ಬಂಟ್ವಾಳ ಜಯರಾಮ ಆಚಾರ್ಯ
ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯ ಅವರು ನಿಧನರಾಗಿದ್ದಾರೆ. ತೆಂಕುತಿಟ್ಟು ಯಕ್ಷಗಾನದಲ್ಲಿ ಅಗ್ರಗಣ್ಯ ಪಾರಂಪರಿಕ ಹಾಸ್ಯಗಾರರಾಗಿ ಅವರು ಪ್ರಸಿದ್ಧರಾಗಿದ್ದರು.
ಜಯರಾಮ ಆಚಾರ್ಯರು 1957ರ ಅಕ್ಟೋಬರ್ 12ರಂದು ಬಂಟ್ವಾಳದಲ್ಲಿ ಜನಿಸಿದರು. ತಂದೆ ಬಂಟ್ವಾಳ ಗಣಪತಿ ಆಚಾರ್ಯರು. ತಾಯಿ ಭವಾನಿ ಅಮ್ಮ. ಜಯರಾಮ ಆಚಾರ್ಯರು ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ)ಯಲ್ಲಿ ವಿದ್ಯಾಭ್ಯಾಸ ನಡೆಸಿದರು.
ಜಯರಾಮ ಆಚಾರ್ಯರು ತಂದೆಯವರ ಪ್ರೇರಣೆಯಿಂದ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ವೇಷವನ್ನೂ ಮಾಡಿದ್ದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ 'ಲಲಿತ ಕಲಾ ಕೇಂದ್ರ’ಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಅದಾದ ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳದಲ್ಲಿ ತಿರುಗಾಟ ನಡೆಸಿದರು. ಮತ್ತೆ ಕಟೀಲು ಮೇಳ, ಎಡನೀರು ಮೇಳ, ಹೊಸನಗರ ಮೇಳ, ಬಳಿಕ ಹನುಮಗಿರಿ ಮೇಳ ಹೀಗೆ ಸುಮಾರು 50 ವರ್ಷಗಳ ಯಕ್ಷಗಾನ ತಿರುಗಾಟದಲ್ಲಿ ಹಾಸ್ಯಗಾರ ಪಾತ್ರವಲ್ಲದೆ, ಅಗತ್ಯ ಬಿದ್ದಾಗ ಇತರ ಪಾತ್ರಗಳನ್ನೂ ನಿರ್ವಹಿಸಿ ಹೆಸರಾಗಿದ್ದರು.
ಜಯರಾಮ ಆಚಾರ್ಯರಿಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿದ್ದವು.
ಪುತ್ತೂರು ಪ್ರವಾಸಿ ಮೇಳದ ತಿರುಗಾಟಕ್ಕೆಂದು ಮೇಳದವರ ಜೊತೆ ಬೆಂಗಳೂರಿಗೆ ಆಗಮಿಸಿದ್ದ ಜಯರಾಮ ಆಚಾರ್ಯರು 2024ರ ಅಕ್ಟೋಬರ್ 21ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ ಶ್ಯಾಮಲ, ಇಬ್ಬರು ಮಕ್ಕಳು (ವರ್ಷಾ ಮತ್ತು ವರುಣ್ ) ಹಾಗೂ ಭಾರಿ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅಗಲಿದ ಮಹಾನ್ ಕಲಾಚೇತನಕ್ಕೆ ನಮನ 🌷🙏🌷
Bantwal Jayarama Acharya 🌷🙏🌷
ಕಾಮೆಂಟ್ಗಳು