ತನ್ನ ಜೀವಿತಾವಧಿಯಲ್ಲಿ ಒಂದಷ್ಟು ಪುಣ್ಯ ಗಳಿಸಿದ ಮಾನವನೊಬ್ಬನು ತನ್ನ ಮರಣಾನಂತರ ಸ್ವರ್ಗ ಸೇರಿದನು. ಪುಣ್ಯ ಕ್ಷೀಣಿಸಿದ ಬಳಿಕ ಅವನು ಭೂಲೋಕದಲ್ಲಿ ಜಿಂಕೆಯಾಗಿ ಜನ್ಮವೆತ್ತಿದನು. ಪೂರ್ವಜನ್ಮದ ಪುಣ್ಯಲೇಶದಿಂದ ಆ ಜಿಂಕೆ ಇತರ ಜಿಂಕೆಗಳಿಗೆ ನಾಯಕನಾಯಿತು. ಆ ಜಿಂಕೆಯ ದೇಹ ಸುವರ್ಣಕಾಂತಿಯಿಂದ ಶೋಭಿಸುತ್ತಿತ್ತು. ಈ ಪಶುಜನ್ಮದಲ್ಲೂ ಪರೋಪಕಾರ ಮಾಡಬೇಕೆಂಬ ಮನೋಭಾವ ಅದರ ಹೃದಯದಲ್ಲಿತ್ತು.
ಒಂದು ದಿನ ನದಿಯ ದಡದ ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದಾಗ ಪ್ರವಾಹದಿಂದ ಕೊಚ್ಚಿಹೋಗುತ್ತಿದ್ದ ಮಾನವನೊಬ್ಬನ ಆರ್ತನಾದ ಕೇಳಿಸಿತು. ಕೂಡಲೇ ನದಿಗೆ ಧುಮುಕಿದ ಜಿಂಕೆ ಕೊಚ್ಚಿ ಹೋಗುತ್ತಿದ್ದ ಮಾನವನನ್ನು ರಕ್ಷಿಸಿತು. ಆತ ತಾನೇನು ಪ್ರತ್ಯುಪಕಾರ ಮಾಡಲಿ ಎಂದು ಕೇಳಿದಾಗ ‘ತನ್ನ ಇರುವಿಕೆಯ ಜಾಗವನ್ನು ಯಾರಿಗೂ ತಿಳಿಸಬೇಡ' ಎಂದು ವಿನಂತಿಸಿಕೊಂಡಿತು. ಆ ಮಾನವ ತನ್ನ ಊರನ್ನು ಸೇರಿಕೊಂಡನು.
ಆ ರಾಜ್ಯದ ರಾಣಿಯ ಕನಸಿನಲ್ಲಿ ಚಿನ್ನದ ಜಿಂಕೆಯ ದರ್ಶನವಾದಾಗ ಆ ಜಿಂಕೆಯನ್ನು ಪಡೆಯಬೇಕೆಂಬ ಆಸೆ ಆಕೆಗೆ ಒಡಮೂಡಿತು. ತನ್ನ ಮನದ ಇಂಗಿತವನ್ನು ರಾಜನಿಗೆ ತಿಳಿಸಿದಾಗ ಆತ ‘ಚಿನ್ನದ ಕಾಂತಿಯ ಜಿಂಕೆಯನ್ನು ಹಿಡಿದು ತಂದವರಿಗೆ ಅಥವಾ ಅದು ಇರುವ ಜಾಗವನ್ನು ತಿಳಿಸಿದವರಿಗೆ ಒಂದು ಸಾವಿರ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಡಲಾಗುವುದು’ ಎಂದು ಡಂಗುರ ಹಾಕಿಸಿದನು.
ಬಡತನದ ಬೇಗೆಯಿಂದ ಬೇಯುತ್ತಿದ್ದ ಆ ಮಾನವ ಧನದಾಸೆಯಿಂದ ರಾಜನ ಬಳಿಗೆ ಬಂದು ಜಿಂಕೆಯಿರುವ ಜಾಗವನ್ನು ತಿಳಿಸುವುದಾಗಿ ವಿನಂತಿಸಿಕೊಂಡನು. ರಾಜನು ಸೈನ್ಯದೊಂದಿಗೆ ಅವನನ್ನು ಕರೆದುಕೊಂಡು ಕಾಡಿಗೆ ನಡೆದನು. ಈ ದೃಶ್ಯವನ್ನು ನೋಡಿದ ಜಿಂಕೆಯು, ‘ಈ ಮಾನವರೆಷ್ಟು ಕೃತಘ್ನರು!’ ಎಂದು ನೊಂದುಕೊಂಡಿತು. ಅಷ್ಟರಲ್ಲಿ ರಾಜನ ಸೈನಿಕರು ಜಿಂಕೆಯ ಬಳಿಗೆ ಧಾವಿಸಿ ಬಲೆ ಬೀಸಿ ಅದನ್ನು ಬಂಧಿಸಿದರು.
ಆಗ ಜಿಂಕೆಯು ‘ಎಲೈ ರಾಜನೇ, ನಾನಿರುವ ಜಾಗ ಗೊತ್ತಾದುದು ಹೇಗೆ? ಈ ಮಾನವನಿಂದಲ್ಲವೇ? ನಾನೇನು ಈತನಿಕೆ ಕೆಡುಕು ಮಾಡಿದ್ದೇನೆ ಎಂದು ಕೇಳು, ಬಳಿಕ ನನ್ನನ್ನು ಒಯ್ಯುವೆಯಂತೆ’ ಎಂದಾಗ ರಾಜನಿಗೆ ಅಚ್ಚರಿಯಾಯಿತು. ತಾನು ತನ್ನ ಬಡತನದಿಂದ ಹೀಗೆ ಮಾಡಿದೆನೆಂದು ಮಾನವ ಒಪ್ಪಿಕೊಂಡಾಗ ರಾಜ ಅವನನ್ನು ಶಿಕ್ಷಿಸಲು ಮುಂದಾದನು. ಆಗ ಜಿಂಕೆಯು ‘ಎಲೈ ರಾಜನೇ ನೀನು ಈತನ ಬಡತನವನ್ನು ಪರಿಹರಿಸು; ಈತನನ್ನು ಶಿಕ್ಷಿಸಬೇಡ. ನನ್ನನ್ನು ಹಿಡಿಯಬೇಕೆಂಬ ದುರಾಸೆಯಾದರೂ ನಿನಗೆ ಹೇಗೆ ಮೂಡಿತು?’ ಎಂದು ಕೇಳಿತು.
ಆಗ ರಾಜನು ತನ್ನ ರಾಣಿಯ ಸ್ವಪ್ನ ವೃತ್ತಾಂತವನ್ನು ತಿಳಿಸಿದನು. ಬಳಿಕ ಜಿಂಕೆಯು ರಾಣಿಗೆ ದರ್ಶನ ನೀಡುವುದಾಗಿ ಒಪ್ಪಿಕೊಂಡು ‘ಅಯ್ಯಾ ರಾಜನೇ, ನೀನು ಪ್ರಜೆಗಳನ್ನು ಪ್ರೀತಿಯಿಂದ ನೋಡಿಕೋ. ನ್ಯಾಯ-ಧರ್ಮಗಳನ್ನು ಸರಿಯಾಗಿ ಪಾಲಿಸು. ನಿನ್ನ ರಾಜ್ಯದಲ್ಲಿ ಯಾರಿಗೂ ಹಿಂಸೆಯಾಗದಿರಲಿ’ ಎಂದು ತಿಳಿಸಿತು. ರಾಜನು ಜಿಂಕೆಯ ಮಾತಿನಂತೆ ನಡೆದುಕೊಂಡು ಪ್ರಜಾವತ್ಸಲನೆನಿಸಿಕೊಂಡನು.
ಪ್ರಾಣಿಯಾದರೂ ಆ ಜಿಂಕೆಯಲ್ಲಿ ಮನೆಮಾಡಿದ ಲೋಕದ ಹಿತಚಿಂತನೆ ಪ್ರಶಂಸೆ ಪಡೆಯಿತು.
ಫೋಟೋ ಕೃಪೆ: ಜೋಷುವಾ ಫರ್ನಾಂಡಿಸ್
ಕಾಮೆಂಟ್ಗಳು