ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯು. ಪಿ. ಉಪಾಧ್ಯಾಯ




 ಯು. ಪಿ. ಉಪಾಧ್ಯಾಯ

ಡಾ. ಯು.ಪಿ. ಉಪಾಧ್ಯಾಯರು ಮಹಾನ್ ವಿದ್ವಾಂಸರಾಗಿ ಪ್ರಸಿದ್ಧರು.   

ಉಳಿಯಾರು ಪದ್ಮನಾಭ ಉಪಾಧ್ಯಾಯರು ಕಾಪು ಮಜೂರು ಗ್ರಾಮದ ಉಳಿಯಾರಿನಲ್ಲಿ 1932ರ ಏಪ್ರಿಲ್ 10ರಂದು ಜನಿಸಿದರು. ಅವರ ತಂದೆ ಸೀತಾರಾಮ ಉಪಾಧ್ಯಾಯರು ತಿರುವಾಂಕೂರಿನ ರಾಜನ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು.

ಸಂಸ್ಕೃತ, ಕನ್ನಡ ಮತ್ತು ಭಾಷಾ ಶಾಸ್ತ್ರದಲ್ಲಿ ಕೇರಳ, ಪುಣೆ, ಮದ್ರಾಸ್ ವಿಶ್ವವಿದ್ಯಾಲಯಗಳಿಂದ ಮೂರು ಸ್ನಾತಕೋತ್ತರ ಪದವಿಗಳನ್ನು  ಪಡೆದ ಪದ್ಮನಾಭ ಉಪಾಧ್ಯಾಯರು ಹಿಂದಿಯಲ್ಲಿ ವಿದ್ವಾನ್ ಮತ್ತು ಭಾಷಾ ವಿಚಾರದಲ್ಲಿ ಪಿಎಚ್‍.ಡಿ ಗಳಿಸಿದ್ದರು.  ಉಪಾಧ್ಯಾಯರು ಹಿಂದಿ, ಕನ್ನಡ, ತುಳು, ಮಲಯಾಳ, ತಮಿಳು, ಇಂಗ್ಲೀಷ್, ಫ್ರೆಂಚ್ ಹಾಗೂ ಆಫ್ರಿಕಾದ ಸೆನೆಗಲ್‍ನ ಒಲೊಫ್ ಭಾಷೆಗಳ ತಜ್ಞರಾಗಿದ್ದರು.

ಉಪಾಧ್ಯಾಯರು 1958-59ರಲ್ಲಿ ಮದ್ರಾಸಿನ ಸರಕಾರಿ ಓರಿಯಂಟಲ್ ಮ್ಯಾನುಸ್ಕ್ರಿಪ್ಟ್ಸ್ ಲೈಬ್ರೆರಿಯಲ್ಲಿ ಸಹಾಯಕ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿದರು. ಮುಂದೆ ಬೆಂಗಳೂರಿನ ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಸಂಸ್ಕೃತ ಮತ್ತು ಕನ್ನಡ ಪ್ರಾಧ್ಯಾಪಕರಾಗಿದ್ದರು. ಪುಣೆಯ ಡೆಕ್ಕನ್ ಕಾಲೇಜ್ ಆಫ್ ಪೋಸ್ಟ್ ಗ್ರಾಜುವೇಟ್ ಆ್ಯಂಡ್ ರಿಸರ್ಚ್ ಇನ್‍ಸ್ಟಿಟ್ಯೂಟಿನಲ್ಲಿ ಸಂಶೋಧನಾ ವಿದ್ವಾಂಸರಾಗಿ ಮತ್ತು ಪ್ರಾಧ್ಯಾಪಕರಾಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದರು.  ಮೈಸೂರಿನ ಸದರ್ನ್ ರೀಜನಲ್ ಲ್ಯಾಂಗ್ವೇಜ್ ಸೆಂಟರ್ ಆಫ್ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್‍ನ ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿದ ಡಾ. ಯು. ಪಿ. ಉಪಾಧ್ಯಾಯರು 1973ರಿಂದ 81ರ ತನಕ ಆಫ್ರಿಕಾದ ಸೆನೆಗಲ್‍ನಲ್ಲಿ ಭಾರತ ಆಫ್ರಿಕಾ ನಾಗರಿಕತೆಗಳ ಕುರಿತ ಅಧ್ಯಯನ ಮತ್ತು ಸಂಶೋಧನೆ ನಡೆಸಿದ್ದರು. ಲಂಡನ್, ಫ್ರಾನ್ಸ್ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ದ್ರಾವಿಡ ಮತ್ತು ನೀಗ್ರೋ, ಆಫ್ರಿಕಾ ಭಾಷೆ ಮತ್ತು ನಾಗರಿಕತೆ ಕುರಿತ ಸಂಶೋಧನೆಯಲ್ಲೂ ತೊಡಗಿದ್ದರು. 

ಮುಂದೆ ಉಪಾಧ್ಯಾಯರು ರಾಷ್ಟ್ರಕವಿ ಗೋವಿಂದ  ಪೈ ಸಂಶೋಧನಾ ಕೇಂದ್ರದ ವತಿಯಿಂದ ತುಳು ನಿಘಂಟು ರಚನೆಗೆ 18 ವರ್ಷ ಶ್ರಮಿಸಿದರು. ಹೀಗೆ 3,400 ಪುಟಗಳ ಆರು ಸಂಪುಟಗಳ ಬೃಹತ್ ಕಾರ್ಯಮಾಡಿದರು. ಈ ಮಹದುದ್ದೇಶಕ್ಕಾಗಿ ಅವರು ಆಫ್ರಿಕಾದ ಸೆನಗಲ್ ಡೆಕಾರ್ ವಿವಿ ಉದ್ಯೋಗವನ್ನೇ ತೊರೆದುಬಂದರು.  

ಉಪಾಧ್ಯಾಯರ ವಿಶಾಲ ವ್ಯಾಪ್ತಿಯ ಸಂಶೋಧನಾತ್ಮಕ ಕೃತಿಗಳಲ್ಲಿ ಕಾನ್ವರ್ಸೇಶನಲ್ ಕನ್ನಡ,  ಫೋಕ್ ರಿಚುವಲ್ಸ್, ಫೋಕ್ ಎಪಿಕ್ಸ್ ಆಫ್ ತುಳುನಾಡು, ನಂಜನಗೂಡು ಕನ್ನಡ, ಕೂರ್ಗ್ ಕನ್ನಡ, ಕುರುಬ ಎ ದ್ರಾವಿಡನ್ ಲಾಂಗ್ವೇಜ್, ಕನ್ನಡ ಎ ಫೊನೆಟಿಕ್ ಲಾಂಗ್ವೇಜ್, ಎಫೆಕ್ಟ್ ಆಫ್ ಬೈಲಿಂಗ್ಲಿಸಮ್ ಆನ್ ಬೀದರ್ ಕನ್ನಡ, ಕೊಯಂಬತ್ತೂರ್ ತಮಿಳ್,  ಕನ್ನಡ ಅಸ್ ಸ್ಪೋಕನ್ ಬೈ ಡಿಫರೆಂಟ್ ಪಾಪ್ಯುಲೇಷನ್ ಗ್ರೂಪ್ಸ್ ಇನ್ ಮೈಸೂರ್ ಸಿಟಿ ಮುಂತಾದವು ಸೇರಿವೆ.

ಡಾ. ಯು. ಪಿ. ಉಪಾಧ್ಯಾಯರ ಪತ್ನಿ ಡಾ. ಸುಶೀಲಾ ಉಪಾಧ್ಯಾಯರು ಕೂಡಾ ಸಂಶೋಧಕಿ, ಭಾಷಾ ವಿದ್ವಾಂಸೆ, ಜಾನಪದ, ಮತ್ತು ಸಂಸ್ಕೃತಿ ಅಧ್ಯಯನ ತಜ್ಞೆಯಾಗಿದ್ದು 2013 ವರ್ಷದಲ್ಲಿ ನಿಧನರಾಗಿದ್ದರು. ಉಪಾಧ್ಯಾಯರು ಪತ್ನಿ ಡಾ. ಸುಶೀಲಾ ಅವರೊಂದಿಗೆ ದ್ರಾವಿಡನ್ ಅಂಡ್ ನೀಗ್ರೋ. ಆಫ್ರಿಕನ್: ಎಥ್ನೋ. ಲಿಂಗ್ವಿಸ್ಟಿಕ್ ಸ್ಟಡಿ, ಮಲಯಾಳಂ ಲಾಂಗ್ವೇಜ್ ಅಂಡ್ ಲಿಟರೇಚರ್, ಕೋಸ್ಟಲ್ ಕರ್ನಾಟಕ ಅಂಡ್ ಭೂತ ವರ್ಷಿಪ್ ಮುಂತಾದ ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದರು.

ಅಖಿಲ ಭಾರತ ತುಳು ಸಮ್ಮೇಳನ ಗೌರವ, ವಿಶ್ವ ತುಳು ಸಮ್ಮೇಳನ ಗೌರವ, ಗುಂಡಾರ್ಟ್ ಗೌರವ, ತಿರುವನಂತಪುರದ ದ್ರಾವಿಡ ಭಾಷಾ ವಿಜ್ಞಾನ ಪರಿಷತ್ ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ದಿಬ್ಬಣ ಪುರಸ್ಕಾರ ಮುಂತಾದ ಅನೇಕ ಗೌರವಗಳು ಡಾ. ಉಪಾಧ್ಯಾಯರಿಗೆ ಸಂದಿದ್ದವು. 

ಡಾ. ಯು.ಪಿ. ಉಪಾಧ್ಯಾಯರು 202೦ರ ಜುಲೈ 17ರಂದು ಈ ಲೋಕವನ್ನಗಲಿದರು.

Rememrance day of great linguistic research scholar Dr. U. P. Upadhyaya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ