ವಿಷ್ಣುನಾರಾಯಣ ಭಾತಖಾಂಡೆ
ವಿಷ್ಣು ನಾರಾಯಣ ಭಾತಖಾಂಡೆ
ಹಿಂದೂಸ್ತಾನಿ ಸಂಗೀತದ ರಾಗಗಳನ್ನು ನಿರ್ಧಿಷ್ಟವಾಗಿ ಗುರುತಿಸಿ, ಕೆಲವು ಶಾಸ್ತ್ರಗಳನ್ನು ಬರೆದ ಮಹನೀಯರಲ್ಲಿ ವಿಷ್ಣು ನಾರಾಯಣ ಭಾತಖಾಂಡೆಯವರು ಅಗ್ರಗಣ್ಯರು. ಜೀವನ ಪೂರ್ತಿ ಸಂಗೀತದ ಅಧ್ಯಯನದಲ್ಲಿ ತೊಡಗಿಕೊಂಡು, ಹಿಂದೂಸ್ತಾನಿ ಸಂಗೀತದ ಪ್ರಕಾರಗಳು, ರಾಗಗಳ ವೈಶಿಷ್ಟ್ಯ ಮತ್ತು ಅವುಗಳ ಲಕ್ಷಣ ಕುರಿತು ಅಕ್ಷರ ರೂಪದಲ್ಲಿ ದಾಖಲಿಸಿದರು. ಇಂದು ಅವರ ಸಂಸ್ಮರಣಾ ದಿನ.
1860ರಲ್ಲಿ ಇಂದಿನ ಮುಂಬೈ ನಗರದ ಗಿರ್ಗಾಂವ್ನಲ್ಲಿ ಜನಿಸಿದ ವಿಷ್ಣು ನಾರಾಯಣ ಭಾತಖಾಂಡೆಯವರು ತಮ್ಮ ತಂದೆಯವರ ಮೂಲಕ ಗೋರಾ ರಾಮ ಮಂದಿರದಲ್ಲಿ ಜರುಗುತ್ತಿದ್ದ ಸಂಗೀತವನ್ನು ಕೇಳುತ್ತಾ ಪ್ರಭಾವಗೊಂಡವರು. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಶ್ರೀ ವಲ್ಲಭದಾಸ್ ಗೋಪಾಲಗಿರಿ ಎಂಬುವರಿಂದ ಸೀತಾರ್ ಕಲಿಯಲು ಆರಂಭಿಸಿದರು. ಈ ವೇಳೆಯಲ್ಲಿ ಅವರಿಗೆ ಸಂಗೀತಶಾಸ್ತ್ರ ಮತ್ತು ರಾಗಗಳ ಲಕ್ಷಣ ಕುರಿತು ಆಸಕ್ತಿ ಮೂಡಿತು. ಈ ಕುರಿತಂತೆ ಅವರು ಹಿಂದೂಸ್ತಾನಿ ಸಂಗೀತ ಕುರಿತು ಆಳವಾದ ಅಧ್ಯಯನ ಮಾಡಲು ನಿರ್ಧರಿಸಿದರು. ಆ ಕಾಲಕ್ಕೆ ಪ್ರಖ್ಯಾತ ಸೀತಾರ್ ವಾದಕರಾಗಿದ್ದ ಪಂಡಿತ್ ಪನ್ನಾಲಾಲ್ ಘೋಷ್ ಅವರು ರಚಿಸಿದ್ದ “ನಾದ್-ವಿನೋದ್” ಎಂಬ ಕೃತಿಯನ್ನು ಓದಿ ಗಂಭೀರವಾದ ಅಧ್ಯಯನದಲ್ಲಿ ತೊಡಗಿಕೊಂಡರು.
1884ರಲ್ಲಿ ತಮ್ಮ ಕಾನೂನು ಪದವಿಯನ್ನು ಮುಗಿಸಿ, ಸಂಗೀತವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶಾಪೂರ್ ಸ್ಪೆನ್ಸರ್ ಎಂಬ ಸಂಸ್ಥೆ ಹಾಗೂ ಕೆಲವು ಪಾರ್ಸಿ ಕುಟುಂಬಗಳು ಆರಂಭಿಸಿದ “ಪಾರ್ಸಿ ಗಾಯನೋತ್ತೇಜಕ್ ಮಂಡಳಿ”ಗೆ ಭಾತಖಾಂಡೆಯವರು ಸೇರ್ಪಡೆಯಾದರು. ಈ ಮಂಡಳಿಯಲ್ಲಿ ಪ್ರಸಿದ್ಧ ವಿದ್ವಾಂಸರಾದ ಪಂಡಿತ್ ರಾಜೀವ್ ಬುವಾ, ಉಸ್ತಾದ್ಅಲಿಖಾನ್, ವಿಲಾಯತ್ ಹುಸೇನ್, ಮುಂತಾದವರು ಆಸಕ್ತ ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ ಸಂಗೀತವನ್ನು ಕಲಿಸಿಕೊಡುತ್ತಿದ್ದರು. ಬಾತಖಂಡೆಯವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಪಂಡಿತ್ ರಾಜೀವ್ ಬುವಾ ಅವರಿಂದ 300 ದ್ರುಪದ್ ಗಾಯನಗಳನ್ನು ಮತ್ತು ಉಸ್ತಾದ್ ಅಲಿಖಾನ್ ಮತ್ತು ವಿಲಾಯತ್ ಹುಸೇನ್ ರಿಂದ 150 ಖ್ಯಾಲ್ ಗಾಯನಗಳನ್ನು ಕಲಿತರು. ಇವುಗಳ ಜೊತೆಗೆ ಭಾತ ಖಂಡೆಯವರು ಜೈಪುರ್ ಘರಾಣೆಯ ಮುನ್ನೂರಕ್ಕೂ ಹೆಚ್ಚು ಸಾಂಪ್ರದಾಯಿಕ ರಚನೆಗಳನ್ನು ಜೈಪುರದ ಅಸ್ಕರ್ ಆಲಿ ಖಾನ್ ರವರಿಂದ ದಾಖಲಿಸಿಕೊಂಡರು. ಭಾತಖಂಡೆಯವರ ದಣಿವರಿಯದ ಉತ್ಸಾಹವನ್ನು ನೋಡಿದ ಅನೇಕ ಹಿಂದೂಸ್ತಾನಿ ಗಾಯನದ ಪಂಡಿತರು ತಮ್ಮ ಬಳಿ ಇದ್ದ ಸಂಗೀತ ಸಾಹಿತ್ಯ ರಚನೆಗಳು (ಬಂದಿಷ್) ಇವುಗಳನ್ನು ಅವರಿಗೆ ನೀಡಿದರು. ಇವರಲ್ಲಿ ಗ್ವಾಲಿಯರ್ ಘರಾಣೆಯ ಏಕನಾಥ ಪಂಡಿತ್, ರಾಂಪುರ್ ಘರಾಣೆಯ ನವಾಬ್ ಹಮೀದ್ ಆಲಿಖಾನ್, ಗಿದ್ದೋರ್ ಘರಾಣೆಯ ಉಸ್ತಾದ್ ವಜೀಖಾನ್ ಮತ್ತು ಮಹಮ್ಮದ್ ಆಲಿಖಾನ್ ಮುಂತಾದವರು ತಮ್ಮ ಸಂಗೀತ ಶೈಲಿಯಿಂದ ಹಿಡಿದು, ತಮ್ಮಲ್ಲಿದ್ದ ಸಂಗೀತ ಕೃತಿಗಳನ್ನು ನೀಡಿ ಸಹಕರಿಸಿದರು. ಭಾತಖಂಡೆಯವರು ಇಂತಹ ಹಿರಿಯ ಸಂಗೀತ ದಿಗ್ಗಜರ ಸಹಕಾರ ಪ್ರೇರಣೆಯಿಂದ ಹಿಂದೂಸ್ತಾನಿ ಸಂಗೀತದ ಶಾಸ್ತ್ರ ಗ್ರಂಥವನ್ನು ವಿಶೇಷವಾಗಿ ರಾಗಲಕ್ಷಣಗಳನ್ನು ಗುರುತಿಸುವ, ಸಂಗೀತದ ವ್ಯಾಕರಣಕ್ಕೆ ಸಂಬಂಧಿಸಿದ ಕೃತಿಗಳ ರಚನೆಗೆ ಮುಂದಾದರು.
ಕೃತಿ ರಚನೆಗೆ ಮುನ್ನ, ಅವರು ದೆಹಲಿ, ಗ್ವಾಲಿಯರ್, ಜೈಪುರ, ಆಗ್ರಾ, ಪಟಿಯಾಲ, ಬರೋಡ, ಹೈದರಾಬಾದ್ ನಗರಗಳಲ್ಲಿ ಪ್ರವಾಸ ಮಾಡಿ, ಅಲ್ಲಿನ ವಿವಿಧ ಶೈಲಿಯ ಹಿಂದೂಸ್ತಾನಿ ಸಂಗೀತಕ್ಕೆ ಸಾಕ್ಷಿಯಾದರು ಜೊತೆಗೆ ಗಾಯಕರ ಜೊತೆ ಚರ್ಚೆ ನಡೆಸಿದರು. ಇದು ಸಾಲದೆಂಬಂತೆ, ಕರ್ನಾಟಕ ಸಂಗೀತದ ರಾಗಗಳ ಲಕ್ಷಣಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ 1904ರಲ್ಲಿ ದಕ್ಷಿಣ ಭಾರತದ ಮದ್ರಾಸ್, ಮೈಸೂರು, ತಂಜಾವೂರು, ತಿರುವಾಂಕೂರ್ ಮಧುರೈ, ಬೆಂಗಳೂರು, ರಾಮನಾಥಪುರಂ ಮುಂತಾದ ನಗರಗಳಲ್ಲಿ ಸುತ್ತಾಡಿ, ಸಂಗೀತದ ವಿದ್ವಾಂಸರ ಜೊತೆ ಒಡನಾಡುತ್ತಾ, ಕರ್ನಾಟಕ ಸಂಗೀತದ ಕೃತಿಗಳ ಅಧ್ಯಯನ ನಡೆಸಿದರು. ಭಾತಖಂಡೆಯವರಿಗೆ ವೆಂಕಟಮುಖಿಯ ಮೇಳಕರ್ತ ರಾಗ ಎಂಬ ಕರ್ನಾಟಕ ಸಂಗೀತದ 72 ರಾಗಗಳ ಲಕ್ಷಣ ಕೃತಿಯು ಹೆಚ್ಚು ಪ್ರಭಾವ ಬೀರಿತು. ಇದೂ ಸಾಲದಂಬಂತೆ, 1906 ರಿಂದ 1908ರ ವರೆಗೆ ಕೊಲ್ಕತ್ತ, ವಾರಾಣಾಸಿ, ಪುರಿ, ಅಲಹಾಬಾದ್, ಲಕ್ನೋ, ಉದಯಪುರ್ ಹೀಗೆ ಇಡೀ ದೇಶದ ಹಲವು ನಗರಳಲ್ಲಿ ಅಸ್ತಿತ್ವದಲ್ಲಿ ಸಂಗೀತವನ್ನು ಅಧ್ಯಯನ ಮಾಡಿ, ವೆಂಕಟಮುಖಿಯ ಕೃತಿಯನ್ನು ಮಾದರಿಯನ್ನಾಗಿಟ್ಟುಕೊಂಡು, 1910 ರಲ್ಲಿ “ ಶ್ರೀ ಮಲ್ಲಕ್ಷ್ಯ ಸಂಗೀತ” ಎಂಬ ಲಕ್ಷಣ ಗ್ರಂಥವನ್ನು ರಚನೆ ಮಾಡಿದರು.
ಜೀವನೋಪಾಯಕ್ಕಾಗಿ ಕೆಲವು ಶ್ರೀಮಂತ ಕುಟುಂಬಗಳ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ, ಕಾನೂನು ಸಲಹೆಗಾರರಾಗಿ ಮತ್ತು ಎಸ್ಟೇಟ್ ಮೇನೆಜರ್ ಆಗಿ ಕಾರ್ಯನಿರ್ವಸುತ್ತಿದ್ದ ವಿಷ್ಣು ನಾರಾಯಣ ಭಾತಖಾಂಡೆ ಅವರು ತಮ್ಮ ಹುದ್ದೆಗೆ ವಿದಾಯ ಹೇಳಿ, ಶಾರದ ಸಂಗೀತ ವಿದ್ಯಾಲಯ ಎಂಬ ಸಂಸ್ಥೆಯೊಂದನ್ನು ತೆರೆದು ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಳ್ಳುವ ಕ್ರಿಯೆಯಲ್ಲಿ ತೊಡಗಿಸಿಕೊಂಡರು. ಕೆಲವು ಸಂಸ್ಥಾನಗಳ ರಾಜಮಹಾರಾಜರ ನೆರವಿನಿಂದ ಮುಂಬೈ ನಗರದಲ್ಲಿ ಸಂಗೀತ ಕಚೇರಿಯನ್ನು ಏರ್ಪಡಿಸುವುದರ ಮೂಲಕ ದೇಶದ ಭಾಗಗಳಿಂದ ಕಲಾವಿದರನ್ನು ಕರೆಸಿ, ಅವರ ಗಾಯನ ಶೈಲಿ ಮತ್ತು ಸಂಗೀತದ ಪ್ರಕಾರಗಳನ್ನು ಮುಂಬೈನ ಕಲಾರಸಿಕರಿಗೆ ಪರಿಚಯಮಾಡಿಕೊಟ್ಟರು. ಇದರ ನಡುವೆ ಹದಿನೆಂಟಕ್ಕೂ ಹೆಚ್ಚು ಸಂಗೀತ ಲಕ್ಷಣ ಕುರಿತಾದ ಕೃತಿಗಳನ್ನು ಹಿಂದಿ ಮತ್ತು ಸಂಸ್ಕೃತ ಭಾಷೆಯಲ್ಲಿ ರಚನೆ ಮಾಡಿದರು. ಇವುಗಳಲ್ಲಿ ನಾಟ್ಯಶಾಸ್ತ್ರ, ಸಂಗೀತ್ ರತ್ನಾಕರ, ಸಂಗೀತ್ ದರ್ಪಣ, ರಾಗವಿಬೋಧ, ಸಂಗೀತ್ ಪಾರಿಜಾತ್ ಮುಖ್ಯವಾದ ಕೃತಿಗಳಾಗಿವೆ. ಅವರ ಮಹತ್ವದ ಕೃತಿಯೆಂದರೆ "ಕ್ರಮಿಕ್ ಪುಸ್ತಕ್ ಮಾಲಿಕಾ”. ಆರು ಸಂಪುಟಗಳ ಈ ಕೃತಿಯಲ್ಲಿ 1800 ಸಂಗೀತದ ಸಾಹಿತ್ಯ ರಚನೆಗಳನ್ನು ಹತ್ತು ಥಾಟ್ ಗಳಾಗಿ ವಿಂಗಡನೆ ಮಾಡಿದ್ದಾರೆ. ( ಸ್ವರಗಳ ಆಧಾರದ ಮೇಲೆ ರಾಗಗಳನ್ನು ವಿಂಗಡಿಸುವ ಅಥವಾ ಗುರುತಿಸುವ ವಿಧಾನ) ಥಾಟ್ ಪದ್ಧತಿಯನ್ನು ಬಳಕೆಗೆ ತಂದವರಲ್ಲಿ ಭಾತಖಾಂಡೆ ಮೊದಲಿಗರು. ಹಿಂದೂಸ್ಥಾನಿ ಸಂಗೀತದ ವಿವಿಧ ಪ್ರಕಾರಗಳಾದ ಸರ್ ಗಮ್, ದ್ರಪದ್, ಖ್ಯಾಲ್, ಠುಮ್ರಿ, ಧಮಾರ್, ಹೋರಿ ಈ ಗಾಯನಗಳಲ್ಲಿ ವಿವಿಧ ಘರಾಣೆಯ ಪ್ರಭಾವವಿದ್ದರೂ ಸಹ ಇವುಗಳ ಸಂಗೀತ ಕೃತಿ ಮತ್ತು ಬಳಸಲಾಗುವ ರಾಗಗಳಲ್ಲಿ ವಿಷ್ಣು ನಾರಾಯಣ್ ಭಾತಖಾಂಡೆಯವರ ಶ್ರಮವನ್ನು ಈಗಲೂ ನಾವು ಕಾಣಬಹುದು. ಹಾಗಾಗಿ ಅವರು ಆಧುನಿಕ ಹಿಂದೂಸ್ಥಾನಿ ಸಂಗೀತ ಪಿತಾಮಹರಲ್ಲಿ ಒಬ್ಬರಾಗಿದ್ದಾರೆ.
1936ರ ಸೆಪ್ಟೆಂಬರ್ 19ರಂದು ನಿಧನರಾದ ಭಾತಖಾಂಡೆಯವರು ಇಂದಿಗೂ ಸಹ ಹಿಂದುಸ್ತಾನಿ ಸಂಗೀತದಲ್ಲಿ ಅವಿಸ್ಮರಣೀಯರಾಗಿ ಉಳಿದಿದ್ದಾರೆ.
ಕೃತಜ್ಞತೆ: ಇದು ಹಿರಿಯ ಪತ್ರಕರ್ತ ಮತ್ತು ಬರಹಗಾರರಾದ ಡಾ. ಎನ್. ಜಗದೀಶ್ ಕೊಪ್ಪ ಅವರ ಬರಹದ ಸಂಕ್ಷಿಪ್ತರೂಪ
On Remembrance Day of Pandit Vishnu Narayan Bhatkhande who wrote first modern treatise on Hindustani classical music
ಕಾಮೆಂಟ್ಗಳು