ಎಂ. ಎ. ಜಯರಾಮ ರಾವ್
ಎಂ. ಎ. ಜಯರಾಮ ರಾವ್
ಇಂದು ಮಹಾನ್ ಗಮಕಿಗಳೂ, ಪತ್ರಿಕಾ ಕ್ಷೇತ್ರದ ಪ್ರಸಿದ್ಧರೂ ಆದ ವಿದ್ವಾನ್ ಎಂ. ಎ. ಜಯರಾಮ ರಾವ್ ಅವರ ಜನ್ಮದಿನ. ಈ ಸಂದರ್ಭದಲ್ಲಿ ಅವರ ಪುತ್ರಿ ಆತ್ಮೀಯ ಕುಮುದವಲ್ಲಿ ಅರುಣ್ ಮೂರ್ತಿ ಅವರು ಕನ್ನಡ ಸಂಪದಕ್ಕಾಗಿ ಬರೆದ ವಿಶೇಷ ಲೇಖನ ಇಲ್ಲಿದೆ.
***
ನನ್ನ ತಂದೆ ಎಂ.ಎ.ಜಯರಾಮ ರಾವ್. ಹುಟ್ಟಿದ್ದು ಮಡಿಕೇರಿಯಲ್ಲಿ. ಲಕ್ಷ್ಮಿದೇವಮ್ಮ ಹಾಗೂ ಅನಂತಪದ್ಮನಾಭರಾಯರ ದ್ವಿತೀಯ ಪುತ್ರ. ತುಳಸಿ ಕಾರ್ತೀಕ, ಅಂದ್ರೆ ಉತ್ಥಾನ ದ್ವಾದಸಿಯಂದು ಜನಿಸಿದ ಮಗನಿಗೆ, ಜಯರಾಮ ಅಂತ ಹೆಸರಿಡೋಕೂ ಕಾರಣ ಹೇಳ್ತಾ ಇದ್ರು ನಮ್ಮ ತಾತ! ಆವತ್ತು, ತುಳಸೀ ರಾಮಾಯಣದ ಅಂತಿಮ ಭಾಗದ ವಾಚನ, ವ್ಯಾಖ್ಯಾನ ಮುಗಿಸಿ, ಮಂಗಳ ಹಾಡುವಾಗ, ಮಗ ಜನಿಸಿದ ಸುದ್ದಿ ತಾತನಿಗೆ ಬಂದಿತ್ತಂತೆ. ಆಗಲೇ ಅವರು, ಮಗುವಿನ ಹೆಸರು ಜಯರಾಮ ಅಂತ ತೀರ್ಮಾನಿಸಿ ಬಿಟ್ಟರಂತೆ. ನನ್ನ ತಾತ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ರೂ ಅವರಿಗೆ ಸಂಗೀತದಲ್ಲಿ ಅತೀವ ಆಸಕ್ತಿ. ಕೃಷ್ಣಗಿರಿರಾಯರ ಗಮಕ ವಾಚನವನ್ನು ಆಲಿಸಿ, ಅದರಿಂದ ಪ್ರೇರಿತರಾದ ತಾತ, ಆ ಕಲೆಯಲ್ಲಿಯೇ ಆಸಕ್ತಿ ಬೆಳೆಸಿಕೊಂಡು ಹೆಚ್ಚಿನ ಕೃಷಿ ಮಾಡಿ ಮಡಿಕೇರಿ ಪ್ರಾಂತ್ಯದಲ್ಲಿ ಗಮಕ ವಿದ್ವಾಂಸರೆಂದು ಹೆಸರು ಮಾಡಿದವರು. ಇಂಥಾ ತಂದೆಯ ಮಗನಾಗಿ ತೊಟ್ಟಿಲಲ್ಲೇ ಗಮಕ ವಾಚನ ಕೇಳಿ ಬೆಳೆದ ನನ್ನ ತಂದೆಗೆ ಅದೇ ಕಲೆಯಲ್ಲಿ ಅತೀವ ಆಸಕ್ತಿ ಬೆಳೆದದ್ದು ಅತಿಶಯೋಕ್ತಿಯೇನಲ್ಲ! ಮಡಿಕೇರಿಯಲ್ಲಿ ನಡೆಯುತ್ತಿದ್ದ ಸಾಹಿತ್ಯ ಚಟುವಟಿಕೆಗಳಿಗೆ ಕನ್ನಡ ಸಾಹಿತ್ಯ ದಿಗ್ಗಜರೆಲ್ಲಾ ಬಂದಾಗ, ಅವರು ಇಳಿದುಕೊಳ್ಳುತ್ತಿದ್ದುದೇ ತಾತನ ಮನೆಯಲ್ಲಿ. ಬೆಟಗೇರಿ ಕೃಷ್ಣಶರ್ಮ, ಅ.ನ.ಕೃಷ್ಣರಾಯರು, ಬಿ. ಎಂ. ಶ್ರೀಕಂಠಯ್ಯನವರು, ಗೋವಿಂದ ಪೈಗಳು, ತೀ ನಂ ಶ್ರೀ, ಮಾಸ್ತಿ...ಹೀಗೆ ಇಂತಹವರ ಒಡನಾಟದಲ್ಲಿ ಬೆಳೆದಿದ್ದು ಅಂತ ನಮ್ಮ ತಂದೆ ನೆನಪಿನಾಳಕ್ಕೆ ಇಳಿದು ಹೇಳುವಾಗ...ನನಗದೆಷ್ಟೋ ಸಾರಿ ಮೈ ಜುಂ ಅಂದಿದೆ. ಅಂತಹವರ ನೆರಳು ಸೋಕಿದ ಮಾತ್ರದಿಂದಲೇ ಬಹುಶಃ ನನ್ನ ತಂದೆ ಕೂಡಾ ಸಂಗೀತ ಸಾಹಿತ್ಯದಲ್ಲಿ ಹೀಗೊಂದು ಕೃಷಿ ಮಾಡಲು ಸಾಧ್ಯವಾಗಿದ್ದು ಅನ್ನೋದು ನನ್ನ ಬಲವಾದ ನಂಬಿಕೆ!
ಚಿಕ್ಕವರಿದ್ದಾಗ ನನಪ್ಪನ್ನ ಊರಿನವರೆಲ್ಲಾ ಸುದ್ದಿರಾಮ ಅಂತ ಕರೀತಾ ಇದ್ರಂತೆ. ಊರಿನಲ್ಲಿ ಎಲ್ಲಿ ಏನೇ ನಡೆದ್ರೂ ಅದನ್ನ ಸುಂದರವಾಗಿ ವರ್ಣಿಸೋ ಕಲೆ ನನ್ನಪ್ಪನಿಗೆ ಇತ್ತಂತೆ. ಬಹುಶಃ ಆ ಕಲೆಯೇ ಅವರಿಗೆ ಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗೋಕೆ ದಾರಿ ಮಾಡಿಕೊಟ್ಟಿದ್ದೋ ಏನೋ! ಮಡಿಕೇರಿಯಿಂದ ಶಿವಮೊಗ್ಗ, ಅಲ್ಲಿಂದ ಮೈಸೂರು...ಹೀಗೆ ತಾತನಿಗೆ ವರ್ಗವಾದಂತೆ...ಶಾಲೆಯ ವಿದ್ಯಾಭ್ಯಾಸಕ್ಕೂ ತೊಡರುಗಳು ಕಾಣಿಸಿಕೊಂಡಿದ್ದು ನನ್ನಪ್ಪನಿಗೆ ಒಂದು ರೀತಿ ವರವೇ ಆಯಿತು. ಆಗಿನ ಕಾಲದ ಎಸ್.ಎಸ್.ಎಲ್.ಸಿ ಅಂದ್ರೇನು ಸಾಮಾನ್ಯವೇ? ಅಪ್ಪ ಮಾತಾಡುವ ಇಂಗ್ಲೀಷ್, ಅವರ ಗ್ರಾಮರ್ ಇಂದು ಪಿಜಿ ಮಾಡಿರುವ ನಮಗೂ ಬರೋದಿಲ್ಲ ಅಂದ್ರೆ ಅದು ಅತಿಶಯೋಕ್ತಿಯೇನಲ್ಲ! ಅಪ್ಪನಿಗೆ ಸಂಗೀತ, ಗಮಕದ ಜೊತೆ ಇನ್ನೊಂದು ಹುಚ್ಚಿತ್ತು...ಅದು ನಾಟಕ! ಸಂಪ್ರದಾಯಸ್ಥ ಮಾದ್ವ ಕುಟುಂಬದ ಹುಡುಗ ನಾಟಕ ಮಾಡೋಕೆ ಸಾಧ್ಯವೇ? ಆದರೆ ಅಪ್ಪನಿಗೆ, ಮುಂಬಯಿ, ಅಂದರೆ ಆಗಿನ ಬಾಂಬೆಯಲ್ಲಿದ್ದ ನನ್ನ ಅಜ್ಜಿಯ ತಮ್ಮ, ಅಂದರೆ ನನ್ನಪ್ಪನ್ನ ಸೋದರಮಾವನ ಬೆಂಬಲವಿತ್ತು. ಅವರ ಸಹಾಯದಿಂದಲೇ ಬಾಂಬೆಯ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ಸ್ ಕರೆ ನೀಡಿದ್ದ ಕೆಲವೊಂದಕ್ಕೆ ಅರ್ಜಿ ಹಾಕಿದ್ದೂ ಆಯ್ತು...ಯಾರಿಗೂ ಹೇಳದೇ ಮನೆ ಬಿಟ್ಟು ಬಾಂಬೆಗೆ ಓಡಿ ಬಂದದ್ದು ಆಯ್ತು. ಅದೇನೋ ಅಪ್ಪನ ಅದೃಷ್ಟ...ಕೆಲ್ಸ ಅವರಿಗೇ ದೊರೆಯಿತು. ಸೋದರಮಾವನ ಜೊತೆ ವಾಸ. ಬಾಂಬೆಯ ಸಹವಾಸ ಅಪ್ಪನ ನಾಟಕದ ಆಸೆಗಳಿಗೆ ಒತ್ತಾಸೆಯಾಯ್ತು. ಅಲ್ಲಿನ ಕನ್ನಡ ಸಂಘದ ಸಕ್ರಿಯ ಸದಸ್ಯರಾದರು. ಬಲ್ಲಾಳ ದಂಪತಿಯರು ಆಗಲೇ ನಾಟಕಗಳಲ್ಲಿ ಅಪಾರ ಹೆಸರು ಮಾಡಿದವರು. ಅಂತಹವರ ಸಹಾಯದಿಂದ ಅಪ್ಪನೂ ಅನೇಕ ನಾಟಕಗಳಲ್ಲಿ ನಟಿಸುತ್ತಾ...ಆಗಾಗ ತಮ್ಮ ಗಮಕ ಕಲೆಯನ್ನು ಪ್ರದರ್ಶಿಸುತ್ತಾ ಬಾಂಬೆಯಲ್ಲೇ ಲೀನವಾಗಿ ಹೋದರು. ಮದುವೆ ವಯಸ್ಸಿಗೆ ಬಂದರೂ ಅಪ್ಪನಿಗೆ ಉಪನಯನವೇ ಆಗಿರಲಿಲ್ಲವಂತೆ. ತಾತ ಅಜ್ಜಿಗೆ ಅದೇ ಕೊರಗಾಗಿ, ಹಾಗೂ ಹೀಗೂ ಮಗನನ್ನ ಮೈಸೂರಿಗೆ ಕರೆಸಿ, ಒಂದು ಜನಿವಾರ ಹಾಕಿ ಮತ್ತೆ ಕಳಿಸಿಕೊಟ್ಟರು. 30 ಆದ್ರೂ ಮದುವೆಯ ಬಗ್ಗೆ ಮಾತಾಡದ ಅಪ್ಪನನ್ನು ಹಾಗೇ ಬಿಟ್ಟರೆ, ಇನ್ನು ಉಳಿಗಾಲಯಿಲ್ಲ ಎಂದು ಲೆಕ್ಕಾಚಾರ ಹಾಕಿ...ಶಿವಮೊಗ್ಗೆಯಲ್ಲಿದ್ದ ಅಜ್ಜಿಯ ನೆಂಟರ ಸಹಾಯದಿಂದ...ನನ್ನ ಅಮ್ಮನ ಬಗ್ಗೆ ತಿಳಿದು...ಮಾತುಕಥೆಯಾಗಿ..ಮದುವೆಯಾಗಿ ನಂತರ ಇಬ್ಬರೂ ಅಹಮದಾಬಾದಿನಲ್ಲಿ ಸಂಸಾರ ಹೂಡಿ, ನಂತರ 2 ವರ್ಷದಲ್ಲಿ ಬೆಂಗಳೂರಿಗೆ ವರ್ಗವಾಗಿ ಬಂದು 30 ವರ್ಷಗಳ ಕಾಲ ಆಗಿನ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ಮತ್ತು ಕನ್ನಡ ಪ್ರಭದಲ್ಲಿ ಸೇವೆ ಸಲ್ಲಿಸಿ, ರಿಟೈರ್ಡ್ ಆಗಿ...ಈಗ ತಮ್ಮನ್ನು ತಾವು ಸಂಗೀತ-ಗಮಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇಂದು ಅವರ ಜನ್ಮದಿನ. ಅವರಿಗೆ ಶುಭಾಶಯವನ್ನು ಕೋರುತ್ತಾ, ಅವರ ಬಗ್ಗೆ ಸವಿವರ ಪರಿಚಯ ಇಲ್ಲಿದೆ. * ಹೆಸರು: ಮಡಿಕೇರಿ ಅನಂತಪದ್ಮನಾಭ ರಾವ್ ಜಯರಾಮ್ ರಾವ್ * ಜನ್ಮ ದಿನಾಂಕ, ಸ್ಥಳ: 03.11.1935, ಕೊಡಗು ಜಿಲ್ಲೆ, ಮಡಿಕೇರಿ * ತಂದೆ, ತಾಯಿ: ಹೆಸರಾಂತ ಕವಿ, ಸಾಹಿತಿ, ಗಮಕಿ ಮೈ.ಶೇ.ಅನಂತಪದ್ಮನಾಭ ರಾವ್ ಮತ್ತು ಲಕ್ಷ್ಮಿದೇವಿ * ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ., ಅನಂತರ ಗೌರವ ಎಂ.ಎ. ಪದವಿ. ಸಂಗೀತದಲ್ಲಿ ಸೀನಿಯರ್ ಗ್ರೇಡ್ (1958) * ಗುರು ಪರಂಪರೆ: ಗಮಕ ಕಲೆಗೆ ತಂದೆಯೇ ಗುರುಗಳು. ಸಂಗೀತದಲ್ಲಿ 'ಚಕ್ರಕೋಡಿ ನಾರಾಯಣ ಶಾಸ್ತ್ರಿ ಹಾಗೂ ವೈ.ಎನ್. ಶ್ರೀನಿವಾಸ ಮೂರ್ತಿ. ಸುಗಮ ಸಂಗೀತ-ಬಿ.ಎಸ್.ರಾಮಾಚಾರ್ ಹಾಗೂ ಡಾ|| ಹೆಚ್.ಕೆ. ರಂಗನಾಥ್ * ವೃತ್ತಿ-ಪ್ರವೃತ್ತಿ: ವೃತ್ತಿಯಲ್ಲಿ ಪತ್ರಕರ್ತರು. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಸಮೂಹದಲ್ಲಿ ಮುಂಬೈ, ಅಹಮದಾಬಾದ್ ಮತ್ತು ಬೆಂಗಳೂರು ಆವೃತ್ತಿಗಳಲ್ಲಿ ವಿವಿಧ ಹಂತಗಳಲ್ಲಿ 35 ವರ್ಷಗಳ ನಿರಂತರ ಸೇವೆ. 1993 ರಲ್ಲಿ ನಿವೃತ್ತಿ. ತದನಂತರ ಕೆಲವು ಕಾಲ ಸ್ವತಂತ್ರವಾಗಿ ಕಾರ್ಯ ನಿರ್ವಹಣೆ. ಮುಂದೆ ಗಮಕಿಯಾಗಿ ಕಲಾ ಪೋಷಣೆ. * ಹವ್ಯಾಸ: ಗಮಕ, ನಾಟಕ, ಸಂಗೀತ. ಈಜು, ಕ್ರಿಕೆಟ್ ನಲ್ಲಿ ಕ್ರೀಡಾ ಸಾಧನೆ.
ಲೇಖಕನಾಗಿ ಪತ್ರಿಕೆಗಳಲ್ಲಿ ಸಂಗೀತಮ ನೃತ್ಯಕಲೆಗಳ ವಿಮರ್ಶಾತ್ಮಕ ಲೇಖನಗಳು, ಸಂದರ್ಶನಗಳು, ನಿಯತಕಾಲಿಕೆಗಳಲ್ಲಿ ಗಮಕ, ಸಂಗೀತನಕ್ಕೆ ಸಂಬಂಧಿಸಿದ ವ್ಯಕ್ತಿಗಳ ಕುರಿತ ನೂರಾರು ಲೇಖನಗಳು. ಬೆಂಗಳೂರು ದರ್ಶನ, ಕರ್ನಾಟಕ ಕಲಾದರ್ಶನ ಮುಂತಾದ ಉದ್ಗ್ರಂಥಗಳಲ್ಲಿ ಶಾಸ್ರ್ತೀಯ ಸಂಗೀತ, ಗಮಕ, ಕಥಾಕೀರ್ತನಗಳ ಬಗ್ಗೆ ಸುದೀರ್ಘ ಲೇಖನಗಳು. 2004 ರಲ್ಲಿ ಅಮೆರಿಕಾದ ಫ್ಲೊರಿಡಾದಲ್ಲಿ ನಡೆದ "ಅಕ್ಕ" ಸಮ್ಮೇಳನದ ಅಂಗವಾಗಿ ಹೊರತಂದ 'ವಿಕಾಸ' ಸ್ಮರಣಸಂಚಿಕೆಯಲ್ಲಿ 'ಗಮಕ ಕಲೆ' ಕುರಿತ ವಿಚಾರಾತ್ಮಕ ಲೇಖನ. ಗ್ರಂಥಗಳು: "ಗಮಕ ದಿಗ್ಗಜರು", ಕರ್ನಾಟಕ ಕಲಾವಿದರು ಮಾಲಿಕೆಯಲ್ಲಿನ ಕಥಾಕೀರ್ತನ, ಹಿಂದೂಸ್ತಾನೀ ಸಂಗೀತ ಕಲಾವಿದರ ಕುರಿತು ಪುಸ್ತಕಗಳು, ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಗಮಕ, ಕಥಾಕೀರ್ತನ, ಸುಗಮ ಸಂಗೀತ ಕಲಾವಿದರ ಪರಿಚಯ, ತೊರವೆ ನರಹರಿ ಕವಿಯ ರಾಮಾಯಣ ಸಂಗ್ರಹ ವ್ಯಾಖ್ಯಾನ ಸಹಿತ, ಪಂಪ ಮತ್ತು ಕುಮಾರವ್ಯಾಸರ ದೃಷ್ಟಿಯಲ್ಲಿ ಮಹಾಭಾರತದ ಕರ್ಣ ಗ್ರಂಥ, ನರಹರಿ ಪ್ರಶಸ್ತಿ ಗ್ರಂಥದಲ್ಲಿ ತೌಲನಿಕ ಅಧ್ಯಯನ ಕುರಿತ ಪ್ರಬಂಧಗಳು. ಶ್ರೀಮತಿ "ವಿಮಲಾ ರಂಗಾಚಾರ್" ಕುರಿತ ಪುಸ್ತಕ, "ಬೆಂಗಳೂರು ನಾಗರತ್ನಮ್ಮ", "ಹಾಂಕಾಂಗ್ ಪ್ರವಾಸ ಕಥನ", "ಜೀವನ-ಭಾವನ"-ಮಡಿಕೇರಿ ನಾಗೇಂದ್ರ ಕುರಿತ ಯಶೋಗಾಥೆ(ಹಸ್ತಪ್ರತಿ). ತೊರವೆ ರಾಮಾಯಣ ಸಂಗ್ರಹ ಧ್ವನಿ ಅಡಕಗಳ ನಿರ್ಮಾಣ,
ಕುಮಾರವ್ಯಾಸ ಭಾರತದ ನಾಂದೀ ಪದ್ಯಗಳ ಧ್ವನಿ ಅಡಕ (CD), ಕುವೆಂಪು ಪ್ರತಿಷ್ಠಾನದ ವತಿಯಿಂದ ಪ್ರೊ.ಅ.ರಾ.ಮಿತ್ರ ಅವರ ವ್ಯಾಖ್ಯಾನದೊಂದಿಗೆ ಕುವೆಂಪು "ರಾಮಾಯಣ ದರ್ಶನಂ'-ಸಾಗರೋಲ್ಲಂಘನಂ - ವಾಚನದ ಧ್ವನಿಚಕ್ರ, ಇತ್ಯಾದಿ. * ಸಾಧನೆ: ಹಿರಿಯಣ್ಣ 'ಎಂ.ಎ. ಶೇಷಗಿರಿ ರಾವ್' ಜೊತೆಯಾಗಿ ಸಂಗೀತ ಕ್ಷೇತ್ರದಲ್ಲಿ "ಮಡಿಕೇರಿ ಸಹೋದರರು" ಎಂದೇ ಪ್ರಸಿದ್ದಾರಾಗಿದ್ದರು. 1949 ರಲ್ಲಿ ಉಡುಪಿಯಲ್ಲಿ ಆಗಿನ ಫಲಿಮಾರು ಪೇಜಾವರ ಮಠದ ಶ್ರೀಗಳ ಸಮ್ಮುಖದಲ್ಲಿ ಪ್ರಥಮ ಗಮಕ ವಾಚನ. ಅಂದಿನಿಂದ ಇಂದಿನವರೆಗೆ ಸರಿಸುಮಾರು 4000 ಕ್ಕೂ ಹೆಚ್ಚು ರಾಜ್ಯವ್ಯಾಪಿ ಮತ್ತು ಹೊರ ರಾಜ್ಯಗಳಲ್ಲಿ ನಿರಂತರ ಕಾರ್ಯಕ್ರಮಗಳು. ಹಾಂಕಾಂಗ್ ನಲ್ಲೂ ಗಮಕ ದುಂದುಭಿ. ಆಕಾಶವಾಣಿಯ ಅನೇಕ ಕೇಂದ್ರಗಳಲ್ಲಿ, ದೂರದರ್ಶನದಲ್ಲಿ ಕಾರ್ಯಕ್ರಮ ಪ್ರಸಾರ. ವಾಚನ-ವ್ಯಾಖ್ಯಾನ ನಿರ್ವಹಿಸುವ ಕೆಲವೇ ಗಮಕಿಗಳಲ್ಲಿ ಅಗ್ರರು. ಶಿವಮೊಗ್ಗ, ಸೂರತ್ ಹಾಗೂ ಮುಂಬೈನಲ್ಲಿ ಗಮಕ ಶಿಬಿರ ನಿರ್ವಹಣೆ.
"ಪ್ರಪ್ರಥಮ ಅಖಿಲ ಭಾರತ ಗಮಕ ಸಮ್ಮೇಳನದ ಅಧ್ಯಕ್ಷ"ರಾಗಿದ್ದು ಜೀವಮಾನ ಸಾಧನೆ. ಮುಂಬೈ ಕನ್ನಡ ಸಂಘದ ಉಪಕಾರ್ಯದರ್ಶಿಯಾಗಿ, ಕೊಡಗು ಕರ್ನಾಟಕ ಸಂಘದ ಸಹ ಕಾರ್ಯದರ್ಶಿಯಾಗಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಸ್ಥಾಪಕ ಸದಸ್ಯರಾಗಿ, ತಿರುಮಲ-ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಯೋಜನಾ ಸಲಹಾ ಸಮಿತಿ ಸದಸ್ಯರಾಗಿ, ಕರ್ನಾಟಕ ಗಾನಕಲಾ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಪುರಂದರದಾಸರ ಆರಾಧನಾ ಸಮಿತಿ ಉಪಾಧ್ಯಕ್ಷರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಸದಸ್ಯರಾಗಿ, ಆಕಾಶವಾಣಿ ಕೇಂದ್ರದ ಸ್ಥಳೀಯ ಧ್ವನಿಗ್ರಹಣ(LAB) ಮಂಡಳಿ ಸದಸ್ಯರಾಗಿ, ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಅಧ್ಯಯನ ಮಂಡಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
* ಕುಟುಂಬ: ಪತ್ನಿ-ಶ್ರೀಮತಿ ರುಕ್ಮಿಣಿ ಜಯರಾಮ್ ರಾವ್, ಮಕ್ಕಳು-ಕುಮುದವಲ್ಲಿ ಅರುಣ್ ಮೂರ್ತಿ, ಭಾರತಿ ಪ್ರಕಾಶ್ ಮತ್ತು ಕೃಷ್ಣಸ್ವಾಮಿ. ಇವರ ಕಿರಿಯ ಸಹೋದರ "ಮಡಿಕೇರಿ ನಾಗೇಂದ್ರ" ಹೆಸರಾಂತ ಸುಗಮ ಸಂಗೀತ ಕಲಾವಿದರಾಗಿದ್ದರು.
* ಪ್ರಶಸ್ತಿ-ಗೌರವ-ಸನ್ಮಾನಗಳು: 1996 ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ "ಕರ್ನಾಟಕ ಕಲಾಶ್ರೀ" ಪ್ರಶಸ್ತಿ ಪ್ರದಾನ. ಮುಂಬೈನಲ್ಲಿ 2011 ರಲ್ಲಿ ಜರುಗಿದ ಅಖಿಲ ಭಾರತ ಪ್ರಪ್ರಥಮ ಗಮಕ ಕಲಾ ಸಮ್ಮೇಳನಾಧ್ಯಕ್ಷರಾಗಿ ಗೌರವ ಜೊತೆಗೆ "ಗಮಕ ಕಲಾರತ್ನ" ಪ್ರಶಸ್ತಿ ಪ್ರದಾನ. ಗಮಕ ಕಲಾ ಪ್ರವೀಣ, ಗಮಕ ಕಲಾ ವಿದ್ವನ್ಮಣಿ, ಗಮಕ ಕಲಾ ಕೇಸರಿ, ಗಮಕ ಕಲಾವತಂಸ, ಗಮಕ ಕಲಾಭೂಷಣ, ನಾದ ಚಿಂತಾಮಣಿ, ಕಲಾ ಜ್ಯೋತಿ, ಕಾವ್ಯವಾಚನ ಪ್ರವೀಣ, ಕಾವ್ಯ ವಾಚನ-ವ್ಯಾಖ್ಯಾನ ದುರಂಧರ, ಕಲಾದೀಪ್ತಿ, ಸಂಗೀತ ಶ್ರೀ, ಗಮಕ ಪರಿಮಳ, ಸ್ವರ ಕಲಾನಿಧಿ ಬಿರುದುಗಳು. ಇಷ್ಟೇ ಅಲ್ಲದೇ ಇನ್ನೂ ಅನೇಕ ಸಂಘ ಸಂಸ್ಥೆಗಳಿಂದ, ಮಠಾಧಿಪತಿಗಳಿಂದ ಗೌರವ, ಸನ್ಮಾನಗಳು ಸಂದಿವೆ. 14.11.2009 ರಂದು 75ನೇ ಜನ್ಮದಿನದ ಕುರುಹಾಗಿ "ಅಮೃತ ಧಾರಾ" ಅಭಿನಂದನಾ ಸಂಚಿಕೆ ಪ್ರಕಟಿಸಲಾಯಿತು. 2016ರ ವರ್ಷದಲ್ಲಿ ಅಮೆರಿಕದ ಉತ್ತರ ಕೊರೋಲಿನದ ಡ್ಯೂಕ್ ವಿಶ್ವವಿದ್ಯಾಲಯವು ಜಯರಾಮ ರಾವ್ ಅವರಿಗೆ ಸಂಗೀತ ಮತ್ತು ಗಮಕ ಕಲೆಗೆ ನೀಡಿರುವ ಮಹತ್ವದ ಕೊಡುಗೆಗಳಿಗಾಗಿ ಡಾಕ್ಟರೇಟ್ ಗೌರವ ಅರ್ಪಿಸಿದೆ. ‘ಸಾರ್ಥ-ಕತೆ’ ಎಂಬುದು ಡಾ. ಎಂ.ಎ. ಜಯರಾಮ್ ರಾವ್ ಅವರ ಸಂತೃಪ್ತ ಭಾವದ ಕುರುಹು ಮಾತ್ರವಲ್ಲ ಅವರ ಆತ್ಮಚರಿತ್ರೆಯ ಹೆಸರೂ ಹೌದು. ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನಮ್ಮ ತಂದೆ ಗಮಕಿ ಎಂ.ಎ.ಜಯರಾಮ್ ರಾವ್ ಅವರಿಗೆ ಕುಟುಂಬದವರೆಲ್ಲರ, ಬಂಧುವರ್ಗದವರೆಲ್ಲರ, ಸ್ನೇಹಿತರೆಲ್ಲರ ಪರವಾಗಿ ..."ವರ್ಧಂತಿ ವರ್ಧಂತಿ" "ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು"
---
ಈ ಮಹಾನ್ ಸಾಧಕರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಅವರ ಕುಟುಂಬವರ್ಗದವರ ಸಂತಸದಲ್ಲಿ ಭಾಗಿಯಾಗುತ್ತಾ, ಕನ್ನಡ ಸಂಪದ ಈ ಹಿರಿಯರಿಗೆ ತನ್ನ ಗೌರವಪೂರ್ವಕ ಜನ್ಮದಿನದ ಶುಭಹಾರೈಕೆಗಳನ್ನು ಸಲ್ಲಿಸುತ್ತಿದೆ.
Great scholar. Gamaki and our affectionate Jayaram Rao Sir
ಕಾಮೆಂಟ್ಗಳು