ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಎಚ್. ಕೃಷ್ಣಯ್ಯ


 ಎಂ. ಎಚ್. ಕೃಷ್ಣಯ್ಯ ಇನ್ನಿಲ್ಲ


ಪ್ರಸಿದ್ಧ ಸಾಹಿತ್ಯ ವಿಮರ್ಶಕರೂ  ಕಲಾಪ್ರೇಮಿಗಳೂ, ಪ್ರಾಧ್ಯಾಪಕರೂ, ಸಮಾಜ ಸೇವಕರೂ ಆದ ಪ್ರೊ. ಎಂ. ಎಚ್. ಕೃಷ್ಣಯ್ಯನವರು ಇಂದು (2022ರ ಆಗಸ್ಟ್ 12ರಂದು) ನಮ್ಮನ್ನಗಲಿದ್ದಾರೆ. 

ಎಂ. ಎಚ್. ಕೃಷ್ಣಯ್ಯನವರು 1937ರ ಜುಲೈ 21ರಂದು  ಮೈಸೂರಿನಲ್ಲಿ ಜನಿಸಿದರು.  ಕೃಷ್ಣಯ್ಯನವರ ತಂದೆ  ಹುಚ್ಚಯ್ಯನವರು.  ತಾಯಿ ಕೆಂಪಮ್ಮ.  ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ ಮತ್ತು ಎಂ. ಎ. ಪದವಿಗಳನ್ನು ಪಡೆದ ಕೃಷ್ಣಯ್ಯನವರು ಪ್ರಾಧ್ಯಾಪಕರಾಗಿ ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.  

ಕೃಷ್ಣಯ್ಯನವರು ಬರಹಗಾರರು, ಸಂಗೀತಗಾರರು, ಶಿಲ್ಪಿಗಳು, ಕಲಾವಿದರೊಂದಿಗೆ ಬೆರೆತು ಅವರ ಬದುಕನ್ನು ಅರಿತು, ಆ ಅರಿವನ್ನು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ.  ಪ್ರಸಿದ್ಧ ವಿದ್ವಾಂಸರೂ, ಶಿಸ್ತಿನ ಪ್ರವಚನಕಾರರೂ ಆದ ಕೃಷ್ಣಯ್ಯನವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.  ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್. ಎಮ್. ಹಡಪದ್, ರೂಪಶಿಲ್ಪಿ ಬಸವಯ್ಯ, ಶ್ರಂಗಾರ ಲಹರಿ,  ಕಲಾ ದರ್ಶನ,  ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಮುಂತಾದ ಬರಹಗಳು  ಹಾಗೂ ಕುವೆಂಪು ಸಾಹಿತ್ಯ : ಚಿತ್ರ ಸಂಪುಟದಂತಹ ಸಂಪಾದನೆಗಳು ಈ ಕೃತಿಗಳಲ್ಲಿ ಸೇರಿವೆ.  ಅವರ 'ಕಲಾ ದರ್ಶನ' ಕೃತಿ ಕನ್ನಡ ನಾಡಿನಲ್ಲಿ ಗೌರವಾನ್ವಿತ ಸಂಪುಟವೆನಿಸಿವೆ.  ಉದಯ ಭಾನು  ಕಲಾ ಸಂಘವು ತನ್ನ  ಸುವರ್ಣ ಮಹೋತ್ಸವ  ಸಂದರ್ಭದಲ್ಲಿ  ಹೊರತಂದ  ಸುಮಾರು  3000 ಪುಟಗಳ ‘ಬೆಂಗಳೂರು ದರ್ಶನ’  ಬೃಹತ್  ಸಂಪುಟಗಳ  ಸಂಪಾದಕರಾಗಿ ಸಹಾ ಅವರು  ತಮ್ಮ  ಮಹತ್ವದ  ಕೊಡುಗೆಯನ್ನು  ನೀಡಿದ್ದಾರೆ. 

ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ  ಸಾಹಿತ್ಯ ಅಕಾಡಮಿ, ತಂಜಾವೂರಿನಲ್ಲಿ ಕೇಂದ್ರ ಹೊಂದಿರುವ ದಕ್ಷಿಣ ಭಾಗೀಯ ಸಾಂಸ್ಕೃತಿಕ ಕೇಂದ್ರ, ಉದಯಭಾನು ಕಲಾ ಸಂಘ,  ಮುಂತಾದೆಡೆಗಳಲ್ಲಿ ಅವರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದಾರೆ.  ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷತೆ ಒಳಗೊಂಡಂತೆ ಹಲವು ರೀತಿಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಪ್ರೊ. ಕೃಷ್ಣಯ್ಯನವರು ತಮ್ಮ ಕಾರ್ಯದಕ್ಷತೆ, ಸರಳ, ಸಜ್ಜನಿಕೆಗಳಿಗೆ ಹೆಸರಾಗಿದ್ದಾರೆ.  

ಕೃಷ್ಣಯ್ಯನವರಿಗೆ 'ಶೃಂಗಾರ ಲಹರಿ' ಕೃತಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, 'ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿದ್ದವು. ಹಂಪಿ ವಿಶ್ವವಿದ್ಯಾಲಯವು  ‘ನಾಡೋಜ’ ಪ್ರಶಸ್ತಿಯಿತ್ತು  ಸಂಮಾನಿಸಿತ್ತು.  ಮಾಸ್ತಿ ಪ್ರಶಸ್ತಿ ಅವರಿಗೆ ಸಂದ ಮತ್ತೊಂದು ವಿಶಿಷ್ಟ ಹಿರಿಮೆ.  

ಈ ಮಹಾನ್ ವಿದ್ವಾಂಸರಾದ ಪ್ರೊ. ಎಂ. ಎಚ್. ಕೃಷ್ಣಯ್ಯನವರು ಈ ಲೋಕವನ್ನಗಲಿರುವುದು ತುಂಬಾ ನಷ್ಟ.  ಕಳೆದ ವರ್ಷ ಅವರ ಹುಟ್ಟುಹಬ್ಬದಂದು ಫೋನ್ ಮಾಡಿದಾಗ ಬಹಳ ಅಕ್ಕರೆಯಿಂದ ಫೋನ್ ಮಾಡಿ, ಕೊರೋನಾ ವಾತಾವರಣದ  ಕಾರಣ ಎಲ್ಲೂ ಹೋಗುತ್ತಿಲ್ಲ ಎಂದಿದ್ದರು.  ಎಲ್ಲೂ ಹೋಗುತ್ತಿಲ್ಲ ಎಂದು ಹೀಗೆ ಹೊರಟು ಬಿಟ್ಟರೆ ಹೇಗೇ ಸಾರ್.  ನಿಮ್ಮಂತಹ ಮಹಾನುಭಾವರ ನಷ್ಟ ತುಂಬುವವರಾದರೂ ಯಾರು?  ಅಂತರಂಗಪೂರ್ವಕ ಗೌರವಗಳು ಸಾರ್ 🌷🙏🌷

Respects to great scholar, writer, art lover and organizer Prof. M. H. Krishnaiah 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ