ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಂದೂ ವಿಶ್ವನಾಥ್


ಇಂದೂ ವಿಶ್ವನಾಥ್


ಇಂದೂ ವಿಶ್ವನಾಥ್ ಕನ್ನಡ ಸುಗಮ ಸಂಗೀತಲೋಕದ ಮಹತ್ವದ ಹಿನ್ನಲೆ ಗಾಯಕಿ.  ಅವರು ಕನ್ನಡ ಚಲನ ಚಿತ್ರಸಂಗೀತದ ಪ್ರಥಮ ಸಂಗೀತ ನಿರ್ದೇಶಕಿ. ಅನೇಕ ಚಲನಚಿತ್ರ, ಕಿರುತೆರೆಯ ಕಾರ್ಯಕ್ರಮಗಳು ಮತ್ತು ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳ ಗಾಯಕಿ ಮತ್ತು ಸಂಗೀತ ಸಂಯೋಜಕಿ.  ಮಹತ್ವದ ಸಂಘಟನಾ ಚತುರೆ.  ಕ್ರೀಡೆ ಮತ್ತು ಮನೋಲ್ಲಾಸ ಉತ್ಸಾಹ ಚಟುವಟಿಕೆಗಳಲ್ಲಿ ವೆಸ್ಟನ್‌ ಮ್ಯೂಸಿಕ್‌ ಬದಲಿಗೆ ನಮ್ಮಕನ್ನಡ ಕವಿಗಳ ಹಾಡುಗಳ ಸೊಗಡನ್ನು ತಂದಂತಹ ಪ್ರಯೋಗಶೀಲೆ. 

ಜೂನ್ 23 ಇಂದೂ ವಿಶ್ವನಾಥ್ ಅವರ ಜನ್ಮದಿನ.  ತಂದೆ ರಾಮಣ್ಣ.  ತಾಯಿ ಶಾರದಾಂಬ.  ಓದಿ ಬೆಳೆದದ್ದು ಚಿಕ್ಕಮಗಳೂರಿನಲ್ಲಿ. ಬಾಲ್ಯದಿಂದಲೂ ಸಂಗೀತದಲ್ಲಿ ಅಪಾರ ಆಸಕ್ತಿ. ಶಾಲಾ ದಿನಗಳಲ್ಲಿ ಹತ್ತು ಹಲವಾರು ಸ್ಫರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತ ಬಂದರು. ಬಿ.ಕಾಂ ಪದವಿ ಪಡೆದ ನಂತರ ವಿಶ್ವನಾಥ್‌ರನ್ನು ಮದುವೆಯಾಗಿ 1975ರಲ್ಲಿ ಬೆಂಗಳೂರಿಗೆ ಬಂದರು.

ಇಂದೂ ವಿಶ್ವನಾಥ್ ಅವರು ವಿದ್ವಾನ್ ಮುತ್ತಾಚಾರ್‌ ಅವರ ಬಳಿ ಸಂಗೀತ ಕಲಿತು, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಐದು ವರ್ಷಗಳ ಕಾಲ ಹಿಂದೂಸ್ಥಾನಿ ಗಾಯನವನ್ನು ಅಭ್ಯಾಸ ಮಾಡಿದರು. ಆದರ್ಶ ಫಿಲಂ ಇನ್‌ಸ್ಟ್ರಿಟ್ಯೂಟ್‌ನಲಿ ಹಿನ್ನೆಲೆ ಗಾಯಕಿ ಡಿಪ್ಲೊಮಾ ತರಬೇತಿ ಪಡೆದರು. ಆಕಾಶವಾಣಿಯಲ್ಲಿ ಆಡಿಷನ್‌ ನಡೆದು 'ಎ' ಗ್ರೇಡ್‌ ಸಿಂಗರ್‌ ಹಾಗೂ 'ಎ' ಗ್ರೇಡ್‌ ಸಂಗೀತ ನಿರ್ದೇಶಕಿಯಾಗಿ ಆಯ್ಕೆಯಾದರು. "ಆಕಾಶವಾಣಿಯಲ್ಲಿ ಹೆಸರಾಗಿದ್ದ ಹಿರಿಯ ಗಾಯಕ ಎಚ್‌.ಕೆ. ನಾರಾಯಣ್‌ ನನ್ನ ಗುರುಗಳು. ಅವರ ಮಾರ್ಗದರ್ಶನ, ಉತ್ತೇಜನ, ಸ್ಫೂರ್ತಿ ನನ್ನ ಇಂದಿನ ಏಳಿಗೆಗೆ ಮೂಲಕಾರಣ.  ಆಕಾಶವಾಣಿ
ಹಲವು ಉತ್ತಮ ವೇದಿಕೆಗಳನ್ನು ನೀಡಿತು. ಅಲ್ಲಿಂದಲೇ ನನ್ನ ಬೆಳವಣಿಗೆ, ಅಲ್ಲಿಂದಲೇ ನನ್ನ ಏಳಿಗೆ" ಎನ್ನುತ್ತಾರೆ ಇಂದೂ ವಿಶ್ವನಾಥ್.   ಆಕಾಶವಾಣಿಯಲ್ಲಿ ಹಲವಾರು ಮಹತ್ವದ ಸಂಯೋಜನೆ ಮಾಡಿರುವ ಇಂದೂ, ಅಲ್ಲಿನ ಇತ್ತೀಚಿನ ಪ್ರಸಿದ್ಧ 'ಬಾನುಲಿ ಕಲಿಗಳು' ಸರಣಿಗೂ ಸಂಗೀತ ಸಂಯೋಜಿಸಿದ್ದರು. 

ಇಂದೂ ವಿಶ್ವನಾಥ್ ಅನೇಕ ಸುಗಮ ಸಂಗೀತ ಗೀತೆಗಳ ಮೂಲಕ ಹೆಸರಾಗಿದ್ದಾರೆ.  ಅವರ ಹಲವಾರು ಸುಪ್ರಸಿದ್ಧ ಹಾಡುಗಳು ಇಂದಿಗೂ ಪ್ರಸಿದ್ಧ. ಮುಂಜಾನೆಯ ರೇಡಿಯೋದಲ್ಲಿ ಸಂಜೆಯ ಟಿ.ವಿ.ಯಲ್ಲಿ ಇಂದೂ ವಿಶ್ವನಾಥ್‌ ತಮ್ಮದೇ ಶೈಲಿಯ ಹಾಡುಗಳಿಂದ ಕಾಣಿಸುತ್ತಿದ್ದರು.

ಇಂದೂ ವಿಶ್ವನಾಥ್ ಹಲವಾರು ಪ್ರಥಮಗಳಿಗೆ ಸಾಕ್ಷಿಯಾಗಿದ್ದಾರೆ. ಕನ್ನಡದ ಪ್ರಪ್ರಥಮ ಸಂಗೀತ ನಿರ್ದೇಶಕಿ ಎಂಬ ಹೆಗ್ಗಳಿಕೆ ಇವರದು.  ಅವರು 'ವೈಶಾಖದ ದಿನಗಳು' ಚಲನಚಿತ್ರಕ್ಕೆ ಸಂಗೀತ ನಿರ್ದೇಶಕಿಯಾಗಿ ಉತ್ತಮ ರಾಗಸಂಯೋಜನೆ ನೀಡಿ ಜನಪ್ರಿಯರಾದರು. ರತ್ನಮಾಲಾ ಪ್ರಕಾಶ್‌, ರೋಹಿಣಿ ಮೋಹನ್ ಅವರೊಂದಿಗೆ ಜಪಾನ್‌ ಕನ್ನಡ ಸಂಘ'ಕ್ಕೆ ತೆರಳಿದ ಪ್ರಥಮ ಸುಗಮ ಸಂಗೀತ ತಂಡ  ಇವರದಾಗಿತ್ತು. ಇದಲ್ಲದೆ ವಿಶ್ವದ ಅನೇಕ ಕಡೆ ಇವರ ಸಂಗೀತ ಹರಿದಿದೆ. 

ಇಂದೂ ವಿಶ್ವನಾಥ್ 100ಕ್ಕೂ ಹೆಚ್ಚು ಭಾವಗೀತೆಗಳ ಕ್ಯಾಸೆಟ್‌ಗಳಲ್ಲಿ ಹಾಡುಗಾರಿಕೆ, 50ಕ್ಕೂ ಹೆಚ್ಚು ಕ್ಯಾಸೆಟ್‌ಗಳಿಗೆ ಸಂಗೀತ ಸಂಯೋಜನೆ, ನಿರ್ದೇಶನ ನೀಡಿದ್ದಾರೆ. ಇವರ ಸಂಗೀತ ನಿರ್ದೇಶನದಲ್ಲಿ ಎಸ್‌.ಪಿ.ಬಿ., ಎಸ್‌. ಜಾನಕಿ, ವಾಣಿ ಜಯರಾಂ, ಕವಿತಾ ಕೃಷ್ಣಮೂರ್ತಿ, ಮನು ಹೀಗೆ ಹಲವು ಸುಪ್ರಸಿದ್ದರು ಹಾಡಿದ್ದಾರೆ.  80 ಜಿಂಗಲ್ಸ್‌, ಹಲವಾರು ಟಿ.ವಿ. ಸೀರಿಯಲ್ಲ್‌, ಬ್ಯಾಲೆ ನೃತ್ಯ, 30ಕ್ಕೂ ಡಾಕ್ಯುಮೆಂಟರಿ ಚಿತ್ರ ಮುಂತಾದವುಗಳಿಗೆ ಸಂಯೋಜನೆ ಹಾಗೂ ಗಾಯನ ನೀಡಿದ್ದಾರೆ. ಅವರು ರಾಗಗಳ ಆಧಾರಿತ 'ರಾಗವಾಹಿನಿ' ಸೀರಿಯಲ್‌ನ ನಿರ್ದೆಶಕಿ ಮತ್ತು ನಿರ್ಮಾಪಕಿ ಆಗಿದ್ದರು. ಉದಯ ಟಿವಿ ಗೀತಾಂಜಲಿ ಹಾಗೂ ದೂರದರ್ಶನದ ಶೃಂಗಾರ ತರಂಗ... ಸಂಗೀತ ಧಾರಾವಾಹಿಗಳಿಗೆ ದುಡಿದಿದ್ದರು. 'ಇಂದೂ ರೋಹಿಣಿ ಸುಗಮಸಂಗೀತ ಟ್ರಸ್ಟ್‌'ನ ವತಿಯಿಂದ ಹಲವಾರು ಕಾರ್ಯಕ್ರಮ ನಡೆಸಿದ್ದಾರೆ. ಉಚಿತವಾಗಿ ಸಂಗೀತಾಸಕ್ತರಿಗೆ ವರ್ಕ್‌ಶಾಪ್‌ಗಳನ್ನು ನಡೆಸುತ್ತಾ ಬಂದಿದ್ದಾರೆ. ಮಕ್ಕಳಿಗೆ ಹಾಡುಗಳನ್ನು ಹೇಳಿಕೊಡುತ್ತಾರೆ. ಅಂಧರಿಗಾಗಿ ಚಾರಿಟಿ ಶೋ ನೀಡಿ, ಅವರುಗಳ ಬಾಳಿಗೂ ಬೆಳಕಾಗಿದ್ದಾರೆ. ಏರೋಬಿಕ್ಸ್‌ ಪ್ರೇಮಿಗಳಿಗಾಗಿ, ರಿಷಿ ಆಡಿಯೋಸ್‌ ಮೂಲಕ ಧ್ವನಿಸುರುಳಿ ಹಾಗೂ ವಿಡಿಯೋ ಚಿತ್ರೀಕರಣದ ಸಿಡಿ‌ ಮೂಡಿಸಿದ್ದಾರೆ. ಮಹಿಳಾ ತಂಡವೊಂದರ ಮುಖೇನ ಓಲ್ಡ್‌ ಹಿಟ್ಸ್‌ ಕೊಟ್ಟಿದ್ದಾರೆ. ಎನ್‌.ಆರ್‌.ಐ ಮಕ್ಕಳಿಗಾಗಿ ಕನ್ನಡ ಕಲಿ ನಲಿ, ಅರಳು ಮಲ್ಲಿಗೆ, ಸಾಯಿರಾಂ ವೈಭವ, ಅಭಿಸಾರಿಕೆ, ತಮ ನಿನ್ನದು, ಒಂದಿರುಳು ಬಂದೆ, ನಿರಂತರ, ನಮಗೆಲ್ಲಿ ನಲ್ಲ ನಾಳೆಯ ಚಿಂತೆ, ಗೊಮ್ಮಟ ಸ್ತುತಿ ಮೋಹಿಸುವ ಸಂಚಿ, ಜೀವನ್ಮುಕ್ತಿ, ಪುಟಾಣಿ ಪ್ರಪಂಚ, ಚಿಣ್ಣರ ಚಿಲಿಪಿಲಿ, 105 ವಚನಾಮೃತವರ್ಷಿಣಿ, ಮುದ್ದು ಬೆನಕನ ಭಜನೆಗಳು, ಹಾಡುತ ನಲಿ ಕನ್ನಡದ ಕಲಿ, ಡಾ. ವಿಜಯಾ ಬಾಳೇಕುಂದ್ರಿಯವರ ಶಿಶುಗೀತೆಗಳು ಮುಂತಾದವು ಇವರ ಪ್ರಸಿದ್ಧ ಸಂಯೋಜನೆಗಳಲ್ಲಿ ಸೇರಿವೆ ಡಾ. ಕಮಲಾಹಂಪನಾ ರಚಿಸಿರುವ ಗೀತೆಗಳ ಧ್ವನಿಸುರುಳಿಯನ್ನು ರಾಷ್ಟ್ರಪತಿ ಭವನದನಲ್ಲಿ ಬಿಡುಗಡೆಗೊಳಿಸಿದ್ದಾರೆ. 

ಇಂದೂ ವಿಶ್ವನಾಥ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Indu Vishwanath Madam 🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ