ಕಾಯೆ ಶ್ರೀ ಹರಿ ಜಾಯೆ
ಕಾಯೆ ಶ್ರೀ ಹರಿ ಜಾಯೆ ಸಜ್ಜನ ಪ್ರೀಯೆ
ಸುರಮುನಿ ಗೇಯೆ - (ಪ)
ತಾಯೇ ಎನ್ನಯ ಕಾಯ ನಿನ್ನದು ಕಾಯೇ ಕರುಣಾಬ್ಧಿಯೇ - (ಅ.ಪ)
ಪದ್ಮ ಮಂದಿರೆ ಪದ್ಮ ಗಂಧಿನಿ
ಪದ್ಮಕುಚ ರಾಣಿ ಪದ್ಮಶರ ಮಾತೇ
ಪದ್ಮ ಬಾಂಧವೆ ಪದ್ಮರಿಪು ತಾಯೆ ॥
ಪದ್ಮಿ ಪದ್ಮಾ ಪದ್ಮಾಭಿನ್ನ ಪದ್ಮಪಾದ ಹೃ-
ತ್ರದ್ಮದೊಳಗಿಟ್ಟ ಮುದ್ದು ಮಹಾ ಲಕುಮೀ - (1)
ಮೂಕ ದಾನವನ ಕೊಂದು ಅವನ
ಕೊಂಕು ಮನ್ನಿಸಿದ ಮೂಕಾಂಬಿಕೆಯೇ
ಶ್ರೀಕಲಾ ಪಾಲಸಾಗರವಾಗಿ ಸಾಕಿದೆ ಋಷಿಯಾ
ವಾಕೇಶ ಶಿವ ಪಾಕಶಾಸನ-
ನೇಕ ಜನ ಪುಷ್ಪ ವೃಷ್ಟಿಗರೆಯಾಲು
ಈ ಕೊಲ್ಲೂರೊಳು ನೀ ಕರುಣದಿ ನಿಂದೀ
ನಿನ್ನ ಪಾದಾಬ್ಜವನ್ನು ಅನುದಿನ ಸನ್ನುತಿಸುವೆ ಚೆನ್ನ ವಿಜಯ ರಾ-
ಯನ್ನ ಮನೆ ಮುಂದೆ ಕುನ್ನಿಯನ್ನೇ
ಮಾಡಿ ಎನ್ನ ಪುಟ್ಟಿಪುದು
ಪನ್ನಗವೇಣಿ ಘನ್ನ ದುರಿತಾಬ್ಧಿಯನ್ನೆ ದಾಟಿಸಿ
ನಿನ್ನ ಆಳ್ವ ಮೋಹನ ವಿಠ್ಠಲ ರಾಯನ್ನ ಎನಗೆ ತೋರೆ - (3)
ಸಾಹಿತ್ಯ: ಮೋಹನದಾಸರು
ಹರಿದಾಸರಲ್ಲಿ ಮಹಿಳಾ ಹರಿದಾಸರಿಗೆ ವಿಟ್ಠಲ ದೀಕ್ಷೆಯನ್ನಿತ್ತು ಬಾಲವಿಧವೆಯಾಗಿದ್ದವರಿಗೂ ಸಹ ಅವರಿಗೆ ಸಾರ್ಥಕಜೀವನದ ದಾರಿಯನ್ನು ತೋರಿಕೊಟ್ಟವರಲ್ಲಿ ಮೋಹನದಾಸರು ಪ್ರಮುಖರು.
ಈ ಮೇಲಿನ ರಚನೆಯು ಪದ್ಮ ಎಂಬ ಶಬ್ದವನ್ನು ವಿಶೇಷವಾಗಿ ಸುಂದರವಾಗಿ ಬಳಸಿದ ಮೊದಲ ಚರಣವನ್ನೂ ಸೇರಿದಂತೆ ಕೊಲ್ಲೂರ ಮೂಕಾಂಬಿಕೆಯ ಸ್ತುತಿಯಾಗಿ ರಚಿಸಲ್ಪಟ್ಟಿದ್ದು ಪ್ರತಿಚರಣದಲ್ಲಿಯೂ ಸುಂದರವಾಗಿ ದ್ವಿತೀಯ ಪ್ರಾಸಗಳನ್ನೊಳಗೊಂಡ ಒಂದು ವಿಶೇಷ ರಚನೆ. ಕ್ಷೇತ್ರ ಗೀತ.
ಕೃಪೆ: ರೋಹಿಣಿ ಸುಬ್ಬುರತ್ನಂ Rohini Subbarathnam
ಕಾಮೆಂಟ್ಗಳು