ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರನ್ನ




ರನ್ನ


ರನ್ನ ಮಹಾಕವಿ ಹತ್ತನೆಯ ಶತಮಾನದ ಕವಿ ರತ್ನತ್ರಯರಲ್ಲಿ ಒಬ್ಬನೆನೆಸಿದ್ದಾನೆ. ಇವನ ಕಾಲ ಕ್ರಿಶ 949ರಿಂದ 1020ರ ಅವಧಿಯದಾಗಿದ್ದು,  ಪಂಪನ ಕಿರಿಯ ಸಮಕಾಲೀನನಾಗಿದ್ದವ.

ರನ್ನನಿರುವ ಕನ್ನಡಕ್ಕೆ 
ಅನ್ಯರಿಂದ ಬಹುದೆ ಧಕ್ಕೆ? ಬರಿಯ ಕವಿಯೆ ಸಿಡಿಲ ಚಕ್ಕೆ 

ಇದು  ಕುವೆಂಪು ಅವರ ಮಾತು.

ರನ್ನನು ಕ್ರಿ.ಶ. 949ರಲ್ಲಿ  ಬೆಳುಗುಲಿ ಎಂಬ ಗ್ರಾಮದಲ್ಲಿ ಜನಿಸಿದನು. ಇದು ಈಗ ಮುಧೋಳ ತಾಲ್ಲೂಕಿನ ಈಗಿನ ರನ್ನ ಬೆಳಗಲಿ ಎಂದು ಹೆಸರಾಗಿದೆ. ಈತನ ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ.  ರನ್ನನ ಅಣ್ಣಂದಿರು ರೇಚಣ ಮತ್ತು ಮಾರಯ್ಯ. ರನ್ನನ ಸಾಂಸಾರಿಕ ಜೀವನ ಕೂಡ ಚೆನ್ನಾಗಿತ್ತು. ಇವನಿಗೆ ಶಾಂತಿ ಮತ್ತು ಜಕ್ಕಿ ಎಂಬ ಇಬ್ಬರು ಹೆಂಡತಿಯರು. ಇವರಿಗೆ ರಾಯ ಮತ್ತು ಅತ್ತಿಮಬ್ಬೆ ಎಂಬ ಇಬ್ಬರು ಮಕ್ಕಳಿದ್ದರು. ತನ್ನ ಮಕ್ಕಳಿಗೆ ಚಾವುಂಡರಾಯ ಮತ್ತು ಅತಿಮಬ್ಬೆಯರ ಹೆಸರುಗಳನ್ನು ಇಡುವುದರ ಮೂಲಕ ಕವಿ ಅವರ ಉಪಕಾರಕ್ಕೆ ಗೌರವವನ್ನು ತೋರಿದ್ದಾನೆ. 

ರನ್ನನು ಜೈನ ಮನೆತನದ ಬಳೆಗಾರ ಕುಲದವನು. ರನ್ನ ಪ್ರತಿಕೂಲ ಪರಿಸ್ಥಿತಿಯೊಡನೆ ಹೋರಾಡಿ ಕವಿಯಾದವನು. ಚಿಕ್ಕಂದಿನಿಂದಲೂ ಓದಿನಲ್ಲಿ ಆಸಕ್ತನಾಗಿದ್ದ ಈತ ತನ್ನ ಆಸಕ್ತಿಯನ್ನು ಪೂರೈಸಿಕೊಳ್ಳಲು ದಕ್ಷಿಣದ ಗಂಗರಾಜ್ಯಕ್ಕೆ ಬಂದ. ಇದಕ್ಕೆ ಆ ಕಾಲದಲ್ಲಿ ಶ್ರವಣಬೆಳಗೊಳ ಜೈನ ಸಂಸ್ಕೃತಿಯ ಕೇಂದ್ರವಾಗುತ್ತಿದ್ದುದ್ದು ಕಾರಣವಿರಬೇಕು. ಜೊತೆಗೆ ಚಾವುಂಡರಾಯನ ವ್ಯಕ್ತಿತ್ವ ಕೀರ್ತಿಗಳೂ ಸೇರಿರಬೇಕು. ಇವನಿಗೆ ಗಂಗಮಂತ್ರಿ ಚಾಮುಂಡರಾಯನ ಆಶ್ರಯ ಸಿಕ್ಕಿತು. ಗಂಗದಂಡನಾಯಕನಾದ ಚಾವುಂಡರಾಯನಿಂದ ತಾನು 'ರತ್ನವಾಗಿ ರೂಪುಗೊಂಡೆನೆಂದು ಈತನೇ ಹೇಳಿಕೊಂಡಿದ್ದಾನೆ. ಗಂಗರಾಜರ ಗುರುಗಳಾದ ಅಜಿತಸೇನಾಚಾರ್ಯರು ಇವನಿಗೆ ಗುರುಗಳಾಗಿ ದೊರೆತು ಇವನಲ್ಲಿದ್ದ ಧಾರ್ಮಿಕ ಆಸಕ್ತಿ ಬೆಳೆಯಲು ಅನುಕೂಲವಾಯಿತು. ಈ ಸನ್ನಿವೇಶದಲ್ಲಿ ರನ್ನ ಕವಿಯಾಗಿಯೂ ವಿದ್ವಾಂಸನಾಗಿಯೂ ಹೊರಹೊಮ್ಮಲು ಸಾಧ್ಯವಾಯಿತು.

ಚಾವುಂಡರಾಯನ ನೆರವಿನಿಂದ ಸಕಲ ವಿದ್ಯಾಪಾರಂಗತನಾದ ರನ್ನ ಗಂಗರಾಜ್ಯದಿಂದ ಹಿಂದಿರುಗಿ ಚಾಳುಕ್ಯ ತೈಲಪನಲ್ಲಿ ಆಶ್ರಯ ಪಡೆದ. ತೈಲಪನ ಮಗನಾದ ಸತ್ಯಾಶ್ರಯ ಇರಿವಬೆಡಂಗ ಈತನಿಗೆ ಆಶ್ರಯ ನೀಡಿದ. ಹೀಗೆ ರನ್ನ ಗಂಗರಾಜ್ಯದಿಂದ ಹಿಂದಿರುಗಲು ಅತ್ತಿಮಬ್ಬೆಯ ಪ್ರಭಾವಿ ವ್ಯಕ್ತಿತ್ವ ಕಾರಣವಿರಬೇಕು. ಅತ್ತಿಮಬ್ಬೆ ಶ್ರವಣಬೆಳಗೊಳಕ್ಕೆ ಬಂದು ಗೊಮ್ಮಟದರ್ಶನ ಪಡೆದ ವಿಚಾರ ಅಜಿತಪುರಾಣದಲ್ಲಿ ಬಂದಿದೆ. ಹಾಗೆ ಬಂದಿದ್ದಾಗ ರನ್ನ ಅವಳ ವ್ಯಕ್ತಿತ್ವಕ್ಕೆ ಆಕರ್ಷಿತನಾಗಿ ತನ್ನ ರಾಜ್ಯಕ್ಕೆ ಮರಳಲು ಮನಸ್ಸುಮಾಡಿರಬೇಕು. ರನ್ನ ಚಕ್ರವರ್ತಿ ತೈಲಪನಲ್ಲಿ 'ಮಹಿಮೋನ್ನತಿ'ಯನ್ನೇ ಪಡೆದ. ಅವನಿಂದ 'ಕವಿಚಕ್ರವರ್ತಿ ಎಂಬ ಬಿರುದನ್ನೂ ಗಳಿಸಿದ. 'ಗದಾಯುದ್ಧ'ವನ್ನು ದಂಡನಾಯಕ ಕೇಶಿ ತಿದ್ದಿದವನೆಂದು ಹೇಳಿಕೊಂಡಿರುವುದರಿಂದ, ಈ ಕೇಶಿಯೇ ರನ್ನನನ್ನು ಚಕ್ರವರ್ತಿಗೆ ಪರಿಚಯಿಸಿರಬೇಕೆಂದು ತೋರುವುದು.

ರನ್ನನ ಪೋಷಕರಲ್ಲಿ ಚಾವುಂಡರಾಯ, ತೈಲಪರಂತೆಯೇ ಅತ್ತಿಮಬ್ಬೆಯೂ ಮುಖ್ಯಳಾಗಿದ್ದಾಳೆ. ಚಕ್ರವರ್ತಿಗಳಲ್ಲಿ ತೈಲಪ ಶ್ರೇಷ್ಠನಾಗಿರುವಂತೆ ದಾನದಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ ಹಾಗೆ ಎಂಬುದು ಕವಿಯ ಹೇಳಿಕೆ. ರನ್ನನಿಂದ ಅಜಿತಪುರಾಣವನ್ನು ಹೇಳಿಸಿದವಳು ಅತ್ತಿಮಬ್ಬೆ. ಆದಿಪುರಾಣ, ಶಾಂತಿಪುರಾಣಗಳಿಗೆ ಸಮಾನವಾದ ಈ ಕೃತಿಯನ್ನು 'ಆಶ್ರಿತ ಚಿಂತಾಮಣಿಗತ್ತಿಮಬ್ಬೆಗರ್ತಿಯೆ ಪೇಳ್ದಂ' ಎಂದಿದ್ದಾನೆ ಕವಿ. ಇದರಿಂದ ಅತ್ತಿಮಬ್ಬೆ ಪರವಾಗಿರುವ ಇವನ ಗೌರವ ವ್ಯಕ್ತವಾಗುತ್ತದೆ. ಹೀಗಾಗಿ ರನ್ನ ಪ್ರತಿಭಾವಂತನಾಗಿದ್ದು, ಅದನ್ನು ಗುರುತಿಸುವ ಜನರ ಸಹವಾಸ ದೊರಕಿದ್ದರಿಂದ ಸುಲಭವಾಗಿ ಮೇಲೇರಲು ಸಾಧ್ಯವಾಯಿತು. ಕವಿ ತಾನು ಸೌಮ್ಯ ಸಂವತ್ಸರದಲ್ಲಿ ಹುಟ್ಟಿದವನೆಂದು ಹೇಳಿಕೊಂಡಿದ್ದಾನೆ. ಇದು 949 ಆಗುತ್ತದೆ. ಆದ್ದರಿಂದ ರನ್ನ ಹುಟ್ಟಿದ್ದು 949ರಲ್ಲಿ ಎನ್ನುವುದು ಖಚಿತ. ಗದಾಯುದ್ಧದ ಕಾಲವನ್ನು 1005 ಎಂದು ಗುರುತಿಸಲಾಗಿದೆ. ಕವಿ 1020ರಲ್ಲಿ ತೀರಿಕೊಂಡಿರಬೇಕೆಂದು ಅಭಿಪ್ರಾಯವಿದೆ.

ರನ್ನನಿಗೆ ಕವಿರತ್ನ, ಕವಿಮುಖಚಂದ್ರ, ಕವಿಚಕ್ರವರ್ತಿ, ಕವಿರಾಜಶೇಖರ, ಕವಿಜನಚೂಡಾರತ್ನ, ಕವಿಚರ್ತುಮುಖ, ಉಭಯಕವಿ ಮೊದಲಾದ ಬಿರುದುಗಳಿವೆ.

ರನ್ನ ತನ್ನ ಕಾವ್ಯದಲ್ಲಿ ವ್ಯಾಸ, ವಾಲ್ಮೀಕಿಯರನ್ನೂ,  ಕಾಳಿದಾಸ ಬಾಣರನ್ನೂ ನೆನೆದಿದ್ದಾನೆ. ಅಜಿತಪುರಾಣದಲ್ಲಿ ಪಂಪನ ಸ್ಮರಣೆಯಿದೆ.
ರನ್ನ ಬರೆದಿರುವ ಕೃತಿಗಳು ಎಷ್ಟು ಎಂಬ ಬಗ್ಗೆ ಜಿಜ್ಞಾಸೆಯಿದೆ. ಕವಿಯೇ ಹೇಳಿರುವಂತೆ ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ, ಅಜಿತಪುರಾಣ, ಸಾಹಸಭೀಮವಿಜಯ, ರನ್ನಕಂದ ಈ ಐದು ಕೃತಿಗಳನ್ನು ರಚಿಸಿರುವಂತೆ ತೋರುತ್ತದೆ. ಮೊದಲೆರಡು ಕೃತಿಗಳು ದೊರೆಯದಿರುವುದರಿಂದ, ಅನೇಕ ಊಹೆಗಳಿಗೆ ಎಡೆಮಾಡಿ ಕೊಟ್ಟಿದೆ. ಪರಶುರಾಮಚರಿತ, ಚಾವುಂಡರಾಯನನ್ನು (ಸಮರ ಪರಶುರಾಮ ಎಂಬ ಬಿರುದಾಂಕಿತ) ಕುರಿತ ಕೃತಿಯಾಗಿರಬೇಕು. ರನ್ನನಿಗೆ ಮೊದಲು ಆಶ್ರಯ ಕೊಟ್ಟವನು ಚಾವುಂಡರಾಯನಾದುದರಿಂದ, ತನ್ನ ಮೊದಲ ಕೃತಿಯನ್ನು ಅವನ ಪರವಾಗಿ ಬರೆದಿರಬೇಕು. ಇದರಲ್ಲಿ ಚಾವುಂಡರಾಯನ ಚರಿತೆಯಂತೆಯೇ ಪುರಾಣ ಪರಶುರಾಮನ ಕಥೆಯೂ ಸೇರಿರಬೇಕು. 'ಚಕ್ರೇಶ್ವರಚರಿತ' ತೈಲಪ ಚಕ್ರವರ್ತಿಯನ್ನು ಕುರಿತದ್ದೆಂಬುದಕ್ಕೆ ಆಧಾರಗಳಿವೆ. ರನ್ನನಿಗೆ ತೈಲಪ ಪ್ರಮುಖ ಆಶ್ರಯದಾತ; 'ಕವಿಚಕ್ರವರ್ತಿ' ಬಿರುದನ್ನು ಕೊಟ್ಟವನು.

'ರನ್ನಕಂದ' ಒಂದು ನಿಘಂಟು. ಪದಗಳಿಗೆ ಅರ್ಥವನ್ನು ಕಂದಪದ್ಯ ರೂಪದಲ್ಲಿ ಬರೆದಿರುವುದು ಇದರ ವಿಶೇಷ. ನಿಘಂಟುಗಳಲ್ಲಿ ಇದು ಪ್ರಾಚೀನವಿರಬೇಕೆಂದು ತೋರುವುದು.

ಅಜಿತತೀರ್ಥಂಕರಪುರಾಣ ಧಾರ್ಮಿಕ ಕಾವ್ಯ. ಎರಡನೆಯ ತೀರ್ಥಂಕರನ ಕಥೆ ಇದರ ವಸ್ತು. ಇದನ್ನು 'ಪುರಾಣ ತಿಲಕ' ಎಂದು ಕವಿಯೇ ಹೇಳಿಕೊಂಡಿದ್ದಾನೆ. ಆದಿಪುರಾಣ ಮತ್ತು ಶಾಂತಿಪುರಾಣಗಳಿಗೆ ಸಮಾನವಾದ ಕೃತಿಯೆಂದು ಇದರ ಅಭಿಪ್ರಾಯ. ಇದರಲ್ಲಿ ಹನ್ನೆರಡು ಆಶ್ವಾಸಗಳಿದ್ದು, ಮೊದಲನೆಯ ಆಶ್ವಾಸ ಪೂರ್ಣವಾಗಿ ಆಶ್ರಯದಾತೆ ಅತ್ತಿಮಬ್ಬೆಯ ಚಿತ್ರಣಕ್ಕೆ ಮೀಸಲಾಗಿದೆ. ಕೊನೆಯ ಆಶ್ವಾಸದಲ್ಲಿ ಗ್ರಂಥಸಮಾಪ್ತಿ. ಕವಿಕಾವ್ಯ ಆಶ್ರಯದಾತರ ವಿಚಾರವಿದೆ. ಇನ್ನುಳಿದ ಹತ್ತು ಆಶ್ವಾಸಗಳಲ್ಲಿ ಏಳರಲ್ಲಿ ಅಜಿತತೀರ್ಥಂಕರನ ಕಥೆಯೂ ಆಮೇಲಿನ ಮೂರರಲ್ಲಿ ಸಾಗರ ಚಕ್ರವರ್ತಿಯ ಕಥೆಯೂ ಬಂದಿದೆ. ಭವಾವಳಿಯ ಗೊಂದಲವಿಲ್ಲದಿರುವುದು ಈ ಕೃತಿಯ ವಿಶೇಷ. ಗ್ರಂಥದ ರಸವತ್ತಾದ ಭಾಗಗಳೆಂದರೆ ಅತ್ತಿಮಬ್ಬೆ ಮತ್ತು ಸಾಗರಚಕ್ರವರ್ತಿ ಕಥೆಗಳ ಭಾಗಗಳೆ ಆಗಿವೆ. ಜೈನಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ತೊಡಕಿಲ್ಲದೆ ನಿರೂಪಿಸಿರುವುದರಿಂದ ಆ ಕುರಿತು ಒಂದು ಶಾಸ್ತ್ರೀಯ ಗ್ರಂಥವೂ ಆಗಿದೆ.

ರನ್ನನ ಕೃತಿಗಳಲ್ಲಿ ಸಾಹಸಭೀಮವಿಜಯ ಅತಿ ಮುಖ್ಯವಾದುದು. ಇವನ ಲೌಕಿಕ ಕೃತಿಗಳಲ್ಲಿ ಉಪಲಬ್ಧವಿರುವಂಥದು ಇದೊಂದೇ. ಗದಾ ಸೌಪ್ತಿಕ ಪರ್ವಗಳ ಕಥೆಯೇ ಇದರ ವಸ್ತು. ಸಂದರ್ಭ ಒದಗಿದಾಗಲೆಲ್ಲಾ ಹಿಂದಿನ ಕಥೆಯನ್ನು ಸೂಚಿಸುವ ವಿಧಾನವನ್ನು ಅನುಸರಿಸುವುದರಿಂದ (ಸಿಂಹಾವಲೋಕನ) ಕಾವ್ಯಕ್ಕೆ ಸಮಗ್ರತೆ ಪ್ರಾಪ್ತವಾಗಿದೆ. ಹತ್ತು ಆಶ್ವಾಸಗಳಲ್ಲಿ ಹರಡಿಕೊಂಡಿರುವ ಈ ಕಾವ್ಯದಲ್ಲಿ ಭೀಮ-ದುರ್ಯೋಧನರ ಗದಾಯುದ್ಧವೇ ಕೇಂದ್ರಬಿಂದು. ಅದರ ಕಾರಣ ಮತ್ತು ಪರಿಣಾಮಗಳನ್ನು ಕೃತಿ ಆದ್ಯಂತ ಸೂಚಿಸುತ್ತದೆ. ಕೃತಿಗೆ 'ಸಾಹಸಭೀಮವಿಜಯ' ಎಂದು ಹೆಸರಿದ್ದರೂ ಗದಾಯುದ್ಧ ಎಂದೇ ಇದರ ಖ್ಯಾತಿ. ಮಹಾಭಾರತದ ಭೀಮನೊಡನೆ ಆಶ್ರದಾತನಾದ ಸತ್ಯಾಶ್ರಯ ಚಕ್ರವರ್ತಿಯಾದ ಮೇಲೆಯೇ ರನ್ನ ಈ ಕಾವ್ಯವನ್ನು ಬರೆದಿರಬೇಕೆನಿಸುತ್ತದೆ. ಪುರಾಣಕಥೆಯಲ್ಲಿ ಸಮಕಾಲೀನ ಇತಿಹಾಸವನ್ನು ಸಮೀಕರಿಸುವುದರ ಮೂಲಕ ಕಾವ್ಯದಲ್ಲಿ ಹೊಸಧ್ವನಿಯನ್ನು ಉಂಟುಮಾಡಬೇಕೆಂಬ ರನ್ನನ ಧೋರಣೆಗೆ ಪಂಪನೇ ಆದರ್ಶ. ಕಥಾನಾಯಕ ಭೀಮನಾದರೂ ದುರ್ಯೋಧನನ ಪಾತ್ರವೇ ಹೆಚ್ಚು ಜೀವಂತವಾಗಿ ಚಿತ್ರಣಗೊಂಡಿದೆ. ಈತ ಕಾವ್ಯದಲ್ಲಿ ದುರಂತನಾಯಕನಾಗಿ ಕಾಣಬರುತ್ತಾನೆ. ಪಂಪನನ್ನು ಅನುಸರಿಸಿಯೂ ಅವನಿಗೆ ಸಾಕಷ್ಟು ಋಣಿಯಾಗಿಯೂ ರನ್ನ ಮಹತ್ವದ ಕಾವ್ಯ ನಿರ್ಮಿಸಿದ ಎಂಬುದು ಮಹತ್ವದ ವಿಚಾರವೆನಿಸಿದೆ.

Ranna, great poet of 10th Century 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ