ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ152


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಗದಾ ಪರ್ವ - ಹನ್ನೆರಡನೆಯ ಸಂಧಿ


ಸೂ.   
ರಣವ ಶೋಧಿಸಲೆಂದು ಕಳನೊಳು
ಹೆಣನ ತುಳಿತುಳಿದರಸೆ ಕುರುಧಾ    
ರುಣಿಯ ಪತಿಯನು ಕಂಡು ನೆರೆ ಮರುಗಿದಳು ಗಾಂಧಾರಿ   
 
ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣನ ಕರೆದು ನಯದಲಿ
ಲೋಲಲೋಚನೆ ನುಡಿದಳಂತಸ್ತಾಪ ಶಿಖಿ ಜಡಿಯೆ
ಏಳು ತಂದೆ ಮುಕುಂದ ಕದನ
ವ್ಯಾಳವಿಷನಿರ್ದಗ್ಧಧರಣೀ
ಪಾಲವರ್ಗವ ತೋರಿಸೆಂದಳು ತರಳೆ ಕೈಮುಗಿದು        ೧  
 
ನಿನ್ನ ಲೀಲೆಯ ಬೆಳೆಸಿರಿಯ ಸಂ
ಪನ್ನ ಮಾಯಾರಚನೆಯಿದು ನಿ
ರ್ಭಿನ್ನಭಾರತನಿಚಿತ ಬಹಳಾಕ್ಷೋಹಿಣೀ ದಳವ
ತನ್ನೊಡನೆ ಹಗೆಬೆಳೆದ ಶೌರ‍್ಯವಿ
ಪನ್ನರನು ತೋರೈ ಜನಾರ್ದನ
ಮನ್ನಿಸೆಂದಳು ನಯನಜಲವನು ಮಿಡಿದು ಗಾಂಧಾರಿ      ೨  
 
ತಾಯೆ ಬಾ ಗಾಂಧಾರಿ ಮನದಲಿ
ನೋಯದಿರು ಪೌರಾಣಜನ್ಮದ
ದಾಯಭಾಗದ ಭೋಗ ಭಂಗಿಸಲಳುಕಲೇಕಿನ್ನು
ಸಾಯಲಾಗದೆ ಸುಭಟರಸುಗಳು
ಬೀಯವೇ ಬ್ರಹ್ಮಾದಿಗಳಿಗಿದು
ದಾಯವೀ ಸಂಸಾರವೆಂದನು ನಗುತ ಮುರವೈರಿ          ೩  
 
ಎಂದು ಕೈಗೊಟ್ಟಬಲೆಯನು ಹರಿ
ತಂದನಾ ಸಂಗ್ರಾಮಭೂಮಿಗೆ
ಹಿಂದೆ ಬರಲಷ್ಟಾದಶಾಕ್ಷೋಹಿಣಿಯ ನಾರಿಯರು
ಮುಂದೆ ಹೆಣದಿನಿಹಿಗಳು ಖಗಮೃಗ
ವೃಂದ ಚೆಲ್ಲಿತು ಭೂತ ಪೂತನಿ
ವೃಂದ ಕೆದರಿತು ಹೊಕ್ಕರಿವರದ್ಭುತರಣಾಂಗಣವ        ೪  
 
ಸೂಸಿತಬಲಾವೃಂದ ಕೆದರಿದ
ಕೇಶಪಾಶದ ತೆಳುವಸುರ ನಿ
ಟ್ಟಾಸುರದ ಹೊಯ್ಲುಗಳ ಲೋಚನವಾರಿಧಾರೆಗಳ
ಆಸುರಾಕ್ರಂದನದ ಶೋಕಾ
ವೇಶ ಬಹಳದ ಬಾಲೆಯರು ಪ್ರಾ
ಣೇಶ ಮೈದೋರೆನುತ ಹೊಕ್ಕರಸಿದರು ಕಳನೊಳಗೆ      ೫  
 
ಹರಿದರಗಲಕೆ ನಾರಿಯರು ಕುರು
ಧರಣಿಯಲಿ ತಂತಮ್ಮ ಪತಿಗಳ
ಕರಿಗಳಲಿ ತುರಗದಲಿ ರಥದಲಿ ಕಂಡರಲ್ಲಲ್ಲಿ
ಶಿರವ ಮುಂಡಾಡಿದರು ಹೆಣನಲಿ
ಹೊರಳಿದರು ವಿವಿಧ ಪ್ರಳಾಪದ
ಪರುಠವವನೆಂತರಿದರೋ ವರ್ಣಿಸುವಡರಿದೆಂದ         ೬  
 
ನಡೆದಳಾ ಗಾಂಧಾರಿ ಶೋಕದ
ಕಡಲೊಳೇಳುತ ಮುಳುಗುತಂಘ್ರಿಯ
ಕೊಡಹುತರುಣಾಂಬುಗಳ ಹೊನಲಿನ ಜಾನುದಘ್ನಗಳ
ಅಡಗಿನಲಿ ಕಾಲೂರಿ ಸಿಲುಕಿದ
ಡೊಡನೆ ಹರಿ ನೆಗಹುವನು ನರವಿನ
ತೊಡಕ ಬಿಡಿಸುತ ಹೊಕ್ಕಳಂಗನೆ ಹೆಣನ ಮಧ್ಯದಲಿ        ೭  
 
ಇತ್ತ ನೋಡೈ ದೇವಕೀಸುತ
ಮತ್ತಗಜ ಕಂಧರದೊಳಾ ಭಗ
ದತ್ತನನು ಕಂಡಾತನರಸಿಯರೈದೆ ಮೊಗವೆತ್ತಿ
ಸುತ್ತಬರುತೈದಾರೆ ದಂತಿಯ
ಹತ್ತಲರಿಯದೆ ನೂರುಮಡಿ ಶೋ
ಕೋತ್ತರದಲದೆ ಶಿವ ಎನುತ ಮರುಗಿದಳು ಗಾಂಧಾರಿ     ೮  
 
ದೇವ ನೋಡಾ ಶೋಕವಹ್ನಿಯ
ಡಾವರವ ಕಾಂಭೋಜನರಸಿಯ
ರಾವ ನೋಂಪಿಯ ನೋಂತರೋ ಶಿವಶಿವ ಮಹಾದೇವ
ಆವನಾತನು ನಿಮ್ಮವರುಗಳ
ಮಾವನೇ ಪಾಂಚಾಲ ಸತಿಯರು
ಜೀವದಲಿ ಜಾರಿದರು ರಮಣರ ಮೇಲೆ ತನಿಹೊರಳಿ       ೯  
 
ಅದೆ ವಿರಾಟನ ಸತಿಯರೀಚೆಯ
ಲದೆ ಘಟೋತ್ಕಚನಂಗನೆಯರಾ
ಸುದತಿಯರ ಶೋಕವ ನಿರೀಕ್ಷಿಸು ಪಂಚಕೇಕಯರ
ಒದರಿ ಪಾಂಡ್ಯನ ಹೆಂಡಿರಾಚೆಯ
ಲದೆ ಸುಸೋಮಕ ಸೃಂಜಯಾದ್ಯರ
ವಧುಗಳೊರಲುತ್ತದೆ ಮುರಾಂತಕ ನಿಮ್ಮ ಸೇನೆಯಲಿ     ೧೦  
 
ಸುಖಿ ಕಣಾ ಭೂರಿಶ್ರವನ ವರ
ಸಖಿಯರದೆ ಪಾಡಳಿದು ನಿಮ್ಮಯ
ಸಖನ ಗೆಲಿಸಿದಿರಿವನ ಮುರಿದಿರಿ ರಾಧೆಯಾತ್ಮಜನ
ನಿಖಿಳ ಯಾಚಕಜನ ಸಹಿತ ತ
ತ್ಸಖಿಯರಳುತದೆ ಕರ್ಣ ಮರಣದೊ
ಳಖಿಳಜಗ ನೀನೊಬ್ಬ ತಪ್ಪಿಸಿ ಮರುಗಿತಿಂದಿನಲಿ         ೧೧  
 
ಭಾನುದತ್ತನ ಮೇಲೆ ಹೊರಳುವ
ಮಾನಿನಿಯರ ನಿರೀಕ್ಷಿಸೈ ಮ
ತ್ಸೂನುಗಳ ನೋಡಿತ್ತಲಿದೆ ದುಶ್ಶಾಸನಾದಿಗಳ
ಏನನೆಂಬೆನು ತನ್ನ ಸೊಸೆಯರ
ಹಾನಿಯನು ಮಾದ್ರೇಶನರಸಿಯ
ರೇನಧರ್ಮವ ನೆನೆದರೆಂದಳಲಿದಳು ಗಾಂಧಾರಿ        ೧೨  
 
ತಂದೆ ನೋಡೈ ಕೃಷ್ಣ ತನ್ನಯ
ನಂದನರು ನೂರ್ವರಿಗೆ ಕಿರಿಯಳ
ನಿಂದುಮುಖಿ ದುಶ್ಶಳೆಯನಾ ಸೈಂಧವನ ವಲ್ಲಭೆಯ
ಅಂದು ವಿವಿಧವ್ಯೂಹದಲಿ ಗುರು
ನಿಂದಡೆಯು ಹುಸಿರಾತ್ರಿಯಲಿ ನೀ
ಕೊಂದೆಲೈ ತನ್ನಳಿಯನನು ವರ ಸಿಂಧುಭೂಪತಿಯ       ೧೩  
 
ಕ್ಷೇಮಧೂರ್ತಿಯನಾ ಕಳಿಂಗನ
ಸೋಮದತ್ತನ ಚಿತ್ರಸೇನನ
ಭೀಮವೈರಿಯಲಂಬುಸನ ಕಿಮ್ಮೀರನಂದನನ
ಭೌಮಸುತನ ಸುಶರ್ಮಕನ ಸು
ತ್ರಾಮರಿಪುಗಳ ಭೂರಿಬಲದ ಸ
ನಾಮರರಸಿಯರದೆ ನಿಜೇಶನ ಮೇಲೆ ತನಿಹೊರಳಿ       ೧೪  
 
ಎನುತ ಬರೆಬರೆ ಮುಂದೆ ಕಂಡಳು
ತನುಜನನು ಭೀಮನ ಗದಾ ಘ
ಟ್ಟನದ ಘಾಯದ ಮೆಯ್ಯ ಖಂಡಿಸಿದೂರುಮಂಡಲದ
ನನೆದ ಹುಡಿಮಗ್ಗುಲಿನ ರಕುತದ
ಹೊನಲ ಹೊಲಸಿನ ಘೂಕಕಾಕ
ಧ್ವನಿ ಭಯಂಕರ ಸನ್ನಿಧಾನದ ಕೌರವೇಶ್ವರನ         ೧೫  
 
ಇತ್ತ ನೋಡೈ ಕೃಷ್ಣ ತನ್ನಯ
ಮತ್ತದಂತಿಯನಿಂದುಕುಲ ರಾ
ಜೋತ್ತಮನನೇಕಾದಶಾಕ್ಷೋಹಿಣಿಯ ವಲ್ಲಭನ
ಹತ್ತೆ ಹಿಡಿದೋಲಗಿಸುವರು ವರ
ಮತ್ತಕಾಶಿನಿಯರುಗಳೀಗಳು
ಸುತ್ತಮುತ್ತಿತು ಘೂಕ ವಾಯಸ ಜಂಬುಕವ್ರಾತ        ೧೬  
 
ಎನುತ ಬಿದ್ದಳು ಮೂರ್ಛೆಯಲಿ ಮಾ
ನಿನಿಯನೆತ್ತಿದನಸುರರಿಪು ನೃಪ
ವನಿತೆಯರು ಭಾನುಮತಿ ಮೊದಲಾದಖಿಳ ರಾಣಿಯರು
ಜನಪತಿಯ ಮುಕ್ಕುರುಕಿದರು ತ
ಜ್ಜನಿತ ಶೋಕಾದ್ಭುತದ ಹಾ ಹಾ
ಧ್ವನಿಯು ಥಟ್ಟನೆ ಘಟ್ಟಿಸಿತು ಬ್ರಹ್ಮಾಂಡಮಂಡಲವ        ೧೭  
 
ಜನಪ ಕೇಳೀಚೆಯಲಿ ಕುಂತೀ
ವನಿತೆ ಕರ್ಣನ ಮೇಲೆ ಹೊರಳಿದ
ಳಿನತನುಜ ಹಾ ಕರ್ಣ ಹಾ ಹಾ ಕರ್ಣ ಹಾಯೆನುತ
ನಿನಗೆ ಧರ್ಮಸುತಾದಿ ಭೂಮಿಪ
ರನುಜರೈ ಮಾಯಾವಿ ಮಧುಸೂ
ದನನೆ ಮರಯಿಸಿ ಕೊಂದನಕಟೆಂದೊರಲಿದಳು ಕುಂತಿ    ೧೮  
 
ಅರಿದನಂತಕಸೂನು ಮುರಹರ
ನಿರಿದನೇ ನಾವಿನ್ನು ಕರ್ಣಗೆ
ಕಿರಿಯರೈ ಲೇಸಾಯ್ತು ಗುರುಜನ ಬಂಧುಜನಹನನ
ಉರುವ ಶಶಿವಂಶದ ಮಹಾನೃಪ
ರೆರಗಿದರೆ ಪಾತಕಕೆ ಮುನ್ನೆ
ಚ್ಚರಿಸದಕಟಾ ತಾಯಿ ಕೆಡಿಸಿದಳೆಂದು ಬಿಸುಸುಯ್ದ        ೧೯  
 
ಹೋಗಲಿನ್ನಾ ಕ್ಷತ್ರಧರ್ಮ
ತ್ಯಾಗ ದುರ್ವ್ಯಸನ ಪ್ರಪಂಚವ
ನೀಗಿ ಕಳೆಯೆಂದಸುರರಿಪುವೈತಂದು ಮನ್ನಿಸಿದ
ಮೇಗಿವರ ಸಂಸ್ಕಾರಕಾರ‍್ಯನಿ
ಯೋಗವಿವೆ ಭಾರಂಕ ನಿನಗೆ ಸ
ರಾಗದಲಿ ಸಂತೈಸಿಯೆಂದನು ಭೂಪತಿಗೆ ಶೌರಿ        ೨೦  
 
ವ್ಯಾಸ ನಾರದ ವಿದುರ ಸಾತ್ಯಕಿ
ಕೇಶವನು ದಾರುಕ ಯುಯುತ್ಸು ಮ
ಹೀಶ ಮೊದಲಾದನಿಬರರಸರ ಸಾರಥಿವ್ರಾತ
ಆ ಸಚಿವರಾ ಹಸ್ತಿನಾಪುರ
ದಾ ಸಮಸ್ತಪ್ರಕೃತಿಜನ ಸಂ
ತೈಸಿದರು ಸಂಸ್ಕಾರವಿಧಿಯನು ಹತಮಹೀಶರಿಗೆ        ೨೧  
 
ಕುರುಪತಿಯ ರವಿಸುತನ ಮಾದ್ರೇ
ಶ್ವರನ ದುಶ್ಶಾಸನ ವಿಕರ್ಣಾ
ದ್ಯರ ಜಯದ್ರಥ ಬಾಹ್ಲಿಕರ ಭಗದತ್ತ ಲಕ್ಷಣರ
ಗುರುವರನ ಪಾಂಚಾಲ ಮತ್ಸ್ಯೇ
ಶ್ವರರ ಕುಂತೀಭೋಜನೃಪಮು
ಖ್ಯರನು ವಿಧಿಪೂರ್ವಕದಿ ದಹಿಸಿದರಾಹಿತಾಗ್ನಿಯಲಿ      ೨೨  
 
ಕಳನ ಚೌಕದ ಸುತ್ತಲೊಟ್ಟಿಸಿ
ತಳಿಗಳನು ಬಹಳಾಗ್ನಿಯನು ಕೈ
ಕೊಳಿಸಿದರು ದಹಿಸಿದರು ಬಹಾಳಾಕ್ಷೋಹಿಣೀಭಟರ
ಬಳಿಕ ಹಸ್ತಿನಪುರದ ಸೀಮಾ
ಸ್ಥಳಕೆ ಬಂದರು ನಿಖಿಳ ಕಾಂತಾ
ವಳಿಸಹಿತ ಗಂಗಾವಗಹನವ ಮಾಡಿದನು ನೃಪತಿ         ೨೩  
 
ಆ ನದಿಯ ತೀರದಲಿ ತಿಂಗಳು
ಮಾನನಿಧಿ ತತ್ಪ್ರೇತರಿಗೆ ಜಲ
ದಾನ ವಿಧಿವಿಹಿತಪ್ರಪಂಚಿತ ಸಕಲ ಸಂಸ್ಕೃತಿಯ
ಭೂನುತನು ಮಾಡಿದನು ಬಂದುದು
ಜಾನಪದಜನವೈದೆ ಕುಂತೀ
ಸೂನುವನು ದರುಶನವ ಮಾಡಿತು ಕಾಣಿಕೆಯ ನೀಡಿ     ೨೪  
 
ತಿಳುಹಿ ರಾಯನ ಹೃದಯಸಂಚಿತ
ಕಲುಷವನು ಖಂಡಿಸಿ ಗತಾಕ್ಷನ
ಬಲಿದ ಚಿತ್ತವ್ಯಥೆಯನಾರಿಸಿ ನೃಪವಧೂಜನದ
ಅಳಲನಾರಿಸಿ ಗಜಪುರದ ನೃಪ
ನಿಳಯವನು ಹೊಗಿಸಿದನು ಯದುಕುಲ
ತಿಲಕ ಗದುಗಿನ ವೀರನಾರಾಯಣನು ಪಾಂಡವರ        ೨೫

ಸಂಕ್ಷಿಪ್ತ ಭಾವ
Lrphks Kolar

ಗಾಂಧಾರಿ ಮೊದಲಾದವರಿಂದ ರಣಭೂಮಿಯ ದರ್ಶನ. ಕರ್ಮಾಂತರಗಳನ್ನು ನಡೆಸಿದ ಪಾಂಡವರು.

ಗಾಂಧಾರಿಯು ಕೃಷ್ಣನನ್ನು ಕುರಿತು ರಣರಂಗದಲ್ಲಿ ಮಡಿದವರನ್ನು ತೋರಿಸು ಎಂದು ಕೇಳಿದಳು. ಇದೆಲ್ಲವೂ ನಿನ್ನ ಲೀಲೆಯೆಂದು ಗೊತ್ತು. ಅದಕ್ಕೊಳಗಾದವರನ್ನು ತೋರಿಸು ಎಂದು ಕಣ್ಣೀರು ಮಿಡಿದಳು. ಆಗಲಿ ಎಂದು ಕೃಷ್ಣ ಕರೆದೊಯ್ಯಲು ಹಿಂದೆ ಎಲ್ಲ ಸ್ತ್ರೀಯರೂ ಹೊರಟರು. ಇವರನ್ನು ಕಂಡು ಅಲ್ಲಿ ಸುಳಿದಾಡುತ್ತಿದ್ದ ಪ್ರಾಣಿಗಳು, ಭೂತ ಪ್ರೇತಗಳು ಓಡಿದವು. ಶೋಕದ ಕಡಲಿನಲ್ಲಿ ಏಳುತ್ತ ಮುಳುಗುತ್ಯ ಗಾಂಧಾರಿ ಹೊರಟಳು. ತನ್ನ ಸುತ್ತ ಶೋಕಿಸುತ್ತಿರುವ ಹೆಂಗಸರ ಧ್ವನಿಯಿಂದ ಅವರು ಯಾರೆಂಬುದನ್ನು ಗುರುತಿಸಿ ಕೃಷ್ಣನಿಗೆ ಹೇಳುತ್ತಿದ್ದಳು. ಅಲ್ಲಿ ಎರಡೂ ಪಕ್ಷಗಳಲ್ಲಿ ಮಡಿದ ಅರಸರ, ಸೈನಿಕರ ಹೆಂಡತಿಯರು ತಮ್ಮ ತಮ್ಮ ಗಂಡಂದಿರ, ಬಂಧುಗಳ, ಮಕ್ಕಳ ಶವಗಳು ಕಂಡಾಗ ಜೋರಾಗಿ ಅಳುತ್ತಿದ್ದರು. 

ಭಗದತ್ತನ ಹೆಂಡತಿ, ಕಾಂಭೋಜನರಸಿ, ಪಾಂಚಾಲ ಸತಿಯರು, ಮದ್ರೇಶನ ರಾಣಿ, ವಿರಾಟನ ಪತ್ನಿ, ಕರ್ಣನ ಹೆಂಡತಿ, ತನ್ನ ಮಕ್ಕಳ ಸತಿಯರು, ಅಳಿಯ ಜಯದ್ರಥನ ಪತ್ನಿ ದುಶ್ಶಲೆ...ಹೀಗೆ ಎಲ್ಲರನ್ನೂ ಗುರುತಿಸಿ ಹೇಳುತ್ತ ಮುಂದೆ ಬಂದು ತನ್ನ ಮಗ ದುರ್ಯೋಧನನ ಶವವನ್ನು ಕಂಡಳು. ಶೋಕದಿಂದ ಮೂರ್ಛೆ ಹೋದಳು. ಭಾನುಮತಿ ಮೊದಲಾದವರ ಅಳಲು ಆಕಾಶವನ್ನು ಮುಟ್ಟಿತು.

ಇತ್ತ ಕುಂತಿಯು ಕರ್ಣನ ಶವದ ಬಳಿ ನಿಂತು ಶೋಕಿಸಿದಳು. ಮುರಹರ ಮರೆಯಿಸಿ ಕೊಂದನಲ್ಲ ನನ್ನ ಕಂದನನ್ನು ಎಂದಳು. ಇದನ್ನು ಕೇಳಿದ ಧರ್ಮಜನಿಗೆ ಆಗ ಕರ್ಣ ತನ್ನ ಅಣ್ಣನೆಂಬುದು ತಿಳಿಯಿತು. ಮೊದಲೇ ಹೇಳದೆ ತಾಯಿ ಕೆಡಿಸಿದಳೆಂದು ತೊಳಲಿದನು. ಕೃಷ್ಣ ಎಲ್ಲರನ್ನೂ ಸಂತೈಸಿ ಮುಂದಿನ ಸಂಸ್ಕಾರಕಾರ್ಯವನ್ನು ಮಾಡಿರಿ ಎಂದನು.

ವ್ಯಾಸ, ನಾರದ, ವಿದುರ, ಸಾತ್ಯಕಿ, ಪ್ರಜೆಗಳು ಮುಂತಾದ ಎಲ್ಲರೂ ಸೇರಿದರು. ದುರ್ಯೋಧನನ, ಕರ್ಣನ, ಮದ್ರೇಶನ, ದ್ರೋಣ ಮುಂತಾದವರೆಲ್ಲರ ಶವಗಳನ್ನು ಒಟ್ಟು ಮಾಡಿ ಅಗ್ನಿಗೆ ಅರ್ಪಿಸಿದರು. ಗಂಗಾತೀರಕ್ಕೆ ಬಂದು ಅಲ್ಲಿ ಶುಚಿಯಾಗಿ ಒಂದು ತಿಂಗಳ ಕಾಲ ಅಲ್ಲಿದ್ದು ದಾನ ಧರ್ಮಾದಿಗಳನ್ನು ಯಥೇಚ್ಛವಾಗಿ ಮಾಡಿದರು. ಧರ್ಮಜನ ದುಃಖವನ್ನು ಸಂತೈಸಿ, ಅಂಧನೃಪನ ಚಿತ್ತವ್ಯಥೆಯನ್ನು ಕಳೆದು, ವಧೂಜನರನ್ನು ಸಂತೈಸಿ ಪಾಂಡವರಿಗೆ ಹಸ್ತಿನಾಪುರದ ಅರಮನೆಯ  ಪ್ರವೇಶ ಮಾಡಿಸಿದನು ವೀರ ನಾರಾಯಣ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ