ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೀರೇಶಲಿಂಗಂ

ಕಂದುಕೂರಿ ವೀರೇಶಲಿಂಗಂ ಪಂತುಲು

ಕಂದುಕೂರಿ ವೀರೇಶಲಿಂಗಂ ಪಂತುಲು ತೆಲುಗು ನವ್ಯ ಸಾಹಿತ್ಯದ ಪ್ರವರ್ತಕರು ಮಾತ್ರವಲ್ಲದೆ ಸಮಾಜ ಸೇವೆ ಮತ್ತು ಸಮಾಜ ಸುಧಾರಣೆಗಳಿಗಾಗಿ ಅಮರ ಹೆಸರು. ಬೆಂಗಳೂರಿಗೂ ವ್ಯಾಪಿಸಿದ್ದ ಇವರ ಸತ್ಕಾರ್ಯಗಳಲ್ಲಿ, ನಮ್ಮ ಡಿವಿಜಿ ಅವರೂ ಭಾಗಿಯಾಗಿ ಅವರನ್ನು ಅಪಾರವಾಗಿ ಸ್ಮರಿಸಿದ್ದಾರೆ. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. 

ಕಂದುಕೂರಿ ವೀರೇಶಲಿಂಗಂ ಪಂತುಲು ಸಾಹಿತ್ಯದಲ್ಲಿ ಉನ್ನತ ಸ್ಥಾನವನ್ನು ಗಳಿಸಿಕೊಂಡು ಮಹಾವಿದ್ವತ್ಪಂಕ್ತಿಯಲ್ಲಿ  ಅಲಂಕೃತರಾಗಿದ್ದರು.  ಉದಾರ ಮನಸ್ಸಿನವರಾದ ಇವರು ಸ್ತ್ರೀಯರ ಅಭ್ಯುದಯಕ್ಕಾಗಿ, ಅದರಲ್ಲಿಯೂ  ವಿಶೇಷವಾಗಿ ವಿಧವಾವಿವಾಹ ಪ್ರೋತ್ಸಾಹಕ್ಕಾಗಿ ತಮ್ಮ ಸರ್ವಸ್ವವನ್ನೂ ವಿನಿಯೋಗಿಸಿದರು. ಅವರ ಧರ್ಮಪತ್ನಿ ಬಾಪಮ್ಮ ರಾಜಲಕ್ಷ್ಮಮ್ಮನವರೂ ಸಹ ಈ ಎಲ್ಲ ಕಾರ್ಯಗಳಲ್ಲಿ ಸಂಪೂರ್ಣವಾಗಿ ಸಹಭಾಗಿನಿಯಾಗಿದ್ದರು. ಹೀಗೆ ಹತ್ತುಹಲವು ರೀತಿಗಳಲ್ಲಿ ಈ ದಂಪತಿಗಳು ಸಮಾಜಕ್ಕೆ  ಸೇವೆ ಸಲ್ಲಿಸಿ ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರಾಗಿದ್ದರು. 

ವೀರೇಶಲಿಂಗಂ ಪಂತುಲು ಅವರು 1848ರ ಏಪ್ರಿಲ್ 16ರಂದು ರಾಜಮಂದ್ರಿಯಲ್ಲಿ ಜನಿಸಿದರು. ಇವರ ವಂಶಸ್ಥರು  ಪ್ರಕಾಶಂ ಜಿಲ್ಲೆಯ ಕಂದುಕೂರಿನವರು. ತಂದೆ ಸುಬ್ಬರಾಯಡು.  ತಾಯಿ ಪೂರ್ಣಮ್ಮ. ಪಂತುಲು ಅವರ ನಾಲ್ಕನೇ ವಯಸ್ಸಿನಲ್ಲಿ ತಂದೆ ಕಾಲವಾದರು; ಚಿಕ್ಕಪ್ಪನವರಾದ ವೆಂಕಟರತ್ನಂ ಒಡಹುಟ್ಟಿದ ಮಗನಂತೆಯೇ ಆತನನ್ನು ಸಾಕಿ ಸಲಹಿ ಬೆಳೆಸಿದರು. ಐದನೆ ವಯಸ್ಸಿನಲ್ಲಿ ಸ್ಥಳೀಯ ಶಾಲೆಗೆ ಸೇರಿದರು.  ಹೀಗಾಗಿ ವೀರೇಶಲಿಂಗಂ ಅವರಿಗೆ ತೆಲುಗು ಭಾಷೆಯಲ್ಲಿ ಆಸಕ್ತಿ ಮೂಡಿತು. ಆನಂತರದಲ್ಲಿ ಮೆಟ್ರಿಕ್ಯುಲೇಷನ್‍ವರೆಗೂ ಇಂಗ್ಲಿಷ್ ಭಾಷೆಯಲ್ಲಿ  ಅಭ್ಯಾಸ ಮಾಡಿದರು. ಆಗಾಗಲೇ ತೆಲುಗು ಭಾಷೆಯಲ್ಲಿ ಕವಿತ್ವ ಮಾಡುವ ಸಾಮರ್ಥ್ಯ  ಹೊಂದಿದ್ದ ಇವರು ಉಪಾಧ್ಯಾಯರುಗಳಿಗೆ  ಮೆಚ್ಚಿನ  ವಿದ್ಯಾರ್ಥಿಯಾಗಿದ್ದರು.

ವೀರೇಶಲಿಂಗಂ ಪಂತುಲು ಅವರು 1869ರಲ್ಲಿ ಮೆಟ್ರಿಕ್ಯುಲೇಷನ್ ಪೂರೈಸಿ ಅದೇ ವರ್ಷ ಕೊರಂಗೈ ಎಂಬ ಹಳ್ಳಿಯಲ್ಲಿ ಪ್ರಥಮಬಾರಿಗೆ ಉಪಾಧ್ಯಾಯರಾಗಿ ಉದ್ಯೋಗ ಪ್ರಾರಂಭಿಸಿದರು.  1872ರಲ್ಲಿ ಅದೇ ಶಾಲೆಯಲ್ಲಿ ತೆಲುಗು ಪಂಡಿತರಾಗಿ ನಿಯುಕ್ತರಾದರು. 1874ರಲ್ಲಿ ರಾಜಮಂದ್ರಿ ನಗರಕ್ಕೆ ಹತ್ತಿರದಲ್ಲೇ ಇರುವ ದಾವಲೇಶ್ವರಂನಲ್ಲಿ ಅವರೇ ಬಾಲಕಿಯರ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಸ್ಥಾಪಿಸಿ ಅಲ್ಲಿಯೇ ಮುಖ್ಯೋಪಾಧ್ಯಾಯರಾಗಿ ಬಾಲಕಿಯರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡತೊಡಗಿದರು. ನಿರಹಂಕಾರಿಗಳಾಗಿದ್ದ ಇವರು ಧೈರ್ಯಶಾಲಿಯಾಗಿಯೂ ಸಾಹಸಿಯಾಗಿಯೂ ಇದ್ದಕಾರಣ, ಅನಾಥರಿಗೆ ಯಾರಾದರೂ ಕೇಡನ್ನೇ ಆಗಲಿ ಅನ್ಯಾಯವನ್ನೇ ಆಗಲಿ ಎಸಗಿದಲ್ಲಿ ಸಹಿಸುತ್ತಿರಲಿಲ್ಲ.

ಬ್ರಹ್ಮಸಮಾಜದ ಸ್ಥಾಪಕರಾದ ರಾಜಾ ರಾಮಮೋಹನರಾಯ್, ಪಂಡಿತ್ ಈಶ್ವರಚಂದ್ರ ವಿದ್ಯಾಸಾಗರ್, ಕೇಶವಚಂದ್ರ ಸೇನ್ ಮತ್ತು ಆತ್ಮುರಿ ಲಕ್ಷ್ಮಿನರಸಿಂಹ ಮುಂತಾದವರಿಂದ ಹಾಗೂ ಬ್ರಹ್ಮಸಮಾಜದ ಸಿದ್ಧಾಂತಗಳಿಂದ ಪ್ರೇರಣೆ ಹೊಂದಿದ ಪಂತುಲು ಅವರು ಹಿಂದೂ ಸಾಮಾಜಿಕ ದೋಷಗಳನ್ನು ದೂರಗೊಳಿಸಬೇಕೆಂದು ಸಂಕಲ್ಪಿಸಿದರು. ಮಹಿಳೆಯರ ಏಳ್ಗೆಗಾಗಿಯೇ ಸಾಮಾಜಿಕ ಕಾರ್ಯಗಳು ಸ್ಥಿರವಾಗಿ ನಡೆಯುವಂತೆ ‘ಶ್ರೀವಿವೇಕವರ್ಧಿನಿ’ ಎಂಬ ತೆಲುಗು ಮಾಸಪತ್ರಿಕೆಯನ್ನು 1876ರಲ್ಲಿ ಆರಂಭಿಸಿದರು.  ಪ್ರಾರಂಭದಲ್ಲಿ ಮದರಾಸಿನಿಂದ ಅಚ್ಚಾಗಿ ಬರುತ್ತಿದ್ದ ಈ ಪತ್ರಿಕೆ ಕ್ರಮೇಣ ಬಹಳ ಜನಪ್ರಿಯಗೊಂಡ ಕಾರಣ, ತಾವೇ ರಾಜಮಂದ್ರಿಯಲ್ಲಿ ಸ್ವಂತ ಮುದ್ರಣಾಲಯವನ್ನು ಪ್ರಾರಂಭಿಸಿ ಪ್ರಕಟಿಸತೊಡಗಿದರು. ಅನಂತರದಲ್ಲಿ ‘ಸತೀಹಿತಬೋಧಿನಿ’ ಎಂಬ ಮತ್ತೊಂದು ಪತ್ರಿಕೆಯನ್ನು ಮಹಿಳೆಯರಿಗಾಗಿ ಹೊರಡಿಸಿದರು.

ಬಾಲವಿಧವೆಯರ ಪುನರ್ವಿವಾಹಕ್ಕಾಗಿ ಪಂತುಲು ಮಾಡಿದ ಪ್ರಯತ್ನ ತುಂಬಾ ಪರಿಣಾಮಕಾರಿಯಾಯಿತು. ಈ ಸದುದ್ದೇಶದಿಂದ 1878ರಲ್ಲಿ ರಾಜಮಂದ್ರಿಯಲ್ಲಿ ಸಮಾಜಸುಧಾರಣಾ ಸಂಸ್ಥೆಯನ್ನು ಪ್ರಾರಂಭಿಸಿದರು. ಆಗ ಇವರು ದಾಟಬೇಕಾಗಿ ಬಂದ ವಿಘ್ನಗಳೂ, ಸಹಿಸಬೇಕಾಗಿ ಬಂದ ಹಿಂಸೆಗಳೂ ಎಷ್ಟೆಂದು ಹೇಳತೀರದು. ಆದರೂ ಹೆದರದೆ ತಾವು ಹಿಡಿದ ಕಾರ್ಯವನ್ನು ಬಿಡದೆ ನಡೆಸುತ್ತ ಬಂದರು. ಎಷ್ಟೋ ಮಂದಿ ಬಾಲವಿಧವೆಯರು ಪಂತುಲು ಅವರ ಕರುಣೆಯ ದೆಸೆಯಿಂದ ಪುನರ್ವಿವಾಹಿತರಾಗಿ ತಮ್ಮ ಶೋಚನೀಯ ಸ್ಥಿತಿಯಿಂದ ಬಿಡುಗಡೆಯನ್ನು ಹೊಂದಿ ನೆಮ್ಮದಿಯ ಜೀವನ ನಡೆಸಲು ಪ್ರಾರಂಭಿಸಿದರು. ಕೆಲವರನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಪೋಷಿಸುತ್ತ ಬಂದರು.  ಮದರಾಸಿನಲ್ಲಿಯೂ ವಿಧವೆಯರಿಗೋಸ್ಕರ ಸ್ಥಾಪಿಸಿದ ಸದನದಲ್ಲಿ ಅನಾಥರಾದ ಅನೇಕ ಮಂದಿ ವಿಧವೆಯರು ನಿರಾತಂಕ ಜೀವನ ನಡೆಸುತ್ತಿದ್ದರು. ಇದಕ್ಕೋಸ್ಕರ ಅವರು ಮದರಾಸಿನಲ್ಲಿ ಆ ಕಾಲದಲ್ಲಿ ಮೂರ್ನಾಲ್ಕು ಸಾವಿರ ರೂಪಾಯಿ ಬೆಲೆಬಾಳುತ್ತಿದ್ದ ತಮ್ಮ ಸ್ವಂತ ಮನೆಯನ್ನು ಬಿಟ್ಟುಕೊಟ್ಟಿದ್ದರು. ಅಲ್ಲದೆ ಹಿಂದೂ ಸಾಮಾಜಿಕ ಪರಿಷ್ಕರಣದ ಕೂಟದವರಿಗಾಗಿ ಮದರಾಸಿನಲ್ಲಿಯೆ ಮತ್ತೊಂದು ಮಹಡಿಯ ಮನೆಯನ್ನು ಬಿಟ್ಟುಕೊಟ್ಟರು. ಅದೇ ರೀತಿ ರಾಜಮಂದ್ರಿಯಲ್ಲಿ ಬ್ರಹ್ಮಮಂದಿರವನ್ನು ಕಟ್ಟಿಸಿಕೊಟ್ಟರು.

ವೀರೇಶಲಿಂಗಂ ಪಂತುಲು ಅವರು ಮದರಾಸ್ ವಿಶ್ವವಿದ್ಯಾನಿಲಯದಲ್ಲಿ ಬಹುಕಾಲ ಬಿ.ಎ., ಎಂ.ಎ. ಮೊದಲಾದ ಉಚ್ಚತರಗತಿಗಳಿಗೆ ಪರೀಕ್ಷಕರಾಗಿದ್ದು ಆಂಧ್ರ ಸರಕಾರದಲ್ಲಿ ಭಾಷಾಧಿಕಾರಿಗಳಾಗಿಯೂ ಪ್ರಸಿದ್ಧಿ ಪಡೆದರು.

ಪಂತುಲು ಅವರು ತೆಲುಗು, ಇಂಗ್ಲಿಷ್ ಮತ್ತು ಸಂಸ್ಕೃತ  ಭಾಷೆಗಳಲ್ಲಿ ಉತ್ತಮ  ಪ್ರಾವೀಣ್ಯ ಹೊಂದಿದ್ದರು. ಅವರು ಮೂರು ಕಾದಂಬರಿಗಳನ್ನು ತೆಲುಗಿನಲ್ಲಿ ಬರೆದಿದ್ದಾರೆ. 1883ರಲ್ಲಿ ಪ್ರಕಟಗೊಂಡ 'ಸತ್ಯವತೀ ಚಾರಿತ್ರ' ತೆಲುಗು ಸಾಹಿತ್ಯ ಚರಿತ್ರೆಯಲ್ಲಿ ಪ್ರಕಟವಾದ ಪ್ರಥಮ ಕಾದಂಬರಿ ಎಂಬ ಹಿರಿಮೆ ಹೊಂದಿದೆ.  ರಾಜಶೇಖರ ಚರಿತ್ರ ಮತ್ತು ‘ಸತ್ಯರಾಜ ಪೂರ್ವದೇಶ ಯಾತ್ರುಲು' ಇನ್ನೆರಡು  ಪ್ರಸಿದ್ಧ ಕಾದಂಬರಿಗಳು.   ಇವು ಕನ್ನಡದಲ್ಲಿಯೂ ಮೂಡಿದೆ.  ಸತ್ಯವತಿ ಚರಿತ್ರೆಯನ್ನು ಕನ್ನಡಿಸಿದವರು ನಂಜನಗೂಡು ಅನಂತನಾರಾಯಣ ಶಾಸ್ತ್ರಿಗಳು. ರಾಜಶೇಖರ ಚರಿತ್ರೆಯನ್ನು ಕನ್ನಡಿಸಿದವರು ಬೆಳ್ಳಾವೆ ಸೋಮನಾಥಯ್ಯನವರು. ಸತ್ಯರಾಜನ ದೇಶಯಾತ್ರೆಗಳು ಕೃತಿಯನ್ನು ಕನ್ನಡಿಸಿದವರು ಬೆನಗಲ್ ನಾರಾಯಣರಾಯರು. 

ವೀರೇಶಲಿಂಗಂ ಪಂತುಲು ಅವರು 1880ರಲ್ಲಿ ವ್ಯವಹಾರ ಧರ್ಮಬೋಧಿನಿ ಮತ್ತು ಬ್ರಾಹ್ಮ ವಿವಾಹಮು ಕೃತಿಗಳನ್ನು  ರಚಿಸಿದರು. ಇನ್ನೂ ಹಲವು ಕೃತಿಗಳನ್ನು ರಚಿಸಿರುವುದಲ್ಲದೆ ಕೆಲವು ಶಾಸ್ತ್ರಗ್ರಂಥಗಳನ್ನು ತೆಲುಗಿಗೆ ಭಾಷಾಂತರ ಮಾಡಿದರು. ಸ್ತ್ರೀ ವಿದ್ಯಾಭ್ಯಾಸ ಹಾಗೂ ವಿಧವೆಯರ ಪುನರ್ವಿವಾಹದ ಬಗೆಗೂ ಅನೇಕ ಕೃತಿಗಳನ್ನು ತೆಲುಗು ಭಾಷೆಯಲ್ಲಿ ರಚಿಸಿದರು.

ವೀರೇಶಲಿಂಗಂ ಅವರ 13ನೇ ವಯಸ್ಸಿನಲ್ಲಿ  ರಾಜಮಂದ್ರಿಗೆ ಮೂರು ಮೈಲಿ ದೂರವಿರುವ ಕಟ್ಟೇರು ಎಂಬ ಗ್ರಾಮದಲ್ಲಿ ಹುಟ್ಟಿದ 10 ವರ್ಷ ವಯಸ್ಸಿನ ರಾಜಲಕ್ಷ್ಮಿಯೊಡನೆ ವಿವಾಹವಾಯಿತು. ಪತಿಯು ನಡೆಸುತ್ತಿದ್ದ ಸಾಮಾಜಿಕ ಸುಧಾರಣ ಪ್ರಯತ್ನಗಳಲ್ಲಿ ತಮ್ಮ ಪೋಷಣೆಗೆ ಒಪ್ಪಿಸಿಕೊಟ್ಟಿದ್ದ ಬಾಲವಿಧವೆಯರನ್ನು ರಾಜಲಕ್ಷ್ಮಿಯವರು ಮಕ್ಕಳಂತೆ ವಾತ್ಸಲ್ಯದಿಂದ ಸಲಹುತ್ತಿದ್ದರು. ಪತಿಯ ಪ್ರೋತ್ಸಾಹದಿಂದ ತೆಲುಗು ಭಾಷೆಯಲ್ಲಿ ಕ್ರಮೇಣ ಪಾಂಡಿತ್ಯ ಹೊಂದುತ್ತ ಬಂದರು. ಪತಿಗೆ ಕೇವಲ ಪ್ರೀತಿಪಾತ್ರರಾಗಿದ್ದಲ್ಲದೆ, ಸಾಮಾಜಿಕ ಪರಿಷ್ಕರಣ ಪ್ರಯಾಸಗಳಲ್ಲಿಯೂ ಅವರಿಗೆ ಬಹು ಸಹಾಯಕರಾಗಿದ್ದರು. ಅನಾಥರಾದ ವಿಧವೆಯರಿಗೆ ನಿಜವಾಗಿ ತಾಯಿಯಂತೆ ನಡೆದುಕೊಳ್ಳುತ್ತಿದ್ದರು. ಎಲ್ಲರಿಗೆ ಬೇರೆಬೇರೆ ವಿಷಯಗಳನ್ನು ಕಲಿಸುವುದಲ್ಲದೆ ತೆಲುಗು ಭಾಷೆಯಲ್ಲಿ ಓದುವುದನ್ನೂ ಬರೆಯುವುದನ್ನೂ ಕಲಿಸಿಕೊಟ್ಟರು. ರಾಜಮಂದ್ರಿಯಲ್ಲಿ ಒಂದು ಪ್ರಾರ್ಥನಾ ಸಮಾಜವನ್ನು ಸ್ಥಾಪಿಸಿದರು. ಎಲ್ಲರ ಉಪಯೋಗಕ್ಕೆ ಬೇಕಾದ ನೀರನ್ನು ಸನಿಹದಲ್ಲೇ ಇದ್ದ ಗೋದಾವರಿ ನದಿಯಿಂದ ತಾವೇ ಹೊತ್ತುಕೊಂಡು ಬರುತ್ತಿದ್ದರು.

ಸಾಮಾಜಿಕ ಪರಿಷ್ಕರಣವನ್ನು ಕೈಗೊಂಡ ಪಂತುಲು ಅವರು ವಿಧವಾವಿವಾಹ ಆಂದೋಲನವನ್ನು ತಮ್ಮ ಜೀವಿತದ ಮುಖ್ಯ ಗುರಿಯೆಂದು ಭಾವಿಸಿ ಗೋಕುಲಪತಿ ಶ್ರೀರಾಮುಲು ಮತ್ತು ಗೌರಮ್ಮ ಅವರಿಗೆ ಸೇರಿದಂತೆ ಇಬ್ಬರು ಮೂವರು ಬಾಲವಿಧವೆಯರಿಗೆ ಪತ್ನಿಯ ಸಹಕಾರದೊಡನೆ ಭಾರತದಲ್ಲೇ ಪ್ರಥಮವಾಗಿ 1881ರ ಡಿಸೆಂಬರ್ 11ರಂದು ಪುನರ್ವಿವಾಹ ಮಾಡಿಸಿದರು. ಆಗ ಪತ್ನಿಗೆ ನೆಂಟರಿಷ್ಟರ ಕಡೆಯಿಂದ ತೀವ್ರ ವಿರೋಧ ಬಂದಿತು. ಆಗ ರಂಗಾಚಾರ್ಯರೆಂಬ ವಿದ್ವಾಂಸರು ವಿಧವಾ ಪುನರ್ವಿವಾಹಕ್ಕೆ ಸ್ಮೃತಿಗ್ರಂಥಗಳ ಬೆಂಬಲವಿದೆ ಎಂದು ತೋರಿಸಿಕೊಟ್ಟಾಗ ಪಂತುಲುರವರ ಉತ್ಸಾಹ ಇಮ್ಮಡಿಯಾಯಿತು. ತಮ್ಮ ಹೋರಾಟಕ್ಕೆ ಹೆಚ್ಚಿನ ಕಸುವು ಬರಲೆಂದು ಅವರು ರಾಜಮಂದ್ರಿಯಲ್ಲಿ ‘Widow Re-marriage Association’ (WRA) ಎಂಬ ಸಂಸ್ಥೆಯನ್ನೇ ಸ್ಥಾಪಿಸಿದರು. ಈ ಯತ್ನದಲ್ಲಿ ಅವರಿಗೆ ಬೆಂಬಲವಾಗಿ ನಿಂತವರೆಂದರೆ ಬಸವರಾಜು ಗವರಾಜು, ಈಲೂರಿ ಲಕ್ಷ್ಮಿನರಸಿಂಹ, ಬಯಪನೇಡಿ ವೆಂಕಟಜೋಗಯ್ಯ, ಕನ್ನಮರೆಡ್ಡಿ, ಪಾರ್ಥಸಾರಥಿ ನಾಯ್ಡು, ಚಿರ್ರವೂರಿ ಯಜ್ಞನ್ನ ಶಾಸ್ತ್ರಿ, ಕಾಜಾ ರಾಮಕೃಷ್ಣರಾವು ಮತ್ತು ಕೊಮ್ಮ ರಾಮಲಿಂಗಂ ಶಾಸ್ತ್ರಿ.  ಮುಖ್ಯವಾಗಿ ಕಾಕಿವಾಡದ ಪೈಡಿ ರಾಮಕೃಷ್ಣಯ್ಯ ಎಂಬವರು ಈ ಸಂಸ್ಥೆಗೆ 30 ಸಾವಿರ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಿದರು.ಈ ಕಾರ್ಯವನ್ನು ದೃಢವಾಗಿ ಮುಂದುವರಿಸಿದ ಪಂತುಲು ದಂಪತಿಗಳ ಹೆಸರು ರಾಜಮಂದ್ರಿಯಲ್ಲಿ ಮನೆಮಾತಾಯಿತು. 

ಮುಂಬಯಿಯಲ್ಲಿ ಉಮೇಶಚಂದ್ರ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ 1885ರಲ್ಲಿ ನಡೆದ ಪ್ರಪ್ರಥಮ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪಂತುಲು ಅವರು ಸೇವೆ ಸಲ್ಲಿಸಿದರು. 1887ರಲ್ಲಿ ರಾಜಮಂದ್ರಿಯಲ್ಲಿ ಬ್ರಹ್ಮಮಂದಿರವನ್ನೂ ಮತ್ತು ಅಬಲಾಶ್ರಮವನ್ನೂ ಸ್ಥಾಪಿಸಿದರು. ಆ ಆಶ್ರಮದಲ್ಲಿ ಬಾಲವಿಧವೆಯರಿಗೂ, ನಿರ್ಗತಿಕ ಮಹಿಳೆಯರಿಗೂ ಮತ್ತು ಅನಾಥೆಯರಿಗೂ ಅನ್ನ-ವಸ್ತ್ರಗಳನ್ನು ಕೊಟ್ಟು ಅವರನ್ನು ಯಾವುದಾದರೊಂದು ಸ್ವತಂತ್ರ ಜೀವಿಕಾವೃತ್ತಿಗೆ ತಯಾರು ಮಾಡುತ್ತಿದ್ದರು. ಇವರ ಸಾಮಾಜಿಕ ಕಾರ್ಯಗಳನ್ನು ಕಂಡ ಆಂಧ್ರಸರ್ಕಾರ ಪಂತುಲು ಅವರಿಗೆ 1893ರಲ್ಲಿ ‘ರಾವ್ ಬಹಾದುರ್’ ಬಿರುದನ್ನು ನೀಡಿ ಗೌರವಿಸಿತು. 

1909ರ ಸುಮಾರಿನಲ್ಲಿ ಪಂತುಲು ಅವರು ಪತ್ನಿ ರಾಜಲಕ್ಷ್ಮಿಯವರೊಡನೆ ಬೆಂಗಳೂರಿಗೆ ಬಂದು ಚಾಮರಾಜಪೇಟೆಯ ಮೊದಲನೆಯ ರಸ್ತೆಯಲ್ಲಿದ್ದ  (ಈಗಿನ ಈದ್ಗಾ ಮೈದಾನದ ಬಳಿ) ತಮ್ಮ ಮನೆಯಲ್ಲಿ ಬಂದು ತಂಗಿದ್ದರು.  ಆಗ ಇವರನ್ನು ಕಂಡಿದ್ದ ಡಿ.ವಿ.ಜಿ.ಯವರು ತಮ್ಮ ಜ್ಞಾಪಕಚಿತ್ರಶಾಲೆ ಸಂಪುಟ ಆರರ ಕೊನೆಯಲ್ಲಿ ಹೀಗೆ ಸ್ಮರಿಸಿದ್ದಾರೆ: "ನಾನು ನೋಡಿದಾಗ ವೀರೇಶಲಿಂಗಂ ಅವರು ವೃದ್ಧರು. ಕಾಲಿನಲ್ಲಿ ವಾಯುನೋವು ಬಂದಿದ್ದರಿಂದ ಮೊಣಕಾಲಿನವರೆಗೂ ವುಲ್ಲನ್ ಕಾಲುಚೀಲ ಹಾಕಿಕೊಂಡಿರುತ್ತಿದ್ದರು. ತಲೆ, ಮುಖ ಎಲ್ಲ ಕಡೆ ನರೆತ ಕೂದಲು ಒತ್ತೊತ್ತಾಗಿ ಮುಳ್ಳುಮುಳ್ಳಾಗಿ ಬೆಳೆದಿದ್ದರಿಂದ ಹೊಸಬರಿಗೆ ಹೆದರಿಕೆಯಾಗುತ್ತಿತ್ತೋ ಏನೋ ಎಂದು ಅನಿಸುತ್ತಿತ್ತು. ಆದರೆ ಮಾತುಕತೆಯಾಡಿದರೆ ಅವರು ಎಂಥ ವಿನಯಶಾಲಿಯೆಂಬುದು ಗೊತ್ತಾಗುತ್ತಿತ್ತು. ವೀರೇಶಲಿಂಗಂ ಅವರು 45 ವಿಧವಾವಿವಾಹಗಳನ್ನು ಮಾಡಿಸಿದರು. ಅವುಗಳಲ್ಲಿ ಬೆಂಗಳೂರಿನಲ್ಲಿ ನಡೆದವು ಮೂರು ನನಗೆ ತಿಳಿದಿದೆ. ಆ ವಿವಾಹಗಳ ಪೌರೋಹಿತ್ಯದಲ್ಲಿ ನಾನು ಭಾಗವಹಿಸಿದ್ದೂ ಉಂಟು. ಪೌರೋಹಿತ್ಯದಲ್ಲಿ ಸೇರಿದ್ದ ಇನ್ನೊಬ್ಬರು ಶರ್ಮಾ ಎಂಬವರು. ಬಹುಶಃ ಆರ್ಯಸಮಾಜಕ್ಕೆ ಸೇರಿದವರು. ವ್ಯಾಕ್ಸಿನೇಟರ್ ಉದ್ಯೋಗದಲ್ಲಿದ್ದರು. ಅವರು ಆರ್ಯ ಸಮಾಜದವರಾದದ್ದರಿಂದ ಮಂತ್ರಗಳನ್ನು ಕಲಿತಿದ್ದರು. ನನಗೆ ತುಂಡು ತುಣುಕು ಮಂತ್ರಗಳು ಬರುತ್ತಿದ್ದದ್ದರಿಂದ ವಿಧವಾವಿವಾಹ ಸಮಾರಂಭಗಳಿಗೆ ಯಜಮಾನರಾಗಿದ್ದ ಚಕ್ರವರ್ತಿ ವೆಂಕಟವರದಯ್ಯಂಗಾರ್ಯರು ನಮ್ಮಿಬ್ಬರನ್ನು ಪೌರೋಹಿತ್ಯಕ್ಕೆ ನಿಯಮಿಸುತ್ತಿದ್ದರು. ಈ ವಿಧವಾವಿವಾಹ ಸಮಾರಂಭ ವಿಷಯದಲ್ಲಿ ನನಗೆ ಉತ್ಸಾಹವಿತ್ತು. ವಿವಾಹವು ಕಂಟೋನ್ಮೆಂಟಿನಲ್ಲಿ ನಡೆಯತಕ್ಕದ್ದೆಂದು ಗೊತ್ತು ಮಾಡಲು ಇದ್ದ ಕಾರಣವನ್ನು ಹೇಳುತ್ತೇನೆ. ಆ ಕಾಲದಲ್ಲಿ ವಿಧವಾವಿವಾಹದ ಕಾನೂನು ಬ್ರಿಟಿಷ್ ಇಂಡಿಯಾದಲ್ಲಿ ಜಾರಿಯಲ್ಲಿತ್ತು. ಮೈಸೂರು ರಾಜ್ಯವು ಆಗ್ಗೆ ಪ್ರತ್ಯೇಕವಾಗಿದ್ದುದ್ದರಿಂದ ಆ ಕಾನೂನು ದೇಶೀಯ ಸಂಸ್ಥಾನದಲ್ಲಿ ಊರ್ಜಿತವಾಗತಕ್ಕದ್ದಾಗಿರಲಿಲ್ಲ. ಬೆಂಗಳೂರು ಕಂಟೋನ್ಮೆಂಟ್ ಬ್ರಿಟಿಷ್ ಸರಕಾರದ ಆಧೀನದಲ್ಲಿದ್ದ ಕಾರಣದಿಂದ ಬ್ರಿಟಿಷ್ ಇಂಡಿಯಾದ ಕಾನೂನಿಗೆ ಅಲ್ಲಿ ಬಲವಿತ್ತು. ಈ ರೀತಿ ಯೋಚಿಸಿ ಆ ಕಾಲದಲ್ಲಿ ನಡೆದ ಎಲ್ಲ ವಿಧವಾವಿವಾಹಗಳೂ ಕಂಟೋನ್ಮೆಂಟ್ ಪ್ರದೇಶದಲ್ಲಿಯೇ ನಡೆದವು.”

ಪಂತುಲು ಅವರು ಬೆಂಗಳೂರಿಗೆ ಬರಲು ಇದ್ದ ಮುಖ್ಯ ಆಕರ್ಷಣೆಯೆಂದರೆ ವಿಧವಾ ಪುನರ್ವಿವಾಹಕ್ಕೆ ಇಲ್ಲಿ ಇದ್ದ ಪೂರಕವಾದ ವಾತಾವರಣ. 1905ರ ವೇಳೆಗಾಗಲೇ ಬಸವನಗುಡಿಯ ನಾಗಸಂದ್ರ ರಸ್ತೆ (ಇಂದಿನ ಡಿ.ವಿ.ಜಿ.ರಸ್ತೆ) ಯಲ್ಲಿ ಈ ಬಗೆಯ ಸೇವಾಸಂಸ್ಥೆಯಾದ ‘ಅಬಲಾಶ್ರಮ’ ಪ್ರಾರಂಭವಾಗಿತ್ತು. ಆ ದಿನಗಳಲ್ಲಿ ಆರ್ಯಸಮಾಜ, ಬ್ರಹ್ಮಸಮಾಜ, ರಾಮಕೃಷ್ಣ ಮಠ ಮುಂತಾದ ಸಂಸ್ಥೆಗಳ ಸಮಾಜ ಸುಧಾರಣೆಯ ಪ್ರಗತಿಪರ ವಿಚಾರಗಳಿಂದ ಪ್ರೇರಿತರಾಗಿ ಹಲವಾರು ಸಮಾಜಸೇವಾಕಾಂಕ್ಷಿಗಳು ಹುಟ್ಟಿಕೊಂಡಿದ್ದರು. ಅಂತಹವರಲ್ಲೊಬ್ಬರಾದ ಚಕ್ರವರ್ತಿ ವೆಂಕಟವರದಯ್ಯಂಗಾರ್ ಈ ನಿಟ್ಟಿನಲ್ಲಿ ಕಾರ್ಯಶೀಲರಾಗಿದ್ದರು. ಅವರು ಸ್ವತಃ ತಾವೇ ಕೃಷ್ಣಮ್ಮ ಎಂಬ ವಿಧವೆಯನ್ನು ವಿವಾಹವಾಗಿ ಹೊಸ ಹಾದಿ ತುಳಿದವರು. ಪತಿಪತ್ನಿಯರಿಬ್ಬರೂ ಸೇರಿ ತಮ್ಮ ಮನೆಯಲ್ಲಿಯೇ ಅಬಲಾಶ್ರಮಕ್ಕೆ ಅಂಕುರಾರ್ಪಣೆ ಮಾಡಿದರು. ಅನಂತರ ತಮ್ಮಲ್ಲಿದ್ದ ಹಣವನ್ನು ಹಾಕಿ, ಜೊತೆಗೆ ಸಾರ್ವಜನಿಕರಿಂದ ದೇಣಿಗೆಗಳನ್ನು ಸಂಗ್ರಹಿಸಿ ಡಿ.ವಿ.ಜಿ. ರಸ್ತೆಯಲ್ಲಿ ಕಟ್ಟಡವನ್ನು ನಿರ್ಮಿಸಿದರು.  ಈ ರೀತಿಯಾಗಿ ಅವರು ಅನಾಥ, ಅಶಕ್ತ ಮಹಿಳೆಯರಿಗೂ, ವಿಧವೆಯವರಿಗೂ ಆಸರೆ ಕಲ್ಪಿಸಿದರು.
ಹಾಗಾಗಿ ಪಂತುಲುರವರು ಬೆಂಗಳೂರಿನಲ್ಲಿ ಅಂತಹ ಇನ್ನಷ್ಟು ವಿವಾಹಗಳನ್ನು ನೆರವೇರಿಸಲು ಯೋಚಿಸಿದರು. ಪ್ರತಿಬಾರಿ ಆಂಧ್ರದಿಂದ ಬರುವಾಗಲೂ ಅವರು ಮಾಗಂಟಿ ವೆಂಕಟಸುಬ್ಬಮ್ಮ, ನ್ಯಾಪತಿ ಜಾನಿಕಮ್ಮ, ಕಾಮರಾಜುಗುಡ್ಡ ಮಂಗಮ್ಮ ಮುಂತಾದ ಒಬ್ಬಿಬ್ಬ ವಿಧವೆಯರನ್ನು ಈ ಉದ್ದೇಶಕ್ಕಾಗಿ ತಮ್ಮೊಂದಿಗೆ ಕರೆದುಕೊಂಡು ಬರುತ್ತಿದ್ದರು. 1910ರಲ್ಲಿ ಪಂತುಲುರವರು ಬೆಂಗಳೂರಿನಲ್ಲಿ ನಡೆಸಿದ ಮೊತ್ತಮೊದಲ ವಿವಾಹ ನ್ಯಾಪತಿ ಜಾನಿಕಮ್ಮ ಎಂಬ ವಿಧವೆಯದು. ಬೆಂಗಳೂರಿನ ಪ್ರಜ್ಞಾವಂತ ನಾಗರಿಕರು ಈ ವಿಧವಾವಿವಾಹದಲ್ಲಿ ಆಸಕ್ತಿಯಿಂದ ಪಾಲ್ಗೊಂಡರು. ಈ ವಿವಾಹವು ನೂತನವಾದ ರೀತಿಯದಾಗಿದ್ದುದರಿಂದ ಬೆಂಗಳೂರಿನ ದೊಡ್ಡಮನುಷ್ಯರು ವಿಶೇಷವಾಗಿ ಬಂದು ತಾಂಬೂಲಾದಿ ಸತ್ಕಾರಗಳನ್ನು ಸ್ವೀಕರಿಸಿ ಸಂತೋಷಿಸಿ ಹೋಗುತ್ತಿದ್ದರು. 

ಪಂತುಲು ಅವರ ಎಲ್ಲ ಆದರ್ಶಗಳಿಗೆ ಬೆಂಬಲವಾಗಿ ನಿಂತಿದ್ದ ಪತ್ನಿ ರಾಜಲಕ್ಷ್ಮಮ್ಮನವರು 1910ರ ಆಗಸ್ಟ್ 12ರಂದು ತಮ್ಮ 60ನೇ ವಯಸ್ಸಿನಲ್ಲಿ ಮರಣ ಹೊಂದಿದರು. ತಮ್ಮ ಆತ್ಮಕಥೆ ‘ಸ್ವೀಯಚರಿತ್ರಮು’ವಿನ ಎರಡನೇ ಭಾಗವನ್ನು ಬೆಂಗಳೂರಿನ ತಮ್ಮ ಮನೆಯಲ್ಲೇ ಆರಂಭಿಸಿ ಮರುವರ್ಷವೇ ಬರೆದು ಮುಗಿಸಿದರು. ಪಂತುಲು ಅವರು ಪತ್ನಿಯೊಂದಿಗೆ ಕಳೆದ ಮಧುರಕ್ಷಣಗಳನ್ನು ಮರೆಯಲಾಗದೆ ದಾಖಲೆ ಮಾಡಿದ್ದಾರೆ. ಚಾಮರಾಜಪೇಟೆಯ ಮನೆಯನ್ನು ಮಾರಾಟ ಮಾಡಿ ರಾಜಮಂದ್ರಿಗೆ ಹಿಂತಿರುಗಿ ಕೆಲವೇ ವರ್ಷಗಳಲ್ಲಿ ಅಂದರೆ 1919ರ ಮೇ 27ರಂದು ತಮ್ಮ 71ನೇ ವಯಸ್ಸಿನಲ್ಲಿ ಮದರಾಸಿನಲ್ಲಿ ನಿಧನ ಹೊಂದಿದರು. ಇವರ ಸ್ಮರಣಾರ್ಥವಾಗಿ 1974ರಲ್ಲಿ ವಿಶಾಖಪಟ್ಟಣದ ರಾಮಕೃಷ್ಣ ಬೀಚ್‍ನಲ್ಲಿ ಇವರ ಪ್ರತಿಮೆಯನ್ನು ಆಂಧ್ರ ಸರ್ಕಾರ ಅನಾವರಣಗೊಳಿಸುವುದರೊಂದಿಗೆ 25 ಪೈಸೆ ಸ್ಟಾಂಪನ್ನೂ ಬಿಡುಗಡೆ ಮಾಡಲಾಯಿತು.

On Remembrance Day of great name in literature, social work, social reforms and philanthropy Kandukuri Veereshalingam Pantulu 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ