ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನರಸಿಂಹಾಚಾರ್ಯ


 ಎಸ್. ಜಿ. ನರಸಿಂಹಾಚಾರ್


ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ

ಉಳುವೆ ನಾ ಭೂಮಿಯನು ಹೊರವೆ ನಾ ಹೇರನ್ನು
ತುಳಿದು ಕಡ್ಡಿಯ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ

ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ 
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ

ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯೋ ಎಲೆ ಮಾನವಾ

ಈ ಪದ್ಯವನ್ನು ಯಾರೂ ಮರೆತಿರಲಾರರು. ನಾವು ಹಿರಿಯರನ್ನು ನೆನೆಯುವಾಗ ಅವರು ಉಳಿಸಿಹೋದ ಮುದಭಾವಗಳಿಂದ ನೆನೆಯಬೇಕು.  ಮೇಲಿನ ಪದ್ಯ ನೀಡಿದವರು ಎಸ್. ಜಿ. ನರಸಿಂಹಾಚಾರ್ಯರು.

ಎಸ್. ಜಿ. ನರಸಿಂಹಾಚಾರ್ ಕನ್ನಡ, ಸಂಸ್ಕೃತ, ಇಂಗ್ಲಿಷ್, ತಮಿಳುಭಾಷೆಗಳ ಮಹಾನ್ ವಿದ್ವಾಂಸರಾಗಿ ಪ್ರಸಿದ್ಧರು. ಹಳಗನ್ನಡದಲ್ಲಿ ಅವರಿಗೆ ಅಪಾರ ಪಾಂಡಿತ್ಯವಿತ್ತು.

ನರಸಿಂಹಾಚಾರ‍್ಯರು 1862ರ ಸೆಪ್ಟೆಂಬರ್ 11ರಂದು  ಶ್ರೀರಂಗಪಟ್ಟಣದಲ್ಲಿ ಜನಿಸಿದರು. ತಂದೆ ದೇವಾಲಯದಲ್ಲಿ ಕೈಂಕರ್ಯದಲ್ಲಿದ್ದ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು.  ತಾಯಿ ಸೀತಮ್ಮನವರು. 

ನರಸಿಂಹಾಚಾರ್ಯರ ಪ್ರಾರಂಭಿಕ ಶಿಕ್ಷಣ ಶ್ರೀರಂಗಪಟ್ಟಣದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ನಡೆಯಿತು. ಬಿ.ಎ. ಪದವಿಯ ನಂತರ ಮೈಸೂರು ಸರಕಾರದ ವಿದ್ಯಾ ಇಲಾಖೆಗೆ ಸೇರಿ ಶ್ರೀರಂಗಪಟ್ಟಣದಲ್ಲಿ ಉಪಾಧ್ಯಾಯರಾಗಿ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ, ಗ್ರಂಥಪಾಲಕರಾಗಿ, ಸರಕಾರದ ಕನ್ನಡ ಭಾಷಾಂತರಕಾರರಾಗಿ ವಿವಿಧೆಡೆಯಲ್ಲಿ ಸೇವೆ ಸಲ್ಲಿಸಿದರು. ಕನ್ನಡ ಭಾಷಾಭಿವೃದ್ಧಿ ಸಮಿತಿ, ಶಾಲಾ ಪಠ್ಯ ನಿಯಾಮಕ ಸಮಿತಿ, ಪರೀಕ್ಷಾ ಮಂಡಲಿಗಳಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. 

ಎಸ. ಜಿ. ನರಸಿಂಹಾಚಾರ್ಯರು ಕಾವ್ಯ ಹಾಗೂ ಗದ್ಯಗ್ರಂಥಗಳ ಭಾಷಾಂತರವನ್ನು ಮಾಡಿದ್ದಲ್ಲದೆ ಹಲವಾರು ಸ್ವತಂತ್ರ ಕೃತಿಗಳನ್ನು ರಚಿಸಿದರು. ಅನೇಕ ಹಳಗನ್ನಡ, ನಡುಗನ್ನಡ ಗ್ರಂಥಗಳ ಪ್ರಕಟಣೆ ಮಾಡಿದರು. ಅನೇಕ ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದ ಕೀರ್ತಿ ಇವರದು. ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ಗೋವಿಂದ, ಜಯನೃಪ ಕಾವ್ಯ ಮೊದಲಾದ ಪ್ರಮುಖ ಗ್ರಂಥಗಳ ಪ್ರಕಟಣೆ ಮಾಡಿದರು. ಪ್ರಾಚ್ಯಕೋಶಾಗಾರದ ಮೂಲಕ ಆದಿಪುರಾಣ, ಜಗನ್ನಾಥ ವಿಜಯದ ಪರಿಷ್ಕರಣೆಗಳನ್ನು ಹೊರತಂದರು. ಇವು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಗ್ರಂಥಮಾಲೆಯ ಪ್ರವರ್ತಕ ಗ್ರಂಥಗಳು. 

ನರಸಿಂಹಾಚಾರ್ಯರು 1892ರಲ್ಲಿ ಎಂ.ಎ. ರಾಮಾನುಜ ಅಯ್ಯಂಗಾರ‍್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಪ್ರಾರಂಭ ಮಾಡಿದರು. ಪತ್ರಿಕೆ ನಿಂತುಹೋದಾಗ 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿಧಿ' ಪತ್ರಿಕೆ ಪ್ರಾರಂಭ ಮಾಡಿದರು. 

ಬಾಲ ಸಾಹಿತ್ಯಕ್ಕೂ ಎಸ್. ಜಿ. ನರಸಿಂಹಾಚಾರ್ಯರ ಕೊಡುಗೆ ಅಪಾರ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಪಠ್ಯ ಸಮಿತಿಯ ನಿಯಮಾನುಸಾರ ಹಿಂದೂದೇಶದ ನಾಗರಿಕತೆ, ಬಾಲಭೂವಿವರಣೆಯ ಕೃತಿಗಳನ್ನು ಮೂಡಿಸಿದರು. ಮಕ್ಕಳ ಪದ್ಯಗಳಲ್ಲಿ ಮಿನುಗು ಮಿನುಗುತಿಹ ಕಿರುತಾರಣಿಯೆ, ಬಾರೋ ನಾವಾಡುವ ಬಾರೋ, ಇಟ್ಟರೆ ಸಗಣಿಯಾದೆ ಇಂದಿಗೂ ಜನಪ್ರಿಯ ಪದ್ಯಗಳು. 

ಎಸ್. ಜಿ. ನರಸಿಂಹಾಚಾರ್ ಅವರು ಮೂಡಿಸಿದ ಕೃತಿಗಳಲ್ಲಿ ದಿಲೀಪ ಚರಿತೆ, ಅಜನೃಪ ಚರಿತೆ, ಶಾಲಾಪಠ್ಯಗಳಾದ ಷಟ್ಪದಿ ಕಾವ್ಯಗಳು, ಪ್ರೋಷಿತ ಪ್ರಿಯ ಸಮಾಗಮಂ, ಗೋಲ್ಡ್‌ಸ್ಮಿತ್‌ನ ‘ದಿ ಹರ‍್ಮಿಟ್’ 9 ಜನ ವೀರ ಪುರುಷರ ವೃತ್ತಾಂತದ ಭಾರತ ವೀರ ಚರಿತೆ, ಅಲ್ಲಾವುದೀನ್ ಮತ್ತು ಅದ್ಭುತ ದೀಪ, ಉತ್ತರ ರಾಮಚರಿತಂ, ಸಂಸ್ಕೃತ ನಾಟಕಾನುವಾದ, ಈಸೋಪನ ನೀತಿಕಥೆಗಳು, ಗಲಿವರನ ದೇಶ ಸಂಚಾರ, ಗಯ್ಯಾಳಿಯನ್ನು ಸಾಧುಮಾಡುವಿಕೆ, ಭಾರವಿ, ಮುಕುಂದಮಾಲೆ ಮುಂತಾದುವು ಸೇರಿವೆ.

ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನದ ಪ್ರಥಮಾಧ್ಯಕ್ಷರಾಗಿದ್ದ ನರಸಿಂಹಾಚಾರ್ಯರು 1907ರ ಡಿಸೆಂಬರ್ 22ರಂದು ಇನ್ನೂ 45ರ ಹರೆಯದಲ್ಲೇ ಅಕಾಲ ಮೃತ್ಯುವಿಗೀಡಾದರು.

On the birth anniversary of great scholar of 19th century S. G. Narasimhacharya. S. G. Narasimhachar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ