ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿನೋದಾ ರವಿ


 ವಿನೋದಾ ರವಿ


ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಮ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಿನೋದಾ ಅವರು ಸಾಹಿತ್ಯ ಪ್ರೀತಿಯುಳ್ಳ ಹವ್ಯಾಸಿ ಬರಹಗಾರ್ತಿ.

ವಿನೋದಾ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯ ನಂತರದಲ್ಲಿ "ಕುವೆಂಪು ಮತ್ತು ಪುತಿನ ಕಾವ್ಯದಲ್ಲಿ‌ಪ್ರಕೃತಿ ಒಂದು ಅಧ್ಯಯನ" ಮಹಾಪ್ರಬಂಧಕ್ಕೆ ಡಾಕ್ಟರೇಟ್ ಗೌರವ ಗಳಿಸಿದ್ದಾರೆ. 

ವಿನೋದಾ ಅವರಿಂದ ರಚಿತವಾದ  'ಪು.ತಿ. ನರಸಿಂಹಾಚಾರ್' ಕುರಿತ ಕೃತಿ,  ಹೇಮಂತ ಸಾಹಿತ್ಯ ‌ಪ್ರಕಾಶನದ ಸುವರ್ಣೋತ್ಸವ ಮಕ್ಕಳ ಮಾಲೆಯಲ್ಲಿ ಪ್ರಕಟವಾಗಿದೆ. ಇವರು ನೂರಕ್ಕೂ ಹೆಚ್ಚು ಹಲವಾರು ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ‌ಮಂಡನೆ ಹಾಗೂ ಮೂವತ್ತಕ್ಕೂ ಹೆಚ್ಚು ಸಂಶೋಧನಾ ಲೇಖನ ಪ್ರಕಟಣೆ ಮಾಡಿದ್ದಾರೆ.  ನಾಡಿನ ಪ್ರಮುಖ ನಿಯತಕಾಲಿಕಗಳಲ್ಲಿ‌ ಇವರ ಬಹುಮಖಿ ಬರಹಗಳು ಕಂಗೊಳಿಸುತ್ತ ಬಂದಿವೆ.  ಇವರ ಕರುನಾಡ ಕಬ್ಬಿಗರು ಕನ್ನಡ ಕವಿ‌ಕಾವ್ಯ ಪರಿಚಯ ಸರಣಿ,  ಕನ್ನಡ ಭಾರತಿ  ಸಂವಾದ ಕಾರ್ಯಕ್ರಮ,  ರವಿ ಕಾಣದ್ದನ್ನು ಕವಿ‌ ಕಂಡ ರೂಪಕ, ಯುವ ವಾಣಿ ಮುಂತಾದವು ಮೈಸೂರು ಆಕಾಶವಾಣಿಯಲ್ಲಿ ಪ್ರಸ್ತುತಗೊಂಡಿದೆ.  ಹಲವಾರು ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಅನೇಕ ವೇದಿಕೆಗಳಲ್ಲಿ ಇವರ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತ ಬಂದಿವೆ.

ಆಳವಾದ ಅಧ್ಯಯನದ ಹಿನ್ನೆಲೆಯುಳ್ಳ ವಿನೋದಾ ಅವರ ಅಭಿವ್ಯಕ್ತಿಗಳಲ್ಲಿ, ವೈಚಾರಿಕ ಚಿಂತನೆಗಳು, ಶಿಕ್ಷಣ‍ ಕ್ಷೇತ್ರದಲ್ಲಿನ ವಿದ್ಯಾರ್ಥಿಗಳು ಮತ್ತು ಪೋಷಕರುಗಳ ಕುರಿತಾದ ಕಾಳಜಿಗಳು, ಪ್ರಕೃತಿ ಪ್ರೀತಿ, ಹಾಗೂ ಸಾಮಾನ್ಯ ಜನಜೀವನದಲ್ಲಿನ ಆಗುಹೋಗುಗಳು ಆಪ್ತ ಸಂವೇದನೆಗಳನ್ನು ಮೂಡಿಸುವಂತಿವೆ. 

ವಿನೋದಾ ಅವರ ಒಂದು ಕವಿತೆ ಇಂತಿದೆ:

ಬೆಳಗಿನ‌ ಚುಮು ಚುಮು
ಚಳಿಯಲ್ಲಿ 
ಮೆತ್ತಗೆ ಗಾಡಿಯಿಂದ ತರಕಾರಿ
ಬುಟ್ಟಿಗಳನ್ನು ಇಳಿಸಿ
ದೊಡ್ಡ ಪ್ಲಾಸ್ಟಿಕ್ ಹಾಳೆಯನ್ನು ಹಾಸಿ
ತರಕಾರಿಗಳನ್ನು ನೀಟಾಗಿ ಜೋಡಿಸಿ
ಕಾಲಿನ ಗೆಜ್ಜೆಗೂ ವ್ಯಾಪಾರ ಕಲಿಸಿ
ಚಟಪಟನೆ ಸುಡುವ ಸುರುಳಿ
ಪಟಾಕಿಯಂತೆ ಮಾತಾಡುತ್ತಾ
ತರಕಾರಿ ಮಾರುವ ಆಕೆ
ಯಾಕೊ ಈಗ್ಗೆ ಮೂರುದಿನಗಳಿಂದ
ಕಾಣುತ್ತಿಲ್ಲ.!?

ಮುಂಜಾನೆ ಮಂಜಿನ ಪರದೆ
ಕರಗುವ ಮುನ್ನವೇ
ಹಿಡಿ ಹಿಡಿ ಚಳಿಯನ್ನೇ ಹೊದ್ದು
ವಾಕಿಂಗ್ ಶೂ ಸದ್ದು
ನಿತ್ಯವೂ ಮನೆ ಮುಂದು
ಕಾಣಸಿಗುತ್ತಿದ್ದ ಆ ಹಿರಿಯರು
ಯಾಕೊ ಕೆಲವು ದಿನಗಳಿಂದ
ಕಾಣುತ್ತಿಲ್ಲ.

ಸಂಜೆಯ ಹೊತ್ತು
ಬೀದಿ ದೀಪದ ಕಂಬದಡಿಯಲ್ಲಿ
ಹೂ ದಂಡೆಗಳನ್ನು 
ಅಚ್ಚುಕಟ್ಟಾಗಿ ಸುರುಳಿ ಸುತ್ತಿಟ್ಟು
ಮಲ್ಲಿಗೆ ಹೂ ರಾಶಿಯ 
ಹರವಿಕೊಂಡು
ಒಂದೊಂದೆ ಮೊಗ್ಗನ್ನು ದಾರದಲ್ಲಿ
ಇರಿಸಿ ಘಮ್ಮೆನ್ನುವ ಪರಿಮಳದೊಂದಿಗೆ
ಒಪ್ಪವಾಗಿ ಸೀರೆಯುಟ್ಟು
ಹಣೆ ತುಂಬಾ ಕುಂಕುಮವಿಟ್ಟು
ಕೈಬಳೆಗಳ ಸದ್ದಿಗೆ ತನಗೆ ತಾನೆ 
ನಾಚಿಕೊಳ್ಳುತ್ತಾ ಕುಳಿತಿರುತ್ತಿದ್ದ
ಆ ಹೂವಾಡಗಿತ್ತಿ
ಯಾಕೊ ಕೆಲವು ದಿನಗಳಿಂದ
ಕಾಣುತ್ತಿಲ್ಲ.

ಎಲ್ಲಿ ಹೋದರು ಇವರೆಲ್ಲ ,
ಖಾಲಿಯಾಗಿದೆ ಈಗ ಅವರು 
ಗುರುತು ಹೇಳುತ್ತಿದ್ದ ಜಾಗವೆಲ್ಲ.
ಮತ್ತೆ ಮತ್ತೆ ನೆನಪಾಗುತ್ತವೆ
ಅವರೊಂದಿಗಿನ ಮಾತು ಕತೆಯೆಲ್ಲ
ಗುರುತು ಪರಿಚಯದವರಲ್ಲ
ಆದರೂ ಮರೆಯಲಿಕ್ಕೆ ಆಗುತ್ತಿಲ್ಲ

ಬರೀ ನೆನಪುಗಳು ಈಗ
 ಸುರುಳಿಗಳುಸುತ್ತಿಟ್ಟ ಚಾಪೆ  ಬಿಡಿಸಿಟ್ಟಂತೆ 
ಸಾಲಾಗಿ ಬಂದು ಕುಳಿತುಬಿಡುತ್ತವೆ.
ಹರಟೆ ಹೊಡೆಯಲಿಕ್ಕೆ ಕುಳಿತಂತೆ.
 ಒಬ್ಬೊಬ್ಬರೆ ಎದ್ದು ಹೊರಟು ಹೋದ ಕತೆಗಳು ಹಾಗೆ ಉಳಿದುಬಿಡುತ್ತವೆ
 
ಸಿಕ್ಕಾದ ದಾರದುಂಡೆ ಬಿಡಿಸುತ್ತಲೇ ಇರುತ್ತೇನೆ..
ಮರೆಯಾದವರ ನೆನಪುಗಳ ಬಿಡಿಸಿಕೊಳ್ಳುವಂತೆ..

ಸಹೃದಯಿ ವಿನೋದಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Vinoda Ravi 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ