ಮಂತ್ರಾಲಯ
ಮಂತ್ರಾಲಯಕೆ ಹೋಗೋಣ
ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಹಿಮೆಯಿಂದ ಪ್ರಸಿದ್ಧವಾದ ಪುಣ್ಯಕ್ಷೇತ್ರ. ಇದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿ ತಾಲ್ಲೂಕಿನಲ್ಲಿ ತುಂಗಭದ್ರ ನದಿ ದಡದಲ್ಲಿದೆ. ಮಂತ್ರಾಲಯಮ್ ರೋಡ್ ಸ್ಟೇಷನ್ ಎಂಬ ರೈಲು ನಿಲ್ದಾಣಕ್ಕೆ ಸುಮಾರು 15 ಕಿಮೀ ದೂರದಲ್ಲಿದೆ. ಮಂತ್ರಾಲಯಮ್ ರೋಡ್ ಸ್ಟೇಷನ್ಗೆ ಅಣುಮಂತ್ರಾಲಯ ಎಂಬ ಇನ್ನೊಂದು ಹೆಸರೂ ಇದೆ.
ಮಂತ್ರಾಲಯದಲ್ಲಿ ರಾಘವೇಂದ್ರಸ್ವಾಮಿಗಳ ಮಠ ಹಾಗೂ ಬೃಂದಾವನವಿದೆ. ರಾಘವೇಂದ್ರ ಗುರುಸಾರ್ವಭೌಮರು ಮಧ್ವಮತ ಸಂಪ್ರದಾಯವನ್ನು ಅವಲಂಬಿಸಿ ಸಶರೀರರಾಗಿ ಇಲ್ಲಿ ಕ್ರಿ.ಶ. 1671 ಶ್ರಾವಣ ಬಹುಳ ಬಿದಿಗೆ ಗುರುವಾರದಂದು ಬೃಂದಾವನಸ್ಥರಾದರು ಎನ್ನಲಾಗಿದೆ. ಇವರನ್ನು ಗುರುಸಾರ್ವಭೌಮರು, ರಾಯರು, ಮಂತ್ರಾಲಯ ಪ್ರಭುಗಳು ಎಂದೂ ಕರೆಯುತ್ತಾರೆ. ರಾಯರ ಬೃಂದಾವನದ ಎಡಗಡೆ ವಾದೀಂದ್ರರ ಬೃಂದಾವನವಿದೆ. ಮಠದ ಆವರಣದಲ್ಲಿ ಸುಧರ್ಮೇಂದ್ರ ತೀರ್ಥಸ್ವಾಮಿಗಳು, ಸುವೃತೀಂದ್ರ ತೀರ್ಥಸ್ವಾಮಿಗಳು ಮತ್ತು ಇತರ ಯತಿವರ್ಯರ ಬೃಂದಾವನಗಳೂ ಇವೆ. ರಾಘವೇಂದ್ರಸ್ವಾಮಿಗಳ ಬೃಂದಾವನದ ಎದುರಿಗೆ ವಾಯುದೇವರ ವಿಗ್ರಹವಿದೆ. ಮಠದ ಹೊರಗಡೆ ಎಡಭಾಗದಲ್ಲಿ ಮಂಚಾಲಾಂಬಿಕೆಯ ದೇವಸ್ಥಾನವಿದೆ. ಮಂಚಾಲಾಂಬಿಕೆ ದೇವಿ ಭವಾನಿಯ ಮತ್ತೊಂದು ಹೆಸರು.
ಪೌರಾಣಿಕ ಹಿನ್ನೆಲೆ : ಮಂತ್ರಾಲಯ ರಾಯರ ನೆಲಸುವಿಕೆಯಿಂದ ಪುಣ್ಯಕ್ಷೇತ್ರ ಎನಿಸಿದೆ. ಮೊದಲು ಇದಕ್ಕೆ ಮಂಚಾಲೆ ಎಂಬ ಹೆಸರಿತ್ತು. ಬಹುಶಃ ಇಲ್ಲಿಯ ಅಧಿದೇವತೆ ಮಂಚಾಲಾಂಬಿಕೆ (ಮಂತ್ರಾಲಯಾಂಬಿಕೆ) ಆದ್ದರಿಂದ ಈ ಹೆಸರು ಬಂದಿರಬಹುದು. ಈ ಪ್ರದೇಶ ಹಿಂದೆ ಹಿರಣ್ಯಕಶಿಪುವಿನ ರಾಜ್ಯವಾಗಿತ್ತೆಂದೂ ಇಲ್ಲಿರುವ ಮಂಚಾಲಾಂಬಿಕೆ ಆತನ ಕುಲದೇವತೆಯಾಗಿದ್ದಳೆಂದೂ ಪ್ರಹ್ಲಾದ ಇಲ್ಲಿ ತನ್ನ ಕುಲದೇವತೆಯನ್ನು ಪೂಜಿಸುತ್ತ ಯಜ್ಞ ನಡೆಸಿದನೆಂದೂ ಹೇಳಲಾಗಿದೆ.
ದ್ವಾಪರಯುಗದಲ್ಲಿ ಪಾಂಡವರು ಅಶ್ವಮೇಧಯಾಗ ಮಾಡುವಾಗ ಜೈತ್ರಯಾತ್ರೆ ಸಮಯದಲ್ಲಿ ಅರ್ಜುನನಿಗೂ ಅನುಸಾಲ್ವನಿಗೂ ಇದೇ ಸ್ಥಳದಲ್ಲಿ ಯುದ್ಧ ನಡೆಯಿತೆಂದೂ ಆಗ ಅನುಸಾಲ್ವನ ರಥ ಪ್ರಹ್ಲಾದ ಯಜ್ಞ ಮಾಡಿದ ಸ್ಥಳದಲ್ಲಿದ್ದುದರಿಂದ ಈತನನ್ನು ಸೋಲಿಸುವುದು ಅರ್ಜುನನಿಗೆ ಕಷ್ಟವಾಗಿ ಕೃಷ್ಣನ ಸೂಚನೆಯಂತೆ ಅರ್ಜುನ ರಥವನ್ನು ಹಿಂದಕ್ಕೆ ಸರಿಸಿದಾಗ ಅನುಸಾಲ್ವನ ರಥ ಕೂಡಾ ಮುಂದೆ ಬಂದು ಈತ ಸೋತುಹೋದನೆಂದೂ ಹೇಳಲಾಗಿದೆ. ಈ ಕಾರಣದಿಂದ ಇದು ವಿಜಯದ ಸ್ಥಾನವೆಂದು ಪ್ರಸಿದ್ದವಾಗಿದೆ.
ಐತಿಹಾಸಿಕ ಹಿನ್ನೆಲೆ
ಈ ಪ್ರದೇಶ 1792ರ ತನಕ ಮುಸಲ್ಮಾನ್ ಆಳರಸರ ವಶದಲ್ಲಿತ್ತು. ಮೊದಲನೆಯ ಮೈಸೂರು ಯುದ್ಧದ ತರುವಾಯ ಹೈದರಾಬಾದ್ ನಿಜಾಮರ ವಶಕ್ಕೆ ಬಂದಿತ್ತು. 1630ರ ಸುಮಾರಿನಲ್ಲಿ ಅಸದಿಲ್ಲೀಖಾನ್ ಈ ಪ್ರಾಂತ್ಯದ ನವಾಬನಾಗಿದ್ದ. ಈತನ ದಿವಾನ ವೆಂಕಣ್ಣಪಂಡಿತ ರಾಯರ ಭಕ್ತನಾಗಿದ್ದ. ತೀರ್ಥಾಟನೆಯ ಸಮಯದಲ್ಲಿ ರಾಯರು ಆದವಾನಿಗೂ ಭೇಟಿ ನೀಡಿದರು. ನವಾಬ ರಾಯರ ತಪಃ ಶಕ್ತಿಗೆ ಮಾರುಹೋಗಿ ಅವರು ಕೇಳಿದ ಸ್ಥಳವನ್ನು ಜಹಗೀರು ಕೊಡುವುದಾಗಿ ವಚನವಿತ್ತ. ಆಗ ರಾಯರು ಮಂಚಾಲೆಯನ್ನು ದಾನರೂಪವಾಗಿ ಕೊಡುವಂತೆ ನವಾಬನನ್ನು ಕೇಳಿದರು. ಅಲ್ಲಿಯೇ ಇದ್ದ ವೆಂಕಣ್ಣಪಂಡಿತ ಅಚ್ಚರಿಯಿಂದ ಬರೀ ಮರಳು ಮತ್ತು ಕಾಡಿನಿಂದ ಕೂಡಿದ ನಿರುಪಯುಕ್ತ ಪ್ರದೇಶವನ್ನು ಏಕೆ ಬಯಸಿದಿರಿ ಎಂದು ರಾಯರನ್ನು ಕೇಳಿದಾಗ ರಾಯರು, ತಾನೇ ಆ ಜನ್ಮದಲ್ಲಿ ಪ್ರಹ್ಲಾದನಾಗಿದ್ದು ಯಜ್ಞಮಾಡಿದ ಜಾಗ ಅದೆಂದು ಅದರ ಮಹತ್ತ್ವ ತಿಳಿಸಿದರಂತೆ. ಆ ಕಾಲಕ್ಕೆ ಅದು ಒಬ್ಬ ಫಕೀರನ ವಶದಲ್ಲಿರಲಾಗಿ ವೆಂಕಣ್ಣ ದಿವಾನ ಅದನ್ನು ಆತನಿಂದ ಬಿಡಿಸಿಕೊಟ್ಟುದಲ್ಲದೆ ನವಾಬನ ಹಣದಿಂದಲೇ ಮಠವನ್ನೂ ಕಟ್ಟಿಸಿಕೊಟ್ಟನೆಂದು ಐತಿಹ್ಯ ಹೇಳುತ್ತದೆ. ರಾಯರ ಬೃಂದಾವನದ, ಹಿಂದೆ ಅವರು ಪ್ರಹ್ಲಾದನಾಗಿದ್ದಾಗ ಯಜ್ಞ ಏರ್ಪಡಿಸಿದ್ದ ಸ್ಥಳದಲ್ಲಿಯೇ ಇದೆ ಎಂದು ಹೇಳುತ್ತಾರೆ. 1971ರಲ್ಲಿ ರಾಘವೇಂದ್ರ ಸ್ವಾಮಿಗಳ ಮೂರನೆಯ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
Let us take a small tour to Mantralayam of Guru Sri Raghavendra Swami
ಕಾಮೆಂಟ್ಗಳು