ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ.ಆರ್.ಕೃಷ್ಣಯ್ಯರ್


 ಜಸ್ಟಿಸ್ ವಿ. ಆರ್. ಕೃಷ್ಣಯ್ಯರ್


ಭಾರತದಲ್ಲಿನ ಕಾನೂನುಗಳಲ್ಲಿ ತೊಡಕಿನ ಸಂದೇಹಗಳು ಎದುರಾದಾಗಲೆಲ್ಲ ಒಂದು ಪ್ರಧಾನ ಹೆಸರು ಉಲ್ಲೇಖಗೊಳ್ಳುತ್ತದೆ.  ಅವರೇ ಜಸ್ಟಿಸ್ ವಿ. ಆರ್. ಕೃಷ್ಣಯ್ಯರ್.  

ಕೇರಳದ ವೈದ್ಯನಾಥಪುರಂ ರಾಮ ಅಯ್ಯರ್ ಕೃಷ್ಣ ಅಯ್ಯರ್ ಅವರು ರಾಜಕೀಯದಲ್ಲೂ ಸೇವೆ ಸಲ್ಲಿಸಿ ನ್ಯಾಯಾಂಗದಲ್ಲೂ ಹೆಸರು ಮಾಡಿದವರು.  ಜನಸಾಮಾನ್ಯನಿಗೆ ಕಾನೂನು ಭದ್ರತೆ ಒದಗಿಸಬೇಕು, ನ್ಯಾಯ ಸಿಗಬೇಕು ಎಂದು ಅವರು ನಿರಂತರವಾಗಿ ಶ್ರಮಿಸಿದವರು. 

ವಿ.ಆರ್.ಕೃಷ್ಣ ಅಯ್ಯರ್ 1915ರ ನವೆಂಬರ್ 15ರಂದು ಕೇರಳದ ಪಾಲಕ್ಕಾಡ್ ಎಂಬಲ್ಲಿ ಜನಿಸಿದರು.  ಅವರ ತಂದೆ ವಿ.ವಿ.ರಾಮ ಅಯ್ಯರ್ ಕೇರಳದ ಖ್ಯಾತ ಕ್ರಿಮಿನಲ್ ಲಾಯರ್ ಆಗಿದ್ದರು.  ತಂದೆಯ ಹೆಜ್ಜೆಯನ್ನೇ ಅನುಸರಿಸಿದ ಕ್ಯಷ್ಣಯ್ಯರ್ ತಲಚ್ಚೇರಿಯಲ್ಲಿ ವಕೀಲರಾದರು. ರೈತರು, ಹೋರಾಟಗಾರರ ಪರ ವಕಾಲತ್ತು ವಹಿಸಿ ಹೆಸರು ಮಾಡಿದರು.  ಖುದ್ದು ನ್ಯಾಯಾಧೀಶರೇ ಇಂತಹವರ ಪರ ವಕಾಲತ್ತು ವಹಿಸುವಾಗ ಎಚ್ಚರ ಇರಲಿ, ಮುಂದೆ ಸಮಸ್ಯೆಗಳಿಗೆ ಸಿಲುಕಲಿರುವೆ ಎಂದು ಎಚ್ಚರಿಕೆ ನೀಡಿದರೂ ತಾವು ನಂಬಿದ್ದನ್ನು ಬಿಡಲಿಲ್ಲ. ಈ ಕಾರಣದಿಂದಲೇ ಹಲವು ಬಾರಿ ಬಂಧನಕ್ಕೂ ಒಳಗಾಗಿದ್ದರು. ಆದರೆ, ಅದರಿಂದ ಅವರ ವಕೀಲ ವೃತ್ತಿ ಕೊನೆಗೊಳ್ಳಲಿಲ್ಲ. 

1957ರಲ್ಲಿ ಕೇರಳ ವಿಧಾನಸಭೆಗೆ ಚುನಾವಣೆ ನಡೆದಾಗ ಇ.ಎಂ.ಎಸ್ ನಂಬೂದರಿಪಾದ್ ಅವರು ಕೃಷ್ಣ ಅಯ್ಯರ್ ಅವರನ್ನು ರಾಜಕೀಯಕ್ಕೆ ಕರೆ ತಂದರು. ಚುನಾವಣೆಯಲ್ಲಿ ಗೆದ್ದು ಸಚಿವರೂ ಆದರು. ಕಾನೂನು, ಗೃಹ, ಸಮಾಜ ಕಲ್ಯಾಣ, ನೀರಾವರಿ, ಬಂದಿಖಾನೆ ಹೀಗೆ ಹಲವು ಖಾತೆಗಳನ್ನು ನಿಭಾಯಿಸಿದರು. ಹಲವು ಮಹತ್ತರ ಬದಲಾವಣೆಗಳನ್ನು ಜಾರಿಗೆ ತಂದರು. ಭೂ ಸುಧಾರಣೆ ಕಾಯ್ದೆ ಇದರಲ್ಲಿ ಪ್ರಮುಖ. ಬಂದಿಖಾನೆಗಳ ಸುಧಾರಣೆಗೂ ಒತ್ತು ಕೊಟ್ಟರು. ಹೀಗೆ ಹೆಸರು ಮಾಡುತ್ತಿದ್ದಾಗಲೇ 1965ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿದರು. ಈ ಹಂತದಲ್ಲಿ ಕೃಷ್ಣ ಅಯ್ಯರ್ ರಾಜಕೀಯ ತಮಗಲ್ಲ ಎನ್ನುವುದನ್ನು ಒಪ್ಪಿಕೊಂಡು ಮತ್ತೆ ವಕೀಲ ವೃತ್ತಿ ಆರಂಭಿಸಿದರು. ಮುಂದೆ ಕೇರಳ ಹೈ ಕೋರ್ಟ್, ನಂತರ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾದರು.

1971-73 ಅವಧಿಯಲ್ಲಿ ಅಯ್ಯರ್ 
'ಲಾ ಕಮಿಷನ್ ಆಫ್ ಇಂಡಿಯಾ'ದ ಸದಸ್ಯರಾದರು.  ಈ ಅವಧಿಯಲ್ಲಿ ಅವರು ತಯಾರಿಸಿದ ಸುದೀರ್ಘ ವರದಿ ಭಾರತದಲ್ಲಿ 'ಲೀಗಲ್-ಏಯ್ಡ್' ಮೂವ್ಮೆಂಟ್ಗೆ ನಾಂದಿ ಹಾಡಿತು. ಭಾರತದ ಸಂವಿಧನಾತ್ಮಕ ಕಾನೂನುಗಳು ಸಾಮಾಜಿಕ, ರಾಜಕೀಯ ಮತ್ತು ಮಾನವ ಹಕ್ಕುಗಳ ಮೇಲೆ ಬೆಳಕುಚೆಲ್ಲುವ ಅಮೋಘ ಕೊಡುಗೆಗಳನ್ನು ನೀಡಿದರು.  ಅವರ ತೀರ್ಪುಗಳು ಸಾಹಿತ್ಯಾತ್ಮಕ ಅಂಶಗಳ ಉದ್ಘೋಷಗಳಿಂದ ಶೊಭಿಸುತ್ತಿತ್ತು.

ಅದು 1975ರ ವರ್ಷದ ಒಂದು ದಿನ.  ಬಂದವರು "ನಾನು ಕಾನೂನು ಸಚಿವ" ಎಂದು ಪರಿಚಯಿಸಿಕೊಂಡರು.

‘‘ಹೌದಾ ಏನಾಗಬೇಕಿತ್ತು" ಎಂದರು ನ್ಯಾಯಮೂರ್ತಿ ಕೃಷ್ಣಯ್ಯರ್.

‘‘ಪ್ರಧಾನಿ ಅವರ ವಿರುದ್ಧ ಅಲಹಾಬಾದ್ ಹೈ ಕೋರ್ಟ್ ತೀರ್ಪು ನೀಡಿದೆ, ಅದಕ್ಕೆ ತಡೆ ನೀಡಲು ಮಧ್ಯಂತರ ಪರಿಹಾರ ಕೋರಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಅದು ನಿಮ್ಮ ಪೀಠದ ಮುಂದೆ ಬರಲಿದೆ,’’ ಎಂದರು ದೇಶದ ಕಾನೂನು ಸಚಿವರು.

‘‘ಹೌದೆ! ಪ್ರಧಾನಿ ಅವರು ವಕೀಲರನ್ನು ನೇಮಿಸಿಕೊಂಡಿದ್ದಾರಾ?’’

‘‘ಹೌದು’’.

‘‘ವಕೀಲರು ಮನವಿ ಸಲ್ಲಿಸಲಿ, ಅದನ್ನು ಶೀಘ್ರ ಇತ್ಯರ್ಥಗೊಳಿಸುತ್ತೇನೆ,’’ ಎಂದ ನ್ಯಾಯಮೂರ್ತಿಗಳು ಸಂಭಾಷಣೆ ಅಂತ್ಯಗೊಳಿಸಿದರು. ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು ತಮ್ಮ ಧ್ವನಿ ಕೇಳುತ್ತಿದ್ದಂತೆ ಭಯ, ಭಕ್ತಿಯಿಂದ ಪ್ರಕರಣದಲ್ಲಿ ಪ್ರಧಾನಿ ಪರ ತೀರ್ಪು ಕೊಡುವ ಭರವಸೆ ನೀಡಿಬಿಡುತ್ತಾರೆ ಎಂದು ಭಾವಿಸಿದ್ದ ಕಾನೂನು ಸಚಿವರು ನ್ಯಾಯಮೂರ್ತಿಗಳ ಪ್ರತಿಕ್ರಿಯೆಗೆ ಬೆಚ್ಚಿದ್ದರು.

ಮುಂದೆ ಈ ನ್ಯಾಯಮೂರ್ತಿಗಳು ಆ ಪ್ರಕರಣದಲ್ಲಿ ತೀರ್ಪು ನೀಡಿದಾಗ ಕಾನೂನು ಸಚಿವರಷ್ಟೇ ಅಲ್ಲ, ಅಂದಿನ ಪ್ರಧಾನಿ, ಅವರ ಬೆಂಬಲಿಗರು, ದೇಶದ ಅತಿ ದೊಡ್ಡ ರಾಜಕೀಯ ಪಕ್ಷದ ಘಟಾನುಘಟಿ ನಾಯಕರು ಬೆಚ್ಚಿ ಬಿದ್ದಿದ್ದರು. ಅದೇ ಮೊದಲು, ಅದೇ ಕೊನೆ ಬಳಿಕ ದೇಶದ ರಾಜಕೀಯವನ್ನೇ ಬದಲಿಸುವಂತಹ ಮತ್ತೊಂದು ತೀರ್ಪು ಯಾವುದೇ ನ್ಯಾಯಾಲಯದಿಂದಲೂ ಬಂದಿಲ್ಲ. ಅಂತಹ ತೀರ್ಪು ಕೊಟ್ಟವರು ವಿ. ಆರ್. ಕೃಷ್ಣಯ್ಯರ್.

ಸುಪ್ರಿಂಕೋರ್ಟ್‌ನ ನ್ಯಾಯಮೂರ್ತಿಯಾಗಿ ನಿವೃತ್ತಿಯಾಗುವ ವೇಳೆಗೆ ಕೃಷ್ಣಯ್ಯರ್ ಕ್ರಾಂತಿಕಾರಿ ನ್ಯಾಯಾಧೀಶ, ಭೀಷ್ಮ ಪಿತಾಮಹ ಎಂದೆಲ್ಲ ಹೆಸರು ಮಾಡಿದ್ದರು. ಸೇವೆಯಲ್ಲಿದ್ದಷ್ಟು ದಿನ ಹಲವು ಕ್ರಾಂತಿಕಾರಿ ತೀರ್ಪುಗಳನ್ನು ನೀಡಿದರೂ ಅದರಲ್ಲೆಲ್ಲ ಎದ್ದು ಕಾಣಿಸುವುದು ಅವರು ರಜಾ ಕಾಲದ ನ್ಯಾಯಪೀಠದ ನ್ಯಾಯಮೂರ್ತಿಯಾಗಿ ಇಂದಿರಾಗಾಂಧಿ - ರಾಜ್ ನಾರಾಯಣ್ ಪ್ರಕರಣದಲ್ಲಿ ನೀಡಿದ ತೀರ್ಪು. 1971ರ ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿಯಿಂದ ಆಯ್ಕೆಯಾಗಿದ್ದ ಇಂದಿರಾ ಗಾಂಧಿ ವಿರುದ್ಧ ರಾಜ್ ನಾರಾಯಣ್ ಅವರು ಚುನಾವಣಾ ಅಕ್ರಮಗಳ ಪ್ರಕರಣ ದಾಖಲಿಸಿದ್ದರು. ಇಂದಿರಾ ಗಾಂಧಿ ಆಯ್ಕೆಯನ್ನು ಅನೂರ್ಜಿತಗೊಳಿಸಿ ಅಲಹಾಬಾದ್ ಹೈ ಕೋರ್ಟ್‌ನ ನ್ಯಾಯಾಧೀಶ ಜಗಮೋಹನ್ ಲಾಲ್ ಸಿನ್ಹಾ ಅವರು ತೀರ್ಪು ನೀಡಿದ್ದರು. ಆದರೆ, ಇದಕ್ಕೆ ತಡೆ ನೀಡುವಂತೆ ಇಂದಿರಾಗಾಂಧಿ ಸುಪ್ರೀಂಕೋರ್ಟ್‌ನ ಮೊರೆ ಹೋದರು. ಈ ಪ್ರಕರಣ ಬಂದದ್ದು ವಿ.ಆರ್.ಕೃಷ್ಣ ಅಯ್ಯರ್ ಅವರ ರಜಾಕಾಲದ ಪೀಠದ ಮುಂದೆ. ಈ ಸಮಯದಲ್ಲಿಯೇ ದೇಶದ ಕಾನೂನು ಸಚಿವರು ಕೃಷ್ಣಯ್ಯರ್ ಅವರಿಗೆ ಒತ್ತಡ ಹೇರಲು ಪ್ರಯತ್ನಿಸಿದ್ದು.

ಇಂದಿರಾ ಗಾಂಧಿ ಅವರ ಪರ ನಾನಿ ಪಾಲ್ಖೀವಾಲಾ, ರಾಜ್ ನಾರಾಯಣ್ ಅವರ ಪರ ಶಾಂತಿಭೂಷಣ್ ವಕಾಲತ್ತು ವಹಿಸಿದ್ದರು. ಷರತ್ತುರಹಿತ ತಡೆ ನೀಡಬೇಕೆನ್ನುವುದು ಇಂದಿರಾ ಅವರ ಮನವಿ. ತಡೆ ನೀಡಬೇಡಿ ಎನ್ನುವುದು ರಾಜ್ ನಾರಾಯಣ್ ಅವರ ಒತ್ತಾಯ. ಇಂತಹದೊಂದು ದೈತ್ಯರ ಕಾಳಗದ ಮಧ್ಯೆ ಸಿಕ್ಕಿದ್ದ ಅಯ್ಯರ್ ಅವರು ಒತ್ತಡಕ್ಕೆ ಮಣಿದುಬಿಡಬಹುದು ಎನ್ನುವುದು ಹಲವರಲ್ಲಿದ್ದ ಅನುಮಾನ. ಆದರೆ, ಒಂದೇ ದಿನದಲ್ಲಿ ಪರ-ವಿರೋಧದ ವಾದ ಆಲಿಸಿದ ಕೃಷ್ಣ ಅಯ್ಯರ್  ಮರುದಿನವೇ ತೀರ್ಪು ನೀಡಿದರು. ಯಾವುದೇ ಒತ್ತಡಕ್ಕೆ ಮಣಿಯದೆ ಇಂದಿರಾಗಾಂಧಿ ಅವರ ವಿರುದ್ಧದ ತೀರ್ಪಿಗೆ ಷರತ್ತುಬದ್ಧ ತಡೆ ನೀಡಿದ್ದರು. ಷರತ್ತುಗಳು ಹೇಗಿದ್ದವೆಂದರೆ, ಇಂದಿರಾ ಗಾಂಧಿ ಅವರು ಸಂಸತ್ತಿನ ಅಧಿವೇಶನಕ್ಕೆ ಹಾಜರಾಗಬಹುದಿತ್ತು ಆದರೆ, ಚರ್ಚೆಗಳಲ್ಲಿ ಭಾಗವಹಿಸುವಂತಿರಲಿಲ್ಲ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮತ ಹಾಕುವಂತಿರಲಿಲ್ಲ. ಇದರಿಂದ ಬೆಚ್ಚಿದ ಇಂದಿರಾಗಾಂಧಿ ಪಡೆ ಅಂದೇ ತುರ್ತುಪರಿಸ್ಥಿತಿ ಘೋಷಿಸುವ ವಾತಾವರಣ ಸೃಷ್ಟಿಸಿ ಬಿಟ್ಟಿತ್ತು. ದೇಶದ ರಾಜಕೀಯ ಇತಿಹಾಸದ ಒಂದು ಕರಾಳ ಅಧ್ಯಾಯ ಅಂದು ಆರಂಭವಾಯಿತು.

ಕೃಷ್ಣ ಅಯ್ಯರ್ ಅವರು ಷರತ್ತುರಹಿತ ಜಾಮೀನು ನೀಡಿದ್ದರೆ ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿಯನ್ನೇ ಹೇರುತ್ತಿರಲಿಲ್ಲ ಎನ್ನುವವರಿದ್ದಾರೆ. ಅವತ್ತು ಅಂತಹ ತೀರ್ಪು ನೀಡದಿದ್ದರೆ ನ್ಯಾಯಾಂಗದ ಘನತೆ ಮಣ್ಣುಪಾಲಾಗುತ್ತಿತ್ತು, ಎನ್ನುವವರೂ ಇದ್ದಾರೆ. ನ್ಯಾಯಾಂಗದ ಮುಂದೆ ಪ್ರಧಾನಿ ಬೇರೆಯಲ್ಲ, ಜನ ಸಾಮಾನ್ಯರು ಬೇರೆಯಲ್ಲ ಎನ್ನುವ ಸಂದೇಶವನ್ನು ಈ ತೀರ್ಪು ನೀಡುವ ಮೂಲಕ ದೇಶಕ್ಕೆಲ್ಲ ರವಾನಿಸಿದ್ದರು ವಿ.ಆರ್.  ಕೃಷ್ಣಯ್ಯರ್.  ಈ ಪ್ರಕರಣದಲ್ಲಿ ಇಂದಿರಾ ಸಂಪುಟದ ಕಾನೂನು ಸಚಿವರೇ ತಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದರು ಎನ್ನುವುದನ್ನು ಖುದ್ದು ಕೃಷ್ಣ ಅಯ್ಯರ್ ಅವರೇ ಬಹಿರಂಗಪಡಿಸಿದ್ದರು.

ಕೃಷ್ಣ ಅಯ್ಯರ್ ಅವರು ತೀರ್ಪು ನೀಡುವಾಗ ಇದ್ದದ್ದು ಯಾರನ್ನೇ ಆದರೂ ಭಯಪಡಿಸುವ ವಾತಾವರಣ. ಅಲಹಾಬಾದ್ ಹೈ ಕೋರ್ಟ್ ಇಂದಿರಾಗಾಂಧಿ ಅವರ ವಿರುದ್ಧ ತೀರ್ಪು ನೀಡಿದ್ದರೂ ಇಂದಿರಾ ಅವರ ವಕೀಲರ ಮನವಿ ಮೇರೆಗೆ ಅದರ ಜಾರಿಗೆ 20 ದಿನಗಳ ಕಾಲ ತಡೆ ನೀಡಿತ್ತು. ಈ ಅವಧಿಯಲ್ಲಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿ ತೀರ್ಪು ಬರುವ ವೇಳೆಗೆ ದಿಲ್ಲಿಯಲ್ಲಿ ನಿತ್ಯ ಇಂದಿರಾ ಪರ ಭಾರಿ ಪ್ರದರ್ಶನಗಳು, ಸರಕಾರಿ ಪ್ರಾಯೋಜಿತ ‌‍ರ್‍ಯಾಲಿಗಳು ನಡೆದಿದ್ದವು. ದಿಲ್ಲಿ ಅಕ್ಷರಶಃ ರಣರಂಗದಂತಿದ್ದ ವೇಳೆಯಲ್ಲಿ ಕೃಷ್ಣ ಅಯ್ಯರ್ ಅವರು ಇಂದಿರಾ ಅವರ ವಿರುದ್ಧದ ತೀರ್ಪು ಬರೆಯುವ ಲೇಖನಿ ಹಿಡಿದಿದ್ದರು.

ಖುದ್ದು ನ್ಯಾಯಾಂಗದಲ್ಲಿ ಹೆಸರು ಮಾಡಿದ ಹಲವು ನ್ಯಾಯವಾದಿಗಳು ಇದನ್ನು ಐತಿಹಾಸಿಕ ತೀರ್ಪು ಎಂದರೂ ಕೃಷ್ಣ ಅಯ್ಯರ್ ಅವರ ಪ್ರಕಾರ ಇದೊಂದು ಸಾಮಾನ್ಯ ತೀರ್ಪು. ‘‘ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ನಾನು ಸಂಶೋಧನೆ ಮಾಡಿದ್ದೇನೆಂದರೆ, ಇಂತಹ ತಡೆಯಾಜ್ಞೆ ಕೋರಿದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಏನು ಮಾಡಿದೆ ಎನ್ನುವುದನ್ನು. ಅದುವರೆಗೂ ಇಂತಹ ಪ್ರಕರಣಗಳಲ್ಲಿ ತಡೆ ನೀಡಿದ ನಿದರ್ಶನಗಳೇ ಇದ್ದವು. ಇವೆಲ್ಲ ಷರತ್ತುಬದ್ಧ ತಡೆ ಆದೇಶಗಳು. ತಡೆ ಆದೇಶ ನೀಡದ ಪ್ರಕರಣಗಳೇ ಇರಲಿಲ್ಲ. ಇದನ್ನೇ ತೀರ್ಪು ನೀಡುವಾಗಲೂ ಪಾಲಿಸಿದೆ. ಆದರೆ, ಆ ಸನ್ನಿವೇಶದಲ್ಲಿ ಸೃಷ್ಟಿಯಾಗಿದ್ದ ಒತ್ತಡಕ್ಕೆ ಮಣಿಯದಿರಲು ನಿರ್ಧರಿಸಿದ್ದೆ" ಎಂದು ಅವರೇ ಮುಂದೆ ವಿವರಿಸಿದ್ದಾರೆ. 

ವಿ. ಆರ್. ಕೃಷ್ಣಯ್ಯರ್ ಸುಪ್ರೀಂಕೋರ್ಟ್‌ನಲ್ಲಿ ಏಳು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದ ಮೇಲೆ ಮಾನವ ಹಕ್ಕುಗಳ ಪ್ರತಿಪಾದಕರಾದರು, ಜನಾಂದೋಲನಗಳ ಮುನ್ನೆಲೆಯಲ್ಲಿ ನಿಂತರು.

1987ರಲ್ಲಿ ಆರ್. ವೆಂಕಟರಾಮನ್ ಅವರ ವಿರುದ್ಧ ರಾಷ್ಟ್ರಪತಿ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. 2002ರಲ್ಲಿ ಗುಜರಾತ್ ಹಿಂಸಾಚಾರ ಬಗ್ಗೆ ತನಿಖೆ ನಡೆಸಲು ನಾಗರೀಕರ ವೇದಿಕೆ ರಚಿಸಿದ ಸಮಿತಿಯ ಭಾಗವಾಗಿದ್ದರು. ಮೋದಿ ಸರಕಾರದ ವಿರುದ್ಧ ವರದಿ ನೀಡಿದ್ದರು. ಆದರೆ, ಮುಂದೆ ವಿವಾದಕ್ಕೆ ಹೆದರದೆ ಮೋದಿ ಅವರನ್ನು ಹೊಗಳಿಯೂ ಹೊಗಳಿದರು. ಕೈದಿಗಳಿಗೂ ಮತದಾನದ ಹಕ್ಕು ಬೇಕು ಎಂದು ವಾದಿಸಿದರು. ವಕೀಲರ ಶುಲ್ಕವನ್ನು ಕಾನೂನು ಮೂಲಕ ನಿಗದಿ ಮಾಡಬೇಕೆಂದು ಪ್ರತಿಪಾದಿಸಿದ್ದರು. 

ವಿ. ಆರ್. ಕೃಷ್ಣಯ್ಯರ್ ಸುಮಾರು ಎಪ್ಪತ್ತರಿಂದ ನೂರು ಪುಸ್ತಕಗಳನ್ನು ಬರೆದರು. 

ಇಂದಿನ ದಿನದಲ್ಲಿಯೂ ದೇಶದ ಅನೇಕ ಕಾನೂನು ತೀರ್ಪುಗಳಲ್ಲಿ ವಿ. ಆರ್. ಕೃಷ್ಣಯ್ಯರ್ ನೀಡಿದ ತೀರ್ಪುಗಳ ಆಧಾರದ ಉಲ್ಲೇಖಗಳು ಮೂಡುತ್ತವೆ ಅಂದರೆ ಅವರ ಮಹತ್ವ ಎಷ್ಟಿತ್ತು ಎಂದು ಸೋಜಿಗವಾಗುತ್ತದೆ.

ವಿ. ಆರ್. ಕೃಷ್ಣಯ್ಯರ್ ಅವರಿಗೆ 1999ರಲ್ಲಿ ಪದ್ಮವಿಭೂಷಣ ಗೌರವ ಸಂದಿತು.

ಇದ್ದಷ್ಟು ದಿನ ಕ್ರಾಂತಿಕಾರಿ ಚಿಂತನೆಯನ್ನೇ ಹೊಂದಿದ ಕೃಷ್ಣ ಅಯ್ಯರ್ 2014ರ ಡಿಸೆಂಬರ್ 4ರಂದು ನಿಧನರಾದರು.

On the birth anniversary of great name in Indian Judiciary Justice V. R. Krishna Iyer 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ