ಮಿತ್ರಾ ವೆಂಕಟ್ರಾಜ
ಮಿತ್ರಾ ವೆಂಕಟ್ರಾಜ
ಮಿತ್ರಾ ವೆಂಕಟ್ರಾಜ ಅವರು ಕನ್ನಡ ಮತ್ತು ಇಂಗಿಷ್ ಸಾಹಿತ್ಯಲೋಕದ ಹೆಸರಾಂತ ಬರಹಗಾರ್ತಿ.
ಮಿತ್ರಾ ವೆಂಕಟ್ರಾಜ ಅವರು 1948ರ ಜುಲೈ 11ರಂದು ಕುಂದಾಪುರದಲ್ಲಿ ಜನಿಸಿದರು. ಅವರು ಬಿ.ಎಸ್ಸಿ ಪದವಿ ಗಳಿಸಿದರು. ಎಪ್ಪತ್ತರ ದಶಕದಲ್ಲಿ ಮದುವೆಯಾಗಿ ಮುಂಬೈಗೆ ಬಂದ ಅವರು ಬಾಲ್ಯದ ಕುರಿತಾದ ಅನುಭವಗಳನ್ನು ಕಥೆಗಳಾಗಿ ಬರೆಯತೊಡಗಿ ಮುಂದೆ ಹೆಸರಾಂತ ಬರಹಗಾರ್ತಿಯಾಗಿ ರೂಪುಗೊಂಡರು.
ಮಿತ್ರಾ ವೆಂಕಟ್ರಾಜ ಅವರ ಕೃತಿಗಳಲ್ಲಿ ಹಕ್ಕಿ ಮತ್ತು ಅವಳು, ರುಕುಮಾಯಿ, ಮಾಯಕದ ಸತ್ಯ, ಒಂದು ಒಸಗೆ ಒಯ್ಯುವುದಿತ್ತು, ನನ್ನಕ್ಕ ನಿಲೂಫರ್ ಕಥಾ ಸಂಕಲನಗಳು; 'ಪಾಚಿ ಕಟ್ಟಿದ ಪಾಗಾರ' ಎಂಬ ಕಾದಂಬರಿ; ಬೊಗಸೆಯಲ್ಲಿಟ್ಟು ಬೆಳಕು ತುಂಬಿ, ಮುಗಿಲು ಮಲ್ಲಿಗೆಯ ಎಟಕಿಸಿ ಎಂಬ ಚಿಂತನ ಸಂಗ್ರಹಗಳು; 'ಒಂದು ಪುರಾತನ ನೆಲದಲ್ಲಿ' ಅಮಿತಾವ್ ಘೋಷ್ ಅವರ ಅನುವಾದ; The white chiffon saree, A warped space ಮುಂತಾದವು ಸೇರಿವೆ.
ಮಿತ್ರಾ ವೆಂಕಟ್ರಾಜ ಅವರಿಗೆ ಒಂದು ಒಸಗೆ ಒಯ್ಯುವುದಿತ್ತು ಕಥೆಗೆ ದಿಲ್ಲಿಯ ಕಥಾಪ್ರಶಸ್ತಿ, ಹಕ್ಕಿ ಮತ್ತು ಅವಳು ಸಂಕಲನಕ್ಕೆ ರತ್ನಮ್ಮ ಹೆಗಡೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಮಹಿಳಾವರ್ಷದ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಹೆಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ಕಾಂತಾವರದ ವರ್ಧಮಾನ ಸಾಹಿತ್ಯ ಪ್ರಶಸ್ತಿ, 2023ನೇ ಸಾಲಿನ ‘ಕರ್ಕಿ ವೆಂಕಟರಮಣ ಸೂರಿ ಶಾಸ್ತ್ರಿ ಪ್ರಶಸ್ತಿ’ ಮುಂತಾದ ಅನೇಕ ಗೌರವಗಳು ಸಂದಿವೆ.
ಮುಂಬೈನ ಪ್ರತಿಭಾನ್ವಿತ ಉದಯೋನ್ಮುಖ ಲೇಖಕಿ ಸವಿತಾ ಅರುಣ್ ಶೆಟ್ಟಿಯವರು ಮಿತ್ರಾ ಅವರ ಸಾಹಿತ್ಯದ ಕುರಿತು ವಿಶೇಷ ಅಧ್ಯಯನ ನಡೆಸಿ ತಾವು ಮಾಡಿದ ಸಂಶೋಧನೆಗೆ 'ಬೆಳಕಿಂಡಿ' ಎಂಬ ಅರ್ಥಪೂರ್ಣ ಶೀರ್ಷಿಕೆಯನ್ನಿತ್ತು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.
ಮಿತ್ರಾ ವೆಂಕಟ್ರಾಜ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Mithra Venkatraj 🌷🙏🌷

ಕಾಮೆಂಟ್ಗಳು