ಉಮಾಶಂಕರ್ ಜೋಶಿ
ಉಮಾಶಂಕರ್ ಜೋಶಿ
ಕುವೆಂಪು ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ಉಮಾಶಂಕರ ಜೋಶಿ. ಅವರು ಕವಿ, ವಿಮರ್ಶಕ, ಕಥೆಗಾರ, ಪ್ರಬಂಧಕಾರ. ಅವರು ಗುಜರಾತ್ ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿದ್ದರು.
ಉಮಾಶಂಕರ್ ಜೋಶಿ 1911ರ ಜುಲೈ 21ರಂದು ಗುಜರಾತ್ ರಾಜ್ಯದ ಸಬರಕಾಂಠ ಜಿಲ್ಲೆಯ ಬಾಮ್ನಾ ಎಂಬಲ್ಲಿ ಜನಿಸಿದರು. ತಂದೆ ಜೇಥಾಲಾಲ್ ಕಮಲ್ಜಿ. ತಾಯಿ ನವಲ್ ಬಾಯಿ. ಬಡತನದಲ್ಲಿ ಹುಟ್ಟಿ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಜೋಶಿಯವರು ತಮ್ಮ ಜೀವನದ ಆರಂಭದಲ್ಲೇ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಜೋಶಿಯವರು 1927ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ಕೆಲಕಾಲ ಸೆರೆಮನೆಯಲ್ಲಿದ್ದರು. 1930ರಲ್ಲೂ 1932ರಲ್ಲೂ ಕಾರಾಗೃಹ ಶಿಕ್ಷೆಯನ್ನನುಭವಿಸಿದ್ದರು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೂರನೆಯ ಸ್ಥಾನ ಪಡೆದರು. ಅನಂತರ ಮುಂಬಯಿ ವಿಶ್ವವಿದ್ಯಾಲಯದ ಎಂ.ಎ. ಪದವಿ ಗಳಿಸಿದರು.
ಕೇವಲ 19 ವರ್ಷ ಆಗಿದ್ದಾಗ ಜೋಶಿಯವರು ಬರೆದ ವಿಶ್ವಶಾಂತಿ ಎಂಬ ಖಂಡಕಾವ್ಯ ಅವರಿಗೆ ಕೀರ್ತಿ ತಂದುಕೊಟ್ಟಿತು. ಜೋಶಿಯವರ ಪ್ರಥಮ ಕವನಸಂಕಲನ 'ಗಂಗೋತ್ರಿ' ಪ್ರಕಟವಾದ್ದು 1934ರಲ್ಲಿ. ಈ ಕೃತಿಯಲ್ಲಿ ಜೋಶಿಯವರು ಅಭಿಜಾತ ಸಾಹಿತ್ಯದ ಮಹೋನ್ನತಿಯನ್ನೂ ರಮ್ಯಪರಂಪರೆಯ ಭವ್ಯತೆಯನ್ನೂ ಮನೋಜ್ಞವಾಗಿ ಹೊಂದಿಸಿದ್ದಾರೆ. ಭಾರತೀಯ ಜ್ಞಾನಪೀಠ ಪ್ರಶಸ್ತಿ ಸಂದ ಅವರ ‘ನಿಶೀಥ’ ಎಂಬ ಕವನಸಂಕಲನ ಪ್ರಕಟವಾದದ್ದು 1939ರಲ್ಲಿ. ಆ ಸಂಕಲನದ ಮೊದಲ ಕವನದ ಹೆಸರೂ ನಿಶೀಥ್. ಆ ಸಂಕಲನದಲ್ಲಿ ಪ್ರೇಮಗೀತೆಗಳೂ ಪ್ರಕೃತಿಸೌಂದರ್ಯದ ವರ್ಣನೆಗಳೂ ಇವೆ.
ಇದೇ ಸಮಯದಲ್ಲಿ ವಾಸುಕಿ ಎಂಬ ಕಾವ್ಯನಾಮದಿಂದ ಜೋಶಿ ಬರೆಯುತ್ತಿದ್ದ ಸಣ್ಣ ಕಥೆಗಳು ಏಕಾಂತ ನಾಟಕಗಳು ಬಹಳ ಜನಪ್ರಿಯವಾಗಿದ್ದುವು. ಏಕಾಂತ ನಾಟಕಗಳ ಒಂದು ಸಂಕಲನವೂ ಸಣ್ಣ ಕಥೆಗಳ ಎರಡು ಸಂಕಲನಗಳೂ ಪ್ರಕಟವಾಗಿದ್ದುವು.
ಮುಂಬಯಿಯ ವಿಲೆ ಪಾರ್ಲೆಯಲ್ಲಿ ಉಪಾಧ್ಯಾಯವೃತ್ತಿಯನ್ನಾರಂಭಿಸಿ ಸಿಡೆನ್ಹ್ಯಾಂ ಕಾಲೇಜಿನಲ್ಲಿ ಗುಜರಾತಿಯ ಒಪ್ಪೊತ್ತಿನ ಅಧ್ಯಾಪಕರಾಗಿ ಕೆಲಸ ಮಾಡಿದ (1937-1939) ಉಮಾಶಂಕರ ಜೋಶಿಯವರು ಅನಂತರ ಅಹಮದಾಬಾದಿನ ಗುಜರಾತ್ ವಿದ್ಯಾಸಭೆಯ ಸ್ನಾತಕೋತ್ತರ ಅಧ್ಯಾಪಕರಾದರು (1939-1947). ಈ ಸಮಯದಲ್ಲಿ ಜೋಶಿಯವರಿಂದ ಎರಡು ವಿದ್ವತ್ಪೂರ್ಣ ಕೃತಿಗಳು ಪ್ರಕಟವಾದುವು. ಆಖೋ : ಏಕ್ ಆಧ್ಯಯನ ಎಂಬುದು ಒಂದು. ಇದು ಗುಜರಾತಿನ ಪ್ರಸಿದ್ಧ ಕವಿ ಆಖೋನನ್ನು ಕುರಿತ ಒಂದು ಅಧ್ಯಯನ. ಪುರಾಣೋಮನ್ ಗುಜರಾತ್ (ಪುರಾಣಗಳಲ್ಲಿ ಗುಜರಾತು) ಎಂಬುದು ಇನ್ನೊಂದು. ಇವೆರಡೂ ಈ ಕ್ಷೇತ್ರಗಳಲ್ಲಿ ಮಹತ್ತ್ವದ ಕೃತಿಗಳೆನಿಸಿಕೊಂಡಿವೆ.
ಜೋಶಿಯವರ ಪ್ರಾಚೀನ ಎಂಬುದು 1944ರಲ್ಲಿ ಪ್ರಕಟವಾದ ಏಳು ನೀಳ್ಗವನಗಳ ಸಂಕಲನ. ಇವರ ಇತರ ಕವನಸಂಕಲನಗಳು ಆತಿಥ್ಯ, ವಸಂತ ವರ್ಷಾ ಮತ್ತು ಅಭಿಜ್ಞಾನ, ಧಾರಾವಸ್ತ್ರ ಮತ್ತು ಸಪ್ತಪದಿ.
ಜೋಶಿ ಅವರು ಕಾಳಿದಾಸನ ಶಾಕುಂತಳಾ ಮತ್ತು ಭವಭೂತಿಯ ಉತ್ತರರಾಮ ಚರಿತಗಳನ್ನು ಗುಜರಾತಿಗೆ ಅನುವಾದಿಸಿದರು ಪೊಲೆಂಡಿನ ಕವನಗಳನ್ನು ಅನುವಾದಿಸಿ ಗುಲ್-ಎ-ಪೋಲೆಂಡ್ ಎನ್ನುವ ಸಂಗ್ರಹವನ್ನು ಪ್ರಕಟಿಸಿದರು. 1947ರ ಜನವರಿಯಲ್ಲಿ 'ಸಂಸ್ಕೃತಿ' ಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿ 47 ವರ್ಷಗಳ ಕಾಲ ಇದರ ಸಂಪಾದಕರಾಗಿದ್ದರು. ಪಾರ್ಕನ್ ಜಿನೈನ್ ಎನ್ನುವ ಕಾದಂಬರಿಯನ್ನೂ ಗೋಷ್ಠಿ ಎನ್ನುವ ಪ್ರಬಂಧ ಸಂಗ್ರಹವನ್ನೂ ಪ್ರಕಟಿಸಿದರು.
ಜೋಶಿಯವರ ವಿಮರ್ಶಾತ್ಮಕ ಕೃತಿಗಳು ಸಹಸಂವೇದನ್, ಅಭಿರುಚಿ, ಶೈಲಿ ಆನ್ ಸ್ವರೂಪ್, ನಿರೀಕ್ಷಾ, ಕಪಿನಿ ಸಾಧನ ಶಬ್ದನಿ ಶಕ್ತಿ, ಕಪಿನಿ ಶ್ರದ್ಧಾ, ಶಬ್ದನಿ ಶಕ್ತಿ ಇವು ಅವರ ವಿಮರ್ಶಾ ಗ್ರಂಥಗಳು. ಕಪಿನಿ ಶ್ರದ್ಧಾ ಕೃತಿಗೆ 1973ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತು.
ಗುಜರಾತ್ ವಿಶ್ವವಿದ್ಯಾಲಯದಲ್ಲಿ ಗುಜರಾತಿ ಪ್ರಾಧ್ಯಾಪಕರಾಗಿ, ಭಾಷಾಭವನದ ನಿರ್ದೇಶಕರಾಗಿದ್ದ (1954-1970) ಜೋಶಿಯವರು 1966-1972ರಲ್ಲಿ ಆ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. 1970ರಲ್ಲಿ ರಾಜ್ಯಸಭೆಗೆ ನಾಮಕರಣ ಹೊಂದಿದರು. ಅಲ್ಲದೆ ಇವರು ಸಾಹಿತ್ಯ ಅಕಾಡೆಮಿಯ ಕಾರ್ಯ ನಿರ್ವಾಹಕ ಮಂಡಲಿಯ ಸದಸ್ಯರೂ, ಭಾರತೀಯ ಪಿ.ಇ.ಎನ್. ಸಂಸ್ಥೆಯ ಉಪಾಧ್ಯಕ್ಷರೂ ಆಗಿದ್ದರು. 1978ರಿಂದ 1983ರ ವರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. 1986ರಲ್ಲಿ ಅಕಾಡೆಮಿಯ ಫಿಲೋಷಿಪ್ ಸಂದಿತು. ಏಳು ವಿಶ್ವವಿದ್ಯಾನಿಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದವು.
ಉಮಾಶಂಕರ ಜೋಶಿ ಅವರು 1988ರ ಡಿಸೆಂಬರ್ 19ರಂದು ನಿಧನರಾದರು.
On the birth anniversary of poet and scholar Umashankar Joshi
ಕಾಮೆಂಟ್ಗಳು