ನಾಡ ದೇವಿಯೆ ಕಂಡೆ
ನಾಡ ದೇವಿಯೇ ಕಂಡೆ ನಿನ್ನ
ಮಡಿಲಲ್ಲಿ ಎಂಥ ದೃಶ್ಯಾ
ನೋವು ನಲಿವು ಸಮ್ಮಿಶ್ರದಲ್ಲಿ
ಎದೆಯಾಯಿತದಕೆ ವಶ್ಯ
ಒಂದೆದೆಯ ಹಾಲ ಕುಡಿದವರ ನಡುವೆ
ಎಷ್ಟೊಂದು ಭೇದ ತಾಯೀ
ಒಂದೆ ನೆಲದ ರಸ ಹೀರಲೇನು
ಸಿಹಿ ಕಹಿಯ ರುಚಿಯ ಕಾಯೀ
|| ನಾಡದೇವಿಯೇ ||
ಕತ್ತಲಲ್ಲಿ ಕಂಗೆಟ್ಟು ಎಡವಿ
ತಡವರಿಸುತಿರಲು ಮಂದೀ
ಕಡೆಗಣಿಸುತವರ ನಡೆದಿರುವನೊಬ್ಬ
ಸ್ವಹಿತಕ್ಕೆ ಹಿಡಿದು ದೊಂದಿ
ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ
ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ
ವೈಭವದ ಹುಟ್ಟುಹಬ್ಬಾ
|| ನಾಡದೇವಿಯೇ ||
ಅನ್ನವಿರದ ಹಸುಳೆಗಳ ತಬ್ಬಿ
ಅಳುತಿರುವ ತಾಯ ಕಂಡೆ
ದುಃಖ ಪೂರ ಉಕ್ಕುಕ್ಕಿ ಮೊರೆಯೆ
ಕೊಚ್ಚಿತ್ತು ಬಾಳ ದಂಡೆ.
ಹೊಟ್ಟೆ ಹೇಳಿಗೆಯ ಬಿಚ್ಚಿ,
ಹಸಿದ ಹಾವನ್ನು ಚುಚ್ಚಿ ಕೆಣಕಿ
ಯುಕ್ತಿ ರಾಗದಲಿ ಕುಣಿಸಿ, ದಣಿಸಿ,
ನಲಿದಿಹರು ಹಲರು ಬದುಕಿ.
|| ನಾಡದೇವಿಯೇ ||
ನರನನ್ನೆ ಗಾಳವಾಗಿಸುತ ಬಾಳ
ನೀರಲ್ಲಿ ನಲಿವನರಿಗೆ
ನಾವೊಂದು ಎನುವ ಸತ್ಯಕ್ಕೆ
ಅಡ್ಡಗಾಲೆಳೆವ ನಾಡಿನರಿಗೆ
ಎಚ್ಚರವ ನೀಡಿ ತಿದ್ದುತ್ತಲಿರಲಿ
ಕವಿಭಾವವೆಂಬ ಬಡಿಗೆ,
ತಾಯಿ ಭಾರತಿಯೇ ಇದುವೆ ನಿನಗೆ
ನಾ ಸಲಿಸಲಿರುವ ಕೊಡುಗೆ.
|| ನಾಡದೇವಿಯೇ ||
ಗುರಿ ಮುಟ್ಟುತಿರಲಿ ಈ ಜೀವ ತಾನು,
ಹಿಡಿದೊಂದು ದಿಟದ ದಾರಿ.
ಮರೆಯದಂತೆ ಹೊರಿಸಿರುವ ಋಣವ,
ಕೃತಿಯಲ್ಲಿ ಅದನು ಸಾರಿ.
ನಿನ್ನೊಲವ ತೈಲ ನನ್ನೆದೆಯೊಳಿರಲಿ
ಬೆಳಗಿರಲಿ ಬಾಳ ಬುತ್ತಿ
ಕೊನೆ ಕಾಣಲಮ್ಮ ಅನುಭವದಿ ಮಾಗಿ,
ನಿನ್ನಡಿಗೆ ಬಾಗಿನೆತ್ತಿ.
||ನಾಡದೇವಿಯೇ|
ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್
Tag: Naada Deviye
ಕಾಮೆಂಟ್ಗಳು