ಈಶ್ವರ ಕಮ್ಮಾರ
ಈಶ್ವರ ಕಮ್ಮಾರ
ಸ್ಫರ್ಗದಾ ಒಂದು ತುಣುಕು
ಭೂಮಿsಗೆ ಬಂದು ಬಿತ್ತು ||
ಸೌಭಾಗ್ಯದಿಂದ ಸಂತಾನವಾಗಿ
ಭಾರತದ ಭೂಮಿ ಮೇಲೆ
ಅರಳಿಹೆವು ನಾವು ಸೌಗಂಧ ಸೂಸಿ
ಸಂತಸದ ಸರಸಿಯೊಳಗೆ
ಧರತಿsಯ ತುಂಬ ಹರಡಿರುವ ಸಿರಿಯ
ಬಳಕೊಂಡು ಉಡಿಯ ತುಂಬಿ
ಕೊಡುತಿರಲಿ ನಮಗೆ ಭಾರತದ ತಾಯಿ
ನಮಗೇನು ಕಡಿಮೆಯಿಲ್ಲ
ವೈಕುಂಠವಿಲ್ಲೆ ಕೈಲಾಸವಿಲ್ಲೆ
ನೆಲೆಸಿಹವು ಜಾಗದಲ್ಲೆ
ಜಲತೀರ್ಥವಾಗಿ ಫಲಪ್ರಸಾದವಾಗಿ
ಕೊಡುತಿಹಳು ತಾಯಿ ನಮಗೆ
ವೈಮನಸು ತರುವ ಸಂಗತಿಯ ನೆನಪು
ಕನಸಲ್ಲು ಕೂಡ ಬೇಡ
ತನುಮನಗಳಲ್ಲಿ ಭಾರತಮಹಿಮೆ
ತುಳುಕಿರಲು ಭಯವು ಬೇಡ
ಇಂತಹ ಭವ್ಯ ಕವಿತೆಗಳನ್ನು ಬರೆದ ಈಶ್ವರ ಕಮ್ಮಾರ ಮಹಾನ್ ಮಕ್ಕಳ ಸಾಹಿತಿಗಳಾಗಿಪ್ರಸಿದ್ಧರಾಗಿದ್ದವರು.
ಈಶ್ವರ ಕಮ್ಮಾರರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಿರೇನಂದಿಹಳ್ಳಿಯಲ್ಲಿ1933ರ ಜನವರಿ 4ರಂದು ಜನಿಸಿದರು. ತಂದೆ ಶಂಕರಪ್ಪ. ತಾಯಿ ಶಿವಬಸಮ್ಮ. ಸಾತ್ವಿಕವಾತಾವರಣದಲ್ಲಿ ಬೆಳೆದ ಇವರಿಗೆ ಬಾಲ್ಯದಿಂದಲೇ ಮನೆಯಲ್ಲಿ ಸಾಹಿತ್ಯದ ವಾತಾವರಣದೊರೆಯಿತು. ತಂದೆಯವರು ಶಿಲ್ಪ, ವಾಸ್ತುಶಿಲ್ಪ, ಜ್ಯೋತಿಷ್ಯ ಶಾಸ್ತ್ರಗಳಲ್ಲಿ ತಿಳಿವಳಿಕೆ ಹೊಂದಿದ್ದರು. ಇವರಮನೆಗೆ ಸಾಕಷ್ಟು ಜನ ಚರ್ಚೆಗೆ ಬರುತ್ತಿದ್ದರು.
ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿದ ಇವರು ನಂತರ ಇಟಗಿ, ಬೈಲಹೊಂಗಲ, ಬೆಳಗಾವಿ, ಧಾರವಾಡಗಳಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು.
ಈಶ್ವರ ಕಮ್ಮಾರರು ಶಿಕ್ಷಕರಾಗಿ ಸೇವೆಗೆ ಸೇರಿದ ನಂತರ ಹೆಚ್ಚಿನ ಅಧ್ಯಯನ ನಡೆಸಿ ಬಿಎ, ಎಂಎಪದವಿಗಳನ್ನು ಗಳಿಸಿದರು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಂಶೋಧನಾ ಗ್ರಂಥ ರಚಿಸಿಪ್ರಸಿದ್ಧರಾದರು. ಸಾಹಿತಿಗಳೊಡನೆ ಒಡನಾಟದಿಂದ ಇವರ ಸಾಹಿತ್ಯ ರಚನೆ ಬೆಳೆಯಿತು. ಖ್ಯಾತಸಾಹಿತಿ ಶಿಸು ಸಂಗಮೇಶರೊಡನೆ ಹಲವಾರು ವರ್ಷಗಳ ಜೊತೆ ಇವರದು.
ಈಶ್ವರ ಕಮ್ಮಾರರ 40 - 45 ವರ್ಷಗಳ ಸಾಹಿತ್ಯ ರಚನೆಯಲ್ಲಿ ಹೆಚ್ಚಿನ ಭಾಗ ಮಕ್ಕಳ ಸಾಹಿತ್ಯಕ್ಷೇತ್ರಕ್ಕೆ ಕೊಡುಗೆ.
ಆಕಾಶವಾಣಿ ಕಲಾವಿದೆಯಾಗಿದ್ದ ಮಲ್ಲಮ್ಮನವರು ಇವರ ಧರ್ಮಪತ್ನಿ. ಇವರಿಗೆ ಅವರುಸಂಸಾರಕ್ಕಷ್ಟೇ ಅಲ್ಲದೆ ಸಾಹಿತ್ಯಕ್ಷೇತ್ರಕ್ಕೂ ಜೊತೆಯಾಗಿದ್ದರು. ಪ್ರತಿವರ್ಷ ಶ್ರಾವಣಮಾಸದವಚನದಾಸೋಹ ಕಾರ್ಯಕ್ರಮದ ನಿರ್ವಹಣೆ ಇವರದಾಗಿತ್ತು. ಇವರ ಮನೆಯೊಂದು ಸಾಹಿತ್ಯಕುಟೀರ. ಸದಾ ಜನರಿರುತ್ತಿದ್ದರು. ಇವರಿಗೆ ಮೂವರು ಪುತ್ರರು ಮತ್ತು ಓರ್ವ ಪುತ್ರಿಯಿದ್ದು ಎಲ್ಲರೂವಿದ್ಯಾವಂತರಾಗಿ ಅವರವರ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಆಕಾಶವಾಣಿ ಧಾರವಾಡದ ಗಿಳಿವಿಂಡು, ಎಳೆಯರ ಬಳಗ ಕಾರ್ಯಕ್ರಮಗಳಲ್ಲಿ ಇವರ ಕೃತಿಗಳುಬಹಳಷ್ಟು ಪ್ರಸಾರವಾಗಿವೆ. ಇವರ ಮಕ್ಕಳ ಸಾಹಿತ್ಯದ ಭಂಡಾರ ಸಮೃದ್ಧವಾಗಿ ರಚನೆಯಾಗಿದ್ದುಹಲವರಿಗೆ ಸಂಶೋಧನೆಗೂ ವಿಷಯವಾಗಿದೆ. ಪಳೆಯುಳಿಕೆಗಳ ಪುನರುಜ್ಜೀವನದ ಆಶಯವನ್ನುಇಟ್ಟುಕೊಂಡು ಸ್ಥಾಪನೆಗೊಂಡ "ಕಲೆ, ಸಾಹಿತ್ಯ, ಸಂಸ್ಕೃತಿ ಟ್ರಸ್ಟ್" ಇವರ ಮಹತ್ವಾಕಾಂಕ್ಷೆಯಕೊಡುಗೆಯಾಗಿದೆ.
ಈಶ್ವರ ಕಮ್ಮಾರರು ರಚಿಸಿದ ಸಾಹಿತ್ಯ ಅಪಾರವಾದುದಾಗಿದ್ದು ಮಕ್ಕಳ ಸಾಹಿತ್ಯದ ಕೊಡುಗೆಹೆಚ್ಚಿನದಾಗಿದೆ. 'ಪಾಪಾ', 'ಮಕ್ಕಳಲೋಕ', 'ಎಡತಾಕ ಪಟ್ಟಿ' 'ಕೊಟ್ಟಿಗೆಯೊಳಗಿನ ಕೋಣಪ್ಪ' ಮುಂತಾದುವು ಮಕ್ಕಳ ಕವನ ಸಂಕಲನಗಳಾಗಿವೆ. 'ಶಾಲಾರಂಗ' 'ಚೂಡಾರತ್ನ', 'ದಾರಿದೀಪ', 'ರಕ್ಷಾಬಂಧನ' 'ಕೋರ್ಟಿನಲ್ಲಿ ಕಟವಿ' ಮುಂತಾದವು ಮಕ್ಕಳ ನಾಟಕಗಳು. 'ಸಂಕಲ್ಪ', ‘ತಿಪ್ಪಮಾಡಿದ ತಪಸ್ಸು', ‘ಗಿಳಿಯು ಹೇಳಿದ ಗುಲಾಬಿ ಕಥೆ' ಮುಂತಾದ ಕಾದಂಬರಿಗಳಿವೆ. ಇದಲ್ಲದೆಮಹಾನ್ ವ್ಯಕ್ತಿಗಳ ಪರಿಚಯದ ಬರಹಗಳಾಗಿ 'ಸಾರ್ಥಕ ಬದುಕಿನ ಸರದಾರರು', ‘ಕಾಯಕದಲ್ಲಿಕೈಲಾಸ ಕಂಡವರು', ‘ಕೀರ್ತಿವಂತರು' ಮುಂತಾದ ರಚನೆಗಳಿವೆ. ಮಕ್ಕಳ ಕಥಾ ಸಾಹಿತ್ಯಸಂಶೋಧನಾ ಗ್ರಂಥ ಒಂದು ಮುಖ್ಯ ಆಕರಗ್ರಂಥವಾಗಿದೆ. 'ಮನೆಯ ದೀಪ', 'ಮಕ್ಕಳ ಆಟ' ಮುಂತಾದ ಒಂಬತ್ತು ಸಂಪಾದಿತ ಕೃತಿಗಳನ್ನು ತಂದಿದ್ದಾರೆ. ಪ್ರೌಢ ಸಾಹಿತ್ಯದಲ್ಲಿ 'ಗೀತಾಂಜನ' ಕವನಸಂಗ್ರಹ, 'ಸ್ವರ್ಗದಾ ಒಂದು ತುಣುಕು' ಭಾವಗೀತೆಗಳ ಸಂಕಲನ ಮುಂತಾದ ಎಂಟುಕೃತಿಗಳು ಮೂಡಿಬಂದಿವೆ.
ಈಶ್ವರ ಕಮ್ಮಾರನ್ನು ಹುಡುಕಿಕೊಂಡು ಅನೇಕ ಪ್ರಮುಖ ಪ್ರಶಸ್ತಿ ಪುರಸ್ಕಾರಗಳು ಬಂದವು. ಆದರ್ಶ ಶಿಕ್ಷಕ ಪ್ರಶಸ್ತಿ, ಮಕ್ಕಳ ಲೋಕ ಕವನ ಸಂಕಲನಕ್ಕೆ ರಾಜ್ಯ ಪ್ರಶಸ್ತಿ, ಭಾರತ ಸರ್ಕಾರದ ಶಿಶುಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ, ಕಸಾಪದ ವಸುದೇವ ಭೋಪಾಲಂ ದತ್ತಿನಿಧಿ ಪ್ರಶಸ್ತಿ, ಉತ್ತರಪ್ರದೇಶದ ಬಾಲಕಲ್ಯಾಣ ಸಂಸ್ಥಾನದ ಗಂಗಾ ಪ್ರಸಾದ ದ್ವಿವೇದಿಯವರ ಹೆಸರಿನ ಸನ್ಮಾನ, ಧೀಮಂತರು ರಾಜ್ಯೋತ್ಸವ ಪ್ರಶಸ್ತಿ, ಶಿವಮೊಗ್ಗದ ಕರ್ಣಾಟಕ ಸಂಘ ಕೊಡುವ ಶಿವರಾಮಕಾರಂತರ ಹೆಸರಿನ ಪ್ರಶಸ್ತಿಪುರಸ್ಕಾರ, ಶಿಕ್ಷಣಸಿರಿ ರಾಜ್ಯಪ್ರಶಸ್ತಿ, ರಾಷ್ಟ್ರಪತಿಗಳೊಂದಿಗೆ ಚಹಾಕೂಟಕ್ಕೆ ಆಹ್ವಾನ, ಶ್ರವಣಬೆಳಗೊಳದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯಪರಿಷತ್ತಿನಿಂದ ಸನ್ಮಾನ, ಧಾರವಾಡದ ವಿದ್ಯಾವರ್ಧಕ ಸಂಘದ ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಅನೇಕಪ್ರಶಸ್ತಿಗಳು ಇವರ ಮುಡಿಗೇರಿದ್ದವು.
ಈಶ್ವರ ಕಮ್ಮಾರರು ಅನೇಕ ಸಂಘಟನೆಗಳ ಮೂಲಕ ಅಪಾರ ಸೇವೆಯನ್ನು ಮಾಡಿದ್ದರು. ಮಕ್ಕಳಮನೆ ಸಂಸ್ಥೆ ಸ್ಥಾಪಿಸಿ ಅನೇಕ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೆಲೆಕಲ್ಪಿಸಿದರು. ಪರಿಸರವಾದಿಯಾಗಿ ಜನಸಂಘಟನೆ ನಡೆಸಿದರು. ರಾಜ್ಯಮಟ್ಟದ ಮಕ್ಕಳ ಸಾಹಿತ್ಯಸಮ್ಮೇಳನ ನಡೆಸಿದ್ದು ಪ್ರಮುಖ ಸಂಗತಿ. ಇದಲ್ಲದೆ ಮಕ್ಕಳ ಮಂದಿರ ಎಂಬ ಮಾಸಪತ್ರಿಕೆಯಪ್ರಕಟಣೆ, ಮಕ್ಕಳ ಸಾಹಿತ್ಯ ಕಮ್ಮಟಗಳು, ಪ್ರಖ್ಯಾತ ಸಾಹಿತಿಗಳ ಭೇಟಿ ಇತ್ಯಾದಿ ಚಟುವಟಿಕೆಗಳನ್ನುಹಮ್ಮಿಕೊಂಡು ಸದಾ ಕಾರ್ಯನಿರತರಾಗಿರುತ್ತಿದ್ದ ಇವರ ಬಗ್ಗೆ ಏಶಿಯಾದ ಪ್ರತಿಷ್ಠಿತರ ಪಟ್ಟಿಯಲ್ಲಿಬರಹ ದಾಖಲಾಗಿದೆ.
ಹಿರೇಮಗಳೂರು ಕಣ್ಣನ್, ಅನುಪಮಾ ನಿರಂಜನ, ಶಿವರುದ್ರಪ್ಪ, ನಾ. ಡಿಸೋಜ ಮುಂತಾದಅನೇಕ ಗಣ್ಯರು ಇವರನ್ನು ಕುರಿತು ಮೆಚ್ಚುಗೆಯ ನುಡಿಗಳನ್ನು ನುಡಿಯುವ ಮೂಲಕ ಇವರಸಾಹಿತ್ಯ ಸೇವೆಯನ್ನು ಕೊಂಡಾಡಿದ್ದಾರೆ.
ಹೀಗೆ ಸದಾ ಮಕ್ಕಳ ಸಾಹಿತ್ಯ ಕುರಿತು ಚಿಂತಿಸುತ್ತ, ಕ್ರಿಯಾಶೀಲರಾಗಿದ್ದ ಈಶ್ವರ ಕಮ್ಮಾರರು2020ರ ಜನವರಿ 21ರಂದು ತಮ್ಮ ಇಹಲೋಕದ ಪಯಣವನ್ನು ಮುಗಿಸಿದರು.
ಕಾಮೆಂಟ್ಗಳು