನಿ
ನ್ನಡಿಗಡಿಗೆ ತಲೆಯೊತ್ತುವೆನೊ ನಿ
ನ್ನೊಡನೆ ಬಂದರಿಯೊಡನೆ ತಲೆಯೊತ್ತುವೆನೊ ತವಕದಲಿ
ಪಡಿಮುಖದೊಳೌಕುವ ವಿರೋಧಿಯ
ಕಡುಹ ತಗ್ಗಿಸಿ ನಿನ್ನ ಮೆಚ್ಚಿಸಿ
ಕೊಡುವೆನಿನ್ನರೆಗಳಿಗೆ ಸೈರಿಸು ಮಾದ್ರಪತಿಯೆಂದ ೧೯
ಇತ್ತಲೀ ಮಾತಿಂಗೆ ಮುನ್ನ ವಿ
ಯತ್ತಳವನಳ್ಳಿರಿವ ಸಿಂಧದ
ಸುತ್ತು ಝಲ್ಲರಿ ಚೌರಿಗಳ ಫಲ್ಲಣೆಯ ಘಂಟೆಗಳ
ಹೊತ್ತ ಕೋಪದ ಹೊಗೆವ ಮುಖದೌ
ಡೊತ್ತುವಧರದ ವೈರಿ ಸೇನೆಯ
ಕುತ್ತಿ ತೇಗುವ ಮನದ ಮಾರುತಿ ಮೊಳಗಿದನು ಮುಂದೆ ೨೦
ಎಲೆಲೆ ಭೀಮನು ಶಿವಶಿವಾ ದಳ
ದುಳವ ಹಾಯ್ದನೊ ದಿಟ್ಟರಾವೆಡೆ
ನಿಲಿಸಲಾಪವರಿಲ್ಲಲಾ ಕುರುರಾಯನಾನೆಗಳು
ಕಳಕಳದ ಕಾಲಾಟ ರಾಯನ
ದಳಕೆ ದುರ್ಲಭವೆನುತ ಮಿಗೆ ಮುಂ
ಕೊಳಿಸಿ ಭೀಮನ ತುಡುಕಿದರು ರವಿಸುತನ ಪರಿವಾರ ೨೧
ಕವಿದವಾನೆಗಳಟ್ಟಿ ರಾವ್ತರು
ತಿವಿದರಂಬಿನ ಸರಿಯ ಸಾರದೊ
ಳವಘಟಿಸಿದರು ರಥಿಕರುರವಣಿಸಿದರು ಸಬಳಿಗರು
ಸವಗ ಖಂಡಿಸಲೊದಗಿದರು ಬಿ
ಲ್ಲವರು ಕಟ್ಟಿರಿಕಾರರಾತನ
ಜವಗೆಡಿಸಿದರು ಕಡಲು ವಡಬನ ತಡೆದು ನಿಲುವಂತೆ ೨೨
ನುಸಿಗಳಳವಿಯ ಥಟ್ಟಣೆಯ ತೋ
ರಿಸಿದರೋ ಬಲುಹಾಯ್ತು ರಾಯನ
ಘಸಣಿಗಕಟ ವಿಶೋಕ ನೋಡೈ ಪೂತು ವಿಧಿಯೆನುತ
ಮಸಗಿ ಮೊಗೆದನು ಹೊಗುವ ಸೇನಾ
ಪ್ರಸರವನು ಕುಡಿತೆಯಲಿ ಚೆಲ್ಲಿದ
ನಸಮಬಲನಡಹಾಯ್ಸಿ ಕೊಂಡನು ನೆಲನನಳವಿಯಲಿ ೨೩
ಎಲವೊ ಸೂತನ ಮಗನೆ ರಾಯನ
ನಳಲಿಸಿದೆಲಾ ನಿನ್ನ ರಕುತವ
ತುಳುಕುವೆನು ಹಿಂದಿಕ್ಕಿಕೊಂಬನ ತೋರು ತೋರೆನುತ
ಬಲುಸರಿಯ ನಾರಾಚದಲಿ ಕ
ತ್ತಲಿಸೆ ದೆಸೆ ಕೈಮಾಡಿದನು ಕೈ
ಚಳಕದೆಸುಗೆಯ ಕೇಣದಳತೆಯನರಿಯೆ ನಾನೆಂದ ೨೪
ಏನ ಹೇಳುವೆನಿತ್ತಲೀ ರವಿ
ಸೂನುವೇ ದುರ್ಬಲನೆ ಭೀಮನ
ನೂನ ಶರಸಂಘಾತವನು ಖಂಡಿಸಿದನಾಕ್ಷಣಕೆ
ದೀನನೇ ಶರನಿಕರದಲಿ ಪವ
ಮಾನಜನೊ ಪಾತಾಳಿಯೋ ಕಲಿ
ವೈನತೇಯನೋ ಕರ್ಣನೋ ನಾವರಿಯೆವಿದನೆಂದ ೨೫
ಅರಸ ಕೇಳಾಶ್ಚರಿಯವನು ಟೆ
ಬ್ಬರಿಸುವನೆ ಕಲಿಭೀಮನುಬ್ಬಟೆ
ಯರಿಗಳಾಹವ ಧೀರರಾದರೆ ಧಾತುಗೆಡುವವನೆ
ಶರ ಧನುವ ಹಾಯ್ಕಿದನು ಧೊಪ್ಪನೆ
ಧರೆಗೆ ಧುಮ್ಮಿಕ್ಕಿದನು ಖಡುಗವ
ತಿರುಹಿ ಬೆರಸಿದನಳವಿಯಲಿ ಕುರುಸೇನೆ ಕಳವಳಿಸೆ ೨೬
ಹೊಡೆದು ತಲೆಯನು ಹಗೆಯ ರಕುತವ
ಕುಡಿವೆನಲ್ಲದೊಡವನಿಪಾಲನ
ಕೆಡೆನುಡಿದ ನಾಲಗೆಯ ಕೀಳುವೆನೆನುತ ಕೋಪದಲಿ
ಸಿಡಿವ ಕಿಡಿಗಳ ಕೋಪಶಿಖಿಯು
ಗ್ಗಡದ ಮಾರುತಿ ಹೊಯ್ದು ಕರ್ಣನ
ಕೆಡಹಿದನು ಮುರಿಯೊದೆದನೆದೆಯನು ಹಾಯ್ದು ಮುಂದಲೆಗೆ ೨೭
ಬಾಯ ಬಿಟ್ಟುದು ಸೇನೆ ಕೌರವ
ರಾಯನಾವೆಡೆ ದಳಕೆ ಬಲುಗೈ
ನಾಯಕರು ಕೃಪ ಗುರುಸುತರು ಕೈಗೊಟ್ಟರೇ ಹಗೆಗೆ
ವಾಯುಜನ ಕೈದೊಳಸಿನಲಿ ಕುರು
ರಾಯ ರಾಜ್ಯಶ್ರೀಯ ಮುಂದಲೆ
ಹೋಯಿತೋ ಹಾ ಎನುತ ಮರುಗಿತು ಕೂಡೆ ಕುರುಸೇನೆ ೨೮
ಥಟ್ಟುಗೆಡಹಿದ ಕರ್ಣನನು ಕೈ
ಮುಟ್ಟದಿರು ಹೆರಸಾರು ಪಾರ್ಥನು
ಕೊಟ್ಟ ಭಾಷೆಯ ಮರೆದೆಲಾ ಕೈತಪ್ಪ ಮಾಡದಿರು
ಬಿಟ್ಟು ಹಿಂಗೆಲೆ ಭೀಮ ಭೀತಿಯ
ಬಿಟ್ಟು ಬೆರಸಿದೆ ಸಾಕು ಹರಿಬಕೆ
ಮುಟ್ಟಿಸಿದ ಗೆಲವಾಯ್ತು ಮರಳಿನ್ನೆಂದನಾ ಶಲ್ಯ ೨೯
ದುರುಳತನದಿಂದಣ್ಣ ದೇವನ
ಹುರುಳುಗೆಡೆ ನುಡಿದನು ವಿರೋಧಿಯ
ಶರಹತಿಗೆ ಬೆಂಡಾಗನಿವನ ದುರುಕ್ತಿ ಶರಹತಿಗೆ
ಅರಸ ಬಳಲಿದನೇನ ಮಾಡುವೆ
ದುರುಳ ನುಡಿದನ ನಾಲಗೆಯ ನಿಡು
ಸೆರೆಯ ಬಿಡಿಸುವೆ ಮಾವ ಸೈರಿಸಿಯೆಂದನಾ ಭೀಮ ೩೦
ಸಾಕು ಹೆರತೆಗೆ ಘಾಯವಡೆದವಿ
ವೇಕಿ ಮೈ ಮರೆದಿದ್ದ ಹೊತ್ತಿದು
ನೀ ಕುಠಾರನಲಾ ಕಿರೀಟಿಯ ಭಾಷಿತದ್ರುಮಕೆ
ಲೋಕಮಾನ್ಯನು ಕರ್ಣ ಕುರುಬಲ
ದಾಕೆವಾಳನು ಭಂಗವಡೆದುದೆ
ಸಾಕು ನೀ ಸಾರೆಂದು ಭೀಮನ ನೂಕಿದನು ಶಲ್ಯ ೩೧
ರಥಕೆ ಮರಳಿದನಾತನೀತನ
ವ್ಯಥೆಯನೇನೆಂಬೆನು ಸುಯೋಧನ
ರಥಿಗಳುಬ್ಬಟೆ ಗರ್ಭವಿಕ್ಕಿತು ನಿಮಿಷಮಾತ್ರದಲಿ
ರಥದೊಳಗೆ ಮಾದ್ರೇಶನೀ ಸಮ
ರಥನ ಸಂತೈಸಿದನು ಕವಳ
ಪ್ರಥಿತ ಮಂತ್ರೌಷಧಿಗಳಲಿ ಹದುಳಿಸಿದನಾ ಕರ್ಣ ೩೨
ಆರಿತದು ಬೊಬ್ಬೆಯಲಿ ದುಗುಡದ
ಭಾರದಲಿ ತಲೆಗುತ್ತಿತಿವರು
ಬ್ಬಾರದಲಿ ಭುಲ್ಲವಿಸಿತವರು ವಿಘಾತಿಯಿಂದಿವರು
ಪೂರವಿಸಿದುದು ಪುಳಕದಲಿ ದೃಗು
ವಾರಿ ಪೂರದಲಿವರಖಿಳ ಪರಿ
ವಾರವಿದ್ದುದು ಕೇಳು ಜನಮೇಜಯ ಮಹೀಪಾಲ ೩೩
ಸಂಕ್ಷಿಪ್ತ ಭಾವ
ಭೀಮನಿಂದ ಕರ್ಣನ ಪರಾಭವ
ಧರ್ಮಜನಿಗೆ ಉಂಟಾದ ಪರಾಭವಕ್ಕೆ ಕುರುಸೇನೆ ವಿಜಯೋತ್ಸವದ ಸಂಭ್ರಮದಲ್ಲಿದ್ದಿತು. ಆ ಪಕ್ಷದವರಲ್ಲಿ ದುಗುಡ ಹೆಪ್ಪುಗಟ್ಟಿತ್ತು. ಆದರೆ ವಿಧಿ ಎಂತಹದು ಎಂದರೆ ಅಳುವವರನ್ನು ನಗಿಸುವುದು, ನಗುವವರನ್ನು ಅಳಿಸುವುದು. ಸೋತವರನ್ನು ಗೆಲ್ಲಿಸಿ, ಗೆದ್ದವರನ್ನು ಸೋಲಿಸಿ ತಾನು ನಗುವುದು. ಆದ್ದರಿಂದ ಈ ಸಂತೋಷ ಶಾಶ್ವತವಲ್ಲ. ಮುಂದಿನ ಸಂಗತಿ ಕೇಳು ಎಂದು ಸಂಜಯ ಮುಂದುವರಿಸುವನು.
ಧರ್ಮಜನಿಗೆ ನೋವಾದುದನ್ನು ತಿಳಿದು ಭೀಮನಿಗೆ ಬಹಳ ಕೋಪ ಬಂತು. ಹಾಗೆಯೇ ದುಃಖವೂ ಅಯಿತು. ತಾನು ಇದ್ದೂ ಹೀಗಾಯಿತಲ್ಲ ಎಂದು ಕಣ್ಣೀರು ಮಿಡಿದನು. ಹಿಂದೆಯೇ ರೋಷವುಕ್ಕಿತು. ಅಣ್ಣನ ಸಂರಕ್ಷಣೆಗೆ ತಕ್ಕ ಕಾವಲಿರಿಸಿ ಕರ್ಣನ ಕಾಂತೆಯರನ್ನು ಅಳಿಸುವೆನೆಂದು ಮತ್ತೆ ಯುದ್ಧಕ್ಕೆ ಹೊರಟ.
ಇವನ ಕೋಪದ ಆರ್ಭಟವನ್ನು ಶಲ್ಯನು ಕಂಡು ಕರ್ಣನಿಗೆ ಇವನೊಡನೆ ಕಾದಿದರೆ ಅಪಾಯ. ಮರಳುವುದೇ ಲೇಸೆಂದನು. ಕರ್ಣನಿಗೆ ಕೋಪ ಬಂದಿತು. ಶಲ್ಯನು ಬಿಡದೆ ಭೀಮನನ್ನು ಹೊಗಳುವುದನ್ನು ಮುಂದುವರಿಸಿದನು. ನಿನ್ನ ಯಾವ ಅಯುಧವೂ ಅವನನ್ನು ತಾಗದೆಂದು ಹೀಯಾಳಿಸಿದನು.
ಭೀಮ ಕರ್ಣನೆದುರಿಗೆ ಬಂದು ಯುದ್ಧಕ್ಕೆ ಕರೆದನು. ಕರ್ಣನ ಪರಿವಾರದವರು ಅವನನ್ನು ತುಡುಕಿದರು. ಆದರೆ ಕ್ಷಣಮಾತ್ರದಲ್ಲಿ ಅವರನ್ನು ಪುಡಿಗೈದನು ಭೀಮ. ಏನು ಹೇಳಲಿ? ರವಿಸೂನು ದುರ್ಬಲನೇ? ಅವನೂ ಹೋರಾಡಿದನು. ಒಮ್ಮೆ ಭೀಮ ಮೇಲುಗೈಯಾದರೆ ಮತ್ತೊಮ್ಮೆ ಕರ್ಣ ವಿಜೃಂಭಿಸಿದನು. ಒಂದು ಹಂತದಲ್ಲಿ ಕೌರವ ಸೇನೆ ಬಾಯಿಬಿಟ್ಟು ದುರ್ಯೋದನನೆಲ್ಲಿ? ಗುರುಸುತನೆಲ್ಲಿ? ನಮ್ಮನ್ನು ಉಳಿಸುವವರು ಯಾರೂ ಇಲ್ಲವೇ ಎಂದು ಅಳಲಿತು.
ಕರ್ಣನನ್ನು ಇನ್ನೇನು ಕೆಡವಬೇಕೆನ್ನುವಷ್ಟರಲ್ಲಿ ಶಲ್ಯನು ಭೀಮನನ್ನು ತಡೆದನು. ಅರ್ಜುನನಿಗೆ ಇವನು ಮೀಸಲಲ್ಲವೆ ಬಿಟ್ಟುಬಿಡು ಎಂದು ನೆನಪಿಸಿದನು. ಗಾಯಗೊಂಡು ಮೂರ್ಛೆಹೋಗಿದ್ದ ಕರ್ಣನನ್ನು ಸಾಯಿಸಲು ಬಂದ ಭೀಮನನ್ನು ಶಲ್ಯ ಹಿಂದಕ್ಕೆ ಸೆಳೆದನು. ರಥದಲ್ಲಿ ಮಂತ್ರೌಷಧಿಗಳಿಂದ ಕರ್ಣನನ್ನು ಉಪಚರಿಸಿದನು. ಕೌರವರ ಸೇನೆಯು ಬಸವಳಿಯಿತು. ಈಗ ಆ ಕಡೆಯವರು ಸಂತಸಪಟ್ಟರು. ಈ ಕಡೆಯವರು ತಲೆ ತಗ್ಗಿಸಿದರು ಎಂದು ಸಂಜಯನು ನುಡಿದನು.
ಕಾಮೆಂಟ್ಗಳು