ಭಾರತಕಥಾಮಂಜರಿ153
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಗದಾ ಪರ್ವ - ಹದಿಮೂರನೆಯ ಸಂಧಿ
ಸೂ.
ದೇವಸಂತತಿ ನಲಿಯೆ ಪಾಂಡವ
ಜೀವಿ ಹರಿಯೆಂಬೀ ಪ್ರತಿಜ್ಞೆಯ
ಭಾವ ಸಂದುದು ಧರ್ಮಜನ ಪಟ್ಟಾಭಿಷೇಕದಲಿ
ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಗಿರಿ ತೊಡಗಿ ಸಾಗರ
ವೇಲೆ ಪರಿಯಂತಖಿಳ ನಗರ ಗ್ರಾಮ ಪುರವರದ
ಮೇಲುವರ್ಣಪ್ರಮುಖವಾ ಚಾಂ
ಡಾಲರವಧಿ ಸಮಸ್ತ ಭೂಜನ
ಜಾಲ ಹಸ್ತಿನಪುರಿಗೆ ಬಂದುದು ಕಂಡುದವನಿಪನ ೧
ಚ್ಯವನ ಮುದ್ಗಲ ಕಣ್ವ ಕಠ ಭಾ
ರ್ಗವ ಭರದ್ವಾಜಾಂಗಿರಸ ಗಾ
ಲವ ಪುಲಸ್ತ್ಯ ರುಮಣ್ವ ಗೌತಮ ಯಾಜ್ಞವಲ್ಕ್ಯಮುನಿ
ಧ್ರುವ ವಿಭಾಂಡಕ ಗಾರ್ಗ್ಯ ಘಟಸಂ
ಭವ ಮೃಕಂಡುಸುತಾದಿ ಭೂಮಿ
ಪ್ರವರ ಮುನಿಗಳು ಬಂದು ಕಂಡರು ಧರ್ಮನಂದನನ ೨
ಜಲಧಿ ಮಧ್ಯದ ಕುರುವ ಘಟ್ಟಾ
ವಳಿಯ ಕೊಳ್ಳದ ಕುಹರ ಕುಂಜದ
ನೆಲೆಯ ಗಿರಿಸಾನುಗಳ ಶಿಖರದ ದುರ್ಗವೀಥಿಗಳ
ನೆಲನಶೇಷಪ್ರಜೆ ನಿಖಿಳ ಮಂ
ಡಳಿಕ ಮನ್ನೆಯ ವಂದಿಜನ ಸಂ
ಕುಲ ಮತಂಗಜಪುರಿಗೆ ಬಂದುದು ನೃಪನ ಕಾಣಿಕೆಗೆ ೩
ವ್ಯಾಸ ನಾರದ ಕೃಷ್ಣ ಮೊದಲಾ
ದೀ ಸಮಸ್ತ ಮುನೀಂದ್ರನಿಕರ ಮ
ಹೀಶನನು ಪಟ್ಟಾಭಿಷೇಕಕೆ ಮನವನೊಡಬಡಿಸಿ
ದೋಷರಹಿತ ಮುಹೂರ್ತ ಲಗ್ನ ದಿ
ನೇಶವಾರ ಶುಭಗ್ರಹೋದಯ
ಲೇಸೆನಲು ನೋಡಿದರು ಮಿಗೆ ಗಾರ್ಗ್ಯಾದಿ ಜೋಯಿಸರು ೪
ತರಿಸಿ ಮಂಗಳ ವಸ್ತುಗಳ ಸಂ
ವರಿಸಿ ಬಹುವಿಧವಾದ್ಯರವ ವಿ
ಸ್ತರದ ಪಂಚಮಹಾನಿನಾದದ ಸರ್ವಜನಮನದ
ಹರುಷಪೂರದ ವೇದಮಂತ್ರೋ
ಚ್ಚರಣಸಾರದ ನೃಪನ ಪಟ್ಟಾ
ಧ್ವರವೆಸೆಯಲುತ್ಸವವನೆಸಗಿದನಸುರರಿಪುವಂದು ೫
ಆದುದಾ ಪಟ್ಟಾಭಿಷೇಕದೊ
ಳಾ ದುರಾತ್ಮಕ ಬಾಷ್ಕಳನ ಪರಿ
ವಾದವನು ಮುನಿನಿಕರ ಕೇಳಿದು ಖತಿಯ ಭಾರದಲಿ
ಭೇದಿಸಿದರವನಸುರನೆಂದು ವಿ
ಷಾದವಹ್ನಿಯಲುರುಹಿದರು ಬಳಿ
ಕಾದರಿಸಿ ಧರ್ಮಜನ ಸಂತೈಸಿದನು ಮುರವೈರಿ ೬
ಅರಸ ಕೇಳೈ ಪಟ್ಟವದು ಹಿರಿ
ಯರಸನದು ಯುವರಾಜಪಟ್ಟವೆ
ಹರಿತನೂಜನೊಳಾಯ್ತು ಸೇನಾಪತಿ ಧನಂಜಯನು
ವರಕುಮಾರರು ಯಮಳರಲ್ಲಿಗೆ
ಹಿರಿಯ ಸಚಿವನು ವಿದುರನವನಿಪ
ಪರುಠವಿಸಿದ ಯುಯುತ್ಸುವನು ಸರ್ವಾಧಿಕಾರದಲಿ ೭
ವರ ಮುನೀಂದ್ರರ ನಿಖಿಳ ದೇಶಾಂ
ತರದ ಭೂಸುರವರ್ಗವನು ಸ
ತ್ಕರಿಸಿದನು ಗೋ ಭೂಮಿ ವಸನ ಹಿರಣ್ಯದಾನದಲಿ
ಪರಿಜನವ ಪುರಜನವ ರತ್ನಾ
ಕರಪರೀತ ಮಹೀಜನವನಾ
ದರಿಸಿದನು ವೈಭವವಿಹಿತ ಸನ್ಮಾನ ದಾನದಲಿ ೮
ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು
ಶ್ಶಾಸನನ ಸದನವನು ಪಾರ್ಥಗೆ ಕರ್ಣಭವನದಲಿ
ವಾಸವಾದುದು ಯಮಳರಿಗೆ ದು
ಶ್ಯಾಸನಾನುಜರರಮನೆಗಳುಳಿ
ದೈಸುಮನೆ ಭಂಡಾರವಾದುದು ಭೂಪ ಕೇಳೆಂದ ೯
ಮನ್ನಣೆಯಲಿ ಯುಯುತ್ಸು ಹೊಕ್ಕನು
ತನ್ನ ಮನೆಯನು ಭೀಷ್ಮ ಗುರುಕೃಪ
ರುನ್ನತಾಲಯವಾಯ್ತು ನೃಪನ ಪಸಾಯ್ತಸಂತತಿಗೆ
ಮುನ್ನಿನವರೇ ಮಂತ್ರಿ ಸಚಿವರು
ಮುನ್ನದಾವಂಗಾವ ಪರುಠವ
ಭಿನ್ನವಿಲ್ಲದೆ ಪೌರಜನವೆಸೆದಿರ್ದುದಿಭಪುರಿಯ ೧೦
ಅರಸು ಧರ್ಮಜನಾದ ನಮಗಿ
ನ್ನುರವಣಿಪ ಮನ ಬೇಡ ಬೇಡು
ತ್ತರಿಸುವಿಹಪರವೆರಡ ಪಡೆದವು ನಿಖಿಳ ಜಗ ಹೊಗಳೆ
ಪರಿಮಿತದ ಜನ ತಮ್ಮ ಸುಬಲವ
ನಿರದೆ ಮಾಡುವರೆಂದು ಮುನಿಜನ
ಧರಣಿಸುರರೊಳಗಾದ ಪುರಜನರೊಲಿದು ಹರಸಿದರು ೧೧
ಬಳಿಕ ಭೀಷ್ಮನ ಬಾಣಶಯನ
ಸ್ಥಳಕೆ ಧರ್ಮಜ ಬಂದು ಧರ್ಮಂ
ಗಳನು ಕೇಳಿದು ರಾಜಧರ್ಮ ಸಮಸ್ತಧರ್ಮವನು
ತಿಳಿದನಗ್ಗದ ದಾನರ್ಮಾ
ವಳಿಯನಾತನ ರಾಜ್ಯಪಾಲನ
ನಳ ನಹುಷ ಭರತಾದಿ ಭೂಪರ ಗತಿಗೆ ಗುರುವಾಯ್ತು ೧೨
ಕದನದಲಿ ಕಯ್ಯಾರೆ ದೈತ್ಯರ
ಸದೆದು ಭೂಭಾರವನು ಪರಹ
ಸ್ತದಲಿ ಕಟ್ಟಿಸಿ ಕೊಟ್ಟಭಾಷೆಯನುತ್ತರಾಯೆನಿಸಿ
ನದಿಯ ನಂದನನನು ಪರಾನಂ
ದದಲಿ ಸೇರಿಸಿ ಪರಮ ಪರಿತೋ
ಷದಲಿಪಯಣವ ಮಾಡಿದನು ಮುರವೈರಿ ನಿಜಪುರಿಗೆ ೧೩
ಯಮಸುತನ ತಕ್ಕೈಸಿ ಭೀಮನ
ಮಮತೆಯನು ಭುಲ್ಲೈಸಿ ಪಾರ್ಥನ
ನಮಿತ ಮಕುಟವ ನೆಗಹಿ ಪುಳಕಾಶ್ರುಗಳ ಪೂರದಲಿ
ಯಮಳರನು ಬೋಳೈಸಿ ರಾಯನ
ರಮಣಿಯನು ಸಂತೈಸಿ ವಿದುರ
ಪ್ರಮುಖರನು ಬೀಳ್ಕೊಟ್ಟು ಬಿಜಯಂಗೈದನಸುರಾರಿ ೧೪
ದೇವ ದುಂದುಭಿರವದ ಗಗನದ
ಹೂವಳೆಯ ಪೂರದ ಸಮಸ್ತ ಜ
ನಾವಳಿಯ ಜಯಜೀಯ ನಿರ್ಘೋಷದ ಗಡಾವಣೆಯ
ದೇವಕಿಯ ವಸುದೇವ ರುಕುಮಿಣಿ
ದೇವಿಯಾದಿಯ ಹರುಷದಾವಿ
ರ್ಭಾವ ಮಿಗೆ ನಿಜಪುರವ ಹೊಕ್ಕನು ವೀರನಾರಯಣ ೧೫
ಭವದುರಿತಹರವಕಟ ಹರಿನಾ
ಮವನು ನೆನೆವರು ಕಾಲಚಕ್ರದ
ಜವನ ಬೇಗೆಯ ಜುಣುಗಿ ಜಾರುವರಖಿಳ ಮಾನವರು
ಕವಿ ಕುಮಾರವ್ಯಾಸಸೂಕ್ತದ
ಸವೆಯದಮೃತವನೊಲಿದೊಲಿದು ಸು
ಶ್ರವಣದಲಿ ಕುಡಿಕುಡಿದು ಪದವಿಯ ಪಡೆವುದೀ ಲೋಕ ೧೬
ಶ್ರೀಮದಮರಾಧೀಶ ನುತಗುಣ
ತಾಮರಸಪದ ವಿಪುಳನಿರ್ಮಳ
ನಾಮನನುಪಮ ನಿಖಿಳಯತಿಪತಿದಿವಿಜವಂದಿತನು
ರಾಮನೂರ್ಜಿತನಾಮ ಸುಧೆಯಾ
ರಾಮನಾಹವಭೀಮ ರಘುಕುಲ
ರಾಮ ಪಾಲಿಸುವೊಲಿದು ಗದುಗಿನ ವೀರನಾರಯಣ ೧೭
ಅರಸ ವೈಶಂಪಾಯನಗೆ ನಿಜ
ಕರವ ಮುಗಿದು ಸುವರ್ಣವಸ್ತ್ರಾ
ಭರಣ ಗೋವ್ರಜ ಭೂಮಿ ಕನ್ಯಾದಾನ ಮಣಿಗಣದಿ
ಹಿರಿದು ಪರಿಯಲಿ ಮನದಣಿವವೋ
ಲುರುತರದ ದ್ರವ್ಯಾದಿಗಳ ಭೂ
ಸುರರಿಗಿತ್ತನು ರಾಯ ಜನಮೇಜಯಮಹೀಪಾಲ ೧೮
ಸರ್ಪಯಾಗದೊಳಾದ ಕರ್ಮದ
ದರ್ಪವನು ಕೆಡೆಯೊದೆದು ಬೆಳಗಿದ
ನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ
ತಪ್ಪದೀ ಭಾರತವ ಕೇಳ್ದಂ
ಗಪ್ಪುದಮರಸ್ತ್ರೀಕದಂಬದೊ
ಳೊಪ್ಪು ವಿಂದ್ರನ ಪದವಿಯೆಂದನು ಸೂತ ಕೈಮುಗಿದು ೧೯
ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ೨೦
*ಭದ್ರಂ ಶುಭಂ ಮಂಗಳಂ*
ಸಂಕ್ಷಿಪ್ತ ಭಾವ
Lrphks Kolar
ಪಾಂಡವಜೀವಿ ಶ್ರೀಹರಿಯೆಂಬುದನ್ನು ಧರ್ಮಜನ ಪಟ್ಟಾಭಿಷೇಕದ ತನಕ ಇದ್ದು ತೋರಿಸಿದ ಶ್ರೀ ಕೃಷ್ಣ.
ಹಿಮಗಿರಿಯಿಂದ ಸಾಗರದವರೆಗೆ, ಗ್ರಾಮಗಳಿಂದ ಪಟ್ಟಣಗಳವರೆಗಿನ ಪ್ರಜೆಗಳು ಹಸ್ತಿನಾಪುರದ ಬೀದಿಗಳಲ್ಲಿ ನೆರೆದರು. ಯಾವುದೇ ಬೇಧವಿಲ್ಲದೆ ಎಲ್ಲರೂ ಬಂದರು. ಚ್ಯವನ, ಮುದ್ಗಲ, ಕಣ್ವ, ಕಠ, ಭಾರ್ಗವರಾದಿಯಾಗಿ ಎಲ್ಲ ಋಷಿಗಳೂ ಬಂದು ಸೇರಿದರು. ವಿವಿಧ ಭಾಗಗಳ ಮನ್ನೆಯರು, ಸಾಮಂತರಾಜರು ಬಂದರು. ವ್ಯಾಸ, ನಾರದ ಮೊದಲಾದ ಈ ಸಮಸ್ತ ಬಳಗ ಕೃಷ್ಣನನ್ನು ಮುಂದಿಟ್ಟುಕೊಂಡು ಧರ್ಮರಾಜನನ್ನು ಪಟ್ಟಾಭಿಷೇಕಕ್ಕೆ ಒಪ್ಪಿಸಿದರು. ಶುಭ ಮುಹೂರ್ತದಲ್ಲಿ ಮಂಗಳ ವಸ್ತುಗಳನ್ನು ತರಿಸಿ ವೇದಮಂತ್ರಗಳೊಂದಿಗೆ ಧರ್ಮಜನಿಗೆ ಪಟ್ಟಾಭಿಷೇಕ ನೆರವೇರಿಸಿದರು. ಅಡ್ಡ ಬಂದ ಬಾಷ್ಕಳನನ್ನು ನಿವಾರಿಸಿ ಧರ್ಮಜನನ್ನು ಸಂತೈಸಿದರು.
ಹಿರಿಯರಸ ಧರ್ಮಜನಾದನು. ಭೀಮ ಯುವರಾಜನಾಗಿಯೂ, ಧನಂಜಯನು ಸೇನಾಪತಿಯಾಗಿಯೂ, ಯಮಳರು, ವಿದುರರು ಹಿರಿಯ ಸಚಿವರಾದರು. ಯುಯುತ್ಸುವನ್ನೂ ಸೇರಿಸಿಕೊಂಡರು. ನಂತರ ಸುಯೋಧನನ ಮನೆಯನ್ನು ಧರ್ಮಜನೂ, ದುಶ್ಶಾಸನನ ಮನೆಯನ್ನು ಭೀಮನೂ, ಕರ್ಣನರಮನೆಯನ್ನು ಪಾರ್ಥನೂ ಹೊಕ್ಕರು. ಪ್ರತಿಯೊಬ್ಬರಿಗೂ ಅವರವರಿಗೆ ಉಚಿತವಾದ ನಿಲಯಗಳು ಸಿದ್ಧವಾದವು. ನಂತರ ಭೀಷ್ಮನಿದ್ದ ಸ್ಥಳಕ್ಕೆ ನಡೆದು ಆಶೀರ್ವಾದ ಪಡೆದು ರಾಜಧರ್ಮವನ್ನು ಕೇಳಿ ತಿಳಿದರು. ಭೂಭಾರವನ್ನು ಇಳಿಸುವ, ದುಷ್ಟಶಿಕ್ಷಣೆ, ಶಿಷ್ಟರಕ್ಷಣೆ ಮಾಡಬೇಕೆಂಬ ತನ್ನ ಸಂಕಲ್ಪ ನೆರವೇರಿತೆಂದು ಶ್ರೀ ಕೃಷ್ಣನು ಎಲ್ಲರನ್ನೂ ಹರಸಿ ಅಲ್ಲಿಂದ ತನ್ನ ಮನೆಗೆ ಪಯಣ ಕೈಗೊಂಡನು.
ಸಮಸ್ತ ಕಥೆಯನ್ನೂ ಕೇಳಿದ ಜನಮೇಜಯರಾಯನು ಸಕಲರನ್ನೂ ಗೋದಾನ, ಸುವರ್ಣ, ಭೂಮಿ, ವಸ್ತ್ರಾಬರಣ ಮೊದಲಾದ ದಾನ ಧರ್ಮಗಳಿಂದ ತೃಪ್ತಿಪಡಿಸಿದನು. ಸರ್ಪಯಾಗದಲ್ಲಿ ಆದ ಕರ್ಮದ ದರ್ಪವು ಕಳೆದು ರವಿಯಂತೆ ಬೆಳಗಿದನು.
ಕುಮಾರವ್ಯಾಸನ ಸೂಕ್ತಿಸುಧಾರಸವನ್ನು ಕೇಳಿದವರಿಗೆ ಸಕಲ ಪದವಿಗಳು ದೊರೆಯುವುವು. ಈ ಕುಮಾರವ್ಯಾಸ ಭಾರತದ ಒಂದು ಅಕ್ಷರವನ್ನು ಆದರಿಸಿ ಕೇಳಿದವರಿಗೆ ವೇದ ಪಾರಾಯಣದ ಫಲ, ಗಂಗಾದಿ ತೀರ್ಥಸ್ನಾನಗಳ ಫಲ, ವಿವಿಧ ತಪಸ್ಸಿನ ಫಲಗಳು, ಭೂದಾನ, ಕನ್ಯಾದಾನಗಳ ಫಲಗಳು ಸಿದ್ಧಿಸುವುವು.
*ಶ್ರೀ ಕೃಷ್ಣಾರ್ಪಣ ಮಸ್ತು*
*ಭದ್ರಂ ಶುಭಂ ಮಂಗಳಂ*
ಕಾಮೆಂಟ್ಗಳು