ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಾಹುಕಾರ್ ಜಾನಕಿ


 ಸಾಹುಕಾರ್ ಜಾನಕಿ

ಚಲನಚಿತ್ರರಂಗದಲ್ಲಿ ಬಹುಕಾಲದಿಂದ ನಿರಂತರವಾಗಿ ಸಕ್ರಿಯರಾಗಿರುವವರಲ್ಲಿ ಸಾಹುಕಾರ್ ಜಾನಕಿ ಪ್ರಮುಖರು. ತಮಿಳು ಮತ್ತು ತೆಲುಗು ಚಿತ್ರರಂಗಗಳು ಹೆಚ್ಚು ಅವಕಾಶ ಕೊಟ್ಟ ಸಾಹುಕಾರ್ ಜಾನಕಿ ಅಚ್ಚ ಕನ್ನಡತಿ. 

ಸಾಹುಕಾರ್ ಜಾನಕಿ 1931ರ ಡಿಸೆಂಬರ್ 12ರಂದು ಜನಿಸಿದರು.  ಮೂಲತಃ ಅವರ ಕುಟುಂಬದವರು ಉಡುಪಿಯವರು. ತಂದೆಯವರಿಗೆ ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಯಾಗುವ ಕೇಂದ್ರ ಸರಕಾರಿ ಕೆಲಸ. ಹೀಗಾಗಿ ಜಾನಕಿ ಅವರು ಆಂಧ್ರದ ರಾಜಮುಂಡ್ರಿಯಲ್ಲಿ ಜನಿಸಿದರು. ಅದರೆ ಮನೆಯಲ್ಲಿ ಅವರ ಮಾತು ಕನ್ನಡವೇ ಆಗಿತ್ತು.

ಅಪ್ಪ ಉನ್ನತ ಹುದ್ದೆಯಲ್ಲಿದ್ದರೂ ಮನೆಯಲ್ಲಿ ತುಂಬ ಸಂಪ್ರದಾಯದ ವಾತಾವರಣವಿತ್ತು. ಸಿನಿಮಾ ಎಂದರೆ ಸಿಡಿಸಿಡಿ ಎನ್ನುವ ವಾತಾವರಣ. ತಂದೆಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅತ್ಯಲ್ಪ ಅವಧಿಯಲ್ಲಿಯೆ ಆಗುತ್ತಿದ್ದ ವರ್ಗಾವಣೆಯ ಪರಿಣಾಮ ಜಾನಕಿ ಅವರ ವಿದ್ಯಾಭ್ಯಾಸದ ಮೇಲೂ ಆಯಿತು. ಹೆಚ್ಚು ಓದಬೇಕೆಂಬ ಹಂಬಲವಿದ್ದರೂ ಹೈಸ್ಕೂಲು ದಾಟುವುದೂ ಸಾಧ್ಯವಾಗಲಿಲ್ಲ. ಆದರೆ ಸೂಕ್ಷ್ಮಗ್ರಾಹಿ ಜಾನಕಿ ಪಂಚಭಾಷೆ ಬಲ್ಲವರು. ಇಂಗ್ಲಿಷ್  ಸಂಭಾಷಣೆಯೂ ಅವರಿಗೆ ಸುಲಲಿತ.

ಸಾಂಪ್ರದಾಯಿಕವಾಗಿ  ಚೆನ್ನಾಗಿ ಸಂಗೀತ ಕಲಿತಿದ್ದ ಜಾನಕಿ  11ನೇ ವಯಸ್ಸಿಗೆ ಆಕಾಶವಾಣಿ ಕಲಾವಿದೆಯಾದರು. ಅಂಗಳದಲ್ಲಿ ಕುಂಟೋಬಿಲ್ಲೆ ಆಡುತ್ತಿದ್ದ ಹದಿನಾರನೆ ವಯಸ್ಸಿಗೆ ಕುತ್ತಿಗೆಗೆ ಭಾರವಾದ ತಾಳಿ ಬಂತು. ಸಣ್ಣ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿದ್ದ ಶ್ರೀನಿವಾಸ್ ರಾವ್ ಜೊತೆಗೆ ಮದುವೆಯಾಯ್ತು. "1947ರಲ್ಲಿ ದೇಶಕ್ಕೆ ಸ್ವಾತಂತ್ರ ಬಂತು. ಆ ವರ್ಷವೇ ಮದುವೆ ಎಂಬುದರ ಮೂಲಕ ನನ್ನ ಸ್ವಾತಂತ್ರ ಕಳೆದುಕೊಂಡೆ" ಎನ್ನುತ್ತಾರೆ ಜಾನಕಿ. ಮದುವೆಯಾದ ಕೆಲ ತಿಂಗಳಿನಲ್ಲಿ ಪತಿ ಕೆಲಸ ತೊರೆದ. ಕಷ್ಟಪಟ್ಟು ದುಡಿಯುವುದಕ್ಕೆ ಆತನಿಗೆ ಮನಸಿರಲಿಲ್ಲ. ಆಗ ಜಾನಕಿಯ ತಂದೆ ಅಸ್ಸಾಂನಲ್ಲಿದ್ದರು. "ನಿನ್ನ ಅಪ್ಪ ಏನಾದರೂ ಕೆಲಸ ಕೊಡಿಸಬಹುದು ಬಾ" ಎಂದು ಗಂಡ ಅಲ್ಲಿಗೆ ಕರೆದುಕೊಂಡು ಹೋದ. ಅಲ್ಲಿ ತಂದೆ ತಾಯಿಯರದು ದೊಡ್ಡ ಕುಟುಂಬ. ತವರಿಗೆ ಹೆಚ್ಚು ದಿನ ಹೊರೆಯಾಗಿ ಇರುವುದಕ್ಕೆ ಜಾನಕಿ ಅವರ  ಮನ ಒಪ್ಪಲಿಲ್ಲ. ಪರಿಣಾಮ ಗಂಡನೊಟ್ಟಿಗೆ ಮದ್ರಾಸಿಗೆ ಬಂದರು. ಆಗಲೇ ಬಾಲ್ಯದಂಗಳದಲ್ಲಿ ನಲಿದಾಡುವ ಹದಿನೇಳರ ಬಾಲೆಗೆ ಕಂಕುಳಿನಲ್ಲೊಂದು ಹೆಣ್ಣು ಮಗುವಿತ್ತು.

ಪತಿ ಶ್ರೀನಿವಾಸರಾಯ ಕೆಲಸ ಹುಡುಕಲು ಆಸಕ್ತಿಯೆ ತೋರಲಿಲ್ಲ. ಬದುಕಿನ ಬಂಡಿ ಉರುಳುವುದು ಕಷ್ಟವಾಗತೊಡಗಿತು. ಈ ಮೊದಲು ತಂದೆ ಮದ್ರಾಸಿನಲ್ಲಿದ್ದಾಗ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತ್ತು. ಆದರೆ ಸಿನಿಮಾದಲ್ಲಿ ನಟಿಸುವ ಮಾತಿರಲಿ, ಸಿನಿಮಾ ನೋಡುವುದಕ್ಕೂ ಸಿಡಿಮಿಡಿಗುಟ್ಟುತ್ತಿದ್ದ ತಂದೆ, ಜಾನಕಿ ನಟಿಸುವುದಕ್ಕೆ ಒಪ್ಪಿರಲಿಲ್ಲ. ಈಗ ಮತ್ತೆ ಮದ್ರಾಸಿಗೆ ಬಂದ ನಂತರ ಕಂಕುಳಿನಲ್ಲಿದ್ದ ಮಗಳಿಗಾಗಿ, ಜಾನಕಿ ದುಡಿಯಲೇ ಬೇಕಿತ್ತು. ನಟನೆ ಅವಕಾಶ ಕೋರಿ ಎ.ವಿ.ಎಂ ಸ್ಟುಡಿಯೋಗೆ ಕಾಲಿರಿಸಿದಾಗ ಜಾನಕಿ ಅವರು ಮೂರು ತಿಂಗಳ ಹಸಿ ಬಾಣಂತಿಯಾಗಿದ್ದರು.

ಜಾನಕಿ ಅವರ ಮೊದಲ ಸಿನಿಮಾ ಸಾಹುಕಾರ್. ಆ ಚಿತ್ರದ ನಾಯಕ ನಟ ಎನ್.ಟಿ.ರಾಮರಾವ್. ಮೊದಲ ಸಿನಿಮಾ ಯಶಸ್ವಿಯಾಯಿತು. ಆಗ  ಅವರಿಗೆ ದೊರೆತ ಮೊಟ್ಟ ಮೊದಲ ಸಂಭಾವನೆ 2700 ರುಪಾಯಿ ( ಎರಡು ಸಾವಿರದ ಎಳುನೂರು). ಈ ಸಿನಿಮಾದ ಹೆಸರೇ ಜೊತೆ ಸೇರಿ ಸಾಹುಕಾರ್ ಜಾನಕಿ ಎಂಬ ಹೆಸರು ಪ್ರಸಿದ್ಧಿಗೊಂಡಿತು.

ಪ್ರಾರಂಭದಲ್ಲಿ ಎಲ್ಲೋ ಒಂದೊಂದು ಅವಕಾಶಗಳು ಮಾತ್ರಾ ದೊರಕುತ್ತಿದ್ದವು. ಪತಿರಾಯನಂತೂ ದುಡಿಯುವುದಕ್ಕೆ ಹೋಗಲೇ ಇಲ್ಲ. ಹೆಂಡತಿ  ದುಡಿಯಲು ಆರಂಭಿಸಿದ ಮೇಲೆ ಆತನ ದುರಭ್ಯಾಸಗಳು ಹೆಚ್ಚಾಯಿತು. ವರ್ಷ ಉರುಳ ತೊಡಗಿತು. 22ನೇ ವಯಸ್ಸಿಗೆ ಮೂರು ಮಕ್ಕಳ ತಾಯಿಯಾಗಿದ್ದರು. ತುಂಬ ಕಡುಕಷ್ಟದ ದಿನಗಳು ಎದುರಾದವು. ಆದರೂ ಬಂದ ನೋವನ್ನೆಲ್ಲ ನುಂಗಿಕೊಂಡು ನಟಿಸತೊಡಗಿದರು. ಮಕ್ಕಳಿಗೆ ನೋವಾಗದಂತೆ ಬೆಳೆಸಿದರು. ಸುಸ್ತಾಗಿ ಮನೆಗೆ ಬಂದರೆ ಕೇಳುವವರಿರಲಿಲ್ಲ. ಸ್ಪಂದಿಸುವ ಹೃದಯವೇ ಇರಲಿಲ್ಲ. ಒಳ್ಳೆಯದು, ಕೆಟ್ಟದು ಹೇಳಿಕೊಳ್ಳುವುದಕ್ಕೂ ಯಾರೂ ಇಲ್ಲ. ಗಂಡ ವ್ಯಂಗ್ಯವಾಡಿ ನೋಯಿಸುತ್ತಿದ್ದ. ಪುಟ್ಟ  ಮಕ್ಕಳ ಮೊಗ ನೋಡಿ ಎಲ್ಲವನ್ನೂ ನುಂಗಿ ನಡೆಯಬೇಕಾದ ಸ್ಥಿತಿ. "ನನ್ನ ಬಾಳು ರಾಜಿ ಎಂಬ ಹಾದಿಯಲ್ಲಿ ನಡೆಯುವುದೇ ಆಗಿ ಹೋಯ್ತು. ಬದುಕಿನುದ್ದಕ್ಕೂ ರಾಜಿಯೇ ನನ್ನ ನೆನಪು" ಎನ್ನುತ್ತಾರೆ ಸಾಹುಕಾರ್ ಜಾನಕಿ. ಮುಂದೆ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದರು.

ಸಾಹುಕಾರ್ ಜಾನಕಿ ಹೆಸರೇ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸಿನಿಮಾಗಳತ್ತ ಸೆಳೆಯತೊಡಗಿತು. ದಕ್ಷಿಣ ಭಾರತದಲ್ಲಿ ಇವರ ಅಭಿನಯ ಮನೆ ಮಾತಾಯಿತು. ಸಾಹುಕಾರ್ ಜಾನಕಿ ಜನಪ್ರಿಯತೆಯ ಉತ್ತುಂಗಕ್ಕೇರಿದರು. ಎಂ.ಜಿ.ಆರ್., ಶಿವಾಜಿ ಗಣೇಶನ್, ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ರಾಜ್‍ಕುಮಾರ್ ಹೀಗೆ ಎಲ್ಲ ಪ್ರಖ್ಯಾತರೊಡನೆ ನಟಿಸಿದರು. ಇವರ ಕಿರಿಯ ಸಹೋದರಿ, ಅಂದಿನ ಮತ್ತೋರ್ವ ಜನಪ್ರಿಯ ನಟಿ ಕೃಷ್ಣ ಕುಮಾರಿ ಇತ್ತೀಚೆಗೆ ನಿಧನರಾದರು.

ಬೆಂಗಳೂರಿನಲ್ಲಿ ನೆಲೆಸಿರುವ ಸಾಹುಕಾರ್ ಜಾನಕಿ ಅವರಿಗೆ ಶಿವಾಜಿ ಗಣೇಶನ್ ಮತ್ತು ರಾಜ್‍ಕುಮಾರ್ ಜೊತೆಗೆ ಅಭಿನಯಿಸಿದ ದಿನಗಳ ನೆನಪು ಅನನ್ಯ. "ಇವರಿಬ್ಬರು ಕಲಾವಿದರು ಕಲ್ಲುಗಳಿಗೂ ಜೀವ ಬರಿಸುವಂಥ ರೀತಿ ಅಭಿನಯಿಸುತ್ತಿದ್ದರು. ಇವರ ಕಲಾ ಜೀವನದ ಬದ್ಧತೆಯೂ ಅಪಾರ. ರಾಜ್‍ಕುಮಾರ್ ಅವರಂಥ ನಟ ಸಾವಿರ ವರ್ಷಕ್ಕೊಮ್ಮೆ ಹುಟ್ಟುತ್ತಾರೋ ಏನೋ. ನಿಜ ಜೀವನದಲ್ಲಿಯೂ ಇವರೆಲ್ಲ ಆದರ್ಶ ಪ್ರಾಯರು. ಇದನ್ನು ಇಂದಿನ ಕಲಾವಿದರು ಅಳವಡಿಸಿಕೊಳ್ಳಬೇಕು" ಎನ್ನುತ್ತಾರೆ ಜಾನಕಿ.

ದೇವಕನ್ನಿಕಾ, ಗೌರಿ, ಭಾಗ್ಯಚಕ್ರ, ಕನ್ಯಾರತ್ನ, ರತ್ನಗಿರಿ ರಹಸ್ಯ, ಸದಾರಮೆ, ಮಲ್ಲಿ ಮದುವೆ, ಸ್ಕೂಲ್ ಮಾಸ್ಟರ್ ಮುಂತಾದ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿದ್ದ ಸಾಹುಕಾರ್ ಜಾನಕಿ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿನ  400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಾಯಿಗೆ ತಕ್ಕ ಮಗ, ಕುಲಪುತ್ರ, ಶಬ್ಧವೇದಿ, ಗೀತಾ, ಒಂದೇ ಗುರಿ, ಅಭಿ ಹೀಗೆ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲೂ  ಸಾಹುಕಾರ್ ಜಾನಕಿ ಲವಲವಿಕೆಯಿಂದ  ಅಭಿನಯಿಸಿದ್ದಾರೆ. 

ಸಾಹುಕಾರ್ ಜಾನಕಿ ಅವರಿಗೆ ಕನ್ನಡ ವಾಕ್ಚಿತ್ರ ಅಮೃತೋತ್ಸವ ಪ್ರಶಸ್ತಿ, ತಮಿಳುನಾಡಿನ ಕಲೈಮಾಮಣಿ, ಎಂ.ಜಿ.ಆರ್ ಪ್ರಶಸ್ತಿ, ಆಂಧ್ರಪ್ರದೇಶದ ನಂದಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಫಿಲಂಫೇರ್ ಜೀವಮಾನ ಸಾಧನೆಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

ಚಿತ್ರರಂಗದ ಹಿರಿಯರಾದ ಸಾಹುಕಾರ್ ಜಾನಕಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of senior actress Sahukar Janaki 




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ