ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಮೇಶ್ ಭಟ್


 ರಮೇಶ್ ಭಟ್


ರಮೇಶ್ ಭಟ್ ಕನ್ನಡ ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರಗಳ ಮಹಾನ್ ಕಲಾವಿದ.  ಶಂಕರನಾಗ್ ಅವರ ಜೊತೆ ಸಂಕೇತ್ ತಂಡದ ಸಹಭಾಗಿಯಾಗಿ ನಾಟಕ ತಂಡ ನಿರ್ವಹಣೆ, ಚಲನಚಿತ್ರ ನಿರ್ಮಾಣ, ಮಾಲ್ಗುಡಿ ಡೇಸ್ ಸಹನಿರ್ದೇಶನ, ಸ್ಟುಡಿಯೋ ನಿರ್ಮಾಣ, ನಿರ್ವಹಣೆ ಹೀಗೆ ಅನೇಕ ರೀತಿಯಲ್ಲಿ ಶ್ರಮಿಸಿದವರು. 

ರಮೇಶ್ ಭಟ್ ಕುಂದಾಪುರ ತಾಲ್ಲೂಕಿನ  ಬೈಂದೂರು ಉಪ್ಪುಂದದಲ್ಲಿ ತಮ್ಮ ತಾಯಿಯ ತವರು ಮನೆಯಲ್ಲಿ 1946ರ ಆಗಸ್ಟ್ 22ರಂದು ಜನಿಸಿದರು. ಅಲ್ಲಿಂದ 16 ಕಿಲೋಮೀಟರ್ ದೂರದ ಕುಂದಾಪುರದ ಜಿಲ್ಲೆಯ ಗುಜ್ಜಾಡಿ ಮಂಕಿ ಎಂಬ ಪುಟ್ಟ ಹಳ್ಳಿ ಇವರ ಊರು.  ಮುಂದೆ ಇವರ ತಂದೆ ರತ್ನಾಕರ ರಾವ್  ಬೆಂಗಳೂರಿಗೆ ಬಂದು ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ರಮೇಶ್ ಭಟ್ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದರು.  ಹೈಸ್ಕೂಲ್‌ ಶಿಕ್ಷಣ ಖಾಸಗಿ ಸಂಸ್ಥೆಯಲ್ಲಿ ಆಯಿತು. ಮುಂದೆ ಇಂಜಿನಿಯರಿಂಗ್ ಓದುವ ಆಸೆ ಇತ್ತು. ಆದರೆ, ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಪಾಲಿಟೆಕ್ನಿಕ್‌ ಓದಿದರು. 

ಶಾಲೆಯಲ್ಲಿ ಓದುವ ದಿನಗಳಲ್ಲೇ ರಮೇಶ್ ಭಟ್ ಉಪಾಧ್ಯಾಯರ ಪ್ರೋತ್ಸಾಹದಿಂದ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರು.  ಪಾಲಿಟೆಕ್ನಿಕ್‌ ಓದುವ ದಿನಗಳಲ್ಲೂ ರಂಗದ ಗೀಳು ಅಂಟಿಕೊಂಡಿತು. ತಮ್ಮ ಓದೇನಾಯಿತು ಎಂದು ಕೂಡಾ ಅರಿವಾಗದಷ್ಟು ನಾಟಕಗಳಲ್ಲಿನ ಅಭಿನಯ ಚಟುವಟಿಕೆಗಳು ಇವರ ಬಾಳಲ್ಲಿ ತುಂಬಿಹೋಗಿದ್ದವು. 

ರಮೇಶ್ ಭಟ್ ಕೆಲಕಾಲ ಕಿರ್ಲೋಸ್ಕರ್ ಸಂಸ್ಥೆಯಲ್ಲಿ ಕೆಲಸ ಮಾಡಿದರೂ ತೃಪ್ತಿಯಾಗದೆ, ಬದುಕು ಸಾಗಿಸಲು  ನ್ಯಾಶನಲ್ ಕಾಲೇಜು ಎದುರು ಡಿವಿಜಿ ರಸ್ತೆಯ ಮೂಲೆಯಲ್ಲಿ ಜ್ಯೋತಿಪ್ರಕಾಶ್‌ ಸ್ಟೋರ್‌ ಎಂಬ ಅಂಗಡಿ ತೆರೆದರು.  ಅದೊಂದು ಎಲ್ಲರಿಗೂ ಕೇಂದ್ರ ಸ್ಥಾನ ಆಗಿತ್ತು. ಅಂಗಡಿಯ ಒಂದು ಶೋಕೇಸಿನಲ್ಲಿ ಪ್ರತಿದಿನ ಒಬ್ಬ ನಟ ಅಥವಾ ನಟಿಯ ದೊಡ್ಡದಾದ ಚಿತ್ರ ಇರಿಸುತ್ತಿದ್ದರು. ಅದನ್ನು ನೋಡಲೆಂದೇ ಕಾಲೇಜು ಹುಡುಗ ಹುಡುಗಿಯರು ಬರುತ್ತಿದ್ದರು. ಅವರಿಗೆ ಇದೊಂದು ‘ಸಂದೇಶ ವಿನಿಮಯ ಕೇಂದ್ರ’ವೂ ಆಗಿತ್ತು. ನಾಟಕ ಪ್ರದರ್ಶನಗಳ ವಿವರ ಪ್ರಚಾರಕ್ಕೂ ಒಂದು ಫಲಕ ಇತ್ತು.  ಹೀಗೆ ಇಲ್ಲಿ ಕಲಾವಿದರು, ಸಾಹಿತಿಗಳ ಪರಿಚಯ ಆಯಿತು. ನಾಟಕದ ಗೀಳು ಬಿಡಲಾಗದೆ ವ್ಯಾಪಾರದ ಮಧ್ಯೆ ಹೇಗೋ ಅವಕಾಶ ಮಾಡಿಕೊಂಡು ನಾಟಕಗಳ ಅಭ್ಯಾಸಕ್ಕೆ ಮತ್ತು ಅಭಿನಯಕ್ಕೆ ಹೋಗಿಬರುತ್ತಿದ್ದರು. 

ರಮೇಶ್ ಭಟ್ ಅವರು ಮೇಕಪ್ ನಾಣಿ ಅವರ ಹಿಸ್ಟ್ರಿಯಾನಿಕ್ಸ್ ಕ್ಲಬ್, ನಟರಂಗ, ಬಿ. ವಿ. ಕಾರಂತರ ಬೆನಕ ಪ್ರಸನ್ನರ ಸಮುದಾಯ, ಬಿ. ಜಯಶ್ರೀ ಅವರ ಸ್ಪಂದನ ಹೀಗೆ ಎಲ್ಲೆಡೆ ಹೋಗಿ ಅಭಿನಯಿಸತೊಡಗಿದರು. ಲಂಕೇಶ್
ಮಾಸ್ತಿ ಇವರೆಲ್ಲರ ಕಣ್ಮುಂದೆ ಇವರ ಬದುಕು ಸಾಗಿತು. ವೈಎನ್‍ಕೆ, ಅನಂತನಾಗ್, ಆಲನಹಳ್ಳಿ ಮುಂತಾದವರ ಪರಿಚಯವಾಯಿತು. 

'ಹಯವದನ' ನಾಟಕದ ಅಭಿನಯದ ಕುರಿತಾಗಂತೂ ಬಿ. ವಿ. ಕಾರಂತರೇ  "We found one more Gurudutt in our Kannada stage" ಎನ್ನುವಷ್ಟು ಇವರಿಗೆ ಹೆಸರು ಮೂಡಿತು.  

ಅಬಚೂರಿನ ಪೋಸ್ಟಾಫೀಸು ಚಿತ್ರದಲ್ಲಿನ ಅಭಿನಯದ ಮೂಲಕ ರಮೇಶ್ ಭಟ್ ಚಿತ್ರರಂಗಕ್ಕೆ ಬಂದರು. ಕೃಷ್ಣಂರಾಜು ಎಂಬ ಸಿನಿಮಾ ರಂಗದಲ್ಲಿ ನಿರತರಾಗಿದ್ದವರ ಜೊತೆ ಸ್ನೇಹವಾಗಿ ಹಳೆಯ ಚಿತ್ರಗಳನ್ನು ಮಾರ್ನಿಂಗ್ ಶೋಗೆ ಬಿಡುಗಡೆ ಮಾಡುವುದು, ಚಿತ್ರಗಳ ನಿರ್ಮಾಣ ನಿರ್ವಹಣೆ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಪಾಲುದಾರಿಕೆಯನ್ನೂ ನೀಡಿದ್ದರು.  ಸ್ಪಂದನ ಎಂಬ ಚಿತ್ರಕ್ಕೆ ಸಹನಿರ್ದೇಶನವನ್ನೂ ಮಾಡಿದರು. ಮಹಾನ್ ಛಾಯಾಗ್ರಾಹಕ ಬಿ. ಸಿ. ಗೌರೀಶಂಕರ್ ಮೂಲಕ ಶಂಕರನಾಗ್ ಪರಿಚಯವಾದರು. 

1978–79 ಅವಧಿಯಲ್ಲಿ ರಮೇಶ್ ಭಟ್ ಅವರ  ಬದುಕಿಗೆ ಶಂಕರ್‌ನಾಗ್‌ ಹೊಸ ದಿಕ್ಕು ತಂದರು.  ಸಂಕೇತ್‌ ತಂಡ ಕಟ್ಟಿ 'ಅಂಜು ಮಲ್ಲಿಗೆ’ ನಾಟಕವಾಡಿದ್ದು, 'ನೋಡಿ ಸ್ವಾಮಿ ನಾವಿರೋದೇ ಹೀಗೆ' ನಾಟಕ ಅಪಾರ ಜನಪ್ರಿಯತೆ ಗಳಿಸಿದ್ದು, ಮುಂದೆ ‘ಮಿಂಚಿನ ಓಟ’ ಸಿನಿಮಾ ಮಾಡಿದ್ದು, ಮಾಲ್ಗುಡಿ ಡೇಸ್‌ಗೆ ಸಹ ನಿರ್ದೇಶನ ಮಾಡಿದ್ದು, ಸಂಕೇತ್ ಧ್ವನಿಮುದ್ರಣ ಸ್ಥಾಪಿಸಿದ್ದು ಹೀಗೆ ಒಂದಾದ ನಂತರ ಒಂದು ಚಟುವಟಿಕೆಗಳು ಇವರ ಬದುಕನ್ನು ಆಕ್ರಮಿಸಿದ್ದವು. 

ರಮೇಶ್ ಭಟ್ ಅವರನ್ನು ನಾಟಕ ಮತ್ತು ಸಿನಿಮಾಕ್ಕೆ ಬಾ ಎಂದು ಶಂಕರ್‌ನಾಗ್‌ ಅವರು ಕರೆದಾಗ ಇವರಲ್ಲಿ ಒಂದು ಆತಂಕವೂ ಇತ್ತು. ಅಂಗಡಿ ವ್ಯಾಪಾರ ಬಿಟ್ಟು ಹೋಗುವುದೇ? ಮುಂದೆ ಹೊಟ್ಟೆಪಾಡಿಗೆ ಏನು ಮಾಡಲಿ ಎಂಬ ಅಳುಕು ಇತ್ತು . ಶಂಕರ್‌ನಾಗ್‌ ಮೇಲೆ ಭರವಸೆ ಇಟ್ಟು ಗಟ್ಟಿಮನಸ್ಸು ಮಾಡಿ ಹೊರಟೇಬಿಟ್ಟರು. 

ಮುಂದೆ, ನೋಡಿ ಸ್ವಾಮಿ ನಾವಿರೋದೇ ಹೀಗೆ ಚಿತ್ರ ನಿರ್ಮಾಣ ಮಾಡಿದರು.  ಆ ಬಳಿಕ ಅವಕಾಶಗಳೇ ತುಂಬಾ ಕಡಿಮೆಯಾದವು. ಒಮ್ಮೆ ಭಾರ್ಗವ ಅವರ ನಿರ್ದೇಶನದಲ್ಲಿ  ‘ಜೀವನಚಕ್ರ’ ಸಿನಿಮಾದಲ್ಲಿ ಹಾಸ್ಯ ಪಾತ್ರ ಮಾಡಿದರು. ಎಲ್ಲರಿಗೂ ಇಷ್ಟವಾಯಿತು. ಮುಂದೆ ರಮೇಶ್ ಭಟ್ ಅವರು ನಿರ್ವಹಿಸಿದ ಪಾತ್ರಗಳು ಅನೇಕ.  ಶಂಕರನಾಗ್ ಅನಂತನಾಗ್ ಅಲ್ಲದೆ ವಿಷ್ಣುವರ್ಧನ್ ಅವರಿಗೂ ರಮೇಶ್ ಭಟ್ ಕುರಿತು ಅಪಾರ ಪ್ರೀತಿ ಇತ್ತು.   ಒಟ್ಟಾರೆ ಸಿನಿಮಾಗಳು 600 ಸಂಖ್ಯೆಯನ್ನೂ  ಮೀರಿದವು. 1990ರಲ್ಲಿ ಇವರು  'ಕ್ರೇಜಿ ಕರ್ನಲ್' ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಅಪಾರ ಜನಪ್ರಿಯತೆ ಗಳಿಸಿದರು.  ಹಾಸ್ಯ ಪಾತ್ರಗಳಲ್ಲಿ ಅಲ್ಲದೆ ಪೋಷಕನಟನಾಗಿ ಅವರು ಅಭಿನಯಿಸಿದ ಬಹುತೇಕ ಪಾತ್ರಗಳು ಸದ್ಗುಣಿ ಗೆಳೆಯ, ತಂದೆ ಮಂತಾದ ತೆರನಾದದ್ದು. 

ರಮೇಶ್ ಭಟ್  ಮಾಡದ ಕೆಲಸ ಇಲ್ಲ. ಸಿನಿಮಾದ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡಿದ್ದಾರೆ. ಅಂಗಡಿ, ಹೋಟೆಲ್‌, ರೇಷ್ಮೆ ಸಾಕಣಿಕೆ ಮಾಡಿ ಕೈ ಸುಟ್ಟುಕೊಂಡಿದ್ದೂ ಇದೆ. ಬಳಿಕ ಪುಟ್ಟ ವಿನ್ಯಾಸ ಸಂಸ್ಥೆ (ಬ್ರಾಂಡ್‌ ಡಿಸೈನ್‌, ಮುದ್ರಣ ಇತ್ಯಾದಿ) ಮಾಡಿದರು.

ರಮೇಶ್ ಭಟ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಲವು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ವಿಷ್ಣುವರ್ಧನ್ ಹೆಸರಿನ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. 

Our great actor Ramesh Bhat 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ