ಗ್ರಂಥಪಾಲಕರ ದಿನ
ಗ್ರಂಥಪಾಲಕರ ದಿನ
ಇಂದು ಗ್ರಂಥಪಾಲಕರ ದಿನ. ಇಡೀ ದೇಶದಲ್ಲಿ ಗ್ರಂಥಾಲಯ ಅಭಿವೃದ್ಧಿಗೆ ನೀಲಿನಕ್ಷೆ ಹಾಕಿಕೊಟ್ಟ ಪದ್ಮಶ್ರೀ ಡಾ. ಎಸ್. ಆರ್. ರಂಗನಾಥನ್ ಅವರ ಗೌರವಾರ್ಥ ಈ ಆಚರಣೆ ಕರ್ನಾಟಕದಲ್ಲಿ ನಡೆದುಬರುತ್ತಿದೆ.
ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನ ಆಗಸ್ಟ್ 12 ಎಂದು ಈ ಆಚರಣೆ ನಡೆಯುತ್ತಿದೆ. ಆದರೆ ಸ್ವಯಂ ರಂಗನಾಥನ್ ತಮ್ಮ ಜನ್ಮದಿನವನ್ನು ಆಗಸ್ಟ್ 9 ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಹಿರಿಯ ಕೊಡುಗೆಯನ್ನು ಎಂದು ಸ್ಮರಿಸಿದರೂ ತಪ್ಪೇನಿಲ್ಲ.
ಗ್ರಂಥಾಲಯಗಳು ನಮ್ಮ ಕಾಲದ ಬದುಕಿನ ಬಹುದೊಡ್ಡ ಭಾಗವಾಗಿದ್ದವು. ಬಹುಶಃ ಅಂದಿನ ದಿನಗಳಲ್ಲಿ ಗ್ರಂಥಾಲಯವಿಲ್ಲದಿದ್ದರೆ ಬಹುತೇಕರು ವಿದ್ಯಾಭ್ಯಾಸ ನಡೆಸುವುದು ಸಾಧ್ಯವಿರಲಿಲ್ಲ. ಅಧ್ಯಾಪಕರು ಪಾಠ ಮಾಡಲು ಮೂಲ ಗ್ರಂಥಗಳ ಅಧ್ಯಯನ ಬಲ ಹೊಂದಿರಬೇಕಿತ್ತು. ಇಂದಿನ ಕಾಲದ ಸಜೆಸ್ಟೆಡ್ ಆನ್ಸರ್ಸ್, ಗೈಡುಗಳು ಇತ್ಯಾದಿ ಯಾವುದೇ ಶಾರ್ಟ್ ಕಟ್ ಸಲಕರಣೆಗಳು ಅಂದಿರಲಿಲ್ಲ. ಅದಿರಲಿ, ಕಾಲೇಜಿನಲ್ಲಿ ನಿಗದಿಗೊಳಿಸಿದ್ದ ಪಾಠಗಳನ್ನು ಸಹಾ ಒಂದು ಪಠ್ಯ ಪುಸ್ತಕರೂಪದಲ್ಲಿ ಕಾಣುವುದು ಸಾಧ್ಯವಿರಲಿಲ್ಲ. ಬಹುತೇಕರು ಗ್ರಾಮಗಳಿಂದ ನಗರಕ್ಕೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದು, ಹೊಟ್ಟೆಪಾಡಿಗೆ ವಾರಾನ್ನ ಮತ್ತು ಧಾರ್ಮಿಕ ಸಂಸ್ಥೆಗಳ ಆಶ್ರಯ ಅನಿವಾರ್ಯವಿದ್ದ ಕಾಲದಲ್ಲಿ ವ್ಯಾಸಂಗದ ಪುಸ್ತಕಗಳನ್ನು ಕೊಳ್ಳುವುದು ಅಸಾಧ್ಯವಿತ್ತು.
ಬರೀ ವಿದ್ಯಾ ವ್ಯಾಸಂಗದ ಪುಸ್ತಕಗಳ ಬಗ್ಗೆ ಹೇಳಿದರೆ ಹೇಗೆ? ಅದೆಲ್ಲ ಬುದ್ಧಿವಂತರ ಸಮಾಚಾರ. ನನ್ನಂತವನಿಗೆ ಏನು ಪಾಠ ಓದಿದರೆ ಪರೀಕ್ಷೆಯಲ್ಲಿ 35 ಮಾರ್ಕು ಬರುತ್ತದೆ ಎಂದು ತಲೆಯ ಬಳಿ (ತಲೆಯ ಒಳಗಲ್ಲ) ಬರುತ್ತಿದ್ದುದೇ ಪರೀಕ್ಷೆಯ ಸಮಯದಲ್ಲಿ. ಹಾಗಿದ್ದರೂ ಗ್ರಂಥಾಲಯಕ್ಕೆ ಹೋಗುವುದು ತಪ್ಪುತ್ತಿರಲಿಲ್ಲ. ಪತ್ರಿಕೆಯ ಸಿನಿಮಾ ಸುದ್ಧಿ, ಧಾರಾವಾಹಿ, ಕ್ರಿಕೆಟ್ ಸುದ್ಧಿ ಇದನ್ನೆಲ್ಲ ಓದೋಕೆ ಹೋಗೋಕೆ ಪಬ್ಲಿಕ್ ಲೈಬ್ರರಿ ಇಲ್ಲದಿದ್ರೆ ಹೇಗೆ!
ನನಗೆ ಬೇಕಿದ್ದ ಭೈರಪ್ಪ, ಕಾರಂತ, ತ್ರಿವೇಣಿ, ಎಂ. ಕೆ. ಇಂದಿರಾ ಮುಂತಾದವರ ಕಾದಂಬರಿ, ಕವನದ ಪುಸ್ತಕ ಇತ್ಯಾದಿ ಮನೆ ಬಳಿಯ ಪಬ್ಲಿಕ್ ಲೈಬ್ರೆರಿಯಲ್ಲಿ ಸಿಗೊಲ್ಲ ಎಂದು ದೂರದ ಜಾಲಹಳ್ಳಿಯಲ್ಲಿರುವ ಲೈಬ್ರರಿ ಮೆಂಬರ್ಷಿಪ್ ತೊಗೊಂಡಿದ್ದು ಎರಡೆರಡು ಬಸ್ನಲ್ಲಿ ಹೋಗಿಬರುತ್ತಿದ್ದದು ನೆನಪಾಗುತ್ತದೆ.
ಇತ್ತೀಚಿನ ವರುಷಗಳಲ್ಲೂ ಬೆಂಗಳೂರು ಮೈಸೂರುಗಳಲ್ಲಿದ್ದಾಗ ಪಬ್ಲಿಕ್ ಲೈಬ್ರರಿ ಮತ್ತು ಜಸ್ಟ್ ಬುಕ್ಸ್ ಅಂತಹ ಲೈಬ್ರರಿಗಳಿಗೆ ತಪ್ಪದೆ ಸದಸ್ಯತ್ವ ಪಡೆದಿದ್ದೆವು. ನಾನಿರುವ ದುಬೈನಲ್ಲಿನ ಅಥವಾ ಯಾವುದೇ ಊರಿನ ಪುಸ್ತಕದ ಅಂಗಡಿಗಳಿಗೂ ಹೋದಾಗಲೂ ಗ್ರಂಥಾಲಯ ಎಂಬ ಭಾವನೆಯಲ್ಲೇ ಕಾಲಿರಿಸುತ್ತೇನೆ.
ಇಂದಿನ ದಿನಗಳಲ್ಲಿ ನಮ್ಮ ಮನೆಯಲ್ಲಿರುವ ಪುಸ್ತಕಗಳನ್ನೇ ನಾನು ಓದಿಲ್ಲ ಎಂಬುದು ನಿಜ. ಆದರೆ ಗ್ರಂಥಗಳನ್ನು ಜೋಡಿಸಿಟ್ಟಿರುವ ಗ್ರಂಥಾಲಯಕ್ಕಾಗಲಿ, ಅಚ್ಚುಕಟ್ಟಾದ ಪುಸ್ತಕಗಳ ಅಂಗಡಿಗಳಿಗಾಗಲಿ ಹೋಗುವುದನ್ನು ನಾನೆಂದೂ ತಪ್ಪಿಸುವುದಿಲ್ಲ. ಅಲ್ಲಿಗೆ ಪ್ರತಿ ಸಲ ಹೋದಾಗಲೂ ಇದುವರೆಗೆ ಕಾಣದ ಹೊಸಲೋಕದ ತುಣುಕೊಂದು ಮನದಲ್ಲಿ ಹೊಳೆದಂತಾಗುತ್ತದೆ.
ನಾನಿರುವ ದುಬೈನಲ್ಲಿ ಕಿನೊಕುನಿಯಾ ಎಂಬ ಬೃಹತ್ ಪುಸ್ತಕ ಮಳಿಗೆಯಿದೆ ಇಲ್ಲಿ 5 ಲಕ್ಷ ವಿವಿಧ ಶೀರ್ಷಿಕೆಗಳ ಪುಸ್ತಕಗಳಿವೆ. ನಾನು ಏನಾದರೂ ಒಂದು ಪುಸ್ತಕ ಕೇಳಿದರೆ ಇಲ್ಲಿರುವ ಸಿಬ್ಬಂಧಿ ಒಂದೇ ಕ್ಷಣದಲ್ಲಿ ಕಂಪ್ಯೂಟರಲ್ಲಿ ನೋಡಿ, ಆ ಪುಸ್ತಕದ ಬಳಿ ನನ್ನ ನಿಲ್ಲಿಸುತ್ತಾರೆ. ನಾನು ಕೆಲವು ವರ್ಷದ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿಗೆ ವೆಬ್ಸೈಟ್ ಸಲಹೆಗಾರನಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಗ್ರಂಥಪಾಲಕರಾದ ಜಯಂತಿ ರಾಮೇಗೌಡ Jayanthi Ramegowda ಅವರು ನಾನು ಕೇಳಿದ ಯಾವುದೇ ಅಮೂಲ್ಯ ಪುಸ್ತಕವನ್ನೂ ಯಾವುದೇ ಕಂಪ್ಯೂಟರ್ ಬಳಕೆಯಿಲ್ಲದೆಯೇ ತಮ್ಮ ಅಚ್ಚುಕಟ್ಟಾದ ದೊಡ್ಡ ರಿಜಿಸ್ಟರ್ನಲ್ಲಿದ್ದ ಬರಹದ ಸಹಾಯದಿಂದ ತಡವಿಲ್ಲದೆ ಕೊಡುತಿದ್ದದ್ದು ನೆನಪಾಗುತ್ತದೆ. ಇದು ಗ್ರಂಥಪಾಲನೆಯ ಶಕ್ತಿ, ನಾನು ಶಾರದಾ ವಿಲಾಸ ಹೈಸ್ಕೂಲಿನಲ್ಲಿರುವಾಗ ಸುಬ್ಬರಾವ್ ಎಂದಿದ್ದ ಹಿರಿಯರ ಗ್ರಂಥಪಾಲಕರ ಹೆಸರು ಸಹಾ ನೆನಪಾಗುತ್ತೆ.
ಗ್ರಂಥಾಲಯವೆಂಬುದು ಒಂದು ಪುಸ್ತಕದ ಗುಡಾಣವಲ್ಲ. ಇಂದಿನ ದಿನಗಳಲ್ಲಿ ಸರ್ಕಾರಿ ಲೈಬ್ರರಿಯವರಿಗೆ ಮಾರಬಹುದು ಎಂದೇ ಪುಸ್ತಕ ಬರೆಯುವವರು, ಪ್ರಕಾಶಿಸುವವರು ಬಹುತೇಕರು ಇದ್ದಾರೆ ಎಂಬ ಮಾತು ವ್ಯಾಪಕವಾಗಿದೆ. ಲೋಕವನ್ನು, ಅದರಲ್ಲಿನ ವ್ಯಾಪಾರಿ ಗುಣವನ್ನು, ಗುಣನಿಷ್ಕರ್ಷಣೆಯಲ್ಲಿರುವ ಭ್ರಷ್ಟತೆಗಳನ್ನು ಯಾರು ಹೇಗೆ ಏನೇ ಮಾಡಿದರೂ ತಿದ್ದುವುದಕ್ಕಾಗುವುದಿಲ್ಲ. ಹೂವು ಎಲ್ಲೇ ಇದ್ದರೂ ಅದರ ಸೌಂದರ್ಯವನ್ನು ಕಾಣುವ ಮತ್ತು ಸುಗಂಧವನ್ನು ಅಘ್ರಾಣಿಸುವ ಮನೋಧರ್ಮ ನಮ್ಮೊಳಗೆ ಮರೆಯಾಗದಿರವುದು ಮುಖ್ಯ. ಅಂತೆಯೇ ಒಳ್ಳೆಯ ಪುಸ್ತಕಗಳತ್ತ ನಮ್ಮ ನೋಟ ಮತ್ತು ಒಡನಾಟ ಸಹಾ.
ಒಳ್ಳೆಯ ಅಭಿರುಚಿ ಬೆಳೆಸುವ ಗ್ರಂಥಾಲಯ ವ್ಯವಸ್ಥೆ ಎಲ್ಲ ಕಾಲದಲ್ಲೂ ಅಗತ್ಯ.
On librarians’ day
ಕಾಮೆಂಟ್ಗಳು