ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರೊ. ರಾಮದಾಸ್


 ರಾಮದಾಸ್

ಪ್ರಖ್ಯಾತ ರಂಗತಜ್ಞ, ಬರಹಗಾರ, ಶಿಕ್ಷಕ ರಾಮದಾಸರು ಹುಟ್ಟಿದ್ದು ಫೆಬ್ರುವರಿ 1, 1940ರಂದು ಉಡುಪಿ ತಾಲ್ಲೂಕಿನ ಉಚ್ಚಲಗ್ರಾಮದಲ್ಲಿ. ತಂದೆ ಗುರುರಾಜ ಕುಂಡಂತಾಯ, ತಾಯಿ ಸತ್ಯಭಾಮ. ತಂದೆಗೆ ಹೊಟೇಲು ಉದ್ಯೋಗ. ಗುಂಡ್ಲು ಪೇಟೆ, ಟಿ.ನರಸೀಪುರ, ಮೈಸೂರು ಮುಂತಾದ ಕಡೆಗಳಲ್ಲಿ ವ್ಯಾಪಾರ.

ತಂದೆಯ ಅಕಾಲಮರಣ, ನಾಲ್ವರು ತಮ್ಮಂದಿರು ಒಬ್ಬಳು ತಂಗಿ ತಾಯಿಯನ್ನೊಳಗೊಂಡ ಸಂಸಾರದ ಹೊಣೆಯಿಂದ  ಎಸ್.ಎಸ್.ಎಲ್.ಸಿ. ಮುಗಿಸಿ ಓದಿಗೆ ಶರಣು ಇಡ್ಲಿವಡೆ ತಟ್ಟೆ ಹೊತ್ತು ಮಾರಾಟ ಮಾಡಿ ಬದುಕಲಾರಂಭಿಸಿದರು. ಆದಾಯ ಕಡಿಮೆ, ಖರ್ಚು ಜಾಸ್ತಿ. ಕಡೆಗೆ ಸೇರಿದ್ದು ಮೈಸೂರು ಇಂದ್ರಭವನ ಹೋಟೇಲಿನಲ್ಲಿ ಸಪ್ಲೈಯರ್ ಕೆಲಸಕ್ಕೆ. ನಂತರ ಇಂದ್ರ ಕೆಫೆಗೆ ವರ್ಗಾವಣೆ. ಮಾಲೀಕರ ಔದಾರ್ಯಡದಿಂದ ಓದಿಗೆ ಅವಕಾಶ. ಪೂರ್ಣಾವಧಿ ಕೆಲಸ, ಅರೆಕಾಲಿಕ ವಿದ್ಯಾರ್ಥಿ.  ಹೀಗೆ ವಿದ್ಯಾರ್ಥಿ ಆದವರು 1964ರಲ್ಲಿ ಬಿ.ಎ. ಪದವಿಯನ್ನು ಪ್ರಥಮ ಸ್ಥಾನದಲ್ಲೂ 1966ರಲ್ಲಿ ಎಂ.ಎ ಪದವಿಯನ್ನು ಉಪಕುಲಪತಿಗಳ ಚಿನ್ನದ ಪದಕ ಪಡೆದು ಪೂರೈಸಿದರು.

ರಾಮದಾಸರು 1966ರಿಂದ 69ರವರೆಗೆ ಮೂಲ್ಕಿ ವಿಜಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಸಿ.  1969ರಿಂದ ನಿವೃತ್ತಿಯವರೆಗೂ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಪ್ರಾಚಾರ್ಯಲರಾಗಿ ಸಲ್ಲಿಸಿದ ಸೇವೆ ಸಲ್ಲಿಸಿದರು

ರಾಮದಾಸರಿಗೆ ಬಾಲ್ಯದಿಂದಲೂ ಹಳ್ಳಿ ನಾಟಕದಲ್ಲಿ ಆಸಕ್ತಿ. ನಾಟಕ ನೋಡಿದರು, ಆಡಿಸಿದರು. ನಟನಾಗಿ, ನಿರ್ದೇಶಕರಾಗಿ ಬೆಳೆದರು. ಕಾರ್ನಾಡರ ತುಘಲಕ್ ನಾಟಕದ-ತುಘಲಕನಾಗಿ, ಈಡಿಪಸ್ ನಾಟಕದ-ಈಡಿಪಸ್ ಆಗಿ, ಅಂಧಯುಗದಲ್ಲಿ ಅಶ್ವತ್ಥಾಮನಾಗಿ, ಗೋವಿಂದ ಪೈಗಳ ಹೆಬ್ಬೆರಳು ನಾಟಕದಲ್ಲಿ ಹಿರಣ್ಯಧನುವಾಗಿ ನಟಿಸಿದರು. ಆಕಾಶವಾಣಿಯಲ್ಲಿ  ನೂರಾರು ನಾಟಕ ಪ್ರಯೋಗಗಳನ್ನು ಮಾಡಿದರು. ‘ಸಮೂಹ’, ‘ರಂಗಭೂಮಿ’ ಸಂಪರ್ಕಕ್ಕೆ ಬಂದರು. ಕುಮಾರರಾಮ, ಬಂಜೆ, ಸಂಕ್ರಾಂತಿ, ಹರಕೆಯ ಕುರಿ, ತಲೆದಂಡ ನಾಟಕದಲ್ಲಿ ನಟ. ನಾಯಿಕತೆ, ತಲೆದಂಡ, ಜೋಕುಮಾರ ಸ್ವಾಮಿ ನಾಟಕಗಳ ನಿರ್ದೇಶನ ಮಾಡಿದರು.

ರಾಮದಾಸರು ಹಲವಾರು ಸಾಹಿತ್ಯಕೃತಿಗಳ  ರಚನೆ ಮಾಡಿದರು. ಭಸ್ಮಾಸುರ, ಹಾಡು-ಪಾಡು, ಋತಗೀತಾಮೃತ ಮೊದಲಾದ ಏಳು ಕವನ ಸಂಕಲನಗಳು; ಇವಳು, ಕರ್ತಾರನ ಕಮ್ಮಟ, ಮುಕ್ತಪ್ರೇಮ-ಕಾದಂಬರಿಗಳು; ಸೇಡು, ಹತ್ತು ಕಥೆಗಳು-ಕಥಾಸಂಕಲನ; ಗುಂಡಾಭಟ್ಟನ ಖಂಡೀ ಅಂಗಡಿ, ಕಾಲಲಬ್ಧಿ ಮುಂತಾದ 15 ಏಕಾಂಕ ನಾಟಕಗಳು; ಥಾಮಸ್‌ನ ಗಾಸ್ಪೆಲ್ಸ್, ಜೆ.ಕೆ. ಉಪನ್ಯಾಸಗಳು, ಸಖಾರಾಂ ಬೈಂಡರ್-ಅನುವಾದಗಳು; ಭೂಮಿಗೀತ ಕಾವ್ಯಪ್ರವೇಶ, ಅಧ್ಯಯನ, ರಂಗ-ಅಂತರಂಗ, ಚಿಂತನ ಮೊದಲಾದ ವಿಮರ್ಶಾ ಗ್ರಂಥಗಳು ಸೇರಿ 40ಕ್ಕೂ ಹೆಚ್ಚು ಕೃತಿ ಪ್ರಕಟ ಮಾಡಿದರು.

ರಾಮದಾಸರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಉಡುಪಿ ರಂಗಭೂಮಿ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಪೆರ್ಲ ಕಾವ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದವು.

Tag: Prof. Ramadas

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ