ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡಿ. ಶಂಕರ್ ಸಿಂಗ್


 ಡಿ. ಶಂಕರ್ ಸಿಂಗ್

ಕನ್ನಡ  ಚಿತ್ರರಂಗಕ್ಕೆ  ಹಲವು ಹೊಸತನ್ನು ನೀಡಿ ಸ್ವಂತಿಕೆಯನ್ನು ಪಡೆಯುವಲ್ಲಿ ಶ್ರಮಿಸಿದ ಹಿರಿಯ ಸಾಧಕ  ಡಿ. ಶಂಕರ್ ಸಿಂಗ್. 

ಶಂಕರ್ ಸಿಂಗ್ ಅವರು 1921ರ ಆಗಸ್ಟ್ 15ರಂದು ಜನಿಸಿದರು.  ಅವರ ಹೆತ್ತವರಿಗೆ ಮಗ ವೈದ್ಯನಾಗ ಬೇಕು ಎನ್ನುವ ಹಂಬಲವಿತ್ತು. ಆದರೆ ಬದುಕು  ಹಲವು ತಿರುವುಗಳನ್ನು ಪಡೆದು ಬ್ರೂಕ್ ಬಾಂಡ್ ಟೀ ಏಜೆಂಟ್ ಆಗ ಬೇಕಾಯಿತು. ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡರು. ಕ್ವಿಟ್ ಇಂಡಿಯಾ  ಚಳುವಳಿಯಲ್ಲಿ ಇದ್ದಾಗ  ಅದಕ್ಕೆ ಒಂದು ನೆಲೆ ಎಂದು ಅರಸೀಕರೆಯಲ್ಲಿ  ಮಹಾತ್ಮ ಟೂರಿಂಗ್ ಟಾಕೀಸ್’ ಹುಟ್ಟಿ ಕೊಂಡಿತು. ಈ ಉದ್ಯಮ  ಅನುಕೂಲ ತಂದು ಕೊಟ್ಟಿದ್ದರಿಂದ  ಇನ್ನೊಂದು ಚಿತ್ರಮಂದಿರ  ಸ್ಥಾಪಿಸಿದರು. ಆಗ ಮೈಸೂರಿನಲ್ಲೇಕೆ ಚಿತ್ರಮಂದಿರ ಸ್ಥಾಪಿಸ ಬಾರದು  ಎಂಬ ಕನಸಿನೊಂದಿಗೆ  ಬಂದರು. ಚಿತ್ರಮಂದಿರ ಕೊಳ್ಳಲು ಬಂದವರು ಚಿತ್ರರಂಗದಲ್ಲಿಯೇ ಸೇರಿ ಹೋದರು. ಬಿ.ವಿಠಲಾಚಾರ್ಯ ಮತ್ತು ವಿಶ್ವನಾಥ ಶೆಟ್ಟರು ಅವರಿಗೆ  ಜೊತೆಯಾದರು. 

ಸಿ.ವಿ.ರಾಜು ಅವರ ಪ್ರೇರಣೆಯಂತೆ 1947ರಲ್ಲಿ ‘ಕೃಷ್ಣಲೀಲಾ’ ಚಿತ್ರವನ್ನು ನಿರ್ಮಿಸಿದರು. ಆಗ  ಕನ್ನಡ ಚಿತ್ರರಂಗ ಮದ್ರಾಸಿನಲ್ಲಿ ನೆಲೆ ನಿಂತಿತ್ತು. ಅದನ್ನು ಕರ್ನಾಟಕಕ್ಕೆ ತರಲು ಶಂಕರ್ ಸಿಂಗ್ ಸಂಕಲ್ಪ ಮಾಡಿದರು. ಮೈಸೂರಿನಲ್ಲಿ ‘ನವಜ್ಯೋತಿ ಸ್ಟುಡಿಯೋ’ ರೂಪುಗೊಳ್ಳುವಲ್ಲಿ  ಅವರದು ಮುಖ್ಯ ಪಾತ್ರ. ಮೈಸೂರನ್ನು ಕನ್ನಡ ಚಿತ್ರರಂಗದ ರಾಜಧಾನಿಯನ್ನಾಗಿಸಲು ಅವರ  ನಿರ್ಧರಿಸಿದರು. ಈ  ಹಿನ್ನೆಲೆಯಲ್ಲಿ  ‘ಭಕ್ತ ರಾಮದಾಸ’ ಬಹಳ ಮುಖ್ಯವಾದ ಚಿತ್ರ. ಈ ಚಿತ್ರಕ್ಕೆ  ಮೊದಲು ನಾಯಕರಾಗಿ ಆಯ್ಕೆಯಾದವರು ಮುಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಹೆಸರು ಮಾಡಿದ್ದ ಡಿ.ದೇವರಾಜ್ ಅರಸ್. ಮುಂದೆ ಕಾರಣಾಂತರದಿಂದ  ಅವರ ತಮ್ಮ ಕೆಂಪರಾಜ್ ಅರಸ್ ಈ ಪಾತ್ರವನ್ನು ಮಾಡಿದರು. ಮುಂದೆ ಅವರು ಚಿತ್ರರಂಗದಲ್ಲಿ ದೊಡ್ಡ ಹೆಸರನ್ನೂ ಕೂಡ ಮಾಡಿದರು. ಈ ಚಿತ್ರಕ್ಕೆ  ಪ್ರಸಿದ್ಧ ಬರಹಗಾರ ಚದುರಂಗ ಚಿತ್ರ ಸಾಹಿತ್ಯ ಬರೆದರೆ ಸುಗಮ ಸಂಗೀತದಲ್ಲಿ ಮುಂದೆ ಹೆಸರನ್ನು ಮಾಡಿದ ಪಿ.ಕಾಳಿಂಗ ರಾಯರು ಸಂಗೀತವನ್ನು ನೀಡಿದರು. ವರಕವಿ  ಬೇಂದ್ರೆಯವರು  ಎರಡು ಗೀತೆಯನ್ನೂ ಬರೆದು ಕೊಟ್ಟರು. ಆದರೆ ಚಿತ್ರ ನಷ್ಟವನ್ನು ಅನುಭವಿಸಿತು. ಹೀಗಿದ್ದರೂ ಶಂಕರ್ ಸಿಂಗ್ ಎದೆಗುಂದದೆ ಚಿತ್ರರಂಗದಲ್ಲಿಯೇ ಮುಂದುವರೆದರು. 

ಶಂಕರ್ ಸಿಂಗ್ ಅವರಿಗೆ ಚೇತರಿಕೆ ತಂದು ಕೊಟ್ಟಂತಹ ಚಿತ್ರ ‘ನಾಗಕನ್ನಿಕಾ’ (1949). ಕನ್ನಡದ ಮೊದಲ ಜನಪದ ಚಿತ್ರ  ಎನ್ನಿಸಿ ಕೊಂಡ  ಇದು ಮಾಯಾ ಮಂತ್ರಗಳನ್ನು ಆ ಕಾಲಕ್ಕೇ ವಿಭಿನ್ನವಾಗಿ ತೋರಿಸಿತ್ತು. ಜಯಶ್ರೀಯವರ  ಮೈಮಾಟದ ದೃಶ್ಯಗಳೂ ಪ್ರೇಕ್ಷಕರನ್ನು ಸೆಳೆದವು. ವೀರಭದ್ರಪ್ಪ ಮಂತ್ರವಾದಿಯ ಪಾತ್ರದಲ್ಲಿ  ಗಮನ ಸೆಳೆದಿದ್ದರು. 1951ರಲ್ಲಿ  ಶಂಕರ್ ಸಿಂಗ್ ಅವರ ‘ಮಹಾತ್ಮ ಪಿಕ್ಚರ್ಸ್’ ಅವರ ಮೇರು ಚಿತ್ರ  ಎನ್ನಿಸಿ ಕೊಂಡ ‘ಜಗನ್ಮೋಹಿನಿ’ ಬಂದಿತು.  ಈ ಚಿತ್ರ ನೋಡಲು ಜನ ಹೊಲ, ಎಮ್ಮೆ, ಹಸುಗಳನ್ನು ಮಾರುತ್ತಿದ್ದಾರೆ  ಎಂದು ಕೋರ್ಟಿನಿಂದ ತಡೆಯಾಜ್ಞೆಯನ್ನು ಕೂಡ ತರಲಾಗಿತ್ತು. ಅದು ತೆರವಾದ ನಂತರ ಚಿತ್ರ ದಾವಣಗೆರೆಯಲ್ಲಿ 25 ವಾರಗಳ ಪ್ರದರ್ಶನ ಕಂಡಿತು. ಕನ್ನಡದಲ್ಲಿ ಈ ಸಾಧನೆ ಮಾಡಿದ ಮೊದಲ ಚಿತ್ರ ಕೂಡ  ಆಯಿತು. ಹರಿಣಿ ಮತ್ತು ಪ್ರತಿಮಾದೇವಿ ಚಿತ್ರದ  ಪ್ರಮುಖ ಪಾತ್ರಗಳಲ್ಲಿ ಇದ್ದರು. ಈ ಚಿತ್ರದ ಮೂಲಕ ಪಿ,ಶಾಮಣ್ಣ ಸಂಗೀತ ನಿರ್ದೇಶಕರಾದರು. ಈ ಚಿತ್ರದ ‘ಎಂದೋ ಎಂದೋ’ ಸೂಪರ್  ಹಿಟ್ ಗೀತೆ ಎನ್ನಿಸಿ ಕೊಂಡಿತು. 1952ರಲ್ಲಿ  ‘ಶ್ರೀಶ್ರೀನಿವಾಸ ಕಲ್ಯಾಣ’ ಬಂದಿತು. ಈ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಸಪ್ತರ್ಷಿಗಳಲ್ಲಿ ಒಬ್ಬರ ಪಾತ್ರವನ್ನು ನಿರ್ವಹಿಸಿದರು. ಇದು ಅವರು ಬೆಳ್ಳಿತೆರೆಯಲ್ಲಿ ಕಾಣಿಸಿ ಕೊಂಡ ಮೊದಲ ಚಿತ್ರ. ಈ ಚಿತ್ರಕ್ಕಾಗಿ ಆಗ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿದ್ದ  ಅಮೀರ್ ಬಾಯಿ ಕರ್ನಾಟಕಿ ಅವರನ್ನು ಶಂಕರ್ ಸಿಂಗ್ ಕರೆ ತಂದರು. ಅವರು ಕೊರವಂಜಿಯ ಪಾತ್ರವನ್ನು ವಹಿಸಿದ್ದಲ್ಲದೆ ಎರಡು ಸೊಗಸಾದ ಗೀತೆಗಳನ್ನು ಹಾಡಿದರು. ಆ ಕಾಲಕ್ಕೆ  ವಿಭಿನ್ನ ವಸ್ತುವನ್ನು ಹೊಂದಿದ್ದ  ‘ಚಂಚಲ ಕುಮಾರಿ’ ಚಿತ್ರದ ಮೂಲಕ  ಅವರ ಮಗ ಮತ್ತು ಕನ್ನಡದ ಪ್ರಮುಖ ನಿರ್ದೇಶಕರಾಗಿ ಬೆಳೆದ  ಎಸ್.ವಿ.ರಾಜೇಂದ್ರ ಸಿಂಗ್ (ಬಾಬು) ಚಿತ್ರರಂಗಕ್ಕೆ ಬಂದರು. 
ಸತ್ಯಘಟನೆಯೊಂದನ್ನು ಆಧರಿಸಿದ್ದ  ದಳ್ಳಾಳಿ’ ಅವರ ಮುಂದಿನ ಚಿತ್ರ. ಗುಬ್ಬಿ ಕಂಪನಿಯ ಬಹು ಪ್ರಸಿದ್ಧ ನಾಟಕ ‘ಸಾಹುಕಾರ’ವನ್ನು ಶಂಕರ್ ಸಿಂಗ್ ‘ಮುಟ್ಟಿದ್ದೆಲ್ಲ ಚಿನ್ನ’  ಎನ್ನುವ ಹೆಸರಿನಲ್ಲಿ ಚಿತ್ರವನ್ನಾಗಿಸಿದರು. ಅವರ ಮುಂದಿನ ಪ್ರಯೋಗ ‘ಮಾಡಿದುಣ್ಣೋ ಮಹರಾಯ’ದಲ್ಲಿ ತಮ್ಮ ಸಂಸ್ಥೆಯ ಚಿತ್ರ ಸಾಹಿತಿ ಎನ್ನಿಸಿ ಕೊಂಡಿದ್ದ ಹುಣಸೂರು  ಕೃಷ್ಣಮೂರ್ತಿಯವರನ್ನು ನಾಯಕರನ್ನಾಗಿ ಮಾಡಿದರು. ಈ ಚಿತ್ರದ ಮೂಲಕವೇ ಖ್ಯಾತ  ಹಿನ್ನೆಲೆ ಗಾಯಕಿ ಪಿ.ಸುಶೀಲಾ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. 

1955ರಲ್ಲಿ ತೆರೆ ಕಂಡ ‘ಆಷಾಢಭೂತಿ’ ಚಿತ್ರದ ಮೂಲಕ ಬಿ.ಸರೋಜಾ ದೇವಿ ಮತ್ತು ರಾಜಾಶಂಕರ್ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ಇದೇ ವರ್ಷ ಬಂದ ‘ಗಂಧರ್ವ ಕನ್ಯೆ’ ಸಾಹಸದ ದೃಶ್ಯಗಳಿಂದ ಜನಪ್ರಿಯವಾಯಿತು. ಹರಿಣಿಯವರು  ಮೊಸಳೆಯ ಜೊತೆ ಮಾಡಿದ್ದ ಫೈಟಿಂಗ್ ದೃಶ್ಯವಂತೂ ವಿದೇಶಿ ಚಿತ್ರಗಳಿಗೆ ಸಮ  ಎನ್ನುವಂತೆ ಇತ್ತು. ಇದೇ ವರ್ಷ ಒಂದು ಅಹಿತಕರ ಘಟನೆಯೂ ನಡೆಯಿತು. ಚಿತ್ರ ಸಾಹಿತಿ ಪಿ.ಗುಂಡೂರಾವ್ ಒಂದೇ ಕತೆಯನ್ನು ಶಂಕರ್ ಸಿಂಗ್ ಮತ್ತು ಬಿ.ಆರ್.ಪಂತಲು ಇಬ್ಬರಿಗೂ ಕೊಟ್ಟು ಬಿಟ್ಟಿದ್ದರು. ಚಿತ್ರೀಕರಣ  ಆರಂಭಿಸಿದ ನಂತರ  ಇಬ್ಬರಿಗೂ ಆದ  ಮೋಸ ತಿಳಿದಿದ್ದು. ಅದನ್ನು ಸವಾಲಾಗಿ ಸ್ವೀಕರಿಸಿದ ಶಂಕರ್ ಕೇವಲ 28 ದಿನಗಳಲ್ಲಿ ‘ಶಿವಶರಣೆ ನಂಬಿಯಕ್ಕ’ ಚಿತ್ರವನ್ನು ತಯಾರಿಸಿ ಬಿಡುಗಡೆ ಮಾಡಿದರು. ಈ ಚಿತ್ರದಲ್ಲಿ ಮುಂದೆ ಖ್ಯಾತ ನಟರಾದ ವಿಷ್ಣುವರ್ಧನ್ ಕೂಡ ಬಾಲನಟರಾಗಿ ಕಾಣಿಸಿ ಕೊಂಡಿದ್ದಾರೆ. ಚಾಮರಸ  ಕವಿಯ ‘ಪ್ರಭುಲಿಂಗಲೀಲೆ’  ಕಾವ್ಯವನ್ನು ಅದೇ ಹೆಸರಿನಲ್ಲಿ ಶಂಕರ್ ಸಿಂಗ್ 1957ರಲ್ಲಿ ತೆರೆಗೆ ತಂದರು. ಕೆ.ಎಸ್.ಅಶ್ವತ್ಥ್ ಈ ಚಿತ್ರದಲ್ಲಿ ಅಲ್ಲಮ ಪ್ರಭುವಿನ ಪಾತ್ರವನ್ನು ಮಾಡಿದ್ದರು. ಧರ್ಮಸ್ಥಳ ಮಂಜುನಾಥನ  ಅನನ್ಯ ಭಕ್ತರಾಗಿದ್ದ ಶಂಕರ್ ಸಿಂಗ್ ಈ ಚಿತ್ರವನ್ನು ಶ್ರೀ ಮಂಜುನಾಥ   ಎನ್ನುವ ಹೆಸರಿನಲ್ಲಿ ನಿರ್ದೇಶಿಸಿದರು. ಮುಂದೆ ಬಂದ ‘ಮಂಗಳ ಸೂತ್ರ’ ಚಿತ್ರದ ವಿಶೇಷವೆಂದರೆ  ದೊರೈ-ಭಗವಾನ್ ನಿರ್ದೇಶನ  ಜೋಡಿಯ ಭಗವಾನ್ ಈ ಚಿತ್ರದ ನಾಯಕರು. ಈ ಚಿತ್ರವನ್ನು ಶಂಕರ್ ಸಿಂಗ್ ಚಂದ್ರ ಮೋಹನ್ ಎನ್ನುವ ಹೆಸರಿನಲ್ಲಿ ನಿರ್ದೇಶಿಸಿದರು. ಚಮ್ಮಾರನೊಬ್ಬನ ಭಕ್ತಿಯ ಕಥೆ  ಹೇಳುವ ‘ಭಕ್ತ ಚೇತ’ ಶಂಕರ್ ಸಿಂಗ್ ಅವರ ಮಹತ್ವದ ಚಿತ್ರ  ಎನ್ನಿಸಿ ಕೊಂಡಿದೆ. 

1962ರಲ್ಲಿ  ಶಂಕರ್ ಸಿಂಗ್ ‘ಶ್ರೀ ಧರ್ಮಸ್ಥಳ ಮಹಾತ್ಮೆ’ ಚಿತ್ರವನ್ನು ತೆರೆಗೆ ತಂದರು. ಇದು ಧರ್ಮಸ್ಥಳದ ಮಹಿಮೆ ನಾಡಿನೆಲ್ಲೆಡೆ ಪಸರಿಸಲು ಕಾರಣವಾಯಿತು. ಈ ಚಿತ್ರದ ಮೂಲಕ  ಅನಂತ ರಾಮ ಮಚ್ಚೇರಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ಸದಾ ಸಮಾನತೆಯ ಕನಸನ್ನು ಕಾಣುತ್ತಾ ಬಂದಿದ್ದ ಶಂಕರ್ ಸಿಂಗ್  ಸ್ವಾತಂತ್ರ್ಯದ ಆಶಯವನ್ನೂ ಬಿಂಬಿಸುವಂತೆ 1971ರಲ್ಲಿ ‘ಒಂದೇ ಕುಲ  ಒಂದೇ ದೈವ’ ಎನ್ನುವ ಚಿತ್ರವನ್ನು ರೂಪಿಸಿದರು. ಈ ಚಿತ್ರದ ‘ಗಾಂಧಿ ತಾತನ ಸನ್ನಿಧಿಗೊಂದು’ ಇಂದಿಗೂ ಜನಪ್ರಿಯವಾದ ಗೀತೆಯಾಗಿದೆ. ಜಗನ್ಮೋಹಿನಿ ಚಿತ್ರದ  ಆಧುನಿಕ ರೂಪ  ಎನ್ನಿಸುವ ‘ಜ್ವಾಲಾ ಮೋಹಿನಿ’ 1973ರಲ್ಲಿ ತೆರೆಗೆ ಬಂದಿತು. ಸಂಪತ್ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಇದ್ದರು. 1973ರಲ್ಲಿ ತೆರೆ ಕಂಡ ‘ಬಂಗಾರದ ಕಳ್ಳ’  ಅವರು ನಿರ್ದೇಶನ ಮಾಡಿದ ಕೊನೆಯ ಚಿತ್ರ ‘ನಾಗರ ಹಾವು’ ಚಿತ್ರಕ್ಕಿಂತಲೂ ಮೊದಲು ಇದು ಚಿತ್ರೀಕರಣ  ಆರಂಭಿಸಿದ್ದರಿಂದ  ಅಂಬರೀಷ್ ಅವರನ್ನು ತೆರೆಗೆ  ತಂದ ಚಿತ್ರ ಇದು ಎಂದೂ ಕೂಡ ಹೇಳ ಬಹುದು. 

ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿ ನಾಡಿನ ಸೌಂಧರ್ಯವನ್ನು ತೆರದಿಟ್ಟ ಶಂಕರ್ ಸಿಂಗ್ ತಮ್ಮ ಚಿತ್ರಗಳಲ್ಲಿ ಸದಾ ಸ್ಥಳೀಯ ಕಲಾವಿದರಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಅಸಂಖ್ಯಾತ ಕಲಾವಿದರನ್ನು ಪರಿಚಯ ಕೂಡ ಮಾಡಿಕೊಟ್ಟರು. ಕನ್ನಡದ್ದೇ ವಾದ್ಯಗೋಷ್ಟಿ ರೂಪಿಸಿದ ಅವರು ಕನ್ನಡದ ಸಂಗೀತ ನಿರ್ದೇಶಕರಾದ ಪಿ.ಕಾಳಿಂಗ ರಾವ್, ಶಾಮಣ್ಣ, ರಾಜನ್-ನಾಗೇಂದ್ರ  ಅವರಿಗೆ ಪ್ರೋತ್ಸಾಹ ನೀಡಿದರು. ಅವರ ಒತ್ತಾಸೆಯ ಫಲವಾಗಯೇ ಕರ್ನಾಟಕ ಸರ್ಕಾರ  ಕರ್ನಾಟಕದಲ್ಲಿ ಚಿತ್ರೀಕರಣ ನಡೆಸಿದ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡುವ ಯೋಜನೆಯನ್ನು ಜಾರಿಗೆ ತಂದಿತು. ಸದಾ ಸ್ವಾವಲಂಭನೆ ಕುರಿತು ಚಿಂತಿಸುತ್ತಾ ಬಂದ ಶಂಕರ್ ಸಿಂಗ್ ನಮ್ಮನ್ನು ಅಗಲಿದ್ದು 1979ರ ಸೆಪ್ಟಂಬರ್ 9ರಂದು. 

ಶಂಕರ್ ಸಿಂಗ್ ಅವರ ಕುಟುಂಬವೇ ಕನ್ನಡ ಚಿತ್ರರಂಗಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದೆ. ಅವರ ತಾರಾಪತ್ನಿ ಪ್ರತಿಮಾದೇವಿ  ಕನ್ನಡದ ಪ್ರಮುಖ ಕಲಾವಿದೆಯರಲ್ಲಿ ಒಬ್ಬರು. ಮಕ್ಕಳಾದ ಎಸ್.ವಿ.ರಾಜೇಂದ್ರ ಸಿಂಗ್ (ಬಾಬು), ಸಂಗ್ರಾಮ ಸಿಂಗ್, ನಾಗರಾಜ ಸಿಂಗ್, ವಿಜಯಲಕ್ಷ್ಮಿ ಸಿಂಗ್ ಎಲ್ಲರೂ ಹೆಸರನ್ನು ಮಾಡಿದವರೇ. ಅವರ ಮೊಮ್ಮಕ್ಕಳಾದ  ಆದಿತ್ಯ, ರಿಶಿಕಾ ಸಿಂಗ್ ಕೂಡ ಚಿತ್ರರಂಗದಲ್ಲಿ ಹೆಸರನ್ನು ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ ಶಂಕರ್ ಸಿಂಗ್ ಅವರ ಜನ್ಮ ಶತಮಾನೋತ್ಸವದ  ಆಚರಣೆ ಸರ್ಕಾರ ಮತ್ತು ಚಿತ್ರರಂಗ ಸೂಕ್ತ ಎನ್ನಿಸುವಂತೆ ಮಾಡ ಬೇಕು.

ಲೇಖನ ಕೃಪೆ: ಎನ್.ಎಸ್.ಶ್ರೀಧರ ಮೂರ್ತಿ Sreedhara Murthy

On the birth anniversary of pioneer of Kannada Cinema D. Shankar Singh 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ