ಚಿರಂಜೀವಿ
ಚಿರಂಜೀವಿ
ಚಿರಂಜೀವಿ ಪ್ರಖ್ಯಾತ ಚಲನಚಿತ್ರ ನಟ ಮತ್ತು ನಿರ್ಮಾಪಕರು.
ಚಿರಂಜೀವಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರ್ ಎಂಬ ಹಳ್ಳಿಯಲ್ಲಿ 1955ರ ಆಗಸ್ಟ್ 22ರಂದು ಜನಿಸಿದರು. ಅವರ ಮೂಲ ಹೆಸರು ಕೊನಿಡೇಲ ಶಿವಶಂಕರ ವರಪ್ರಸಾದ್. ಅವರ ತಂದೆ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಆಗಾಗ ವರ್ಗಾವಣೆಯಾಗುತ್ತಿತ್ತು. ಹೀಗಾಗಿ ಚಿರಂಜೀವಿ ತಮ್ಮ ಬಾಲ್ಯವನ್ನು ತಮ್ಮ ಹಳ್ಳಿಯಲ್ಲಿನ ಅಜ್ಜಿಯ ಮನೆಯಲ್ಲಿ ಕಳೆದರು. ಚಿರಂಜೀವಿ ನಿಡದವೋಲು, ಗುರಜಾಲ, ಬಾಪಟ್ಲ, ಪೊನ್ನೂರು, ಮಂಗಳಗಿರಿ ಮತ್ತು ಮೊಗಲ್ತೂರಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು.
ಚಿರಂಜೀವಿ ಶಾಲೆಯಲ್ಲಿ ಎನ್ಸಿಸಿ ಕೆಡೆಟ್ ಆಗಿದ್ದರು. 70ರ ದಶಕದ ಆರಂಭದಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ್ದರು. ಚಿಕ್ಕಂದಿನಿಂದಲೂ ಅವರಿಗೆ ನಟನೆಯಲ್ಲಿ ಆಸಕ್ತಿ ಇತ್ತು. ತಮ್ಮ ಇಂಟರ್ಮೀಡಿಯೆಟ್ ಅನ್ನು ಒಂಗೋಲ್ನ ಸಿ.ಎಸ್.ಆರ್.ಶರ್ಮಾ ಕಾಲೇಜಿನಲ್ಲಿ ಮಾಡಿದರು. ನರಸಪುರಂನ ಶ್ರೀ ವೈ ಎನ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದ ನಂತರ, ಚೆನೈನ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟಿನಲ್ಲಿ ನಟನೆ ಕಲಿಯಲು ಸೇರಿದರು.
1978ರಲ್ಲಿ 'ಪುನದಿರಲು' ಚಿತ್ರದ ಮೂಲಕ ಚಿರಂಜೀವಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆದರೆ, 'ಪ್ರಾಣಮ್ ಖರೀದು' ಮೊದಲು ಬಿಡುಗಡೆಯಾಯಿತು. 1987ರಲ್ಲಿ, ಅವರು 'ಸ್ವಯಂಕೃಷಿ' ಚಿತ್ರದಲ್ಲಿ ನಟಿಸಿದರು. ಅದು ರಷ್ಯನ್ ಭಾಷೆಗೆ ಡಬ್ ಆಗಿ ಮಾಸ್ಕೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. ಚಿರಂಜೀವಿ ಅವರು ಈ ಚಿತ್ರಕ್ಕಾಗಿ 1988ರ ಇಂಡಿಯನ್ ಎಕ್ಸ್ಪ್ರೆಸ್ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ರಾಜ್ಯ ನಂದಿ ಪ್ರಶಸ್ತಿಗಳನ್ನು ಗೆದ್ದರು. 1988ರಲ್ಲಿ, ಅವರು 'ರುದ್ರವೀಣಾ' ಚಿತ್ರದ ಸಹ-ನಿರ್ಮಾಣ ಮಾಡಿದರು. ಇದು ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿತು. ಕೆ. ರಾಘವೇಂದ್ರ ರಾವ್ ನಿರ್ದೇಶನದ ಚಿರಂಜೀವಿಯವರ 1992ರ ಚಲನಚಿತ್ರ ಘರಾನಾ ಮೊಗುಡು, ಬಾಕ್ಸ್ ಆಫೀಸ್ನಲ್ಲಿ ಹತ್ತು ಕೋಟಿಗಿಂತ ಹೆಚ್ಚು ಗಳಿಸಿದ ಮೊದಲ ದಕ್ಷಿಣ ಭಾರತದ ಚಲನಚಿತ್ರವೆನಿಸಿತು. ಈ ಚಲನಚಿತ್ರವನ್ನು 1993ರ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ ಮುಖ್ಯವಾಹಿನಿ ವಿಭಾಗದಲ್ಲಿ ಪ್ರದರ್ಶಿಸಲಾಯಿತು. ಇದು ಚಿರಂಜೀವಿಯವರನ್ನು ಆ ಸಮಯದಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನನ್ನಾಗಿ ಮಾಡಿತು. ಮನರಂಜನಾ ನಿಯತಕಾಲಿಕೆಗಳು 1992ರ ಆಪದ್ಬಾಂಧವಡು ಚಿತ್ರಕ್ಕಾಗಿ ಅವರು 1.25 ಕೋಟಿ ಸಂಭಾವನೆ ಪಡೆದರು. ಇದು ಅಂದಿನವರೆಗೆ ಯಾವುದೇ ಭಾರತೀಯ ನಟ ಪಡೆದ ಅತ್ಯಧಿಕ ಸಂಭಾವನೆ ಎನಿಸಿತ್ತು. 2002ರಲ್ಲಿ, ಚಿರಂಜೀವಿ ಅವರಿಗೆ 1999-2000 ವರ್ಷದಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಗಾಗಿ ಭಾರತದ ಕೇಂದ್ರ ಸರ್ಕಾರ 'ಸಮ್ಮಾನ್ ಪ್ರಶಸ್ತಿ'ಯನ್ನು ನೀಡಿ ಗೌರವಿಸಿತು. ಇವರು ಅಂತರ್ಜಾಲದಲ್ಲಿ ವೈಯಕ್ತಿಕ ವೆಬ್ಸೈಟ್ ಆರಂಭಿಸಿದ ಮೊದಲ ಭಾರತೀಯ ನಟರೆನಿಸಿದರು.
ಚಿರಂಜೀವಿ ತೆಲುಗಿನಲ್ಲಿ 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡದ ಸಿಪಾಯಿ ಮತ್ತು ಶ್ರೀ ಮಂಜುನಾಥ ಚಿತ್ರಗಳಲ್ಲಿ ನಟಿಸಿದ್ದಾರೆ.
ಚಿರಂಜೀವಿ ನಾಲ್ಕು ದಶಕಗಳ ಕಾಲದ ತಮ್ಮ ಚಲನಚಿತ್ರ ವೃತ್ತಿಜೀವನದಲ್ಲಿ, ಮೂರು ಆಂಧ್ರಪ್ರದೇಶ ರಾಜ್ಯ ನಂದಿ ಪ್ರಶಸ್ತಿ, ರಘುಪತಿ ವೆಂಕಯ್ಯ ಪ್ರಶಸ್ತಿ ಮತ್ತು ಒಂಬತ್ತು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದರು. 2006ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಂಧ್ರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಯಿತು. ಅವರು 2012 ಮತ್ತು 2014 ರಿಂದ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸಿದರು.
On the birthday of popular actor Chiranjeevi
ಕಾಮೆಂಟ್ಗಳು