ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ.ಆರ್. ಲಕ್ಷ್ಮಣರಾವ್


 ಬಿ. ಆರ್.  ಲಕ್ಷ್ಮಣರಾವ್


"ಕವಿತೆ ಎಂಬುದು ಒಬ್ಬೊಬ್ಬರಿಗೆ ಒಂದೊಂದು ಅರ್ಥದಲ್ಲಿ ನಿಲುಕುವ ಇಲ್ಲವೇ ನಿಲುಕದ ನಕ್ಷತ್ರ."  ನಾನು ಹೇಳುತ್ತಿರುವುದು ಕವಿತೆಯನ್ನು ನೋಡುವವನ ಮತ್ತು ಕೇಳುವವನ ದೃಷ್ಟಿಯಿಂದ.  ಕವಿತೆಯ ಸೃಷ್ಟಿಕರ್ತನಾದ ಕವಿ ಮಾತ್ರ ಬಹಳಷ್ಟು ಸಮಯದಲ್ಲಿ ಆತನ ಕವಿತೆಯಷ್ಟೇ ನಿಗೂಢ.  ಆತನನ್ನು ಸಮೀಪಿಸಲು ಆತ ಹೋದ ದಾರಿಯಲ್ಲೇ ನಡೆಯಬೇಕಾಗುತ್ತದೆ!  ಇಂತಹ ಕವಿತಾ ಆಗಸದಲ್ಲಿ  ಅಷ್ಟೊಂದು ನಕ್ಷತ್ರಗಳಿದ್ದರೂ ಅವುಗಳ ಮಧ್ಯೆ ನಮ್ಮನ್ನು ಯಾವುದೋ ಫಳ ಫಳ ಎನ್ನುವ ಹೆಸರು ಗೊತ್ತಿಲ್ಲದ ನಕ್ಷತ್ರವೊಂದು ಕರೆಯುವಂತೆ, ಕೆಲವೊಂದು ಕವಿತೆಗಳು ನಮ್ಮನ್ನು  ಹತ್ತಿರ ಹತ್ತಿರ ಮಾಡಿಕೊಳ್ಳುತ್ತವೆ.  ಹಾಗಾಗಿ ಅವು ನಮ್ಮಲ್ಲಿ ಅರಳುವ ಪ್ರೀತಿಯ ಹೂಗಳಾಗಿರುತ್ತವೆ.  ಅಂತಹ ಮುದದ  ಕವಿತೆಗಳನ್ನು ನೀಡಿರುವವರಲ್ಲಿ ಬಿ. ಆರ್. ಲಕ್ಷಣರಾವ್ ಒಬ್ಬರು.

ಲಕ್ಷ್ಮಣರಾವ್‌ರವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚೀಮಂಗಲದಲ್ಲಿ 1946ರ ಸೆಪ್ಟಂಬರ್ 9ರಂದು. ತಂದೆ ಬಿ.ಆರ್. ರಾಜಾರಾವ್‌ ಅವರು ಸಂಗೀತಾಸಕ್ತರಾಗಿದ್ದು ವಾದ್ಯಸಂಗೀತ ಹಾಗೂ ಹಾಡುಗಾರಿಕೆಯಲ್ಲಿ ಪರಿಶ್ರಮವಿದ್ದವರು. ತಾಯಿ ವೆಂಕಟಲಕ್ಷ್ಮಮ್ಮನವರು.  ಲಕ್ಷ್ಮಣರಾವ್ ಅವರ ಪ್ರಾರಂಭಿಕ ಶಿಕ್ಷಣ ಚಿಂತಾಮಣಿಯಲ್ಲಿ ನೆರವೇರಿತು. ಬೆಂಗಳೂರು ವಿಶ್ವವಿದ್ಯಾಲಯದಿಂದ  ಬಿ.ಎ. ಮತ್ತು ಬಿ.ಎಡ್‌ ಪದವಿಗಳನ್ನೂ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ  ಎಂ.ಎ. ಪದವಿಯನ್ನೂ ಪಡೆದರು.

ಲಕ್ಷ್ಮಣರಾವ್ ಅವರು ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಬರೆದ ಹಲವಾರು ಕವನಗಳು ಲಹರಿ, ಗೋಕುಲ, ಸಂಕ್ರಮಣ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು 

ಕೆಂಪು ಸಾಗರವೀಜಿ, ಕಾಡುಮೇಡು ದಾಟಿ
ದಣಿದು ಕುಸಿಯದೆ ಮುಂದೆ ಸಾಗಿ ಬರಬೇಕು,
ಸುಲಭವಲ್ಲ!

ಎಂದು ಬರೆದ ಕವಿ ಕಾವ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ನವ್ಯ ಸಾಹಿತ್ಯದ ಚಳವಳಿ ಮೊದಲ್ಗೊಂಡು  ಚುಟುಕು, ವಿಡಂಬನೆ, ಸ್ವಗತ, ಭಾವಗೀತೆ ಮತ್ತು ಇತರ ಎಲ್ಲ ಪ್ರಕಾರಗಳಲ್ಲಿಯೂ ಕವಿತೆ ಬರೆಯುತ್ತಾ ಈಜಿ ಬಂದಿದ್ದಾರೆ.

ಬಿ. ಆರ್. ಲಕ್ಷಣರಾಯರು ಅಂದಿನ ದಿನಗಳಲ್ಲಿ, ಕನ್ನಡ ಕನ್ನಡ ಎಂದು ಕನ್ನಡ ಪ್ರೀತಿಯ ಭಾವದಿಂದ  ಅಡ್ಡಾಡುತ್ತಿದ್ದ,  ಮೀಸೆ ಮೊಳೆಯುತ್ತಿದ್ದ ನಮ್ಮಂತಹ ಹುಡುಗರಿಗೆ ಕಾವ್ಯವಾಚನ ಕಾರ್ಯಕ್ರಮಗಳನ್ನು  ಅಥವಾ ದೂರದರ್ಶನದ ಕಾವ್ಯ ಕಾರ್ಯಕ್ರಮಗಳನ್ನು ನೋಡುವಾಗ, ಇವರು ಯಾವಾಗ ಕವನ ಹಾಡುತ್ತಾರಪ್ಪ ಎಂದು ಕಾಯುವಂತೆ ಮಾಡುತ್ತಿದ್ದವರು.  ಅವರ ‘ಸುಬ್ಭಾಭಟ್ಟರ ಮಗಳೇ’, ‘ನಾನು ಚಿಕ್ಕವನಿದ್ದಾಗ ಅಪ್ಪಾ ಹೇಳುತ್ತಿದ್ದರು, ನೀ ನಿಂಬೆಯ ಗಿಡದಿಂದೊಳ್ಳೆಯ ಪಾಠವ ಕಲೀ ಮಗು’ ಅಂತಹ ಅವರ ಕವನ ವಾಚನದಲ್ಲಿ ನಮಗೆ ಅದೆಂತದ್ದೋ ಪ್ರೀತಿ.  ಕಾವ್ಯದ ಹಾದಿಯಲ್ಲಿ ಸವೆಯದ ನಮ್ಮ  ಭಾಷಾ ಹೃದಯಕ್ಕೆ, ಕಾವ್ಯದ ಅಂತರಾತ್ಮಕ್ಕೆ ತಲುಪಲು ಬೇಕಾದ ಹಾದಿ ಹೇಗೆ ಎಂದು ತಿಳಿಯದಿದ್ದರೂ, ಎಲ್ಲೋ ಸುಲಭವಾಗಿ ಇಲ್ಲಿ ಬಂದುಬಿಟ್ಟಿದ್ದೇನೆ ಎಂದು  ಲಕ್ಷಣರಾಯರ ಸವಿ ಗೀತವಾಚನಗಳು ಆತ್ಮೀಯವಾಗಿಬಿಟ್ಟವು.   ಈ ಪದ್ಯಗಳು   ಕೆ.ಎಸ್.ನ ಅವರ ‘ಶ್ಯಾನುಭೋಗರ ಮಗಳು’, ‘ರಾಯರು ಬಂದರು ಮಾವನ ಮನೆಗೆ’ ಅಂಥಹ ನೇರಸುಖ ಸ್ಪರ್ಶಗಳಿಗೆ ನಮ್ಮನ್ನು ಕೈ ಹಿಡಿದು ಕರೆದಂತಹವು.  

ಕನ್ನಡ ಕಾವ್ಯಲೋಕದಲ್ಲಿ ಪ್ರಮುಖ ಹೆಜ್ಜೆ ಎನಿಸಿದ ಲಂಕೇಶರು ಸಂಪಾದಿಸಿದ ‘ಅಕ್ಷರ ಹೊಸ ಕಾವ್ಯ’ದಲ್ಲಿನ  ಪರಿಚಯ ವಿಭಾಗದಲ್ಲಿ ತಾವು ಕಾವ್ಯ ರಚಿಸಲು ಕಾರಣ “ಸಾವು ಮತ್ತು ಬಾಳಿನ ನಿರರ್ಥಕತೆಯ ಬಗ್ಗೆ ಭಯ” ಎಂಬ ಲಕ್ಷ್ಮಣರಾಯರ  ಮಾತಿದೆ.  ತುಂಟನಾಗಿ ಬರೆಯುತ್ತಿದ್ದ  ಒಬ್ಬ ಕವಿಯ ಹೃದಯದಲ್ಲಿ ಇಂಥದ್ದೊಂದು ಆಳವೂ ಇತ್ತು ಎಂಬುದು ನಮಗೆ ತೋಚುವುದಿಲ್ಲ. ಅಥವಾ ಕವನದ ಒಂದೆರಡು ಸಾಲು ಅಥವಾ ಅದು ಹಾಡಿನಲ್ಲಿ ಮೂಡಿದಾಗ ಅದರ ರಾಗಕ್ಕೆ ಸಿಕ್ಕ ತಾಳದಲ್ಲೇ ನಾವು ನಮ್ಮ ಗ್ರಾಹ್ಯತೆಯನ್ನು ಕಟ್ಟಿಹಾಕಿಕೊಂಡುಬಿಡುತ್ತೇವೆ.  ಎಂದೋ ಓದಿದ ಅವರ ಫೋಟೋಗ್ರಾಫರ್ ಕವನ ನೆನಪಾಗಿ ಅದರ ಕೊನೆಯ ಪ್ಯಾರಾವನ್ನು ಹುಡುಕಿ ಬರೆಯುತ್ತಿದ್ದೇನೆ:

“ಕೊನೆಗೆ 
ಮಾರನೆ ಸಂಜೆ,
ಅವರವರ ಫೋಟೋಗಳನ್ನು ಅವರವರಿಗೆ
ಒಪ್ಪಿಸಿ,
ಮೆಚ್ಚಿಗೆಯ ಕಣ್ಣಾಡಿ ಪರಸ್ಪರ,
ಬಿಕ್ಕಿ, ನಕ್ಕು,
ಅವರವರ ಊರುಗಳಿಗೆ ಅವರೆಲ್ಲಾ ಹೊರಟು
ಬಿಟ್ಟಮೇಲೆ,
ನನ್ನ ಬಳಿ ಉಳಿಯುವುದು
ಅದರೆಲ್ಲರ ಮಾಸುವ ನೆನಪು
ನೆಗೆಟಿವ್ ಗಳು
ಮಾತ್ರ”.

ಲಕ್ಷ್ಮಣರಾಯರ ಕವಿತಾ ಸಂಕಲನಗಳಲ್ಲಿ  ಗೋಪಿ ಮತ್ತು ಗಾಂಡಲೀನ, ಟುವಟಾರ, ಲಿಲ್ಲಿಪುಟ್ಟಿಯ ಹಂಬಲ, ಕೋಲಂಬಸ್, ಶಾಂಗ್ರಿಲಾ, ಹನಿಗವಿತೆಗಳು, ಕೆಂಗುಲಾಬಿ, ಅಪರಾಧಂಗಳ ಮನ್ನಿಸೊ, ಕ್ಯಾಮೆರಾ ಕಣ್ಣು (ಸಮಗ್ರ ಕಾವ್ಯ) ಮುಂತದವು ಸೇರಿವೆ. ಜೆಸ್ಟರ್, ಕಬ್ಬೆಕ್ಕು ಕಥಾ ಸಂಕಲನಗಳು. ಹೀಗೊಂದು ಪ್ರೇಮಕಥೆ ಅವರ ಕಾದಂಬರಿ.

ವಯಸ್ಸು 75 ಆದರೂ ಯುವ ಕವಿ ಎಂದೇ ಕರೆಸಿಕೊಳ್ಳುವ ಲಕ್ಷ್ಮಣರಾವ್‌ರವರಿಗೆ ಸಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಡಾ.ಪು.ತಿ.ನ. ಕಾವ್ಯ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದವುಗಳು. ಅಭಿಮಾನಿಗಳು, ಗೆಳೆಯರು ಅರ್ಪಿಸಿದ ಅಭಿನಂದನ ಗ್ರಂಥ ‘ಚಿಂತಾಮಣಿ’ 2006ರಲ್ಲಿ.

ಸಾದಾ ದೋಸೆಯ ತಿಂದು
ಬೈಟೂ ಕಾಫಿಯ ಕುಡಿದು
ಮುಗಿಯಿತು ಜಂಬೂಸವಾರಿ
ಇನ್ನು ಬಾಡಿಗೆ ಮನೆ ಕಡೆ ದಾರಿ
 
ಬಾರೋ ರಾಜಕುಮಾರ
ಅಹ, ಬಾರೋ ನನ್ನ ಕುಬೇರ
ಬಾರೇ ರಾಜಕುಮಾರಿ
ಐ ಆಮ್ ರೀಯಲಿ ವೆರಿ ವೆರಿ ಸಾರಿ!

ಹೀಗೆ ನಮ್ಮಂತಹ ಮಧ್ಯಮ ವರ್ಗದ ಹಿರಿಮೆಯ ಆಪ್ತತೆಯನ್ನು ತಮ್ಮ ಸರಳ ಕವಿತೆಗಳ ಮೂಲಕ ಸದಾ ಮನಸ್ಸಿಗೆ ಆಪ್ತವಾಗಿಸಿದವರು ಲಕ್ಷ್ಮಣರಾಯರು.

ಈ ಹಲವು ಸವಿಭಾವಗಳೊಂದಿಗೆ ನಮ್ಮ ಪ್ರೀತಿಯ ಬಿ. ಆರ್. ಲಕ್ಷಣರಾಯರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.  ನಿಮ್ಮಲ್ಲಿನ ಪ್ರೀತಿ, ನಿಮ್ಮ ಸವಿ ಸಿಂಚನದಿಂದ ನಿಮ್ಮಲಿರುವ ತುಂಟ ಕವಿತನದ  ಸವಿಯನ್ನೇ ನಮ್ಮ ಮನಸ್ಸುಗಳೂ  ತುಂಬಿ ನಲಿಯುತ್ತಿರುವಂತಾಗಲಿ.  ನಿಮ್ಮ ಬದುಕು  ಸುಖ, ಸಂತಸಗಳಿಂದ ಶ್ರೀಮಂತವಾಗಿರಲಿ.

On the birthday of our popular poet B.R. Lakshmana Rao Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ