ಷಡಕ್ಷರಪ್ಪ ಶೆಟ್ಟರ್
ವಿಶ್ವಮಾನ್ಯ ಇತಿಹಾಸ ತಜ್ಞ ಷಡಕ್ಷರಪ್ಪ ಶೆಟ್ಟರ್
ಶೆಟ್ಟರ್ ಅವರು ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕಿನ ಹಂಪಸಾಗರದಲ್ಲಿ 1935 ವರ್ಷದ ಡಿಸೆಂಬರ್ 11 ರಂದು ಜನಿಸಿದರು. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ನಲ್ಲಿ ಉನ್ನತ ವ್ಯಾಸಂಗ ಪಡೆದ ಇವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಅನೇಕ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಶೆಟ್ಟರ್ ಅವರ ಸಂಶೋಧನೆಗಳ ಕೊಡುಗೆ ಸಾಕಷ್ಟು ಇದೆ. ಶೆಟ್ಟರ್ ಅವರು 1960-96 ಅವಧಿಯಲ್ಲಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪನ ನಡೆಸಿದರು. ಇದಲ್ಲದೆ ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ದಕ್ಷಿಣ ಭಾರತ ಶಾಖೆಯ ನಿರ್ದೇಶಕತ್ವ ಮುಂತಾದ ಹಲವಾರು ಪ್ರತಿಷ್ಟಿತ ಜವಾಬ್ದಾರಿಗಳನ್ನೂ ಅವರು ನಿರ್ವಹಿಸಿದ್ದರು
ಕೇಂಬ್ರಿಜ್, ಹಾರ್ವರ್ಡ್, ಹೈಡಲ್ ಬರ್ಗ್, ಅಥೆನ್ಸ್, ಲೈಡನ್, ಮಾಸ್ಕೋ ವಿಶ್ವವಿದ್ಯಾನಿಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಕೀರ್ತಿ ಸಹಾ ಇವರದಾಗಿತ್ತು.
ಭಾರತೀಯಇತಿಹಾಸ ಅನುಸಂಧಾನ ಪರಿಷತ್, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಹಾಗು ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್ಗಳ ಸರ್ವಾಧ್ಯಕ್ಷ ಸ್ಥಾನಗಳನ್ನು ಶೆಟ್ಟರ್ ಅಲಂಕರಿಸಿದ್ದರು. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನದ ಗೌರವ ಹಾಗೂ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಸಹಾ ಶೆಟ್ಟರ್ ನಿರ್ವಹಿಸಿದ್ದರು.
ಶೆಟ್ಟರ್ ಅವರ ಬರಹಗಳಲ್ಲಿ ಶ್ರವಣಬೆಳಗೊಳ, ಸಾವಿಗೆ ಆಹ್ವಾನ, ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ, ಸೋಮನಾಥಪುರ, ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ, ಸಾವನ್ನು ಅರಸಿ, ಸಾವನ್ನು ಸ್ವಾಗತಿಸಿ, ಹಳಗನ್ನಡ- ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ, ಹಳಗನ್ನಡ ಭಾಷೆ, ಭಾಷಾ ಬೆಳವಣಿಗೆ ಮತ್ತು ಭಾಷಾ ಬಾಂಧವ್ಯ, ಪ್ರಾಕೃತ ಜಗದ್ವಲಯ ಮುಂತಾದವು ಸೇರಿವೆ.
ಇಂಗ್ಲಿಷಿನಲ್ಲಿ Hoysala Sculpture in the National Museum, Copenhagen, Sravana Belagola-An illustrated study, Inviting Death, Historical Experiment on Sepulchar Hill,
Inviting Death:IndianAttitude Towards the Ritual Death, Pursuing Death: Philosophy and Practice of Voluntary Termination of Life,
Hampi-A Medieval Metropolis, Hoysala temples, Footprints of Artisans in History, Somanathapura,
Akssarameru's Kaliyuga Vipartan ಮುಂತಾದ ಪ್ರಮುಖ ಕೃತಿಗಳಿವೆ.
ಈ ಮೇಲ್ಕಂಡ ಕೃತಿಗಳಲ್ಲದೆ ಇತರರೊಡಗೂಡಿ Archaeological Survey of Mysore: Annual Reports,
Memorial Stones: A Study of the origin, significance and variety;
Indian Archaeology in Retrospect,
Construction of Indian Railways,
Jalianwala Bagh massacre,
Pangs of Partition ಮುಂತಾದ ಬಹು ಸಂಪುಟಗಳ ಕೃತಿಗಳಲ್ಲಿ ಅವರ ಕೊಡುಗೆ ಇದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್, ಮಾಸ್ತಿ ಪ್ರಶಸ್ತಿ, ರನ್ನ ಪ್ರಶಸ್ತಿ, 2016ರ ಶಾಸ್ತ್ರೀಯ ಕನ್ನಡ ವಾಙ್ಮಯದ ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಶೆಟ್ಟರ್ ಅವರಿಗೆ ಸಂದಿದ್ದವು.
ವಿಶ್ವಮಾನ್ಯ ಇತಿಹಾಸತಜ್ಞರಾದ ಪ್ರೊ. ಷಡಕ್ಷರಪ್ಪ ಶೆಟ್ಟರ್ 28.02.2020 ರಂದು ನಿಧನರಾದರು.
Respects to the departed soul Prof. S. Shettar
ಕಾಮೆಂಟ್ಗಳು