ಜಿ. ಡಿ. ಜೋಶಿ
ಜಿ. ಡಿ. ಜೋಶಿ
ಡಾ. ಜಿ. ಡಿ. ಜೋಶಿ ಅವರು ಕರ್ನಾಟಕದಿಂದ ಹೊರಗಿದ್ದೂ ಕನ್ನಡ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ರಂಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರು.
ಗುರುನಾಥ ಧುಂಡಭಟ್ಟ ಜೋಶಿಯವರು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿಯಲ್ಲಿ 1933ರ ಆಗಸ್ಟ್ 28ರಂದು ಜನಿಸಿದರು. ತಂದೆ ಧುಂಡಭಟ್ಟರು. ತಾಯಿ ರಮಾಬಾಯಿ (ಸುಂದರಾಬಾಯಿ).
ಜೋಶಿ ಅವರ ಪ್ರಾರಂಭಿಕ ಶಿಕ್ಷಣ ಬೆಳ್ಳಟ್ಟಿ, ಸೂರಣಗಿ ಮುಂತಾದೆಡೆಗಳಲ್ಲಿ ನಡೆಯಿತು. ಮುಂಬಯಿಯ ರಾಮನಾರಾಯಣ ರೂಯಾ ಕಾಲೇಜಿನಿಂದ ಬಿ.ಎ. ಪದವಿ, ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1965) ಹಾಗೂ ಸೇಂಟ್ ಝೇವಿಯರ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ನಿಂದ ಬಿ.ಎಡ್. ಪದವಿ ಪಡೆದರು. ಡಾ. ಎಂ.ಎಸ್. ಸುಂಕಾಪುರ ಮಾರ್ಗದರ್ಶನದಲ್ಲಿ “ಹುಯಿಲಗೋಳ ನಾರಾಯಣರಾಯರ ಜೀವನ ಸಾಧನೆ” ಮಹಾಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ 1994ರಲ್ಲಿ ಪಿಎಚ್.ಡಿ.ಪದವಿ ಪಡೆದರು.
ಪ್ರೌಢಶಾಲಾ ಶಿಕ್ಷಕರಾಗಿ ತಮ್ಮ ಬೋಧನಾವೃತ್ತಿ ಪ್ರಾರಂಭಿಸಿದ ಜೋಶಿಯವರು ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ ಪ್ರೌಢಶಾಲೆ, ಯಂಗ್ ಮೆನ್ಸ್ ಹೈಸ್ಕೂಲು ನಂತರ ರೂಪರೇಲ್ ಮತ್ತು ಝನ್ಝನ್ ವಾಲಾ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ಝನ್ಝನ್ ಕಾಲೇಜಿನ ಪ್ರಾಂಶುಪಾಲರಾಗಿ, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಗತಿಗಳ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾದರು. ಮುಂಬಯಿ ವಿ.ವಿ.ದ ಕನ್ನಡ ಅಭ್ಯಾಸ ಮಂಡಳಿ, ಅಕಾಡಮಿಕ್ ಕೌನ್ಸಿಲ್ ಮತ್ತು ಫ್ಯಾಕಲ್ಟಿ ಆಫ್ ಆರ್ಟ್ಸ್, ಮಹಾರಾಷ್ಟ್ರ ರಾಜ್ಯ ಪಠ್ಯಪುಸ್ತಕ ಮತ್ತು ಅಭ್ಯಾಸ ಕ್ರಮ, ಸಂಶೋಧನ ಮಂಡಳಿ, ಮಾಧ್ಯಮಿಕ ಮತ್ತು ಉಚ್ಚ ಮಾಧ್ಯಮಿಕ ಮಂಡಳಿಗಳ ವಿದ್ವತ್ ಪರಿಷತ್ ಮುಂತಾದವುಗಳ ಅಧ್ಯಕ್ಷರಾಗಿ, ಸದಸ್ಯರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಕನ್ನಡದ ಹಿರಿಯ ಸಾಹಿತಿಗಳನ್ನು ಮತ್ತು ಸಾಂಸ್ಕೃತಿಕ ಲೋಕದ ಸಾಧಕರನ್ನು ಮುಂಬಯಿಗೆ ಕರೆಸಿ ಸನ್ಮಾನಿಸಿ, ಮುಂಬಯಿ ಬರಹಗಾರರ ಕೃತಿಗಳನ್ನು ವಿಮರ್ಶಿಸಿ, ವಿಚಾರ ಸಂಕಿರಣ, ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನೇರ್ಪಡಿಸಿ ಮುಂಬಯಿಯಲ್ಲಿ ಸದಾ ಕನ್ನಡದ ಕಲರವ ಕೇಳುವಂತೆ ಮಾಡಿ, ಹಿರಿಕಿರಿಯರೆನ್ನದೆ ಎಲ್ಲರೊಂದಿಗೂ ಒಂದಾಗಿ ಬೆರೆತವರು ಜೋಶಿ.
ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದ ಜೋಶಿಯವರ ಹರಟೆ, ಕಥೆ,ಲೇಖನಗಳು, ಅನುವಾದಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಜೋಶಿ ಅವರ ಹರಟೆಗಳ ಸಂಕಲನಗಳಾದ ‘ಹತ್ತು ಹರಟೆಗಳು’ (1972), ಮತ್ತು ‘ಹನ್ನೊಂದು ಹರಟೆಗಳು’ (1977) ಸಂಕಲನಗಳನ್ನು ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯವು ಪ್ರಕಟಿಸಿತು. 1979ರಲ್ಲಿ ಡಾ.ಎಂ.ಎಸ್ ಸುಂಕಾಪುರರವರ ಮುನ್ನುಡಿಯೊಡನೆ ‘ಹನ್ನೆರಡು ಹರಟೆಗಳು’ ಹುಬ್ಬಳ್ಳಿಯಲ್ಲಿ ಬಿಡುಗಡೆಗೊಂಡಿತು. 1987ರಲ್ಲಿ ಮುಂಬಯಿಯ ಸಾಹಿತ್ಯ ಸಂಘವು ‘ಸಮಯವಿಲ್ಲ’ ಪ್ರಬಂಧ ಸಂಕಲನವನ್ನು ಹೊರತಂದಿತು. 1989ರಲ್ಲಿ ಪ್ರಕಟವಾದ ‘ಪರೋಕ್ಷ ಸಾಧನಂ’ ಪ್ರಬಂಧ ಸಂಕಲನಕ್ಕೆ ರಾ.ಯ. ಧಾರವಾಡಕರ ಮುನ್ನುಡಿ ಬರೆದಿದ್ದರು. ಆಯ್ದ ಪ್ರಬಂಧಗಳ ಸಂಕಲನ ಮುಂಬಯಿ ಮಳೆ, ಹದಿನೈದು ಹರಟೆಗಳ ಸಂಕಲನ’ ‘ಮುಂಬಯಿ ಮೋಹ’, ‘ದ್ವಿತೀಯ ಅಭಿಪ್ರಾಯ’ ಸಂಕಲನ, ಮುಂಬಯಿ ಮನೆ ಕೃತಿಗಳು ಪ್ರಕಟವಾಗಿದ್ದು ಸಮಗ್ರ ಪ್ರಬಂಧಗಳು (2019) ಕೂಡಾ ಪ್ರಕಟವಾಗಿದೆ. ಇವರ ಇತರ ಕೃತಿಗಳೆಂದರೆ ಕನ್ನಡ ಕಟ್ಟಿ ಬೆಳೆಸಿದ ಮಹಾ ಪುರುಷರುಗಳಾದ ಜ್ಞಾನಪೀಠ ಪ್ರಶಸ್ತಿ ವಿಜೇತರು, ಕನ್ನಡ ಕಣ್ಮಣಿಗಳು, ಕನ್ನಡ ಕಾರಣ ಪುರುಷರು, ಕನ್ನಡದ ಪೋಷಕರು, ಕನ್ನಡವನ್ನು ಮುನ್ನಡೆಸಿದವರು, ಕನ್ನಡ ಕುಲ ದೀಪಕರು, ಕನ್ನಡ ಕುಲ ರಸಿಕರು, ಕನ್ನಡವನ್ನು ಕಟ್ಟಿದವರು, ಅಜಾತ ಶತ್ರುವಿನ ಆಸ್ಥಾನದಲ್ಲಿ (ಅಂಕಣಬರಹ), ಮಾನವನ ಮುಕ್ತಿಯ ಇತಿಹಾಸ (ಅನುವಾದ) ಮುಂತಾದವು. ಇವಲ್ಲದೆ ಯುವಕ ಭಾರತಿ, ದಿಸ್ ಇಯರ್, ದಶಮಾನ ಮುಂತಾದ 9 ಸಂಪಾದಿತ ಕೃತಿಗಳ ಜೊತೆಗೆ ಆಡಳಿತಾತ್ಮಕ ಕೃತಿಗಳಾದ ಪೌರನೀತಿ, ಭಾರತದ ಆಡಳಿತ, ಪ್ರಾಥಮಿಕ ಪೌರನೀತಿ ಮತ್ತು ಇವರ ಸಹ ಸಂಪಾದಕತ್ವದಲ್ಲಿ ಪ್ರಕಟವಾದ ಹೊಯಿಲಗೋಳ ನಾರಾಯಣರಾಯರ ಸಮಗ್ರ ಸಾಹಿತ್ಯ ಸಂಪುಟ (೧-೩) ಮುಂತಾದ ಕೃತಿಗಳೂ ಸೇರಿ 30 ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.
ಜೋಶಿ ಅವರು ಸಾಹಿತ್ಯ ಕಾರ್ಯಕ್ರಮಗಳ ಸಂಘಟನೆಗಾಗಿ ಮಹಾರಾಷ್ಟ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ತು, ಮುಂಬಯಿ ಕನ್ನಡ ಸಂಘ, ಹೊರನಾಡ ಕಲಾ ವಿಲಾಸ ಮಕ್ಕಳ ಮನೆ, ಮುಂಬಯಿ ಕರ್ನಾಟಕ ಸಂಘ, ಮುಂಬಯಿ ಕನ್ನಡಿಗರ ಸಾಹಿತ್ಯ ಸಮ್ಮೇಳನಗಳು, ಮುಂಬಯಿ ಕನ್ನಡ ಪ್ರಚಾರ ಸಮಿತಿ, ಆರ್.ಜೆ.ಕಾಲೇಜು ಕನ್ನಡ ಸಂಘ, ಮುಲುಂಡ್ ವಿದ್ಯಾ ಪ್ರಚಾರಕ ಸಮಿತಿ ಮುಂತಾದವುಗಳ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಹಲವಾರು ಸಮಿತಿಗಳ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ.
ಜೋಶಿಯವರಿಗೆ ಹೊರನಾಡ ಕನ್ನಡದ ಕಟ್ಟಾಳು ಪ್ರಶಸ್ತಿ, ರಾಷ್ಟ್ರಮನುಕುಲ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ಇಂದಿರಾಗಾಂಧಿ ಶಿರೋಮಣಿ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ಇಂಟರ್ ನ್ಯಾಷನಲ್ ಪೆಂಗ್ವಿನ್ ಪಬ್ಲಿಷಿಂಗ್ ಸಂಸ್ಥೆಯ ರೈಸಿಂಗ್ ಪರ್ಸನಾಲಿಟಿ ಆಫ್ ಇಂಡಿಯಾ ಅವಾರ್ಡ್ (ಚಿನ್ನದ ಪದಕ), ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪುರಸ್ಕಾರಗಳು ಸಂದಿವೆ. 1992ರಲ್ಲಿ ಸಾರ್ವಜನಿಕ ಸನ್ಮಾನ ನಡೆದು ಅರ್ಪಿಸಿದ ಹಮ್ಮಿಣಿಯಿಂದ ‘ಡಾ.ಜಿ.ಡಿ. ಜೋಶಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ‘ಸ್ಥಾಪಿಸಿ ಪ್ರತಿಭಾವಂತರ ಪ್ರಥಮ ಸಾಹಿತ್ಯ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದ್ದು ಅನೇಕ ಯುವ ಪ್ರತಿಭೆಗಳ ಕೃತಿಗಳು ಪ್ರಕಟಗೊಳ್ಳುತ್ತಿವೆ.
ಜೋಶಿಯವರ ಐವತ್ತರ ಸಂಭ್ರಮಕ್ಕಾಗಿ ಸ್ನೇಹಿತರು ಅಭಿಮಾನಿಗಳು ‘ಗುರುಸಂಗತ’ (1992) ಮತ್ತು ಎಪ್ಪತ್ತೈದರ ಸಂಭ್ರಮಕ್ಕಾಗಿ ‘ಸಾರ್ಥಕತೆಯ ಹೆಜ್ಜೆ ಗುರುತುಗಳು’ (2008) ಹಾಗೂ ‘ಗುರುನಾಥ’ (2010) ಎಂಬ ಅಭಿನಂದನ ಗ್ರಂಥಗಳನ್ನರ್ಪಿಸಿರುವುದರ ಜೊತೆಗೆ ‘ಮುಂಬೆಳಕು’ ಮಾಸಪತ್ರಿಕೆಯು ವಿಶೇಷ ಸಂಚಿಕೆಯನ್ನೇ ಪ್ರಕಟಿಸಿ ಪ್ರೀತಿ ತೋರಿಸಿತು.
On the birthday of scholar Dr. G. D. Joshi
ಕಾಮೆಂಟ್ಗಳು