ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಘುನಾಥ ರಾವ್


 ಎಂ‌. ಎಸ್. ರಘುನಾಥ ರಾವ್ 


ಎಂ‌. ಎಸ್. ರಘುನಾಥ ರಾವ್ ಕನ್ನಡ ಸಾಹಿತ್ಯ ಮುದ್ರಣಲೋಕದಲ್ಲಿ ಐದು ದಶಕಗಳಿಗೂ ಮೀರಿದ ಪ್ರಖ್ಯಾತ ಹೆಸರು. 

ಎಂ‌. ಎಸ್. ರಘುನಾಥ ರಾವ್ ಅವರು  1944ರ ಜೂನ್ 15ರಂದು ಜನಿಸಿದರು.  ತಂದೆ ಮಂಕುಡೆ ಶಂಕರನಾರಾಯಣ ರಾವ್.  ತಾಯಿ ಕಾವೇರಮ್ಮ. ಪ್ರಾಥಮಿಕ ಶಿಕ್ಷಣವನ್ನು ಕಲ್ಲಡ್ಕದಲ್ಲೂ ಪ್ರೌಢ ಶಿಕ್ಷಣವನ್ನು ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲೂ ಮುಗಿ‌ಸಿದ ಅವರಿಗೆ ಮುಂದೆ ಓದಿಗೆ ಕಾಸಿಲ್ಲದಿದ್ದಾಗ ಕಲಿಕೆಯ ಆಸೆ ಮುರುಟಿತು. ಎಲ್ಲೋ ಕೆಲಸಕ್ಕೆ ಸೇರಿಕೊಂಡು ಬದುಕನ್ನು ರೂಪಿಸುವುದು ಇದ್ದ ಒಂದೇ ಒಂದು ಆಯ್ಕೆ. 

ರಘುನಾಥ ರಾವ್ ಅವರು ಬಂಧುಗಳದಾಗಿದ್ದ ಆದರ್ಶ ಪ್ರೆಸ್‍ನಲ್ಲಿ ಕೆಲಸಕ್ಕೆ ಸೇರಿ ಒಂದು ವರುಷದ ನಂತರ ಕೇವಲ 20 ರೂಪಾಯಿಯ ಬಂಡವಾಳದೊಂದಿಗೆ  ಬಾಡಿಗೆಗೆ ಸಣ್ಣ ಅಂಗಡಿ ಪಡೆದು 1962ರಲ್ಲಿ  ರಫ್ ಪುಸ್ತಕ ಮತ್ತು ಬುಕ್ ಬೈಂಡಿಂಗ್ ವ್ಯವಹಾರ ಪ್ರಾರಂಭಿಸಿದರು. ಶುಭ ಮುಹೂರ್ತದಲ್ಲಿ ಕನಸಿನ ಉದ್ಯಮಕ್ಕೆ ಶ್ರೀಕಾರ ಹಾಕಿದರು.  ರಫ್ ಪುಸ್ತಕ ನೋಟವು ಮಕ್ಕಳ ಮೇಲೆ ಪರಿಣಾಮ ಬೀರಿತು. ಕೊನೆಕೊನೆಗೆ ಬರೆಯುವ ಹೊಸ ಪುಸ್ತಕಗಳಿಂದಲೇ ಹಾಳೆಗಳನ್ನು ಕಿತ್ತು ರಫ್ ಪುಸ್ತಕ ಮಾರ್ಪಡಿ‌ಸುವ ಮಟ್ಟಕ್ಕೆ ಈ ಕ್ರೇಜ್ ಬೆಳೆಯಿತು. ನಿತ್ಯ ಮನೆಯಲ್ಲಿ ಪುಸ್ತಕದ್ದೇ ಭರಾಟೆ.  ನಂತರ ರಬ್ಬರ್ ಸ್ಟಾಂಪ್ ತಯಾರಿಕೆ, ಎಕ್ಸರ್ಸೈಜ್ ಪುಸ್ತಕ ಹೀಗೆ ಒಂದೊಂದೇ ಸೇರಿಕೊಂಡವು.  ಎರಡೂವರೆ ವರ್ಷಗಳ ನಂತರ ಚಿಕ್ಕ ಮುದ್ರಣ ಯಂತ್ರ ಸೀಸದ ಅಕ್ಷರ ಖರೀದಿಸಿ ಶೋಭಾ ಪ್ರೆಸ್ ಆರಂಭವಾಯಿತು. ನಂತರ 1975-76ರಲ್ಲಿ ಇದು 'ರಾಜೇಶ್ ಪ್ರೆಸ್' ಎಂದು ಮರುನಾಮಕರಣಗೊಂಡಿತು. 

ಸದಾ ನಾಳಿನ ಬಗೆಗೆ ಯೋಜಿಸುತ್ತಾ , ಚಲನಶೀಲವಾದ ಸಮಕಾಲೀನ ಜಗತ್ತಿನಲ್ಲಿ, ನಿಂತಲ್ಲಿ ನಿಲ್ಲಬೇಕಾದರೂ ಓಡುತ್ತಲೇ ಇರಬೇಕೆಂದು ನಂಬಿ ನಡೆಯುವ ಪ್ರವೃತ್ತಿ, ಆತ್ಮವಿಶ್ವಾಸ, ಕಾರ್ಯಶ್ರದ್ಧೆ ಮತ್ತು ಧೈರ್ಯ ಬಂಡವಾಳವಾಗಿದ್ದರೆ ಯಾವ ಕ್ಷೇತ್ರದಲ್ಲೂ ಯಶಸ್ಸು ನಿಶ್ಚಿತ ಎಂಬ ನಿಲುಮೆ ರಘುನಾಥ ರಾವ್ ಅವರದ್ದು . ಇವರು ಸ್ಥಾಪಿಸಿದ ಮುದ್ರಣಾಲಯ ಪುತ್ತೂರು ತಾಲೂಕಿನಲ್ಲಿ ಪ್ರಪ್ರಥಮವಾಗಿ   ಕಂಪ್ಯೂಟರೀಕೃತ ಮುದ್ರಣಾಲಯ ಮತ್ತು  ದ.ಕ ಜಿಲ್ಲೆಯಲ್ಲಿ 5ನೇ ಮುದ್ರಣಾಲಯವಾಗಿತ್ತು.

ರಘುನಾಥರಾಯರಿಗೆ ಪುತ್ತೂರಿನ ಹಿರಿಯರಾಗಿದ್ದ ಉರಿಮಜಲು ರಾಮಭಟ್, ಹೆಗ್ಗೋಡಿನ 'ನೀನಾಸಂ'ನ ಕೆ.ವಿ. ಸುಬ್ಬಣ್ಣ, ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬೋಳಂತಕೋಡಿ ಈಶ್ವರ ಭಟ್ , ಪ್ರೊ. ವಿ.ಬಿ.  ಮೊಳೆಯಾರ್ ಮುಂತಾದ ಮಹನೀಯರು ಬದುಕು ಕಟ್ಟಲು ನೆರವಾದವರು. ಸವಣೂರಿನ ಸೀತಾರಾಮ ರೈ, ಮಂಗಳೂರು ವಿಶ್ವವಿದ್ಯಾನಿಲಯ ಡಾ.ಕೆ ಚಿನ್ನಪ್ಪ ಗೌಡ ಮಡಿಕೇರಿಯ ಉಳ್ಳಿಯಡ  ಎಂ. ಪೂವಯ್ಯ, ಪತ್ರಕರ್ತ ವಿ.ಬಿ. ಅರ್ತಿಕಜೆ .ಪ್ರೊ . ಹರಿನಾರಾಯಣ ಮಾಡಾವು, ಮೊದಲಾದವರು ಸಹಕಾರ ನೀಡಿದರು.

ಶಿವರಾಮ ಕಾರಂತರಿಂದ  "ನೀನೂ ಚೆನ್ನಾಗಿಯೇ ಪುಸ್ತಕ ಮುದ್ರಿಸುತ್ತೀಯ..", ಹಾ.ಮಾ.ನಾಯಕರಿಂದ "ಕೆಲವು ಮುದ್ರಣಾಲಯ ಗಳಲ್ಲಿ ಮುದ್ರಿಸಿದ ಪುಸ್ತಕ ಗಳನ್ನು‌ ಮುಟ್ಟಿದರೆ ಕೈ ತೊಳೆಯಬೇಕು. ರಾಜೇಶ್ ಪ್ರೆಸ್ನಲ್ಲಿ ಮುದ್ರಿಸಿದ ಪುಸ್ತಕಗಳನ್ನು ಮುಟ್ಟುವ ಮೊದಲು ಕೈ‌ತೊಳೆದುಕೊಳ್ಳಬೇಕು"  ಎಂಬ ಪ್ರಶಂಸೆಗಳು ಸಂದಿವೆಯೆಂದರೆ ರಘುನಾಥರಾಯರ ಶ್ರದ್ಧೆ ಮತ್ತು ಕಾರ್ಯಕೌಶಲ್ಯದ ಅರಿವಾದೀತು. ನೀನಾಸಂ ಕೆ. ವಿ. ಅಕ್ಷರ, ಡಾ. ಕೆ. ಚಿನ್ನಪ್ಪ ಗೌಡ, ಉರಿಮಜಲು ರಾಮ ಭಟ್, ಎಸ್. ಗೋಪಾಲಕೃಷ್ಣ ಶಗ್ರಿತ್ತಾಯ, ದಿನೇಶ್ ಹೊಳ್ಳ ಮುಂತಾದ ಅನೇಕ ಮಹನೀಯರು ತಾವು ರಘುನಾಥ ರಾಯರಿಂದ ಪಡೆದ ಮುದ್ರಣ ಸೇವೆ ಮತ್ತು ಅವರ ಮಾನವೀಯ ಮುಖಗಳ ಬಗ್ಗೆ ವಿಸ್ತೃತವಾಗಿ ಬರಹ ಮುಖೇನ ಮೆಚ್ಚುಗೆ ಹರಿಸಿದ್ದಾರೆ.

ರಘುನಾಥರಾಯರು 'ಉತ್ಥಾನ' ಪತ್ರಿಕೆಯ ಸಂಪಾದಕರೂ, ಸಾಹಿತಿಯೂ ಆಗಿದ್ದ, ಶಿವರಾಂ ಅವರಿಗೆ ತಮ್ಮ ಮನೆಯಲ್ಲೇ ಬರೆಯಲು ಆಶ್ರಯ ನೀಡಿ ಬರೆಯಲು ವ್ಯವಸ್ಥೆ ಮಾಡಿಕೊಟ್ಟವರು.

ರಘುನಾಥರಾಯರು ಕೇವಲ ತಮ್ಮ ವ್ಯವಹಾರಕ್ಕೇ ಸೀಮಿತವಾಗಿರದೇ ಪುತ್ತೂರು ಕೈಗಾರಿಕಾ ಸಂಘ, ಕುಶಲ ಹಾಸ್ಯ ಸಂಘ ಮುತಾದುವುಗಳನ್ನು ಪ್ರಾರಂಭಿಸಿದರು.  ಅವರು ರೋಟರಿ ಅಂತಹ ಸಂಸ್ಥೆಗಳ ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡವರು.

ರಘುನಾಥರಾಯರ ಮುದ್ರಣಾಲಯದಲ್ಲಿ ಮಹತ್ವದ ಸಾಹಿತ್ಯ ಸಂಪುಟಗಳು ಮುದ್ರಿತ ವಾಗಿವೆ. ಪುತ್ತೂರಿನ ಕರ್ನಾಟಕ ಸಂಘ, ವಿಶ್ವ ಕನ್ನಡ ಸಮ್ಮೇಳನ, ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ತುಳು ಸಮ್ಮೇಳನ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರ‌ಸಾರಾಂಗ ಹೀಗೆ ಎಲ್ಲ ಸಂಸ್ಥೆಗಳೂ ಇಲ್ಲಿನ ಅಚ್ಚುಕಟ್ಟು ಮುದ್ರಣ ಸೇವೆ ಪಡೆದುಕೊಂಡಿವೆ.  

ಅಚ್ಚುಕಟ್ಟುತನ ಮತ್ತು ಸಮಯಪ್ರಜ್ಞೆ ರಘುನಾಥರಾಯರು ನಿಷ್ಠೆ ಯಿಂದ ಪಾಲಿಸುತ್ತಾ ಬಂದ ಕಾಯಕ ತತ್ವಗಳು. ‘ಅಕ್ಷರ' ಎಂಬ ಅವರ‌ ಮನೆಯ ಹೆಸರು ಮನೆಯ ಆವರಣಕ್ಕೆ ಅನುರೂಪವೆಂಬಂತೆ ಒಪ್ಪುತ್ತದೆ. 'ಅಕ್ಷರ'ದ್ದೇ ಅಲ್ಲಿ ಕಾರುಬಾರು. ಮಾತಿಗೆ ಅಲ್ಲಿ ತುಸುವೇ ಅವಕಾಶ. ಹೆಚ್ಚಾಗಿ ರಘುನಾಥ ರಾಯರು ತಗ್ಗಿದ ಸ್ವರದಲ್ಲೇ ಮಾತನಾಡುವುದು.ಆದರೆ ಮಾತಿನ ಅರ್ಥ ಏರುಗತಿಯಲ್ಲೇ ಇರುತ್ತದೆ. ಮಾತು ಕಡಿಮೆ ಇದ್ದರೂ ಅರ್ಥ ತೀಕ್ಷ್ಣ. ಉದ್ದೇಶ ಸ್ಪಷ್ಟ.
ಅವರು ವೈಯಕ್ತಿಕವಾದುದನ್ನು ಉದ್ಯಮದ ಜೊತೆ ತಳುಕು ಹಾಕದೆ ವ್ಯವಹಾರದ ಸೂಕ್ಷ್ಮಗಳನ್ನು ಅರಿತು ಉದ್ಯಮದ ಯಶಸ್ಸಿಗೆ ಬೇಕಾದ ತತ್ವಗಳನ್ನು ಅನ್ವಯಿಸಿ ತಮ್ಮದೇ ಆದ ಬದುಕಿನ ದಾರಿಯನ್ನು ಕಂಡುಕೊಂಡವರು, ಕಟ್ಟಿಕೊಂಡವರು. ವ್ಯವಹಾರದ ಮೊದಲು ನಿಮಗೆ ಭರವಸೆ,  ವ್ಯವಹಾರದ ನಡುವೆ ನಿಮಗೆ ವಾಸ್ತವ , ವ್ಯವಹಾರದ ಕೊನೆಗೆ ನಿಮಗೆ‌ ತೃಪ್ತಿ ಇದು ಅವರ ವ್ಯವಹಾರದ ಸೂತ್ರ.

1962ರಲ್ಲಿ ಮುದ್ರಣ ರಂಗಕ್ಕೆ ಧುಮುಕಿದ ಎಂ ಎಸ್ ರಘುನಾಥ ರಾಯರು ಇಂದು ಕರ್ನಾಟಕವೇ ಹೆಮ್ಮೆ ಪಡುವ ಮುದ್ರಕರಾಗಿ ಬೆಳೆದಿದ್ದಾರೆ.  ಇದು ಕನ್ನಡ ಸಾಹಿತ್ಯಲೋಕಕ್ಕೆ ಸಂದ ಲಾಭವೂ ಆಗಿದೆ ಎಂಬುದನ್ನು ನಾಡಿನ ಹಿರಿಯರಿಂದ ನಾವು ಕೇಳುತ್ತಾ ಮತ್ತು ಅಲ್ಲಿಂದ ಹೊರಬಂದ ಕಾರ್ಯದಿಂದ ನೋಡುತ್ತಾ ಬಂದಿದ್ದೇವೆ.

ಎಂ.ಎಸ್.ರಘುನಾಥ ರಾವ್ ಅವರ ವೃತ್ತಿ ಬದುಕಿನ ಅನುಭವ ಗಾಥೆ 'ಅಕ್ಷರಯಾನ' ಕೃತಿ 2020ರ ವರ್ಷದಲ್ಲಿ ಬಿಡುಗಡೆಯಾಯಿತು.  ಆ ಸಂದರ್ಭದಲ್ಲಿ "ಜೀವನ ಪಾಠಕ್ಕಿಂತ ಮಿಗಿಲಾದ ಪಾಠ ಬೇರೊಂದಿಲ್ಲ. ಓರ್ವನ ಅನುಭವ ಇನ್ನೊಬ್ಬನಿಗೆ ಕೈದೀವಿಗೆಯಾಗುತ್ತದೆ. ಶ್ರಮದ ಮೂಲಕ ಬದುಕನ್ನು ಕಟ್ಟುವುದು ಹೇಳಿದಷ್ಟು ಸುಲಭವಲ್ಲ. ಈ ರೀತಿ ಬೆಳೆದ ರಘುನಾಥ ರಾಯರು ವೃತ್ತಿ ಬದ್ಧತೆಯಿಂದ ಮುದ್ರಣ ಕ್ಷೇತ್ರಕ್ಕೆ ಗೌರವ ತಂದಿದ್ದಾರೆ. ರಾಜೇಶ್ ಪವರ್ ಪ್ರೆಸ್ ಪುತ್ತೂರಿನ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ” ಎಂದು ನುಡಿದ ಶೈಕ್ಷಣಿಕ ಲೋಕದ ಹಿರಿಯರಾದ ಸವಣೂರು ಸೀತಾರಾಮ ರೈ ಅವರ ಮಾತು ನಿರಂತರ ಅಣುರಣಿಸುತ್ತ ಸಾಗಿದೆ.

On the birthday of great name in printing M. S. Raghunatha Rao Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ