ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ. ಆರ್. ಮಹಾದೇವಯ್ಯ

 

ಟಿ. ಆರ್. ಮಹಾದೇವಯ್ಯ

ಟಿ. ಆರ್. ಮಹಾದೇವಯ್ಯ ಪ್ರಾಧ್ಯಾಪಕರಾಗಿ, ಜಾನಪದ ತಜ್ಞರಾಗಿ ಮತ್ತು ನಿಘಂಟು ತಜ್ಞರಾಗಿ ಹೆಸರಾದವರು.

ಮಹಾದೇವಯ್ಯನವರು 1934ರ ಡಿಸೆಂಬರ್ 6ರಂದು  ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಜನಿಸಿದರು. ತಂದೆ ರುದ್ರಯ್ಯ.  ತಾಯಿ ಹೊನ್ನಮ್ಮ. ಪ್ರೌಢಶಾಲೆಯವರೆಗೆ ಗುಬ್ಬಿಯಲ್ಲಿ ಓದಿ, ತುಮಕೂರಿನಲ್ಲಿ ಬಿ.ಎ. ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಎಂ.ಎ.  ಪದವಿಗಳನ್ನು ಗಳಿಸಿದರು. 

ಟಿ. ಆರ್. ಮಹಾದೇವಯ್ಯ ಬೆಂಗಳೂರಿನ ರೇಣುಕಾಚಾರ‍್ಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿದರು. ನಂತರ ಕೆ.ಎಲ್.ಇ. ಸಂಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರ ಹುದ್ದೆ ನಿರ್ವಹಿಸತೊಡಗಿದರು. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಉಪಸಂಪಾದಕರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಕೋಶದ ಸಂಪಾದಕರಾಗಿ, ಕರ್ನಾಟಕ ಸರಕಾರದ ರಾಜ್ಯಭಾಷಾ ಆಯೋಗದ ಸದಸ್ಯರಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದರು. 

ಟಿ. ಆರ್. ಮಹಾದೇವಯ್ಯ  ಅವರು ಶಾಂತಿನಾಥಕವಿ, ಗುಬ್ಬಿಯ ಮಲ್ಲಣಾರ್ಯ, ಸಿದ್ಧರಾಮಣ್ಣ, ಬಾಲಮಹಂತ, ಬಸವಣ್ಣ, ಮಲ್ಲಿಕಾರ್ಜುನ ಶಿವಯೋಗಿಗಳು, ಡಿ.ಎಂ. ಚಂದ್ರಶೇಖರ್ ಮೊದಲಾದವರ ಜೀವನಚರಿತ್ರೆಗಳನ್ನು ಪ್ರಕಟಿಸಿದರು.  ಚಿಂತನ ಚಿಲಮೆ, ಚಿಂತನ ಲಹರಿ, ಚಿಂತನ ಬಾಗಿನ, ಚಿಂತನ ತಾಂಬೂಲ, ಚಿಂತನ ಸೌಭಾಗ್ಯ, ಚಿಂತನಮಾಲೆ, ಚಿಂತನ ಕಿರಣ ಮೊದಲಾದ ಚಿಂತನಪ್ರಧಾನ ಕೃತಿಗಳನ್ನು ಪ್ರಕಟಿಸಿದರು. ಅವರ ಸಂಪಾದಿತ ಕೃತಿಗಳಲ್ಲಿ ನಾಂದಿ, ದಲಿತೋದಯ, ಶರಣ ತತ್ತ್ವಚಿಂತನ, ಉಪನ್ಯಾಸಮಾಲೆ, ಸಮರ್ಪಣೆ, ಸಿದ್ಧರಾಮ ಶ್ರೀವಾಣಿ, ನಿರ್ವಾಣಶ್ರೀ ಮುಂತಾದವು ಇವೆ. ಕನ್ನಡ-ಕನ್ನಡ ನಿಘಂಟು, ಕನ್ನಡ ಜಾನಪದ ಕೋಶ, ಕನ್ನಡ ಸಂಕ್ಷಿಪ್ತ ಪದಕೋಶ, ಕಾನೂನು ಪದಕೋಶ, ಸಚಿತ್ರ ಶಾಲಾ ನಿಘಂಟು ಮುಂತಾದವುಗಳ  ಸಂಪಾದಕರೂ ಆಗಿದ್ದರು. ಇವಲ್ಲದೆ ಬುದ್ಧ-ಬಸವ, ಸರ್ವಾಚಾರ ಸಂಪದ, ಪ್ರೌಢದೇವರಾಯ, ಗುಬ್ಬಿ ತಾಲ್ಲೂಕು ದರ್ಶನ ಮೊದಲಾದ ಅನೇಕ ಕೃತಿಗಳನ್ನು  ಪ್ರಕಟಿಸಿದರು. 

ಟಿ. ಆರ್. ಮಹಾದೇವಯ್ಯ ಅವರ ಶರಣ ಸೌರಭ ಕೃತಿಗೆ ಕಾವ್ಯಾನಂದ ಪುರಸ್ಕಾರ, ಸಾಹಿತ್ಯ ಶ್ರೀ ಪ್ರಶಸ್ತಿ, ಕಿಟ್ಟಲ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಗುಬ್ಬಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದವು. ಅವರ ಹಿತೈಷಿಗಳು ಅರ್ಪಿಸಿದ ಗೌರವ ಗ್ರಂಥ ‘ಸಾತ್ವಿಕ.’ 

On the birth day of Prof. T. R. Mahadevaiah

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ