ನಾರಾಯಣ ಬಾಬಾನಗರ
ನಾರಾಯಣ ಬಾಬಾನಗರ
ನಾರಾಯಣ ಬಾಬಾನಗರ ಅವರ ಮಹತ್ವದ ವಿಜ್ಞಾನ ಶಿಕ್ಷಕರಾಗಿ, ಬರಹಗಾರರಾಗಿ ಮತ್ತು ಸಂವಹನಕಾರರಾಗಿ ಪ್ರಸಿದ್ಧರಾಗಿದ್ದಾರೆ. ವಿಜ್ಞಾನದ ಕಲಿಕೆ ಕಬ್ಬಿಣದ ಕಡಲೆಯಾಗದೆ ಖುಷಿಕೊಡುವ ಕೆಲಸವಾಗಬೇಕೆಂದು ನಂಬಿರುವ ನಾರಾಯಣ ಬಾಬಾನಗರ ಅವರು, ವಿದ್ಯಾರ್ಥಿಗಳಿಗೆ ಅದೇ ಅನುಭವವನ್ನು ಕಟ್ಟಿಕೊಡುತ್ತಿರುವ ಅಪರೂಪದ ಶಿಕ್ಷಕರು. ಅವರಿಗೆ ಸಿ. ಎನ್. ಆರ್. ರಾವ್ ಶಿಕ್ಷಣ ಪ್ರತಿಷ್ಠಾನದ 'ಉತ್ತಮ ವಿಜ್ಞಾನ ಶಿಕ್ಷಕ' ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಇಂದು ನಾರಾಯಣ ಬಾಬಾನಗರ ಅವರ ಜನ್ಮದಿನ.
ವಿಜಾಪುರ ಸಮೀಪದ ಕಾಖಂಡಕಿಯವರಾದ ನಾರಾಯಣ ಬಾಬಾನಗರ ಅವರು ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರ ಹಾಗೂ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದವರು.
ಪ್ರೌಢಶಾಲಾ ವಿಜ್ಞಾನ ಶಿಕ್ಷಕರಾಗಿರುವ ನಾರಾಯಣ ಬಾಬಾನಗರ ಅವರು ಆಟಿಕೆಗಳ ಮೂಲಕ ಪಾಠ ಹೇಳುವ ವಿನೂತನ ಪ್ರಯೋಗ ಮಾಡುತ್ತಾ ಬಂದಿದ್ದು ತಮ್ಮ ವಿದ್ಯಾರ್ಥಿಗಳಲ್ಲಿ ಆಸಕ್ತಿ ಅಭಿರುಚಿಗಳಲ್ಲಿ ಅದ್ಭುತ ಪ್ರಗತಿ ಕಂಡಿದ್ದಾರೆ. ಸ್ವಯಂ ವಿಜ್ಞಾನದ ಆಟಿಕೆಗಳನ್ನು ತಯಾರಿಸುವುದರಲ್ಲೂ ಅವರು ಸಿದ್ಧಹಸ್ತರು.
ಹೀಗೆ ಪ್ರಯೋಗ ಮಾಡಬೇಕು ಅಂದು ಅವರಿಗೆ ಮೂಡಿದ ಪ್ರೇರಣೆಯ ಹಿಂದೆ ಸ್ವಾನುಭವವಿದೆ. ಅವರು ಕಲಿತಿದ್ದು ಒಂದು ಚಿಕ್ಕ ಹಳ್ಳಿಯ ಸರಕಾರಿ ಶಾಲೆಯಲ್ಲಿ. ಅಲ್ಲಿ ಪರಿಸರದ ಬೆರಗುಗಳಿಗೆ ಉತ್ತರಗಳು ಅಂತ ಸಿಕ್ಕಿದ್ದು ತುಂಬಾ ಅಪರೂಪ. ಉತ್ತರ ಕೇಳಿದಾಗ ಹೇಳಬೇಕಾದವರಿಂದ ಅವರಿಗೆ ನಿರಾಶೆ ಸಿಕ್ಕಿದ್ದೇ ಹೆಚ್ಚು. ಪ್ರೌಢ ಶಿಕ್ಷಣ ಮುಗಿಸಿ ನಗರದ ಕಾಲೇಜಿಗೆ ಸೇರಿದಾಗ ಅವರಲ್ಲಿ ಕೀಳರಿಮೆಯೇ ತುಂಬಿ ತುಳುಕಾಡುತ್ತಿತ್ತಂತೆ. ಪಠ್ಯದ ಆಚೆಗಿನ ವಿಜ್ಞಾನ ಸಂಬಂಧಿ ಪ್ರಶ್ನೆಗಳನ್ನು ಕೇಳಿದಾಗ ಉಡಾಫೆಯ ಉತ್ತರಗಳೇ ದೊರಕುತ್ತಿದ್ದವು. ಏಕೆ? ಹೇಗೆ? ಎಂಬ ಪ್ರಶ್ನೆಗಳಿಗೆ ಅವರಿಗೆ ಸಮಾಧಾನದ ಉತ್ತರಗಳು ಅಂತ ಸಿಕ್ಕಿದ್ದು ಅವರು ಪದವಿ ಓದುವಾಗ. ಅಲ್ಲಿ ವಿಜ್ಞಾನ ಸಂಘದಿಂದ ನಡೆಸಿದ ಚಟುವಟಿಕೆಗಳು ಅವರಲ್ಲಿ ವಿಜ್ಞಾನ ಸಂವಹನದಲ್ಲಿ ಆಸಕ್ತಿ ಮೂಡಿಸಿದವು, ಅವರನ್ನು ವಿಜ್ಞಾನದೆಡೆಗೆ ಆಕರ್ಷಿಸಿದವು. ನಾರಾಯಣ ಬಾಬಾನಗರ ಅವರ ಮೇಲೆ ಪ್ರಭಾವ ಬೀರಿದವರಲ್ಲಿ ಪ್ರೊ. ಎಂ ಆರ್ ನಾಗರಾಜು ಮುಖ್ಯರು. ನಾಗರಾಜು ಅವರು ರಾಜ್ಯದ ತುಂಬೆಲ್ಲಾ ಅನೇಕ ಸಂವಹನಕಾರರನ್ನು ಬೆಳೆಸಿದವರು.
ತಮ್ಮಿಂದ ಕಲಿಯುತ್ತಿರುವ ಮಕ್ಕಳಿಗೆ ವಿಷಯಗಳಲ್ಲಿ ಆಸಕ್ತಿ ಮೂಡಿಸಬೇಕು ಎಂದು ಕಂಕಣಬದ್ಧರಾಗಿ ಆಟಿಕೆಗಳ ಮೂಲಕ ಪಾಠ ಹೇಳುವ ವಿನೂತನ ಪ್ರಯೋಗ ಮಾಡುತ್ತಾ ಬಂದ ನಾರಾಯಣ ಬಾಬಾನಗರ ಅವರು ತಮ್ಮ ಈ ಪ್ರಯೋಗವನ್ನು ಇತರ ಅನೇಕ ಶಾಲೆಗಳಿಗೂ ವ್ಯಾಪಿಸಿದ್ದಾರೆ. ಅನೇಕ ಕಡೆಗಳಲ್ಲಿ ಪ್ರಾತ್ಯಕ್ಷಿಕೆಗಳನ್ನೂ ನೀಡುತ್ತಿದ್ದಾರೆ. ಮಕ್ಕಳ ವಿಜ್ಞಾನ ಕಲಿಕೆಗೆ ಅನುಕೂಲವಾಗುವಂತಹ ವಿಜ್ಞಾನ ಚಟುವಟಿಕೆಗಳು, ಪ್ರಾತ್ಯಕ್ಷಿಕೆಗಳು, ವಿಜ್ಞಾನ ಕತೆಗಳು, ವಿಜ್ಞಾನಿಯ ಬದುಕಿನ ಸ್ವಾರಸ್ಯಕರ ಪ್ರಸಂಗಗಳು, ವಿಜ್ಞಾನದ ಒಗಟುಗಳು ಇಂಥವುಗಳನ್ನೆಲ್ಲಾ ಯೂಟ್ಯೂಬ್ ಮಾಧ್ಯಮದ ಮೂಲಕ 'ಮಾಡಿ ನೋಡಿ ವಿಜ್ಞಾನ ಕಲಿ' ಶೀರ್ಷಿಕೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ನಾರಾಯಣ ಬಾಬಾನಗರ ಅವರು ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನೂ ಮತ್ತು ಅಂಕಣಗಳನ್ನೂ ಮೂಡಿಸಿದ್ದಾರೆ. ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ನಾರಾಯಣ ಬಾಬಾನಗರ ಅವರ ಕೃತಿಗಳಲ್ಲಿ 'ಕುಂಟಾಬಿಲ್ಲೆ', 'ವಿಜ್ಞಾನ ವಿಹಾರ', 'ಬಣ್ಣದ ಬಾಲಂಗೋಚಿ', 'ಕೌತುಕದ ಚುಚ್ಚುಮದ್ದು! ... ಸೋಜಿಗದ ಸೂಜಿಮದ್ದು', 'ಆಹಾ! ಆಟಿಕೆಗಳು', ಅಂಕಣಗಳ ಸಂಕಲನವಾದ 'ಗುಬ್ಬಿಗೂಡು', ಬದುಕಿನ ಹೆಜ್ಜೆಗಳ ಕುರಿತಾದ 'ಬದುಕಿನ ದೋಣಿಯಲಿ', ’ನೆರಳಿನ್ಹಾಂಗ ನೆನಪು...’ ಮುಂತಾದ ಕೃತಿಗಳು ಇವುಗಳಲ್ಲಿ ಸೇರಿವೆ. ಇದಲ್ಲದೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಅನುಕೂಲಕ್ಕೆ 'SSLC ವಿಜ್ಞಾನ ವಿಜಯ', '10ನೇ ತರಗತಿ ವಿಜ್ಞಾನ ವಿನ್ಯಾಸ' ಮುಂತಾದ ಹಲವಾರು ಕೃತಿಗಳನ್ನೂ ಪ್ರಕಟಿಸಿದ್ದಾರೆ.
ನಾರಾಯಣ ಬಾಬಾನಗರ ಅವರ ಇನ್ನಿತರ ಪ್ರಮುಖ ಆಸಕ್ತಿಗಳಲ್ಲಿ ದಾಸ ಸಾಹಿತ್ಯ ಮುಖ್ಯವಾದದ್ದು. ಯೂಟ್ಯೂಬ್ನಲ್ಲಿ 'ದಾಸ ದರ್ಶನ' ಶೀರ್ಷಿಕೆಯಲ್ಲಿ ಹರಿದಾಸ ಕಥನಗಳನ್ನು ವಿಶಿಷ್ಟ ಶೈಲಿಯಲ್ಲಿ ಪ್ರಸ್ತುತ ಪಡಿಸುತ್ತಾ ಬಂದಿದ್ದಾರೆ.
ವಿಜ್ಞಾನ, ಪರಿಸರ, ಛಾಯಾಗ್ರಹಣ, ನಾಣ್ಯ ಸಂಗ್ರಹ, ವಿಶ್ವದ ಕೌತುಕ ಸಂಗತಿಗಳು, ಸಾಹಿತ್ಯ, ಸಂಸ್ಕೃತಿ ಮುಂತಾದ ಅನೇಕ ವಿಚಾರಗಳ ಕುರಿತು ನಾರಾಯಣ ಬಾಬಾನಗರ ಅವರ ಬರಹಗಳು ಅನೇಕ ನಿಯತಕಾಲಿಕಗಳಲ್ಲಿ ಮೂಡಿಬರುತ್ತಿವೆ.
ಸಿ. ಎನ್. ಆರ್. ರಾವ್ ಶಿಕ್ಷಣ ಪ್ರತಿಷ್ಠಾನದ 'ಉತ್ತಮ ವಿಜ್ಞಾನ ಶಿಕ್ಷಕ' ಪ್ರಶಸ್ತಿ, ಬಸವನ ಬಾಗೇವಾಡಿಯ ಬಸವ ಜನ್ಮಭೂಮಿ ಪ್ರತಿಷ್ಠಾನದ 'ಬಸವಭೂಷಣ' ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ನಾರಾಯಣ ಬಾಬಾನಗರ ಅವರನ್ನು ಅರಸಿ ಬಂದಿವೆ.
ನಿರಂತರ ಕ್ರಿಯಾಶೀಲರೂ, ಆತ್ಮೀಯರೂ ಆದ ನಾರಾಯಣ ಬಾಬಾನಗರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.
On the birthday of innovative science teacher, writer and friend Narayan Babanagar
ಕಾಮೆಂಟ್ಗಳು