ಹೃದಯ ಸೌಂದರ್ಯ
ಹೃದಯ ಸೌಂದರ್ಯ: ಒಂದು ಮಧುರ ಸ್ಮೃತಿ
-ಡಿ. ವಿ. ಜಿ.
ಬಹುಶಃ 1920-21 ಇರಬಹುದು. ಬೆಂಗಳೂರು ಹೊಸ ತರಗುಪೇಟೆ ಪೂರ್ವದಿಕ್ಕಿನ ಮಂಡಿ ಅಂಗಡಿ ಸಾಲು: ವಿಕ್ಟೋರಿಯ ಆಸ್ಪತ್ರೆಯ ಪಶ್ಚಿಮ ಕಾಂಪೌಂಡ್ ಗೋಡೆಯ ಎದುರಾಗಿ ಮುಖ್ಯ ಅಂಗಡಿಗಳ ಪೈಕಿ ಮೂರನೆಯದೋ ನಾಲ್ಕನೆಯದೋ ದಿವಂಗತ ಧರ್ಮಪ್ರವರ್ತಕ ಡಿ. ಅಪ್ಪೂರಾಯರ ಮಕ್ಕಳು ಡಿ. ಶ್ರೀನಿವಾಸರಾಯರಿಗೆ ಸೇರಿದ್ದು. ಆ ಕಟ್ಟಡದಲ್ಲಿ ಇದ್ದದ್ದು ನವರತ್ನ ಅಂಡ್ ಕಂಪೆನಿ ಮುದ್ರಣಾಲಯ. ಅಲ್ಲಿ ಆಗ ನಾನು ನಡೆಸುತ್ತಿದ್ದ ‘ದಿ ಕರ್ಣಾಟಕ’ ಎಂಬ ಇಂಗ್ಲಿಷ್ ಪತ್ರಿಕೆ ಅಚ್ಚಾಗುತ್ತಿತ್ತು.
ಪ್ರೆಸ್ಸಿನ ಪಕ್ಕದ ಮಂಡಿಯ ಹಿಂದುಗಡೆಯ ವೆರಾಂಡದಲ್ಲಿ ಆ ಮಂಡಿಗೆ ಸೇರಿದ ಒಬ್ಬ ಮುದುಕ, ಒಬ್ಬ ಮುದುಕಿ ವಾಸಮಾಡುತ್ತಿದ್ದರು. ಆ ಮುದುಕಿ ಆ ಮಂಡಿಯಲ್ಲಿ ಕಸಗುಡಿಸುವವಳು. ಆ ಮುದುಕ ತುಂಬ ವಯಸ್ಸಾಗಿದ್ದದ್ದರಿಂದಲೋ ಏನೋ, ಯಾವಾಗಲೂ ಮಲಗಿರುತ್ತಿದ್ದ. ಆ ಹೆಂಗಸು ತಾನು ಬೆಳಗ್ಗೆ ಕೆಲಸ ಮಾಡುವಾಗ ಸಿಕ್ಕಿದ ಕೊಂಚ ಕೊಳೆತ ಈರುಳ್ಳಿ, ಹುಳಿತ ಆಲೂಗೆಡ್ಡೆ, ಕರಟು ಬದನೆಕಾಯಿ ಇವುಗಳನ್ನು ಸಂಗ್ರಹ ಮಾಡುತ್ತಿದ್ದಳು.
ಮಧ್ಯಾಹ್ನ ಆಕೆ ಆ ಈರುಳ್ಳಿ ಅಲೂಗೆಡ್ಡೆಗಳ ಕೊಳಕು ಹುಳುಕಲು ಭಾಗಗಳನ್ನೆಲ್ಲಾ ತೆಗೆದುಹಾಕಿ ಸರಿಯಾಗಿದ್ದ ಭಾಗಗಳನ್ನೆಲ್ಲ ಹಾಕಿ ಅಡಿಗೆ ಮಾಡುತ್ತಿದ್ದಳು. ಪದಾರ್ಥಗಳು ಬೇಯುತ್ತ ಬೇಯುತ್ತ ಘಮಲೆದ್ದು ಬೀದಿಯೆಲ್ಲ ವ್ಯಾಪಿಸುವುದು. ನನ್ನ ಮೂಗಿಗೂ ತಗಲುವುದು.
ದಿನಚರಿ:
ಇದಾದ ಮೇಲೆ ಸ್ನಾನ. ಅವರಿಗೆ ಇದ್ದದ್ದು ಎರಡು ಮೂರು ಮಡಕೆಗಳು. ಒಂದು ಹಿಟ್ಟು ಬೇಯಿಸುವುದಕ್ಕೆ. ಇನ್ನೊಂದು ಅಂಬಲಿ ಕಾಯಿಸುವುದಕ್ಕೆ. ಇನ್ನೊಂದು ಕುಡಿಯುವ ನೀರಿಟ್ಟುಕೊಳ್ಳುವುದಕ್ಕೆ. ಒಂದು ದೊಡ್ಡ ಮಣ್ಣು ಗಡಿಗೆ ಬೇರೆ: ಸ್ನಾನಕ್ಕೆ ನೀರು ಕಾಯಿಸಿಕೊಳ್ಳುವುದಕ್ಕಾಗಿ. ಆ ಹೆಂಗಸು ತಾನು ಸಂಪಾದಿಸಿದ ಕಸಕಡ್ಡಿಗಳನ್ನು ಉರಿಹಾಕಿ ಆ ದೊಡ್ಡಗಡಿಗೆ(ಕಡಾಯಿ)ಯೊಳಗೆ ನೀರು ಕಾಯಿಸುವಳು. ಆ ಬಿಸಿನೀರನ್ನು ಗಂಡನಿಗೆ ಸ್ನಾನ ಮಾಡಿಸುವಳು, ಅದೂ ಸಾವಕಾಶವಾಗಿ. ಆತನ ಮೈ ಹುಣ್ಣಾಗಿ ಕರಟುಕಟ್ಟಿದ್ದ ಕಡೆಯೆಲ್ಲಾ ಮೆತ್ತಗೆ ಕೈ ಸವರುತ್ತಾ, ಅವನ ನೋವೂ ಆಯಾಸವೂ ಪರಿಹಾರವಾಗುವಂತೆ ಬಿಸಿನೀರು ಹಾಕುವಳು. ಅವನು ಆ ಸಂತೋಷದಲ್ಲಿ ನಗುಮುಖದಿಂದ ಸ್ನಾನ ಮಾಡಿಸಿಕೊಳ್ಳುವನು. ‘ಹಾಯ್’ ಎಂದು ಮಧ್ಯೇ, ಮಧ್ಯೇ ಉದ್ಗಾರ ಮಾಡುವನು. ಸ್ನಾನವಾದ ಬಳಿಕ ಅವನ ಕೊಳೆಯ ಬಟ್ಟೆಯಿಂದಲೇ ಮೈ ಒರಸಿಕೊಳ್ಳುವನು, ಒರಸಿಸಿಕೊಳ್ಳುವನು. ಇದೆಲ್ಲ ಬಯಲಿನಲ್ಲಿ ಆದದ್ದರಿಂದ ನನ್ನ ಕಣ್ಣಿಗೆ ಕಾಣಿಸುತ್ತಿತ್ತು.
ಭೋಜನಾನಂದ:
ಬಳಿಕ ಒಂದು ಊಟದೆಲೆಯನ್ನು ಹಾಕಿ ಅದರ ನಡುವೆ ರಾಗಿ ಹಿಟ್ಟಿನ ಮುದ್ದೆಯನ್ನು ಇರಿಸುವಳು. ತಂಬಿಗೆ ಗಾತ್ರದ ದೊಡ್ಡ ಮುದ್ದೆ. ಅದರಲ್ಲಿಯೇ ಬಟ್ಟಲಿನಂತೆ ಕೈಯಿಂದ ಕೊರೆಯುವಳು – ಕಟ್ಟೆ ಕಟ್ಟಿದ ಕೊಳದಂತೆ. ಅದರ ನಡುವೆ ತಾನು ಕಾಯಿಸಿದ್ದ ಅಂಬಲಿಯನ್ನು ಹಾಕುವಳು. ಮುದುಕನು ಹಿಟ್ಟಿನ ಸ್ವಲ್ಪವನ್ನು ತೆಗೆದು ತುಂಡುಮಾಡಿ ಅಂಬಲಿಯಲ್ಲಿ ಅದ್ದಿ ಬಾಯಲ್ಲಿಟ್ಟುಕೊಂಡು ಚಪ್ಪರಿಸಿ ನುಂಗುವನು. ನಗುವನು. ಒಂದೊಂದು ಮಾತನಾಡುವನು. ಆಕೆಯೂ ಮಾತನಾಡುವಳು. ಈ ಊಟ ಅರ್ಧ ಘಂಟೆ ನಡೆಯುವುದು. ಇದನ್ನು ಸಾಕ್ಷಿಯಂತೆ ನೋಡುವುದು ನನಗೊಂದು ಸಂತೋಷ.
ಸಂಜೆ ಸಂಜೆಯೂ ತಪ್ಪದೆ ನಾನು ಇದನ್ನು ಬಹು ಕುತೂಹಲದಿಂದ ನೋಡುತ್ತಿದ್ದೆ. ಅದೊಂದು ಆನಂದಾನುಭವ.
ಆನಂದೋ ಬ್ರಹ್ಮೇತಿ ವ್ಯಜಾನಾತ್ |
ಆನಂದಾದ್ಧ್ಯೇವ ಖಲ್ವಿಮಾನಿ ಭೂತಾನಿ ಜಾಯನ್ತೇ |
ಆನಂದೇನ ಜಾತಾನಿ ಜೀವನ್ತಿ |
ಆನಂದಂ ಪ್ರಯಂತ್ಯಭಿಸಂವಿಶನ್ತಿ |
(‘ತೈತ್ತಿರೀಯೋಪನಿಷತ್ತು’)
ಆನಂದವೇ ಬ್ರಹ್ಮವೆಂದು ನೀನರಿಯೆಯೈ |
ಆನಂದದಿಂದ ಪುಟ್ಟಿಹುದೆಲ್ಲಮಲ್ತೇ |
ಆನಂದದಿಂ ಪುಟ್ಟಿದೆಲ್ಲಮುಂ ಬಾಳುಗುಂ |
ಆನಂದವನೆ ಕುರಿತು ಪೋಗುತಲಿ ಪುಗುಗುಂ ||
ಪ್ರೀತಿಯೇ ಸೌಂದರ್ಯ:
ಆನಂದಕ್ಕೆ ಕಾರಣವಾದದ್ದು ಇಲ್ಲಿ ಪ್ರೀತಿ. ಅನ್ಯೋನ್ಯ ಪ್ರೀತಿ ಆ ಮುದುಕ ಮುದುಕಿಯರ ಬಡತನವನ್ನು ಮರೆಯಿಸಿತ್ತು. ಅವರಿಗೆ ಆಗ ಲಾಟರಿಯಿಂದಲೋ ಬೇರೆಲ್ಲಿಂದಲೋ ಹಣ ಬಂದಿದ್ದರೆ ಅವರಿಗೆ ಆಗ – ಆ ವಯಸ್ಸಿನಲ್ಲಿ - ಏನು ತಾನೆ ಪ್ರಯೋಜನವಾಗುತ್ತಿತ್ತು? ಹಣ ಪ್ರಯೋಜನಕ್ಕೆ ಬಾರದ ವಯಸ್ಸು ಅದು. ಅದಕ್ಕಿಂತ ಹೆಚ್ಚಾಗಿ, ಪ್ರೀತಿ ಅವರ ಮುಪ್ಪನ್ನು ಮರೆಯಿಸಿ ಯೌವನವನ್ನು ತಂದುಕೊಟ್ಟಿತ್ತು. ಇನ್ನೂ ಹೆಚ್ಚಾಗಿ, ಪ್ರೀತಿಯು ಅವರ ನೊಂದ ಬಡಕಲು ಕೊಳಕಲು ಮೈಗಳಲ್ಲಿ ಅವರ ಪಾಲಿಗೆ ಸೌಂದರ್ಯದರ್ಶನ ಮಾಡಿಸಿತು. ಪ್ರೀತಿಯೇ ಸೌಂಧರ್ಯ; ಪ್ರೀತಿ ಸಾಲದೆಹೋದಲ್ಲಿ ಆಭರಣ ಅಲಂಕಾರ ಐಶ್ವರ್ಯಗಳು ಬರಿಯ ಭಾರ. ಪ್ರೀತಿಯೇ ಸೌಂಧರ್ಯ; ಪ್ರೀತಿಯೇ ಐಶ್ವರ್ಯ. ಪ್ರೀತಿಯೆಂದರೆ ಹೃದಯವಿಕಾಸ.
(ಡಿ.ವಿ.ಜಿ ಅವರ ‘ಹಕ್ಕಿಯ ಪಯಣ’ ಕೃತಿಯಿಂದ)

ಕಾಮೆಂಟ್ಗಳು