ಲಕ್ಷ್ಮಿ
ಲಕ್ಷ್ಮಿ ನಮ್ಮ ಅಚ್ಚುಮೆಚ್ಚು
ಲಕ್ಷ್ಮಿ ನಮ್ಮ ಅಚ್ಚುಮೆಚ್ಚು. ಭಾರತದ ಪ್ರಮುಖ ಸಿನಿಮಾ ತಾರೆಯರಲ್ಲಿ ಲಕ್ಷ್ಮಿ ಸದಾ ಆಪ್ತರಾಗಿ ಕಂಡುಬಂದಿರುವವರು.
1968ರಲ್ಲಿ ತೆರೆಕಂಡ ತಮಿಳು ಚಿತ್ರ ‘ಜೀವನಾಂಶಂ’ ಮೂಲಕ ಚಿತ್ರರಂಗಕ್ಕೆ ಬಂದ ಲಕ್ಷ್ಮಿ ಈಗಲೂ ಸಕ್ರಿಯರಾಗಿ ಅಭಿನಯ ಕ್ಷೇತ್ರದಲ್ಲಿ ಉಳಿದಿದ್ದಾರೆ. ಆಗ ಅವರ ವಯಸ್ಸು ಕೇವಲ 15. ಅವರ ತಂದೆ ವೈ.ವಿ. ರಾವ್ ಮೂಲತಃ ತೆಲುಗಿನವರಾಗಿದ್ದರೂ, ಕನ್ನಡವನ್ನೊಳಗೊಂಡಂತೆ, ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಪಾರ ಹೆಸರನ್ನು ಮಾಡಿದ್ದರು. ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ‘ಸತಿ ಸುಲೋಚನ’ (1938) ನಿರ್ದೇಶಿಸಿದವರು ಅವರೇ. ಲಕ್ಷ್ಮಿ ಅವರ ತಾಯಿ ರುಕ್ಮಿಣಿ ಮತ್ತು ಅಜ್ಜಿ ನಂಗಂಬಕ್ಕಂ ಜಾನಕಿ ಅವರು ಸಹಾ ಆ ಕಾಲದ ಚಲನಚಿತ್ರ ಅಭಿನೇತ್ರಿಯರು. ಲಕ್ಷ್ಮಿ ಅವರ ಮಗಳು ಐಶ್ವರ್ಯ ಸಹಾ ಚಲನಚಿತ್ರರಂಗದಲ್ಲಿದ್ದವರು. ಹೀಗಾಗಿ ಅವರ ಹಲವು ತಲೆಮಾರುಗಳು ಚಿತ್ರರಂಗದಲ್ಲಿ ಇರುವಂತಾಗಿದೆ.
ಲಕ್ಷ್ಮಿ ಅವರು ಡಿಸೆಂಬರ್ 1952ರ ಡಿಸೆಂಬರ್ 13ರಂದು ಮದ್ರಾಸಿನಲ್ಲಿ ಜನಿಸಿದರು. ಪ್ರಾರಂಭದಿಂದಲೇ ದಕ್ಷಿಣ ಭಾರತದ ನಾಲ್ಕೂ ಪ್ರಮುಖ ಚಿತ್ರರಂಗಗಳಾದ ತಮಿಳು, ಕನ್ನಡ, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲಿ ನಟಿಸಲಾರಂಭಿಸಿದ ಲಕ್ಷ್ಮಿ ಅವರಿಗೆ, 1974ರಲ್ಲಿ ನಟಿಸಿದ ‘ಚಟ್ಟಕ್ಕಾರಿ’ ಮಲಯಾಳಂ ಚಿತ್ರ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಅದೇ ಚಿತ್ರ ‘ಜ್ಯೂಲಿ’ ಆಗಿ ಹಿಂದಿ ಚಿತ್ರವಾದಾಗ ಅವರ ಜನಪ್ರಿಯತೆ ದೇಶದೆಲ್ಲೆಡೆ ಹಬ್ಬಿತು. ‘ಜ್ಯೂಲಿ’ ಚಿತ್ರಕ್ಕಾಗಿ ಪ್ರತಿಷ್ಟಿತ ಫಿಲಂಫೇರ್ ಪ್ರಶಸ್ತಿ ಪಡೆದರು. ಹಿಂದಿ ಚಿತ್ರರಂಗದಲ್ಲಿ ಕೆಲವೊಂದು ಚಿತ್ರಗಳಲ್ಲಿ ಅಭಿನಯಿಸಿದ ಅವರಿಗೆ ದಕ್ಷಿಣ ಭಾರತ ಚಿತ್ರರಂಗವೇ ಕ್ಷೇಮವೆನಿಸಿತು. 1977ರಲ್ಲಿ ಸಿಂಗೀತಂ ಶ್ರೀನಿವಾಸರಾಯರು ನಿರ್ದೇಶಿಸಿದ ತಮಿಳು ಚಿತ್ರ ‘ಸಿಲನೇರಂಗಳಿಲ್ ಸಿಲ ಮನಿದರ್ಗಳ್’ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದರು.
ತಮ್ಮ ಪ್ರಾರಂಭಿಕ ವರ್ಷಗಳಲ್ಲಿ ರಾಜ್ ಕುಮಾರ್ ಅವರೊಂದಿಗೆ ಒಂದು ಚಿತ್ರದಲ್ಲಿ ನಟಿಸಿ ಹೋಗಿದ್ದ ಲಕ್ಷ್ಮೀ ಅವರು ಪುನಃ ಪ್ರಖ್ಯಾತಿಯಿರುವ ದಿನಗಳಲ್ಲಿ ‘ನಾ ನಿನ್ನ ಮರೆಯಲಾರೆ’ ಚಿತ್ರದಲ್ಲಿ ಅಭಿನಯಿಸಿದರು. ಆ ಚಿತ್ರ ಕನ್ನಡದಲ್ಲಿ ಅಪಾರ ಯಶಸ್ಸು ಸಾಧಿಸಿತು. ಹಾಗಾಗಿ ಮುಂದೆ ‘ಕಿಲಾಡಿ ಜೋಡಿ’, ‘ನಾ ನಿನ್ನ ಬಿಡಲಾರೆ’, ‘ಒಲವು ಗೆಲುವು’, ‘ಅಂತ’, ‘ಪಲ್ಲವಿ ಅನುಪಲ್ಲವಿ’, ‘ಅವಳ ಹೆಜ್ಜೆ’, ‘ಟೋನಿ’, ‘ಸೌಭಾಗ್ಯ ಲಕ್ಷ್ಮಿ’, ‘ಲಯನ್ ಜಗಪತಿ ರಾವ್’, ‘ನಾನೊಬ್ಬ ಕಳ್ಳ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಇಬ್ಬನಿ ಕರಗಿತು’, ‘ಮುದುಡಿದ ತಾವರೆ ಅರಳಿತು’, ‘ಗಾಳಿ ಮಾತು’, ‘ಬಿಡುಗಡೆಯ ಬೇಡಿ’, ‘ಮಕ್ಕಳಿರಲವ್ವ ಮನೆ ತುಂಬಾ’, ‘ನನ್ನವರು’, ‘ಹೂವು ಹಣ್ಣು’ ಹೀಗೆ ಬಹಳಷ್ಟು ಯಶಸ್ವಿ ಚಿತ್ರಗಳ ನಾಯಕಿಯಾದರು. ದೊರೈ ಭಗವಾನ್ ಜೋಡಿ ನಿರ್ದೇಶಿಸಿದ ಬಹುತೇಕ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು. ‘ಹೂವು ಹಣ್ಣು’ ಚಿತ್ರದ ಅಭಿನಯಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಅಭಿನೇತ್ರಿಯ ಪ್ರಶಸ್ತಿ ಸಹಾ ಪಡೆದರು.
ತಮಗೆ ಉತ್ತಮ ಪಾತ್ರಗಳನ್ನೂ, ಜನಪ್ರಿಯತೆಯನ್ನೂ ಕೊಟ್ಟ ಕನ್ನಡದ ಬಗ್ಗೆ ವಿಶೇಷ ಒಲವು ಹೊಂದಿರುವ ಲಕ್ಷ್ಮಿ, ಕನ್ನಡದಲ್ಲಿ 'ಅವಳ ಹೆಜ್ಜೆ' ಚಿತ್ರದ ನಿರ್ಮಾಣವನ್ನೂ, ನಂತರದಲ್ಲಿ ‘ಮಕ್ಕಳ ಸೈನ್ಯ’ ಚಿತ್ರದ ನಿರ್ದೇಶನವನ್ನೂ ಮಾಡಿ ಆ ಚಿತ್ರಗಳಲ್ಲಿ ಯಶಸ್ಸು ಕೂಡ ಪಡೆದರು.
ಮುಂದೆ ಲಕ್ಷ್ಮಿ ಅವರು ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಐಶ್ವರ್ಯ ರೈ ಅವರಿಗೆ ಅಜ್ಜಿಯಾಗಿ, ಕರೀನಾ ಕಪೂರ್ ಅವರಿಗೆ ತಾಯಿಯಾಗಿ ನಟಿಸಿದಂತೆ, ಕನ್ನಡದಲ್ಲೂ ಮತ್ತಿತ್ತರ ಭಾಷೆಗಳಲ್ಲೂ ಹಿರಿಯ ಪಾತ್ರಗಳಲ್ಲಿ ನಿರಂತರವಾಗಿ ಮುಂದುವರೆದಿದ್ದಾರೆ. ತಮಗಿಂತ ಹಿರಿಯರಾದ ರಜನೀಕಾಂತ್ ಅಂತ ನಟರಿಗೆ ಕೂಡ ತಾಯಿಯಾಗಿ ನಟಿಸಿದ್ದಾರೆ. ‘ಪ್ರೀತ್ಸೋದ್ ತಪ್ಪಾ’, ‘ಸೂರ್ಯ ವಂಶ’, ‘ದಿಗ್ಗಜರು’ ಮುಂತಾದ ಚಿತ್ರಗಳನ್ನೂ ಈ ನಿಟ್ಟಿನಲ್ಲಿ ಹೆಸರಿಸಬಹುದು. ಇತ್ತೀಚಿನ ವರ್ಷದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿಗಳಲ್ಲಿ ಅವರು ‘ವಂಶಿ’ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ.
ಸಿನಿಮಾ ನಟನೆಯಲ್ಲದೆ ತಮಿಳಿನಲ್ಲಿ ದೂರದರ್ಶನದ ಕೆಲವು ಕಾರ್ಯಕ್ರಮಗಳನ್ನು ಸಂಯೋಜಿಸಿ ಯಶಸ್ವಿಯಾದ ಲಕ್ಷ್ಮಿ ಅವರು ಕನ್ನಡದಲ್ಲೂ ‘ಇದು ಕಥೆಯಲ್ಲ ಜೀವನ’ ಎಂಬ ಕಾರ್ಯಕ್ರಮವನ್ನು ನಿರ್ವಹಿಸಿದ್ದರು. ಹಲವಾರು ಕಿರುತೆರೆಯ ರಿಯಾಲಿಟಿ ಷೋಗಳಲ್ಲಿ ಸಹಾ ಅವರು ತೀರ್ಪುಗಾರರಾಗಿ ಕಾಣಬರುತ್ತಿದ್ದಾರೆ.
ನಾನು ಇನ್ನೂ ಕಲಿಯುತ್ತಲೇ ಇದ್ದೇನೆ; ನನ್ನ ಕೊನೆಯುಸಿರಿರುವವರೆಗೂ ಚಿತ್ರರಂಗದಲ್ಲಿ ಪಾತ್ರವಹಿಸುತ್ತೇನೆ ಎನ್ನುವ ಲಕ್ಷ್ಮಿ ಅವರ ಕಲಾ ಕಾಳಜಿ ಮನನೀಯ. ಕನ್ನಡವನ್ನೊಳಗೊಂಡಂತೆ ಅವರು ನಟಿಸಿರುವ ಭಾಷೆಗಳನ್ನೆಲ್ಲಾ ಉತ್ತಮವಾಗಿ ಸಂಭಾಷಿಸುತ್ತಾರೆ ಕೂಡ. ಸೌಂದರ್ಯ, ಪ್ರತಿಭೆ, ಕರ್ತವ್ಯನಿಷ್ಠೆ ಇವುಗಳೆಲ್ಲವನ್ನೂ ಮೇಳೈಸಿಕೊಂಡು ವೈವಿಧ್ಯಮಯ ಪಾತ್ರಗಳಲ್ಲಿ ನಿಷ್ಠೆಯಿಂದ ಅಭಿನಯಿಸುತ್ತಾ ಕಲಾಭಿಮಾನಿಗಳ ಹೃದಯದಲ್ಲಿ ನಿತ್ಯ ವಿರಾಜಮಾನರಾಗಿರುವ ಈ ಅಭಿನೇತ್ರಿ ತಮ್ಮ ಬದುಕಿನಲ್ಲಿ ನಿತ್ಯ ಸುಖ ಸಂತೋಷ ನೆಮ್ಮದಿ ಸಾಧನೆ ಸಂತೃಪ್ತಿಗಳನ್ನು ಕಾಣಲಿ ಎಂದು ಹಾರೈಸೋಣ.
Birthday wishes to one of the best artiste in Indian cinema, Lakshmi madam
ಲಕ್ಷ್ಮಿ ಅಮ್ಮ ಒಬ್ಬ ಶ್ರೇಷ್ಠ & ಅದ್ಬುತ ಪ್ರತಿಭೆ ಕಲಾವಿದೆ.ಅಂತಹ ನಟಿಯ ಜೀವಮಾನ ದಲ್ಲಿ ನಾವು ಇದ್ದೇವೆ ಎನ್ನುವುದೇ ನಮಗೆ ಹೆಮ್ಮೆ
ಪ್ರತ್ಯುತ್ತರಅಳಿಸಿ