ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 3


ಗೋಕುಲ ನಿರ್ಗಮನ 3

(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)

ಗೋಪಾಲಕರು
ಹಾಡು : ರಾಗ ಮಾಂಡ್

ಬನ್ನಿ ಬನ್ನಿ ನೇಹಿಗಳೇ
ಹಳುವಿಗೋಡುವ
ನಮ್ಮ ಕೃಷ್ಣ ಕೊಳಲನೂದಿ
ಸನ್ನೆ ಮಾಡುವ

ಕೃಷ್ಣ ಕೊಳಲನೂದುತಿರೆ 
ನಿದ್ದೆಯೆಂತು ಬಹುದೆಮಗೆ 
ರಾಮ ಹರೆಯ ಮೋದುತಿರೆ 
ನಿಲ್ವೆವೆಂತು ಮನೆಯೊಳಗೆ - ಬನ್ನಿ ಬನ್ನಿ

ಪಟವ ದಾರ ತುಯ್ಯುವೊಲು 
ಮನವ ತುಯ್ದುದೀ ಕೊಳಲು 
ಅದರ ಸರಕೆ ಹಾರಾಡೆ 
ನಲವೆಲರೊಳು ತಾರಾಡೆ - ಬನ್ನಿ ಬನ್ನಿ

ಸುಮನೆ ಯಮುನೆ ಕಲ್ಯಾಣಿ 
ಚೆಲುವೆ ಚೆನ್ನಿ ಶುಕವಾಣಿ 
ಹೊಸಬಿ ಹೊನ್ನಿ ಹರಿಣಾಕ್ಷಿ 
ನೆರೆದಿಹರೆನಲಿದೆ ಸಾಕ್ಷಿ - ಬನ್ನಿ ಬನ್ನಿ

ಹಗಲಿನಾಚೆಯಿರುಳ ಕರೆ
ನೇರಿಟ್ಟಿತು ನೇಹಿಗರೆ 
ಆಸೆಯಂತೆ ಬಾಳಾಗೆ 
ತೋಷವೊಂದೆ ಮೇಲಾಗೆ - ಬನ್ನಿ ಬನ್ನಿ (ಹಾಡಿಕೊಂಡು ಹೋಗುವರು.)
( ಗೋಪಿಯರ ಮತ್ತೊಂದು ತಂಡ ಕೂಡ ಹಾಡಿಕೊಂಡು ಬರುವುದು.)

**********
ಇಲ್ಲಿ ಗೋಪಾಲಕರು ತಮ್ಮ ಸ್ನೇಹಿತರನ್ನು ಕರೆಯುತ್ತಿರುವರು. ಕಾಡಿಗೆ ಹೋಗುವಾ, ಕೃಷ್ಣ ಕೊಳಲನ್ನು ಊದಿ ಸನ್ನೆ ಮಾಡಿ ಕರೆಯುತ್ತಿದ್ದಾನೆ ಎನ್ನುವರು.

ಕೃಷ್ಣ ಕೊಳಲನ್ನು ಊದುತ್ತಿರಲು ನಮಗೆ ನಿದ್ರೆ ಹೇಗೆಬರುತ್ತದೆ? ಮನೆಯೊಳಗೆ ನಿಲ್ಲುವುದಾದರೂ ಹೇಗೆ?

ಗಾಳಿಪಟವನ್ನು ಅದರ ದಾರ ಅಲುಗಾಡಿಸುವಂತೆ ಈ ಕೊಳಲು ನಮ್ಮ ಮನಸ್ಸನ್ನು ಅಲ್ಲಾಡಿಸುತ್ತಿರುವುದು. ಅದರ ಸ್ವರಕ್ಕೆ ನಾವು ಗಾಳಿಯಲ್ಲಿ ತೇಲಾಡಿದಂತಿದೆ.
ನಮ್ಮೆಲ್ಲರ ಗೆಳತಿಯರೂ ಬಂದಿರುವರು. ಸುಮನೆ, ಯಮುನೆ, ಕಲ್ಯಾಣಿ ಮುಂತಾದವರು ಬಂದಿರುವರೆನ್ನಲು ಅವರ ಧ್ವನಿಯ ಸಾಕ್ಷಿಯಿದೆ.  ಹಗಲು ಮುಗಿದು ಇರುಳು ಕಾಲಿಡುತ್ತಿರುವ ಈ ವೇಳೆಯಲ್ಲಿ ನಾವೆಲ್ಲ ಸಂತೋಷದಲ್ಲಿ ಮುಳುಗುವಾ ಬನ್ನಿ ಬನ್ನಿ ಸ್ನೇಹಿತರೆ ಎಂದು ಕರೆಯುತ್ತಿದ್ದಾರೆ.

ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar

(ನಮ್ಮ ಕನ್ನಡ ಸಂಪದ  Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ'  ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ