ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಜಯಮ್ಮ



 ಬಿ. ಜಯಮ್ಮ


ಬಿ. ಜಯಮ್ಮ ಕನ್ನಡ ರಂಗಭೂಮಿ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಾರಂಭಿಕ ದಶಕಗಳ  ಬಹುದೊಡ್ಡ ಹೆಸರು.  

ಬಹುಮುಖ ಪ್ರತಿಭೆಯ ವೃತ್ತಿ ರಂಗಭೂಮಿ ಕಲಾವಿದರಾದ ಬಿ. ಜಯಮ್ಮನವರು 1915ರ ನವೆಂಬರ್ 26ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ  ಜನಿಸಿದರು.  ತಂದೆ ಟಿ.ಎನ್. ಮಲ್ಲಪ್ಪನವರು. ತಾಯಿ ರಂಗ ಕಲಾವಿದೆ ಬಿ. ಕಮಲಮ್ಮನವರು. ತಂದೆ ಮಲ್ಲಪ್ಪನವರಿಗೆ ಮಗಳು ಎಂ.ಬಿ.ಬಿ.ಎಸ್ ಓದಿ ವೈದ್ಯಳಾಗಬೇಕೆಂಬ ಕನಸಿತ್ತು. ಆದರೆ ಬಾಲಕಿ ಜಯಮ್ಮನಿಗೆ ಸಂಗೀತ, ನೃತ್ಯ, ನಾಟಕಗಳಲ್ಲಿ ಅಭಿರುಚಿ.

ರಸಿಕ ಜನಾನಂದ ನಾಟಕ ಸಭಾ ಕಂಪನಿಯ ನಾಟಕಗಳಲ್ಲಿ ಬಾಲ ಪಾತ್ರಗಳಲ್ಲಿ ನಟಿಸಿದ ಜಯಮ್ಮನವರು  ಸೀತಾಕಲ್ಯಾಣ ನಾಟಕದ ಸೀತಾ ಪಾತ್ರದಿಂದ ಅಪಾರ ಕೀರ್ತಿಗಳಿಸಿದರು. ಮುಂದೆ ಅವರು ದಸ್ತಗೀರ್ ಸಾಹೇಬರ ನಾಟಕ ಸಂಸ್ಥೆ, ಅಗಳಿ ತಿಮ್ಮಪ್ಪಯ್ಯನವರ ನಾಟಕಸಂಸ್ಥೆ, ಬಾಳಬಸವೇಗೌಡರ ನಾಟಕ ಸಂಸ್ಥೆಗಳಲ್ಲಿ ಅನೇಕ ಪ್ರಮುಖಪಾತ್ರಗಳಲ್ಲಿ ನಟಿಸಿದರು.  ಗುಲೇಬಕಾವಲಿ ಚಿತ್ರತಾರೆ, ಸದಾರಮೆಯ ಚಂಚುಕುಮಾರಿ ಪಾತ್ರಗಳಲ್ಲಿ ಅವರು ಜನಪ್ರಿಯರಾದರು.

ಮುಂದೆ ಅವರು ಗುಬ್ಬಿವೀರಣ್ಣನವರ ನಾಟಕ ಸಂಸ್ಥೆಗೆ ಪ್ರವೇಶ ಪಡೆದರು. ವೀರಸಿಂಹ ಚರಿತ್ರೆಯಲ್ಲಿ ಅವರದ್ದು  ಪ್ರಮುಖ  ಪಾತ್ರ. ರಾಜಭಕ್ತಿಯ ಮೃಣಾಲಿನಿ ಪಾತ್ರದಿಂದ ರಂಗಭೂಮಿಯಲ್ಲಿ ಅವರಿಗೆ  ಸುಭದ್ರಸ್ಥಾನ ಪ್ರಾಪ್ತವಾಯಿತು. ಶ್ರೀಕೃಷ್ಣ ಪಾರಿಜಾತ, ರುಕ್ಮಿಣಿ ಕಲ್ಯಾಣ, ಶಿವಜಲಂಧರ, ಸತಿ ಸಾವಿತ್ರಿ, ರಾಮಾಯಣ, ಕುರುಕ್ಷೇತ್ರ  ಮುಂತಾದ ಪ್ರಸಿದ್ಧ ನಾಟಕಗಳಲ್ಲಿ ಸತ್ಯಭಾಮೆ, ರುಕ್ಮಿಣಿ, ಬೃಂದಾದೇವಿ, ಸಾವಿತ್ರಿ, ಸೀತಾದೇವಿ, ದ್ರೌಪದಿ ಹೀಗೆ ವಿವಿಧ ಪಾತ್ರಧಾರಿಯಾಗಿ ಎಲ್ಲೆಡೆ ಪ್ರಖ್ಯಾತಿ ಪಡೆದರು.   ಕೆ. ಹಿರಣ್ಯಯ್ಯನವರ ದೇವದಾಸಿಯ ಮಣಿಮಂಜರಿ ಪಾತ್ರದಿಂದಲೂ ಅವರಿಗೆ ಅಪಾರ  ಜನಮನ್ನಣೆ ಸಂದಿತು.

ಮುಂದೆ ಚಲನಚಿತ್ರಲೋಕದಲ್ಲಿ ತ್ರಿಭಾಷಾ ತಾರೆಯಾಗಿ ಮಿಂಚಿದ ಬಿ. ಜಯಮ್ಮನವರು  ಹಿಸ್ ಲವ್ ಅಫೇರ್ (ಮೂಕಿಚಿತ್ರ), ಹರಿಮಾಯ, ಸದಾರಮೆ, ಗುಲೆಬಕಾವಲಿ, ಸುಭದ್ರ, ಜೀವನ ನಾಟಕ,  ಭರ್ತ್ಯಹರಿ (ತಮಿಳು), ಹೇಮರೆಡ್ಡಿ ಮಲ್ಲಮ್ಮ, ಸ್ವರ್ಗ ಸೀಮ (ತೆಲುಗು);  ಲವಂಗಿ, ತ್ಯಾಗಯ್ಯ (ತೆಲುಗು), ಬ್ರಹ್ಮರಥಂ (ತೆಲುಗು), ನಾಟ್ಯರಾಣಿ, ಮಂಗಯಾರ್ ಕರಸಿ (ತಮಿಳು), ರಾಜಾವಿಕ್ರಮ, ಮಂತ್ರದಂಡಂ (ತಮಿಳು), ಗುಣಸಾಗರಿ, ಸತ್ಯಶೋಧನೈ (ತಮಿಳು), ಗುಮಾಸ್ತ;     ಅಣ್ಣ-ತಂಗಿ, ಮಾವನ ಮಗಳು, ಪ್ರೇಮಮಯಿ, ಇಮ್ಮಡಿ ಪುಲಿಕೇಶಿ, ಅಣ್ಣ ತಮ್ಮ, ಬೇಡಿ ಬಂದವಳು, ಮುಕ್ತಿ, ಸಾಕ್ಷಾತ್ಕಾರ    ಮುಂತಾದ ಅನೇಕ ಚಲನಚಿತ್ರಗಳಲ್ಲಿ ವಿಜ್ರಂಭಿಸಿದರು.  

ಬಿ. ಜಯಮ್ಮನವರು ಮಹಾನ್ ನಟಿಯಷ್ಟೇ ಅಲ್ಲದೆ ಗಾಯಕಿಯೂ ಆಗಿದ್ದರು. ತಮ್ಮ ಬಹುತೇಕ ನಾಟಕ ಮತ್ತು ಚಲನಚಿತ್ರ ಪಾತ್ರಗಳಿಗೆ ಸ್ವತಃ ಅವರೇ ಗಾಯನವನ್ನೂ ನೀಡಿದ್ದರು.  ಗುಬ್ಬಿ ವೀರಣ್ಣನವರ ಮೂರನೆಯ ಪತ್ನಿಯಾಗಿದ್ದ  ಬಿ. ಜಯಮ್ಮನವರು ತಮ್ಮ ಪತಿಯವರೊಂದಿಗೇ ಹಲವಾರು ಚಲನಚಿತ್ರಗಳಲ್ಲಿ ಪಾತ್ರನಿರ್ವಹಿಸಿದ್ದರು. ಜಯಮ್ಮನವರು ಹಿರಿಯ ವಯಸ್ಸಿನಲ್ಲಿಯೂ ಕೆಲವೊಂದು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದುಂಟು.   ಬಿ. ಜಯಮ್ಮನವರ ಪುತ್ರರಾದ ಜಿ. ವಿ. ಗುರುಪ್ರಸಾದ್ ಹಾಗೂ ಪುತ್ರಿಯರಾದ  ಜಿ. ವಿ. ಹೇಮಲತಾ ಮತ್ತು  ಜಿ. ವಿ. ಲಕ್ಷ್ಮೀಪ್ರಭಾ ಅವರುಗಳೂ ಅನೇಕ ಚಲನಚಿತ್ರ ಮತ್ತು ನಾಟಕಗಳ ಕಲಾವಿದರಾಗಿದ್ದಾರೆ.

1981ರ ವರ್ಷದಲ್ಲಿ ಬಿ. ಜಯಮ್ಮನವರು ವಿಧಾನಸಭೆಗೆ ನಾಮಾಂಕಿತರಾಗಿ  ಸೇವೆ ಸಲ್ಲಿಸಿದರು. ಅವರಿಗೆ  ಕರ್ನಾಟಕ ನಾಟಕ ಅಕಾಡೆಮಿ ಗೌರವ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.  

ಬಿ. ಜಯಮ್ಮನವರು 1988ರ ಡಿಸೆಂಬರ್ 20ರಂದು ಈ ಲೋಕವನ್ನಗಲಿದರು. ಈ ಮಹಾನ್ ಕಲಾವಿದೆಗೆ ನಮನ.

On the birth anniversary of great theatre and movie artiste B. Jayamma 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ