ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂತೋಷಕುಮಾರ ಮೆಹೆಂದಳೆ


 ಸಂತೋಷಕುಮಾರ ಮೆಹೆಂದಳೆ


ಸಂತೋಷಕುಮಾರ ಮೆಹೆಂದಳೆ ಕಾದಂಬರಿಕಾರರಾಗಿ, ಅಂಕಣಕಾರರಾಗಿ, ಕಥೆಗಾರರಾಗಿ, ವಿಜ್ಞಾನ ಬರಹಗಾರರಾಗಿ ಹೆಸರಾದವರು.

ಜುಲೈ 7 ಸಂತೋಷಕುಮಾರ ಮೆಹೆಂದಳೆ ಅವರ ಜನ್ಮದಿನ. ಉತ್ತರ ಕನ್ನಡ ಜಿಲ್ಲೆಯ ತೇರಗಾಂವ್ ಗ್ರಾಮ ಅವರ ಮೂಲ ಊರು.  ಯಂತ್ರ ನಕ್ಷಾ ವಿನ್ಯಾಸ ವಿಭಾಗದಲ್ಲಿ - ತಾಂತ್ರಿಕ ತರಬೇತಿ,  ಅರ್ಥ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮಾನವ ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ಸ್ನಾತಕೊತ್ತರ ಡಿಪ್ಲೋಮ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮ ಮುಂತಾದವು ಅವರ ಶೈಕ್ಷಣಿಕ ಸಾಧನೆಗಳಲ್ಲಿ ಸೇರಿವೆ. ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ಅವರ ಉದ್ಯೊಗ ನಡೆಯಿತು.

ಸಂತೋಷಕುಮಾರ ಮೆಹೆಂದಳೆ ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಹೀಗೆ ಎಲ್ಲ‌ ಸಾಹಿತ್ಯದ ಪ್ರಕಾರದಲ್ಲೂ ಬರೆಯುತ್ತಿದ್ದಾರೆ. ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಎಲ್ಲ ಪತ್ರಿಕೆಗಳ ವಿಶೇಷಾಂಕಗಳು,  ಅಕಾಡೆಮಿ ಹಾಗೂ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳ ಸಂಪಾದನಾ ಕೃತಿಗಳಲ್ಲಿ, ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಣೆಗಳಲ್ಲಿ ಇವರ ಬರಹಗಳು ನಿರಂತರವಾಗಿ ಮೂಡಿ ಬರುತ್ತಿವೆ.

ಸಂತೋಷಕುಮಾರ ಮೆಹೆಂದಳೆ ಅವರು ಕಥಾಯಾನ ಕಾರ್ಯಕ್ರಮ ನಿರ್ದೇಶಕರಾಗಿ ಅನೇಕ ರಾಜ್ಯಮಟ್ಟದ ಕಾರ್ಯಾಗಾರಗಳನ್ನು ಸಂಘಟಿಸಿದ್ದಾರೆ.  ಅನೇಕ ಸಾಹಿತ್ಯ ಕಮ್ಮಟಗಳಿಗೆ ಸಂಪನ್ಮೂಲ‌ ವ್ಯಕ್ತಿಯಾಗಿಯೂ  ಸೇವೆ ಸಲ್ಲಿಸಿದ್ದಾರೆ. ಅನೇಕ ಪ್ರತಿಷ್ಟಿತ ವೇದಿಕೆಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಸಂತೋಷಕುಮಾರ ಮೆಹೆಂದಳೆ ಅವರ
ಡಿಸೆಂಬರ್ 31,  ದಿಬ್ಬದ ಬಂಗಲೆ, ಎರಡನೆಯ ಹೆಜ್ಜೆ, ಕೆಂಪು ಚಕ್ರಗಳು, ಎಂಟೆಬೆ ಮುಂತಾದವು ಕರ್ಮವೀರದಲ್ಲಿ ಧಾರಾವಾಹಿಯಾಗಿ ಮೂಡಿವೆ.  ಸೂರ್ಯ ಗರ್ಭ,  ಮಹಾ ಯುದ್ಧ, ನಾನು ಅಘೋರಿಯಲ್ಲ, ಕೆಂಪು ತೀರ ಮುಂತಾದವು ತರಂಗದಲ್ಲಿ ಧಾರಾವಾಹಿಯಾಗಿವೆ. ಮಹಾ ಪತನ ಮಂಗಳ ಪತ್ರಿಕೆಯಲ್ಲಿ ಮೂಡಿದೆ. ಇವುಗಳು ಕೃತಿಯಾಗಿಯೂ ಮೂಡಿವೆ. ಕಾಶ್ಮೀರದಲ್ಲೊಂದು ಸಂಜೆ,  ಸುಪಾರಿ ಗಂಡಸರಿಗಾಗಿ, ಮಹಾಪತನ : ಸಯೋಧನನ ಆತ್ಮಕಥಾನಕ, ಅಘೋರಿಗಳ ಲೋಕದಲ್ಲಿ, ಯಾವ ಪ್ರೀತಿಯೂ ಅನೈತಿಕವಲ್ಲ, ಅವನು ಶಾಪಗ್ರಸ್ಥ ಗಂಧರ್ವ ಮುಂತಾದವು ಅವರ ಇತರ ಪ್ರಸಿದ್ಧ ಕಾದಂಬರಿಗಳು. ತಡವಾಗಿ ಬಿದ್ದ ಮಳೆ  ಕಥಾ ಸಂಕಲನ, ಇರೋಮ್ ಶರ್ಮಿಳಾ ಹಸಿವು ಗೆದ್ದ ಹುಡುಗಿ, ಕದಂಬರು ಇತಿಹಾಸ ಕೃತಿ, ಪ್ರಮೀಳೆಯರ ನಾಡಿನಲ್ಲಿ, ಕಾಶ್ಮೀರವೆಂಬ ಖಾಲಿ ಕಣಿವೆ (ಅಂಕಣ ಸಂಕಲನ), ಬೆನಾಲಿಮ್, ಮಂಗಳಮುಖಿಯರ ಸಂಗದಲ್ಲಿ,‍ ಅಬೊಟ್ಟಾಬಾದ್, ಪರಮಾಣು ಮತ್ತು ವಿದ್ಯುತ್, ವಿಜ್ಞಾನ ವಿಸ್ಮಯ, ಮೂರನೆಯ ಕಣ್ಣು ಮುಂತಾದವು ಇವರ ಇನ್ನಿತರ ಜನಪ್ರಿಯ ಕೃತಿಗಳಲ್ಲಿ ಸೇರಿವೆ.  ಇವರ ಬಹುತೇಕ ಕೃತಿಗಳು ಅನೇಕ ಮರುಮುದ್ರಣಗಳನ್ನು ಕಂಡು ಜನಪ್ರಿಯಗೊಂಡಿವೆ.

ಸಂತೋಷಕುಮಾರ ಮೆಹೆಂದಳೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಮುಂಬೈ ಕನ್ನಡ ಸಂಘ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾವಿದರು ಮತ್ತು ಲೇಖಕರ ಒಕ್ಕೂಟ ಸನ್ಮಾನ, ಡಾ. ಶಿವರಾಮ್ ಕಾರಂತ ಪ್ರಶಸ್ತಿ,  ಕರ್ನಾಟಕ ಭೂಷಣ ಪ್ರಶಸ್ತಿ, ಹಳಿಯಾಳ ವಿಶೇಷ ಸನ್ಮಾನ,  ನಾನು ಅಘೋರಿಯಲ್ಲ ಕೃತಿಗೆ ಅತ್ಯುತ್ತಮ ಜನಪ್ರಿಯ ಕಾದಂಬರಿ ಪ್ರಶಸ್ತಿ, ಹತ್ತಕ್ಕೂ ಹೆಚ್ಚು ರಾಜ್ಯ ಮಟ್ಟದ ದೀಪಾವಳಿ ವಿಶೇಷಾಂಕದ ಕಥಾ ಸ್ಪರ್ಧೆಗಳಲ್ಲಿ ಪ್ರಶಸ್ತಿ, ನರಸಮ್ಮ ಕೃಷ್ಣಮೂರ್ತಿ ಕಥಾ ಪ್ರಶಸ್ತಿ.ಡಾ. ಪಾಟೀಲ್ ಸ್ಮರಣಾರ್ಥ ಕಥಾ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ರಾಜ್ಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
Santoshkumar Mehandale 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ