ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಡ ದೇವಿಯೆ ಕಂಡೆ




ನಾಡ ದೇವಿಯೇ ಕಂಡೆ ನಿನ್ನ
ಮಡಿಲಲ್ಲಿ ಎಂಥ ದೃಶ್ಯಾ
ನೋವು ನಲಿವು ಸಮ್ಮಿಶ್ರದಲ್ಲಿ
ಎದೆಯಾಯಿತದಕೆ ವಶ್ಯ
ಒಂದೆದೆಯ ಹಾಲ ಕುಡಿದವರ ನಡುವೆ 
ಎಷ್ಟೊಂದು ಭೇದ ತಾಯೀ
ಒಂದೆ ನೆಲದ ರಸ ಹೀರಲೇನು 
ಸಿಹಿ ಕಹಿಯ ರುಚಿಯ ಕಾಯೀ 
|| ನಾಡದೇವಿಯೇ ||

ಕತ್ತಲಲ್ಲಿ ಕಂಗೆಟ್ಟು ಎಡವಿ 
ತಡವರಿಸುತಿರಲು ಮಂದೀ
ಕಡೆಗಣಿಸುತವರ ನಡೆದಿರುವನೊಬ್ಬ 
ಸ್ವಹಿತಕ್ಕೆ ಹಿಡಿದು ದೊಂದಿ
ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ 
ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ
ವೈಭವದ ಹುಟ್ಟುಹಬ್ಬಾ 
|| ನಾಡದೇವಿಯೇ ||

ಅನ್ನವಿರದ ಹಸುಳೆಗಳ ತಬ್ಬಿ
ಅಳುತಿರುವ ತಾಯ ಕಂಡೆ
ದುಃಖ ಪೂರ ಉಕ್ಕುಕ್ಕಿ ಮೊರೆಯೆ
ಕೊಚ್ಚಿತ್ತು ಬಾಳ ದಂಡೆ.
ಹೊಟ್ಟೆ ಹೇಳಿಗೆಯ ಬಿಚ್ಚಿ, 
ಹಸಿದ ಹಾವನ್ನು ಚುಚ್ಚಿ ಕೆಣಕಿ 
ಯುಕ್ತಿ ರಾಗದಲಿ ಕುಣಿಸಿ, ದಣಿಸಿ,
ನಲಿದಿಹರು ಹಲರು ಬದುಕಿ.
|| ನಾಡದೇವಿಯೇ ||

ನರನನ್ನೆ ಗಾಳವಾಗಿಸುತ ಬಾಳ
ನೀರಲ್ಲಿ ನಲಿವನರಿಗೆ
ನಾವೊಂದು ಎನುವ ಸತ್ಯಕ್ಕೆ 
ಅಡ್ಡಗಾಲೆಳೆವ ನಾಡಿನರಿಗೆ 
ಎಚ್ಚರವ ನೀಡಿ ತಿದ್ದುತ್ತಲಿರಲಿ 
ಕವಿಭಾವವೆಂಬ ಬಡಿಗೆ,
ತಾಯಿ ಭಾರತಿಯೇ ಇದುವೆ ನಿನಗೆ 
ನಾ ಸಲಿಸಲಿರುವ ಕೊಡುಗೆ. 
|| ನಾಡದೇವಿಯೇ ||

ಗುರಿ ಮುಟ್ಟುತಿರಲಿ ಈ ಜೀವ ತಾನು, 
ಹಿಡಿದೊಂದು ದಿಟದ ದಾರಿ. 
ಮರೆಯದಂತೆ ಹೊರಿಸಿರುವ ಋಣವ, 
ಕೃತಿಯಲ್ಲಿ ಅದನು ಸಾರಿ.
ನಿನ್ನೊಲವ ತೈಲ ನನ್ನೆದೆಯೊಳಿರಲಿ
ಬೆಳಗಿರಲಿ ಬಾಳ ಬುತ್ತಿ 
ಕೊನೆ ಕಾಣಲಮ್ಮ ಅನುಭವದಿ ಮಾಗಿ, 
ನಿನ್ನಡಿಗೆ ಬಾಗಿನೆತ್ತಿ.
||ನಾಡದೇವಿಯೇ|

ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್

Tag: Naada Deviye


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ