ಯುದ್ಧಕಾಂಡ
ಶ್ರೀ ರಾಮಾಯಣ: ಯುದ್ಧಕಾಂಡ
(ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯರು ರಚಿಸಿದ 'ಸಂಗ್ರಹ ರಾಮಾಯಣ' ಕೃತಿಯಿಂದ)
ಸುಗ್ರೀವಾಜ್ಞೆಯಂತೆ ಸಮಸ್ತವಾನರ ಸೈನ್ಯವು ದಕ್ಷಿಣಸಮುದ್ರ ತೀರಕ್ಕೆ ಬಂದು ನೆರೆಯಿತು. ರಾಮಲಕ್ಷ್ಮಣರು ಸುಗ್ರೀವ ಪ್ರಮುಖರೊಡನೆ ಸೇತು ಬಂಧನದ ಪ್ರಸ್ತಾಪಮಾಡಿ ಲಂಕೆಯ ಮೇಲೆ ದಂಡೆತ್ತಿ ಹೋಗುವ ಸಮಾಲೋಚನೆ ನಡೆಸುತ್ತಿದ್ದರು.
ಇತ್ತ ಮಾರುತಿಯು ಲಂಕಾನಾಶವನ್ನು ಮಾಡಿ ಬಂದ ಕೂಡಲೇ ದಶಗ್ರೀವನಿಗೆ ಚಿಂತೆಯಾಗಿ ರಾಕ್ಷಸವೀರರೊಡನೆ ಮಂತ್ರಾಲೋಚನೆ ನಡೆಸಿದನು. ರಾವಣನ ತಮ್ಮನಾದ ವಿಭೀಷಣನು ಧರ್ಮಿಷ್ಠನಾದುದರಿಂದ ರಾಜನ ಸಭೆಯಲ್ಲಿ ಅಣ್ಣನಿಗೆ ವಿವೇಕ ಹೇಳಿದರೂ ಪ್ರಯೋಜನವಾಗದುದರಿಂದ ಅವನು ಲಂಕೆಯನ್ನು ಬಿಟ್ಟು ರಾಮನ ಮೊರೆಹೋಗಲು ಆಕಾಶಮಾರ್ಗವಾಗಿ ಬರುತ್ತಿದ್ದನು. ಆಂಜನೇಯನ ಮಾತಿನಂತೆ ರಘುರಾಮನು ವಿಭೀಷಣನನ್ನು ಸ್ವಾಗತಿಸಿದನು. ಶ್ರೀರಾಮನು ತನ್ನನ್ನು ಮೊರೆಹೊಕ್ಕ ವಿಭೀಷಣನಿಗೆ ಮುಂದೆ ಲಂಕಾಧಿಪತ್ಯ ಕೊಡಿಸುವುದಾಗಿಯೂ ಅಭಯವಿತ್ತನು.
ಬಳಿಕ ಸೇತುಬಂಧನ ಮಾಡುವ ಸಂದರ್ಭದಲ್ಲಿ ರಾಮನು ಮೂರು ದಿನಗಳ ಕಾಲ ಸಮುದ್ರ ರಾಜನನ್ನು ಸ್ತೋತ್ರ ಮಾಡಿದರೂ ಪ್ರಸನ್ನನಾಗಲಿಲ್ಲವಾದ ಕಾರಣ, ಅವನ ಮೇಲೆ ಆಗ್ನೇಯಾಸ್ತ್ರ ಪ್ರಯೋಗಮಾಡಿದನು. ಇದರಿಂದ ತಲ್ಲಣಗೊಂಡ ಸಮುದ್ರರಾಜನು ರಘುವೀರನ ಕ್ಷಮೆಬೇಡಿ ತನ್ನ ಮೇಲೆ ಸೇತುವೆ ಕಟ್ಟಲು ದಾರಿಮಾಡಿಕೊಟ್ಟನು. ನಳನೆಂಬ ಕಪಿವೀರನ ಮುಖಂಡತ್ವದಲ್ಲಿ ಲಂಕೆಯವರೆಗೆ ಮಹಾಸೇತುವೆಯ ನಿರ್ಮಾಣವಾಯಿತು. ಆಗ ಸಮಸ್ತ ವಾನರ ಸೈನ್ಯದೊಡನೆ ರಾಮಲಕ್ಷ್ಮಣರು ಆ ಸೇತುವೆಯ ಮೇಲೆ ನಡೆದು ಹೋಗಿ ಲಂಕೆಯ ಹೊರವಲಯಕ್ಕೆ ಬಂದು ಸೇರಿದರು.
ರಾಮಸೇನೆ ಲಂಕೆಯನ್ನಾವರಿಸಿದ ಕೂಡಲೇ ರಾಕ್ಷಸರಿಗೂ ಕಪಿವೀರರಿಗೂ ಯುದ್ಧ ಆರಂಭವಾಯಿತು. ಕಪಿಗಳು ಕಲ್ಲುಗುಂಡು ಮರಗಳಿಂದ ಅನೇಕ ರಾಕ್ಷಸರನ್ನು ಸಂಹರಿಸಿದರು. ರಾವಣನ ಮಗನಾದ ಇಂದ್ರಜಿತುವು ನಾಗಾಸ್ತ್ರದಿಂದ ರಾಮಲಕ್ಷ್ಮಣರನ್ನು ಬಂಧಿಸಲು, ಆಕಾಶದಿಂದ ಅಲ್ಲಿಗೆ ಬಂದ ಗರುಡನ ಸಹಾಯದಿಂದ ಅವರನ್ನು ಸುತ್ತುಗೊಂಡಿದ್ದ ಸರ್ಪಗಳಿಂದ ಬಿಡುಗಡೆಯಾಯಿತು.
ಮುಂದೆ ಯುದ್ಧಕ್ಕೆ ಬಂದ ಧೂಮ್ರಾಕ್ಷನನ್ನು ಹನುಮಂತನೂ, ವಜ್ರದಂಷ್ಟ್ರನನ್ನು ಅಂಗದನೂ, ಪ್ರಹಸ್ತನನ್ನು ನೀಲನೂ ಸಂಹರಿಸಿದರು. ಹೀಗೆ ಯುದ್ಧವೀರರೆಲ್ಲ ಸತ್ತುಹೋದುದರಿಂದ ಕೋಪಾವಿಷ್ಟನಾದ ರಾವಣನು ತಾನೇ ಯುದ್ಧಕ್ಕೆ ಬಂದು ಅನೇಕ ಕಪಿವೀರರನ್ನು ಕೆಳಗುರುಳಿಸಿ ಲಕ್ಷ್ಮಣನನ್ನು ಶಕ್ಯಾಯುಧದಿಂದ ಮೂರ್ಛೆಗೊಳಿಸಿದನು. ಆಗ ರಾಮನಿಗೆ ಕೋಪಬಂದು ಆಂಜನೆಯನ ಭುಜದ ಮೇಲೇರಿ ಕುಳಿತು ರಾವಣನ ರಥವನ್ನು ಪುಡಿಮಾಡಿ ತನ್ನ ಬಾಣಗಳಿಂದ ಅವನನ್ನು ನೋಯಿಸಿದ್ದಲ್ಲದೆ, ಆ ರಥವಿಹೀನನನ್ನು ಮತ್ತೊಮ್ಮೆ ಯುದ್ಧಕ್ಕೆ ಬರುವಂತೆ ಹೇಳಿಕಳುಹಿಸಿದನು.
ಬಳಿಕ ರಾವಣನು ತನ್ನ ತಮ್ಮನಾದ ಕುಂಭಕರ್ಣನನ್ನು ನಿದ್ರೆಯಿಂದ ಎಬ್ಬಿಸಿ ಯುದ್ಧಕ್ಕೆ ಅಟ್ಟಿದನು. ಅವನು ಸುಗ್ರೀವನ ಮೇಲೆ ಯುದ್ಧಕ್ಕೆ ಹೋಗಿ ಅವನಿಂದ ಕಿವಿಮೂಗುಗಳನ್ನು ಕಚ್ಚಿಸಿಕೊಂಡನು. ಕುಂಭಕರ್ಣನು ಹಾಗೆಯೇ ರಾಮನ ಮೇಲೆ ಯುದ್ಧಕ್ಕೆ ಹೋಗಲು, ರಾಮಚಂದ್ರನು ಒಂದೇ ಬಾಣದಿಂದ ಅವನ ಶಿರಚ್ಛೇದನ ಮಾಡಿದನು.
ಕುಂಭಕರ್ಣನ ವಧೆಯಿಂದ ರಾವಣನು ದುಃಖಾಕ್ರಾಂತನಾಗಲು ಇಂದ್ರಜಿತ್ತು ತಂದೆಗೆ ಸಮಾಧಾನ ಹೇಳಿ ಕೋಪದಿಂದ ಯುದ್ಧಕ್ಕೆ ಬಂದು ರಾಮ ಲಕ್ಷ್ಮಣರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದನು. ಇದರಿಂದ ರಾಮಲಕ್ಷ್ಮಣರು ಸೈನ್ಯಸಮೇತರಾಗಿ ಮೂರ್ಛೆಗೊಂಡರು. ಕೂಡಲೇ ಜಾಂಬವಂತನ ಸಲಹೆಯಂತೆ ಮೂಲಿಕೆಯನ್ನು ತರಲು ಆಂಜನೇಯನು ಗಗನಕ್ಕೆ ಚಿಮ್ಮಿ ಹಿಮಾಲಯದತ್ತ ಇದ್ದ ಔಷಧಿಪರ್ವತವನ್ನೇ ಕಿತ್ತು ತಂದುಕೊಟ್ಟುದರಿಂದ ರಾಮಲಕ್ಷ್ಮಣಾದಿಗಳ ಜೀವ ಉಳಿಯಿತು.
ಇತ್ತ ಇಂದ್ರಜಿತ್ತು ಶತ್ರು ನಿಗ್ರಹಕ್ಕಾಗಿ ನಿಕುಂಭಿಲಾಯಾಗ ಮಾಡುತ್ತಿರಲು ಲಕ್ಷ್ಮಣನು ಅವನನ್ನು ಯುದ್ಧಕ್ಕೆ ಕರೆದು ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಅವನನ್ನು ಸಾಯಿಸಿದನು. ಹೀಗೆ ಪುತ್ರಮಿತ್ರಾನುಜರನ್ನೆಲ್ಲಾ ಕಳೆದುಕೊಂಡು ಸರ್ವನಾಶವಾದ ಮೇಲೆ ರಾವಣನು ರಾಮನ ಮೇಲೆ ಯುದ್ಧಕ್ಕೆ ಬಂದನು. ಲೋಕಕಂಟಕನಾದ ರಾವಣನ ವಧೆಯ ಸಮಯದಲ್ಲಿ ರಾಮನಿಗೆ ದೇವೇಂದ್ರನು ದಿವ್ಯವಾದ ರಥವನ್ನೂ ಧನುರ್ಬಾಣಗಳನ್ನೂ ಒದಗಿಸಿಕೊಟ್ಟನು.
ಅಪ್ರತಿಮವಾದ ರಾಮರಾವಣರ ಯುದ್ಧವು ಭಯಂಕರ ರೀತಿಯಲ್ಲಿ ನಡೆಯಿತು. ರಾಮನು ತನ್ನ ಬಾಣಗಳಿಂದ ದಶಶಿರನ ತಲೆಗಳನ್ನು ಎಷ್ಟೆಷ್ಟು ಬಾರಿ ಕಡಿದುಹಾಕಿದರೂ ಅವು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿದ್ದವು. ಕಡೆಗೆ ರಾಮನು ಬ್ರಹ್ಮಾಸ್ತ್ರವನ್ನು ಬಿಟ್ಟು ರಾವಣನನ್ನು ಸಂಹರಿಸಿದನು. ಇದರಿಂದ ಸಮಸ್ತ ಜನರಿಗೆ ಮಾತ್ರವಲ್ಲದೆ ಸಕಲ ಲೋಕಕ್ಕೂ ಸಂತೋಷವಾಯಿತು.
ಇತ್ತ ವಿಭೀಷಣನು ರಾವಣನಿಗೆ ಉತ್ತರ ಕ್ರಿಯೆಗಳನ್ನು ನಡೆಸಿದನು. ಅನಂತರ ರಾಮನು ವಿಭೀಷಣನಿಗೆ ಲಂಕಾ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿಸಿದನು. ಹನುಮಂತನು ರಾವಣವಧೆಯಾದ ಸಂಗತಿ ಸೀತೆಗೆ ತಿಳಿಸಿ ಕೂಡಲೇ ರಾಮನಲ್ಲಿಗೆ ಕರೆತಂದನು. ಆಗ ರಾಮನು ಸೀತೆಯನ್ನು ಕಟುವಾಗಿ ಮಾತನಾಡಿಸಲು, ಆಕೆಯು ಎಲ್ಲರೆದುರು ಅಗ್ನಿ ಕುಂಡವನ್ನು ಏರ್ಪಡಿಸಿ ಅದರಲ್ಲಿ ಪ್ರವೇಶಿಸಿದಳು. ಕೂಡಲೇ ಅಗ್ನಿದೇವನು ಸ್ವಲ್ಪವೂ ನೋವಾಗದಂತೆ ಪತಿವ್ರತೆಯಾದ ಸೀತೆಯನ್ನು ತಂದು ರಾಮನಿಗೊಪ್ಪಿಸಲು ಆಗ ಆತನು ಸಂತೋಷದಿಂದ ಸ್ವೀಕರಿಸಿದನು. ಆಗ ದೇವತೆಗಳು ಹೂಮಳೆಗರೆದರು. ಈ ವೇಳೆಗೆ ರಾಮನು ವನವಾಸ ಮಾಡಿ ಹದಿನಾಲ್ಕು ವರ್ಷ ಸಮೀಪಿಸಿತ್ತು. ಶ್ರೀ ಸೀತಾಲಕ್ಷ್ಮಣ ಸಮೇತನಾದ ಶ್ರೀರಾಮಚಂದ್ರನು ಸಮಸ್ತ ಪರಿವಾರದೊಡನೆ ಪುಷ್ಪಕ ವಿಮಾನದಲ್ಲಿ ಕುಳಿತು ಅಯೋಧ್ಯೆಯತ್ತ ಪ್ರಯಾಣ ಮಾಡಿದನು. ದಾರಿಯಲ್ಲಿ ಭಾರದ್ವಾಜ ಮುನಿಗಳ ಆಶ್ರಮದಲ್ಲಿ ಉಳಿದು ಅವರ ಆಶೀರ್ವಾದವನ್ನು ಸಂಪಾದಿಸಿದನು. ಆಗ ರಾಮನು ಹನುಮಂತನನ್ನು ಭರತನ ಬಳಿಗೆ ಮುಂದಾಗಿ ಕಳುಹಿಸಿ ತನ್ನ ಬರುವಿಕೆಯನ್ನು ತಿಳಿಯ ಹೇಳಿದನು. ಅದರಂತೆ ಮಾರುತಿಯು ನಂದಿಗ್ರಾಮಕ್ಕೆ ಹಾರಿಬಂದು ರಾಮಾಗಮನಕ್ಕೆ ಪರಿತಪಿಸುತ್ತಾ ಅಗ್ನಿಪ್ರವೇಶಕ್ಕೆ ಸಿದ್ಧನಾಗಿದ್ದ ಭರತನನ್ನು ತಡೆದು, ರಾಮನು ಬರುತ್ತಿರುವ ಸಂತೋಷದ ಸುದ್ದಿಯನ್ನು ತಿಳಿಸಿದನು. ಆಗ ಭರತನಿಗೆ ಪರಮಾನಂದವಾಯಿತು.
ನಂದಿಗ್ರಾಮಕೆ ಪುಷ್ಪಕ ವಿಮಾನದಲ್ಲಿ ರಾಮನು ಬಂದಕೂಡಲೇ ಭರತನು ಸುವರ್ಣ ಪಾದುಕೆಗಳನ್ನು ರಾಮನಿಗೆ ತೊಡಿಸಿ, ರಾಮ ಪಾದಗಳ ಮೇಲೆ ಬಿದ್ದು ಹೊರಳಾಡಿದನು. ಆಗ ರಾಮಭದ್ರನು ಭರತನನ್ನೂ, ಶತ್ರುಘ್ನನನ್ನೂ ಆಲಂಗಿಸಿಕೊಂಡ ಮೇಲೆ ನಂದಿ ಗ್ರಾಮ ಪ್ರವೇಶ ಮಾಡಿದನು. ಭರತನು ರಾಮನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಅಯೋಧ್ಯೆಗೆ ಕರೆತಂದನು. ಶೋಕಭರಿತನಾದ ಭರತನು ರಾಮಚಂದ್ರನಿಗೆ ರಾಜ್ಯವನ್ನು ಹಿಂದಿರುಗಿವಹಿಸಿಕೊಳ್ಳುವಂತೆ ಪ್ರಾರ್ಥಿಸಿಕೊಂಡು ಒಪ್ಪಿಸಿದನು. ಕಡೆಗೆ ಎಲ್ಲರೂ ಶೃಂಗಾರವಾದ ಅಯೋಧ್ಯೆಯನ್ನು ಪ್ರವೇಶಿಸಿದರು. ರಾಮನು ತನ್ನ ತಾಯಿಯಾದ ಕೌಸಲ್ಯೆಗೂ ಗುರುಹಿರಿಯರಿಗೂ ನಮಸ್ಕರಿಸಿ ಎಲ್ಲರಿಗೂ ಆನಂದವನ್ನು ತಂದನು.
ಮುಂದೆ ಶ್ರೀರಾಮಚಂದ್ರನ ಪಟ್ಟಾಭಿಷೇಕದ ಸಮಸ್ತ ಸಿದ್ಧತೆಗಳೂ ನಡೆದವು. ವಾನರ ಶ್ರೇಷ್ಠರಿಂದ ಸುಗ್ರೀವನು ಪುಣ್ಯನದೀ ಸಮುದ್ರಗಳಿಂದ ಅಭಿಷೇಕಕ್ಕೆ ಜಲವನ್ನು ತರಿಸಿದನು. ಅನಂತರ ವಸಿಷ್ಠರು ಶ್ರೀರಾಮನನ್ನು ಸೀತಾದೇವಿಯೊಡನೆ ರತ್ನಸಿಂಹಾಸನದಲ್ಲಿ ಕುಳ್ಳಿರಿಸಿ ಪುಣ್ಯೋದಕಗಳಿಂದ ಸ್ನಾನ ಮಾಡಿಸಿದರು. ಶಾಸ್ತ್ರವಿಧಿಯಂತೆ ಶ್ರೀರಾಮನಿಗೆ ರತ್ನಕಿರೀಟಧಾರಣೆಯೊಡನೆ ಪಟ್ಟಾಭಿಷೇಕವು ವಿಜ್ರಂಭಣೆಯಿಂದ ನೆರವೇರಿತು. ಇಂತಹ ಸಂತೋಷಸಮಯದಲ್ಲಿ ಶ್ರೀರಾಮನು ಸುಗ್ರೀವ ಹನುಮಂತ ವಿಭೀಷಣಾದಿಗಳಿಗೆಲ್ಲಾ ತಕ್ಕ ಬಹುಮಾನಗಳನ್ನು ಕೊಡಿಸಿ ದಾನಧರ್ಮಾದಿಗಳನ್ನು ನಡೆಸಿದನು. ಶ್ರೀರಾಮನು ಭರತನಿಗೆ ಯುವರಾಜ ಪಟ್ಟವನ್ನು ಕಟ್ಟಿದನು. ಅಯೋಧ್ಯೆಯಲ್ಲಿ ಸತ್ಯ ಪರಾಕ್ರಮಿಯಾದ ಶ್ರೀರಾಮಚಂದ್ರನು ಒಂದು ಸಾವಿರ ವರ್ಷಗಳ ಕಾಲ ಧರ್ಮದಿಂದ ರಾಜ್ಯವಾಳುತ್ತಾ ಸುಖದಿಂದಿದ್ದನು.
ನಾಳೆ ಮುಂದುವರೆಯುವುದು
ಕಾಮೆಂಟ್ಗಳು