ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಧರಣಿಗೆ ದೊರೆಯೆಂದು ನಂಬಿದೆ


 

ಧರಣಿಗೆ ದೊರೆಯೆಂದು ನಂಬಿದೆ ಇಂಥ
ಪರಮಲೋಭಿ ಎಂಬುದರಿಯೆ ಶ್ರೀಹರಿಯೆ (ಪ) 

ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ 
ಓಡಿ ನೀರೊಳು ಸೇರಿಕೊಂಡೆ ಬೇಗ 
ಹೇಡಿಯ ತೆರದಲಿ ಮೋರೆಯ ತೋರದೆ 
ಓಡಿ ಅರಣ್ಯದಿ ಮೃಗಗಳ ಸೇರ್ದೆ (ಚ-೧) 

ಬಡವರ ಬಿನ್ನಹ ಲಾಲಿಸದೆ ಹಲ್ಲ 
ಕಡು ಕೋಪದಲಿ ತೆರೆದಂಜಿಸಿದೆ 
ತಡೆಯದೆ ಭಿಕ್ಷುಕನಾದರೆ ಬಿಡರೆಂದು 
ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆ (ಚ-೨) 

ಉತ್ತಮನೆಂದರೆ ಮತ್ತೆ ಚೋರನಾದೆ 
ಬತ್ತಲೆ ನಿಂತೆ ತೇಜಿಯನೇರಿದೆ 
ಎತ್ತಹೋದರು ಬಿಡೆ ಮತ್ತೆ ನಿನ್ನನು ದೇವ 
ಚಿತ್ತಜ ಜನಕ ಶ್ರೀ ಪುರಂದರವಿರಲ (ಚ-೩) 
------------

ಸಾಹಿತ್ಯ: ಪುರಂದರದಾಸರು

ಭಾರತೀಯ ಸರ್ವಭಾಷಾ ಸಾಹಿತ್ಯ ಪರಂಪರೆಯಲ್ಲಿ ನಿಂದಾಸ್ತುತಿಗಳಿಗೆ ಮಹತ್ವದ ಸ್ಥಾನವಿದೆ. ಅದರಲ್ಲೊಂದು ರಚನೆಯಾದ 
ಇದೂ ಸಹ ನಿಂದಾಸ್ತುತಿಯ ಪ್ರಕಾರಕ್ಕೆ ಸೇರಿದ ಒಂದು ದಾಸರ ಪದ. ಆದಿಪ್ರಾಸವಿರುವ  ಈ ರಚನೆಯಲ್ಲಿ ಪುರಂದರದಾಸರು ದಶಾವತಾರಗಳನ್ನು ಸೂಕ್ಷ್ಮವಾಗಿ, ಸ್ವಾರಸ್ಯವಾಗಿ ಚಿತ್ರಿಸಿದ್ದಾರೆ. ಒಂದೇ ಸಾಲಿನಲ್ಲಿ ಎರಡು ಅವತಾರಗಳನ್ನು ಸಂಗ್ರಹಿಸಿರುವ ಜಾಣ್ಮೆಯನ್ನೂ ಗಮನಿಸಬೇಕು. "ಕೊಡಲಿಯ ಪಿಡಿದು” (ಪರಶುರಾಮ), “ಕೋಡಗ ಹಿಂಡ ಕಾಯ್ದೆ” (ರಾಮ) ; ಬತ್ತಲೆ ನಿಂತು (ಬುದ್ಧ) ತೇಜಿಯನೇರಿದೆ (ಕಲ್ಕಿ ). 

ದಶಾವತಾರದ ರಚನೆಗಳು ದಾಸರ ಕಾಲದಲ್ಲಿ ಹೆಚ್ಚಾದವು. ಸಂಗೀತಶಾಸ್ತ್ರ ಗ್ರಂಥಗಳಲ್ಲಿ ದಶಾವತಾರ ಪ್ರಬಂಧಗಳ ಮೊದಲ ಉಲ್ಲೇಖವು ಪಂಡರೀಕವಿಠಲನ ನರ್ತನನಿರ್ಣಯದಲ್ಲಿ ಕಾಣುತ್ತದೆ. 

ಹಿಂದಿನ ಮಟ್ಟಿನಲ್ಲಿ ಈ ಮೇಲಿನ ರಚನೆಯು 
ಶಂಕರಾಭರಣ ರಾಗದಲ್ಲೂ ತ್ರಿವಿಡೆ ತಾಳದಲ್ಲೂ ರೂಢಿಯಿತ್ತೆಂದು ಪ್ರೊ. ಎಸ್. ಕೆ. ರಾಮಚಂದ್ರ ರಾಯರ ಪುಸ್ತಕದಲ್ಲಿ ದಾಖಲಾಗಿದೆ.

ಕೃಪೆ: ರೋಹಿಣಿ ಸುಬ್ಬುರತ್ನಂ Rohini Subbarathnam 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ