ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಪಾಲದಾಸರು


 ಗೋಪಾಲದಾಸರು 


ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ಮೂಡಿಬಂದವರಲ್ಲಿ ಗೋಪಾಲದಾಸರು ಒಬ್ಬರು.  ಇವರ ಕಾಲ ಹದಿನೆಂಟನೆಯ ಶತಮಾನದ 1722 ರಿಂದ 1762 ಎನ್ನಲಾಗಿದೆ. 

ಗೋಪಾಲದಾಸರು ವಿಜಯ ದಾಸರ ಶಿಷ್ಯರು.  ಹರಿದಾಸರ ಪೀಳಿಗೆಯನ್ನು ನಿರೂಪಿಸುವಲ್ಲಿ ಪುರಂದರ ದಾಸ, ವಿಜಯದಾಸ, ಗೋಪಾಲದಾಸ ಮತ್ತು ಜಗನ್ನಾಥದಾಸರುಗಳನ್ನು ಒಟ್ಟಿಗೆ ದಾಸ ಚತುಷ್ಟಯರೆಂದು ಕರೆಯುವ ಒಂದು ಸಂಪ್ರದಾಯವೂ ಉಂಟು. 

ಗೋಪಾಲದಾಸರು ಈಗಿನ ಆಂಧ್ರ ಪ್ರದೇಶಕ್ಕೆ ಸೇರಿದ ಗದ್ವಾಲಿಗೆ ಸಮೀಪದಲ್ಲಿರುವ ಮೊಸರು ಕಲ್ಲು ಎಂಬಲ್ಲಿ ಜನಿಸಿದರು. ಇವರ ತಂದೆ ತಾಯಿ ಇವರಿಗೆ ಇಟ್ಟ ಹೆಸರು ಭಾಗಣ್ಣ. ಇವರು ಹುಟ್ಟಿದ ಕೆಲವೇ ವರ್ಷಗಳಲ್ಲಿ ತಂದೆ ಕಾಲವಾದುದರಿಂದ ಇವರ ತಾಯಿ ವೆಂಕಮ್ಮನವರು  ತಮ್ಮ ನಾಲ್ವರು ಗಂಡುಮಕ್ಕಳೊಂದಿಗೆ ದಿಕ್ಕಿಲ್ಲದೆ ಸಂಕಾಪುರಕ್ಕೆ ಬಂದು ಅಲ್ಲಿನ ಊರ ಹೊರಗಿದ್ದ ಮಾರುತಿ ದೇವಾಲಯದಲ್ಲಿ ಆಶ್ರಯ ಪಡೆದರು. ಆಕೆಗೆ ಮಕ್ಕಳನ್ನು ಸಾಕುವುದು ತುಂಬಾ ಕಷ್ಟವಾಗಿತ್ತು. ಸ್ವಲ್ಪ ವಯಸ್ಸಿಗೆ ಬಂದು ವಿದ್ಯಾವಂತರಾದ, ಗೋಪಾಲದಾಸರು ತಾಯಿಯ ಬವಣೆಯನ್ನು ತಪ್ಪಿಸುವ ಉದ್ದೇಶದಿಂದ ಸಂಪಾದಿಸುವ ಮನಸ್ಸು ಮಾಡಿದರು. 

ಗೋಪಾಲದಾಸರು ಗಾಯತ್ರೀ ಮಂತ್ರ ಧ್ಯಾನದಿಂದ ಅಪೂರ್ವ ಸಿದ್ಧಿಯನ್ನು ಪಡೆದು ಭವಿಷ್ಯ ಹೇಳುವುದರಲ್ಲಿ ನಿಷ್ಣಾತರಾದರು. ದಿನದಿನಕ್ಕೆ ಇವರ ಬಗ್ಗೆ ಜನಾನುರಾಗ ಹೆಚ್ಚಿತು. ಇದಲ್ಲದೆ ಕವಿತೆ ರಚಿಸುವ ಸಾಮರ್ಥ್ಯವೂ ಇವರಿಗೆ ದೈವದತ್ತವಾಗಿ ಲಭಿಸಿತ್ತು. ಮಗನ ಈ ಏಳಿಗೆಯಿಂದ ವೆಂಕಮ್ಮನವರ ಕಷ್ಟಗಳು ಕ್ರಮೇಣದಲ್ಲಿ ಕಡಿಮೆಯಾಯಿತಾಗಿ ಅವರು ಮಕ್ಕಳೊಂದಿಗೆ ಊರ ಹೊರಗಿನ ಮಾರುತಿ ದೇವಾಲಯದಿಂದ, ಉತ್ತನೂರಿಗೆ ಬಂದು ನೆಲೆಸಿದರು. ಅಲ್ಲಿನ ವೆಂಕಟೇಶ್ವರನ ಗುಡಿ ಗೋಪಾಲದಾಸರ ಕಾರ್ಯಕ್ಷೇತ್ರವಾಯಿತು. 

ಗೋಪಾಲದಾರಿಗೆ ಹರಿದಾಸರಲ್ಲಿ ಪ್ರಸಿದ್ಧರಾಗಿದ್ದ ವಿಜಯದಾಸರ ಸಂದರ್ಶನ ಲಭ್ಯವಾಯಿತು. ಅವರಿಂದ ಗೋಪಾಲದಾಸರು ಗೋಪಾಲವಿಠಲ ಎಂಬ ಅಂಕಿತವನ್ನು ಪಡೆದು, ಹರಿದಾಸ ದೀಕ್ಷೆಯನ್ನು ಕೈಗೊಂಡರು. ಅಣ್ಣನ ಈ ದೀಕ್ಷೆಯನ್ನು ಕಂಡು ತಮ್ಮಂದಿರೂ ಆ ಕೈಂಕರ್ಯದಲ್ಲಿಯೇ ತೊಡಗಿ ಕೀರ್ತನೆಗಳನ್ನು ರಚಿಸಿ ಕೃತಾರ್ಥರಾದರು. 

ವಿಜಯದಾಸರ ಪರಮಾನುಗ್ರಹಕ್ಕೆ ಪಾತ್ರರಾಗಿದ್ದ ಗೋಪಾಲದಾಸರು ವಿಖ್ಯಾತರಾದ ಮಾನ್ವಿಯ ಶ್ರೀನಿವಾಸಾಚಾರ್ಯರಾದ  ಜಗನ್ನಾಥದಾಸರಿಗೆ ತಮ್ಮ ಆಯಸ್ಸಿನ ಸ್ವಲ್ಪ ಅವಧಿಯನ್ನು ದಾನ ಮಾಡಿ, ಅವರು ಹರಿದಾಸ ದೀಕ್ಷೆಯಲ್ಲಿ ನಿರತರಾಗುವಂತೆ ಮಾಡಿದ ಸಂಗತಿಯಂತೂ ಅಸದೃಶ್ಯವೂ ಆಶ್ಚರ್ಯಕರವೂ ಆದುದು. ಹೀಗೆಯೇ ಗೋಪಾಲದಾಸರು ತಮ್ಮ ತಮ್ಮಂದಿರೊಂದಿಗೆ ಕೂಡಿ ಆಶುಕವಿತೆಯಲ್ಲಿ ಜಯಪ್ರದರಾಗಿ ಉತ್ತರಾದಿ ಮಠದ ಶ್ರೀಗಳವರಾದ ಸತ್ಯಭೋಧತೀರ್ಥರ ಅನುಗ್ರಹವನ್ನು ಸಂಪಾದಿಸಿದ ಘಟನೆಯೂ  ಪ್ರಸಿದ್ಧಿ ಪಡೆದಿದೆ. 

ಐಜಿ ವೆಂಕಟರಾಮಾಚಾರ್ಯ ಮತ್ತು ಹೆಳವನಕಟ್ಟೆ ಗಿರಿಯಮ್ಮ ಮೊದಲಾದವರು ಗೋಪಾಲದಾಸರ ಶಿಷ್ಯವರ್ಗಕ್ಕೆ ಸೇರಿದವರಲ್ಲಿ ಪ್ರಮುಖರು. ಗೋಪಾಲದಾಸರು ಕೀರ್ತನಕಾರನಾಗಿದ್ದಂತೆಯೇ ಕುಶಲ ಚಿತ್ರಕಾರರೂ ಆಗಿದ್ದರು. ಆ ಕಲೆಯನ್ನು ತಮ್ಮ ಆಧ್ಯಾತ್ಮಿಕ ಗುರಿಯನ್ನು ಸಾಧಿಸಲು ಒಂದು ಸಾಧನವನ್ನಾಗಿ ಬಳಸಿಕೊಂಡರಂತೆ.  ಇವರಿಂದ ರಚಿತವಾದ ಎಷ್ಟೋ ಚಿತ್ರಪಟಗಳನ್ನು ಭಕ್ತರು ಪೂಜಿಸಿ, ತಮ್ಮ ಇಷ್ಟಾರ್ಥವನ್ನು ಪಡೆದರೆಂದು ತಿಳಿದುಬರುತ್ತದೆ.

ರಥವಾನೇರಿದ ರಾಘವೇಂದ್ರ, ವೈರಾಗ್ಯ ಮಾರ್ಗ ಕೇಳು, ಆವ ರೋಗವೋ ಎನಗೆ ಧನ್ವಂತ್ರಿ, ಬಾರಯ್ಯ ಬಾ ಬಾ ಬಕುತರ ಪ್ರಿಯ, ಎನ್ನ ಭಿನ್ನಪ ಕೇಳೋ ಧನ್ವಂತ್ರಿ ದಯಮಾಡೊ, ಹ್ಯಾಂಗೆ ಮಾಡಲಯ್ಯ ಹೋಗುತಿದೆ ಆಯುಷ್ಯ ಮುಂತಾದ ಅನೇಕ ಕೃತಿಗಳನ್ನು ರಚಿಸಿರುವ ಗೋಪಾಲದಾಸರ ಕೃತಿಗಳಲ್ಲಿ ಧನ್ವಂತ್ರಿಸ್ತುತಿ, ಪಂಡರಾಪುರದ ಪಾಂಡುರಂಗನ ದರ್ಶನವಿತ್ತ ಸಂದರ್ಭವನ್ನು ಕುರಿತ ಒಂದು ಸುಳಾದಿ, ಕರ್ತೃವಿನ ಅಂತರಂಗದ ಅಭೀಷ್ಟ ಮತ್ತು ಆಧ್ಯಾತ್ಮಿಕ ಪ್ರಗತಿಗಳನ್ನು ಚಿತ್ರಿಸುವ ಹಲವಾರು ರಚನೆಗಳು ಹರಿದಾಸ ಸಾಹಿತ್ಯದಲ್ಲಿ ತುಂಬಾ ಮನ್ನಣೆ ಗಳಿಸಿವೆ.  

ಗೋಪಾಲದಾಸರು ಉತ್ತನೂರಿನಲ್ಲಿ ಪುಷ್ಯ ಬಹುಳ ಅಷ್ಟಮಿ ತಮ್ಮ ಕೊನೆಯುಸಿರೆಳೆದರು

Gopaladasa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ