ನಿಜಗುಣ ಶಿವಯೋಗಿಗಳು
ನಿಜಗುಣ ಶಿವಯೋಗಿಗಳು
ನಿಜಗುಣ ಶಿವಯೋಗಿಗಳು ಕ್ರಿ. ಶ. ಸುಮಾರು 1500ರ ಕಾಲದ ಕವಿ. ಇವರು ಶಿವಯೋಗಿಗಳು, ದಾರ್ಶನಿಕರು ಹಾಗೂ ಹಾಡುಗಬ್ಬಕಾರರು.
ಶಿವಯೋಗಿಗಳ ಸ್ಥಳ ಕೊಳ್ಳೇಗಾಲದ ಪಕ್ಕದಲ್ಲಿರುವ 'ಚಿಲಕವಾಡಿ' ಗ್ರಾಮ. ಈ ಗ್ರಾಮದ ಪಕ್ಕದಲ್ಲಿರುವ ಶಂಭುಲಿಂಗನ ಬೆಟ್ಟದಲ್ಲಿ ಇವರು ಕೆಲಕಾಲ ತಪಸ್ಸು ಮಾಡಿದಂತೆ ತಿಳಿದುಬರುತ್ತದೆ. ಶಂಭುಲಿಂಗನ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ ಗವಿಯನ್ನು ಈಗಲೂ ಕಾಣಬಹುದು. ಕೊಳ್ಳೇಗಾಲದಿಂದ ಸುಮಾರು 10 ಕಿಮೀ ದೂರದಲ್ಲಿ ಚಾಮರಾಜನಗರಕ್ಕೆ ಹೋಗುವ ದಾರಿಯಲ್ಲಿ ಶಂಭುಲಿಂಗನ ಬೆಟ್ಟ ಮತ್ತು ದೇವಾಲಯಗಳಿವೆ. ಇಲ್ಲಿನ ಶಂಭುಲಿಂಗ ಸ್ವಯಂಭು ಎನ್ನಲಾಗಿದೆ.
ನಿಜಗುಣ ಶಿವಯೋಗಿಗಳು ಕನ್ನಡದಲ್ಲಿ ವಿವೇಕಚಿಂತಾಮಣಿ, ಕೈವಲ್ಯಪದ್ದತಿ, ಪುರಾತನರ ತ್ರಿವಿಧಿ, ಅನುಭವಸಾರ, ಪರಮಾರ್ಥಪ್ರಕಾಶಿಕೆ, ಪರಮಾನುಭವಬೋಧ, ಪರಮಾರ್ಥಗೀತೆ ಎಂಬ ಏಳು ಗ್ರಂಥಗಳನ್ನು ಬರೆದಿದ್ದಾರೆ. ಸಂಸ್ಕೃತದಲ್ಲಿ ಆತ್ಮತರ್ಕಚಿಂತಾಮಣಿ ಮತ್ತು ದರ್ಶನಸಾರ ಎಂಬ ಗ್ರಂಥಗಳನ್ನು ಬರೆದಿದ್ದಾರೆಂದು ನಂಬಲಾಗಿದೆ. ಆದರೆ ಅವು ಉಪಲಬ್ಧವಿಲ್ಲ.
ನಿಜಗುಣ ಶಿವಯೋಗಿಗಳ ಗ್ರಂಥಗಳನ್ನು ಷಟ್ಶಾಸ್ತ್ರ ಎಂದೂ ಕರೆಯುವ ವಾಡಿಕೆ ಇದೆ. ಇವರ ಅನಂತರ ಕೃತಿರಚನೆಮಾಡಿದ ಮಹಲಿಂಗ ರಂಗ (ಅನುಭವಾಮೃತ), ಶಾಲ್ಯದ ಅರಸ (ಅನುಭವರಸಾಯನ), ಸರ್ಪಭೂಷಣ ಶಿವಯೋಗಿ (ಕೈವಲ್ಯಕಲ್ಪವಲ್ಲರಿ ಮತ್ತು ಜ್ಞಾನಶತಕ), ವೇದಾಂತ ಶಿವರಾಮಶಾಸ್ತ್ರಿ (ಬ್ರಹ್ಮಾನಂದಬೋಧೆ ಮತ್ತು ವೇದಾಂತ ತತ್ತ್ವಗಳು) ಮೊದಲಾದವರೆಲ್ಲರೂ ಇವರ ಪ್ರಭಾವಕ್ಕೊಳಗಾಗಿದ್ದಾರೆ.
ವಿವೇಕಚಿಂತಾಮಣಿ, ಕೈವಲ್ಯಪದ್ಧತಿ, 63 ಪುರಾತನರ ತ್ರಿವಿಧಿ-ಇವು ನಿಜಗುಣ ಶಿವಯೋಗಿಗಳ ಸ್ವತಂತ್ರ ಗ್ರಂಥಗಳು. ಅನುಭವಸಾರ, ಪರಮಾನುಭವಬೋಧೆ, ಪರಮಾರ್ಥಗೀತೆ ಮತ್ತು ಪರಮಾರ್ಥಪ್ರಕಾಶಿಕೆ - ಇವು ಅನುವಾದಿತ ಗ್ರಂಥಗಳು.
ಕೈವಲ್ಯಪದ್ಧತಿ ಎಂಬುದು ಹಾಡುಗಬ್ಬ. 5 ಸ್ಥಲಗಳಿದ್ದು 174 ಹಾಡುಗಳಿವೆ. ಹಾಡುಗಳು ರಾಗ, ತಾಳ, ಪಲ್ಲವಿ, ಅನುಪಲ್ಲವಿ, ಚರಣ ಇವುಗಳಿಂದ ಕೂಡಿದೆ. ಈ ಗ್ರಂಥದಲ್ಲಿ ಶಿವಕಾರುಣ್ಯ, ಜೀವಸಂಬೋಧನೆ, ನೀತಿಕ್ರಿಯಾಚರ್ಯ ಪ್ರತಿಪಾದನ, ಯೋಗಪ್ರತಿಪಾದನ, ಜ್ಞಾನಪ್ರತಿಪಾದನ-ಎಂಬ ಐದು ಸ್ಥಲಗಳಲ್ಲಿ ಮೋಕ್ಷಕ್ಕೆ ದಾರಿಯನ್ನು ತೋರಿಸುವ ಕೆಲಸವನ್ನು ಕವಿ ಮಾಡಿದ್ದಾರೆ.
ಪುರಾತನರ ತ್ರಿವಿಧಿ ಎಂಬುದು 77 ತ್ರಿಪದಿಗಳಿಂದ ಕೂಡಿದ ಭಕ್ತಿಗೀತೆಗಳ ಸಂಕಲನ. ಶಿವಭಕ್ತರಾದ 63 ಮಂದಿ ಶರಣರನ್ನು ಕುರಿತು ಇಲ್ಲಿ ಹಾಡಲಾಗಿದೆ. ವೀರಶೈವರು ಇದನ್ನು ಕಂಠಪಾಠ ಮಾಡಿಕೊಂಡು ಸಂಜೆ ಮುಂಜಾನೆ ಹಾಡುವ ಪರಿಪಾಠವುಂಟು.
ವಿವೇಕಚಿಂತಾಮಣಿ ಎಂಬುದು ನಿಜಗುಣ ಶಿವಯೋಗಿಗಳು ಬರೆದಿರುವ ಗ್ರಂಥಗಳಲ್ಲಿ ಅತ್ಯಂತ ಮಹತ್ತ್ವದ್ದು. ಇದು ಕನ್ನಡದ ಮೊಟ್ಟಮೊದಲನೆಯ ವಿಶ್ವಕೋಶ ಎನಿಸಿದೆ. ಒಬ್ಬ ಸಂನ್ಯಾಸಿ ಬೆಟ್ಟದ ಗವಿಯೊಂದರಲ್ಲಿ ಕುಳಿತುಕೊಂಡು ಇಂಥ ವಿಶ್ವಕೋಶವನ್ನು ಹೇಗೆ ರಚಿಸಿದರೆಂಬುದು ಸೋಜಿಗದ ಸಂಗತಿ. ಈ ಗ್ರಂಥವನ್ನು 16ನೆಯ ಶತಮಾನದಲ್ಲಿ ಶಾಂತಲಿಂಗ ಶಿವಯೋಗಿ ಎಂಬುವರು ಮರಾಠಿಗೂ 17ನೆಯ ಶತಮಾನದಲ್ಲಿ ಮಹಾಕವಿ ಶಿವಪ್ರಕಾಶಸ್ವಾಮಿ ತಮಿಳಿಗೂ 18ನೆಯ ಶತಮಾನದಲ್ಲಿ ಲಿಂಗರಾಜ ಸಂಸ್ಕೃತಕ್ಕೂ ಭಾಷಾಂತರಿಸಿದ್ದಾರೆ. 18ನೆಯ ಶತಮಾನದಲ್ಲಿ ಸಂಸ್ಕೃತದಲ್ಲಿ ಶಿವತತ್ತ್ವ ರತ್ನಾಕರವೆಂಬ ವಿಶ್ವಕೋಶವನ್ನು ಬರೆದ ಕೆಳದಿಯ ಬಸವರಾಜ ವಿವೇಕಚಿಂತಾಮಣಿ ಗ್ರಂಥದಿಂದ ಉಪಕೃತನಾಗಿದ್ದನೆಂದು ತಿಳಿದುಬರುತ್ತದೆ. ಈ ಗ್ರಂಥ ಗದ್ಯದಲ್ಲಿದ್ದು ಹತ್ತು ವಿಭಾಗಗಳಿಂದ ಕೂಡಿದೆ. ಒಟ್ಟು 592 ವಿಷಯಗಳು ನಿರೂಪಿತವಾಗಿವೆ. ಸಂಗೀತ ಶಾಸ್ತ್ರವನ್ನು ಕುರಿತ ಸಂಪೂರ್ಣ ವಿವರಣೆಯಿದೆ.
ಪರಮಾರ್ಥಪ್ರಕಾಶಿಕೆ ಎಂಬುದು ಸಂಸ್ಕೃತದಲ್ಲಿದೆ. ಇದು ಚನ್ನಸದಾಶಿವಯೋಗಿ ಬರೆದಿರುವ ಶಿವಯೋಗಪ್ರದೀಪಿಕೆ ಎಂಬ ಗ್ರಂಥದ ಅನುವಾದ. ಐದು ಪರಿಚ್ಛೇದಗಳಿಂದ ಕೂಡಿ ಹಠಯೋಗ, ರಾಜಯೋಗ, ಮಂತ್ರಯೋಗ, ಲಯಯೋಗ ಎಂದು ಪತಂಜಲಿ ಹೇಳುವ ನಾಲ್ಕು ಯೋಗಗಳಿಗಿಂತ ಶಿವಯೋಗ ಅಧಿಕವಾದುದೆಂದು ಈ ಗ್ರಂಥದಲ್ಲಿ ಹೇಳಿದೆ. ಇದು ತೆಲುಗಿನಲ್ಲಿ ಶಿವಯೋಗ ಸಾರಮು ಎಂದು ಭಾಷಾಂತರವಾಗಿದೆ.
ಅನುಭವಸಾರವೆಂಬುದು ತ್ರಿಪದಿ ರೂಪದಲ್ಲಿರುವ ಒಂದು ವೇದಾಂತ ಗ್ರಂಥ. 8 ಸಂಧಿಗಳು 35 ತ್ರಿಪದಿಗಳೂ ಇವೆ. ಪರಮಾನುಭವಭೋಧೆ ಎಂಬುದು ಸಾಂಗತ್ಯದಲ್ಲಿರುವ ಒಂದು ವೇದಾಂತ ಗ್ರಂಥ; ಇದು 6 ಸಂಧಿ, 975 ಸಾಂಗತ್ಯಗಳಿಂದ ಕೂಡಿದೆ. ಇದರಲ್ಲಿ ಪರತತ್ತ್ವಭೋಧೆಯನ್ನು ಯೋಗಿಜನರು ಒಪ್ಪುವಂತೆ ನಿರೂಪಿಸಲಾಗಿದೆ. ಪರಮಾರ್ಥಗೀತೆ ಎಂಬುದು ಸಂಸ್ಕೃತ ಪ್ರಸಿದ್ಧವಾಗಿರುವ ಯೋಗವಾಸಿಷ್ಠದ ಕನ್ನಡ ಅನುವಾದ; ಮಂದಾನಿಲ ರಗಳೆಯಲ್ಲಿ ಗುರುಶಿಷ್ಯರ ಪ್ರಶ್ನೋತ್ತರ ರೂಪದಲ್ಲಿದೆ. ಪ್ರಾರಂಭದಲ್ಲಿ ಕೆಲವು ಕಂದಪದ್ಯಗಳಿವೆ. ಹನ್ನೊಂದು ಗತಿಗಳಾಗಿ ವಿಂಗಡನೆಗೊಂಡಿರುವ ಈ ಗ್ರಂಥದಲ್ಲಿ 1,469 ಚರಣಗಳಿವೆ.
Nijaguna Shivayogi
ಶಿವಶಿವ ಶಿವದೋಂ ಶ್ರೀ ಮಹಾದೇವ ಶಂಭೋ ಈಪದ ಇದ್ದರೆ ಪ್ರಕಡಿಸಿ
ಪ್ರತ್ಯುತ್ತರಅಳಿಸಿ