ವೀರಭದ್ರಯ್ಯ
ಎ. ವೀರಭದ್ರಯ್ಯ ಅವರು ಕಳೆದ ಶತಮಾನದ ಕರ್ನಾಟಕದ ಸುಪ್ರಸಿದ್ಧ ಪಿಟೀಲು ವಾದಕರು.
ವೀರಭದ್ರಯ್ಯ ಅವರು ಸುಪ್ರಸಿದ್ಧ ಹಾರ್ಮೋನಿಯಂ ವಿದ್ವಾಂಸರಾಗಿದ್ದ ಅರುಣಾಚಲಪ್ಪ - ಅನ್ನಪೂರ್ಣಮ್ಮ ದಂಪತಿಗಳ ಸುಪುತ್ರರಾಗಿ 1923ರ ಡಿಸೆಂಬರ್ 4ರಂದು ಜನಿಸಿದರು. ವೀರಭದ್ರಯ್ಯ ಅವರು ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಪಡೆದರು. ಮನೆಯಲ್ಲಿದ್ದ ಸಂಗೀತದ ವಾತಾವರಣದಿಂದ ಇವರಿಗೆ ಸಹಜವಾಗಿಯೇ ಎಳೆತನದಿಂದಲೂ ಸಂಗೀತದಲ್ಲಿ ಆಸಕ್ತಿ ಇತ್ತು.
ವೀರಭದ್ರಯ್ಯ ಅವರು ಪ್ರಾರಂಭಿಕ ಶಿಕ್ಷಣವನ್ನು ತಂದೆಯವರಿಂದಲೇ ಪಡೆದು ಮುಂದೆ ಎಲ್.ಎಸ್. ನಾರಾಯಣಸ್ವಾಮಿ ಭಾಗವತರಲ್ಲಿ ಉನ್ನತಮಟ್ಟದ ಶಿಕ್ಷಣ ಪಡೆದು ನಮ್ಮ ನಾಡಿನ ಅತಿ ಹಿರಿಯ ಶ್ರೇಷ್ಠ ವಯೋಲಿನ್ವಾದಕರಾಗಿ ವಿಜೃಂಭಿಸಿದರು.
ಪ್ರೊ. ಹೆಚ್.ವಿ. ಕೃಷ್ಣಮೂರ್ತಿ, ಆನೂರು ಎನ್. ರಾಮಕೃಷ್ಣ ಅವರೊಡನೆ ವೀರಭದ್ರಯ್ಯನವರು ಸೇರಿ ನೀಡಿದ ಪಿಟೀಲುತ್ರಯ ಕಚೇರಿಗಳು ನಮ್ಮ ನಾಡಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಜನಪ್ರಿಯವಾಗಿ ನಡೆದುವು. ಗಣ್ಯ ವಿದ್ವಾಂಸರೆಲ್ಲರಿಗೂ ಪಕ್ಕವಾದ್ಯ ನುಡಿಸಿರುವ ಹಿರಿಮೆಯೂ ಇವರದಾಗಿತ್ತು.
ವೀರಭದ್ರಯ್ಯ ಅವರು 1934ರಲ್ಲಿ ತಮ್ಮ ತಂದೆ ಅರುಣಾಚಲಪ್ಪನವರು ಸ್ಥಾಪಿಸಿದ ಅರುಣಾ ಮೂಸಿಕಲ್ಸ್ನ ಮಾಲೀಕರಾಗಿ ತನ್ಮೂಲಕ ಸಂಗೀತ ವಾದ್ಯಗಳ ತಯಾರಿಕೆಯಲ್ಲಿ ತೊಡಗಿ ವಿಶೇಷ ಪ್ರಯೋಗಾತ್ಮಕ ಪ್ರಯತ್ನಗಳಿಂದ ಮರದ ವಿವಿಧ ವಾದ್ಯ ತಯಾರಿಕೆಯೊಡನೆ ಫೈಬರ್ಗ್ಲಾಸ್ನ ಉಪಯೋಗವನ್ನೂ ಮಾಡಿ ಕ್ರಾಂತಿಯನ್ನೇ ಉಂಟು ಮಾಡಿದರೆನ್ನಬಹುದು. ಇಡೀ ಜಗತ್ತಿಗೆ ಉಪಯುಕ್ತವಾಗುವಂತಹ ವಿವಿಧ ವಾದ್ಯಗಳಿಗೆ ಸೂಕ್ತವಾದ ತಂತಿಗಳ ತಯಾರಿಕೆ, ಶ್ರುತಿ ಕೊಳವೆಗಳ ತಯಾರಿಕೆ ಇವರ ನೇತೃತ್ವದಲ್ಲಿ ಸಾಧ್ಯವಾದುವು.
ಎ. ವೀರಭದ್ರಯ್ಯ ಅವರು ವಿಜಯ ಸಂಗೀತ ವಿದ್ಯಾಲಯ, ವಾಣೀ ಸಂಗೀತ ವಿದ್ಯಾಲಯ, ಕರ್ನಾಟಕ ಗಾನಕಲಾ ಪರಿಷತ್ತು, ರಾಜ್ಯ ಸಂಗೀತ-ನೃತ್ಯ ಅಕಾಡೆಮಿ- ಹೀಗೆ ಹಲವು ಸಂಸ್ಥೆಗಳಲ್ಲಿ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ನಾನಾ ರೀತಿಯಲ್ಲಿ ಸೇವೆ ಸಲ್ಲಿಸಿದರು.
ವಿದ್ವಾನ್ ಎ. ವೀರಭದ್ರಯ್ಯ ಅವರು 'ನಾದ ಗಂಭೀರ’, ‘ಗಾನ ಕಲಾ ಭೂಷಣ’, ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿಗಳಿಂದ ಭೂಷಿತರಾಗಿದ್ದರು.
ವೀರಭದ್ರಯ್ಯನವರು 1999ರ ಸೆಪ್ಟೆಂಬರ್ 6ರಂದು ನಾದ ಬ್ರಹ್ಮನಲ್ಲಿ ಐಕ್ಯರಾದರು.
ಕೃತಜ್ಞತೆಗಳು: Kasturi Shankar Shankar ಅಮ್ಮಾ
On the birth anniversary of great violinist Vidwan A. Veerabhadraiah
ಕಾಮೆಂಟ್ಗಳು