ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಿಡಸಾಲೆ ಪುಟ್ಟಸ್ವಾಮಯ್ಯ


 ನಿಡಸಾಲೆ ಪುಟ್ಟಸ್ವಾಮಯ್ಯ


ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಬರಹಗಾರರಾಗಿ, ಅಭಿನಯ ಕಲಾವಿದರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸಂಘಟನಕಾರರಾಗಿ,  ಹೀಗೆ ಬಹುಮುಖಿ ಹೆಸರಾಗಿದ್ದಾರೆ.

ನಿಡಸಾಲೆ ಪುಟ್ಟಸ್ವಾಮಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಿಡಸಾಲೆ 1951ರ ಫೆಬ್ರುವರಿ 5ರಂದು ಜನಿಸಿದರು. ತಂದೆ ಮುಳವಾಗಲಯ್ಯ.  ತಾಯಿ ನಿಂಗಮ್ಮ. ಪುಟ್ಟಸ್ವಾಮಯ್ಯನವರು ನಿಡಸಾಲೆಯಲ್ಲಿ ಪ್ರಾಥಮಿಕ, ಹುಲಿಯೂರುದುರ್ಗದಲ್ಲಿ ಪ್ರೌಢಶಾಲೆಯವರೆಗೆ ವ್ಯಾಸಂಗ ಪೂರ್ಣಗೊಳಿಸಿದರು. 1968ರಲ್ಲಿ ಐ.ಟಿ.ಐ.ನಲ್ಲಿ ಸ್ಟೆನೋಗ್ರಫಿ ಕೋರ್ಸಿನ ತರಬೇತಿ ಪಡೆದರು.  1969ರಿಂದ ಕೃಷಿ ಇಲಾಖೆಯಲ್ಲಿ ಉದ್ಯೋಗ ಆರಂಭಿಸಿದರು. ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಪಿ.ಯು.ಸಿ ತೇರ್ಗಡೆಯಾಗಿ ಬಿ.ಕಾಂ.ಗೆ ಸೇರ್ಪಡೆಯಾದರು. 

ಪುಟ್ಟಸ್ವಾಮಯ್ಯನವರು ಹಿರಿಯ ಸಾಹಿತಿಗಳಾದ  ಬಿ.ಜಿ. ಸತ್ಯಮೂರ್ತಿ ಮತ್ತು ನವರತ್ನರಾಮ್‌ ಅವರ ಒಡನಾಟದಲ್ಲಿ ಸಾಹಿತ್ಯ ಲೋಕದ ಹಲವಾರು ಗಣ್ಯರ ಸ್ನೇಹ ಗಳಿಸಿದರು. 1971ರಿಂದ ಬರೆಹಗಾರರಾಗಿ ರೂಪುಗೊಂಡ ಇವರ ಕಥೆಗಳು ಕನ್ನಡ ಪ್ರಭ, ಮಲ್ಲಿಗೆ, ಜನವಾಹಿನಿ ಮುಂತಾದ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಗೊಂಡವು.  ಹೀಗೆ ಸಾಹಿತ್ಯ ಕೃಷಿ ಆರಂಭಿಸಿದ್ದೇ ಅಲ್ಲದೆ, ಕೃಷಿ ಇಲಾಖೆಯ, 'ಕೃಷಿ ಕಲಾ ಸಂಘ'ದ ಹಿರಿಯ ಕಲಾವಿದರ ತಂಡದೊಡನೆ ನಾಟಕಗಳಲ್ಲಿ ಅಭಿನಯಿಸಿದರು. "ಹವ್ಯಾಸಿ ಕೃಷಿ ರಂಗ" ಎಂಬ ಕಲಾ ತಂಡವನ್ನು ಕೃಷಿ ಇಲಾಖೆಯಲ್ಲಿಯೇ ಸ್ಥಾಪಿಸಿ,  ಆ ಮೂಲಕ ಸುಮಾರು 25ಕ್ಕೂ ಹೆಚ್ಚು ನಾಟಕಗಳ
ನಿರ್ದೇಶನ ಮಾಡಿ, ನೂರಾರು ನಾಟಕಗಳಲ್ಲಿ ಅಭಿನಯಿಸಿ, 7 ನಾಟಕಗಳನ್ನು ರಚಿಸಿ ಪ್ರದರ್ಶನಗಳನ್ನು ನೀಡಿ ಹೆಸರಾದರು. 

ನಿಡಸಾಲೆ ಪುಟ್ಟಸ್ವಾಮಯ್ಯನವರ ಪ್ರಕಟಿತ ಕೃತಿಗಳಲ್ಲಿ 'ನಿಯತ್ತಿಲ್ಲದವರು', 'ಬೆನ್ನೇರಿದ ಭೂತ', 'ಕರಿಮುಗಿಲು ಸರಿದಾಗ', 'ಜಾಗೃತಿ', 'ಬೆಳೆಯೋಣು ಬಾರ', 'ಕೃಷಿತಜ್ಞ-ಸುಂಧ್ರಿ ಲಗ್ನ' ನಾಟಕಗಳು; 'ಸವಲತ್ತು ತಿಳಿಯೋಣು ಬಾರಾ' ಕಿರು ನಾಟಕ; 'ಗೊಲ್ಲಳ್ಳಿ ತೋಟ', 'ಸಾಧನೆಯ ಹಾದಿಯಲ್ಲಿ', 'ಬೆಳಕಿನೆಡೆಗೆ', 'ಪರಂಪರೆ', 'ರಾಜಾವಾರ್ಡ್', 'ಅಗ್ನಿದಿವ್ಯ' ಕಾದಂಬರಿಗಳು; 'ಅಪೂರ್ಣ ಚಿತ್ರ', 'ಬಿಸಿಲುಗುದುರೆ ಮತ್ತು ಇತರ ಕಥೆಗಳು' ಕಥಾಸಂಕಲನಗಳು; 'ಸಂಕ್ರಾಂತಿ' ಜೀವನ ಕಥನ; 'ಕಂಚಿನ ಕೋಟೆ' ಎಂಬ ಅವ್ವ-ಅಜ್ಜಿ ಹೇಳಿದ ಜಾನಪದ ಕಥೆಗಳ ಸಂಗ್ರಹ; 'ಹಳ್ಳಿಹೈದನ ವಿದೇಶ ಪ್ರವಾಸ' (ಎರಡು ಸಂಪುಟಗಳಲ್ಲಿ) ಪ್ರವಾಸ ಕಥನ; 'ಗುಪ್ತಗಾಮಿನಿ' ಕವನ ಸಂಕಲನ; 'ಕರುನಾಡ ಕಟ್ಟಾಳುಗಳು' ಎಂಬ 50 ಕರ್ನಾಟಕ ಏಕೀಕರಣ ಕಟ್ಟಾಳುಗಳ ಪರಿಚಯ ಮುಂತಾದ ಕೃತಿಗಳು ಸೇರಿವೆ.  'ಸುಗ್ಗಿಯ ಸೊಬಗು' ಇವರಿಗೆ ಸಂದ ಅಭಿನಂದನಾ ಗ್ರಂಥವಾಗಿದೆ.  11 ಧಾರಾವಾಹಿಗಳು, ನೂರಾರು ನಾಟಕಗಳು ಹಾಗೂ 5 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೃಷಿ ಸಂಬಂಧಿತ 40 ಸಾಕ್ಷ್ಯ ಚಿತ್ರಗಳ ನಿರ್ದೇಶನ ಮಾಡಿದ್ದಾರೆ, ಗೌರವ ಸಂಪಾದಕರಾಗಿ 1000 ಕನ್ನಡ ಪುಸ್ತಕಗಳ ಪ್ರಕಟಣೆಗಳ ರೂವಾರಿಯಾಗಿದ್ದಾರೆ.

ಪುಟ್ಟಸ್ವಾಮಯ್ಯನವರು ಕರ್ನಾಟಕ ಕನ್ನಡ ಬರೆಹಗಾರರ ಮತ್ತು ಪ್ರಕಾಶಕರ ಸಂಘದ ಸ್ಥಾಪಿಸಿ, ಅದರ ರಾಜ್ಯಮಟ್ಟದ ಅಧ್ಯಕ್ಷರಾಗಿ 20 ವರ್ಷಗಳ ಕಾರ್ಯನಿರ್ವಹಣೆ ಮಾಡಿದ್ದಾರೆ. ಇವರ ಅಧಿಕಾರದ ಅವಧಿಯಲ್ಲಿ ಒಂದು ಜಿಲ್ಲೆಯ ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ “ನೂರು ಶಾಲೆಗಳಿಗೆ ನೂರು ನೂರು ಪುಸ್ತಕ” ಉಚಿತ ಪುಸ್ತಕ ವಿತರಣಾ ಯೋಜನೆಯಡಿಯಲ್ಲಿ 800 ಸರ್ಕಾರಿ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಮಕ್ಕಳಿಗೆ ಉಪಯುಕ್ತವಾದ 80,000 ಪಠ್ಯೇತರ ಪುಸ್ತಕಗಳನ್ನು ದಾನವಾಗಿ ಸಂಗ್ರಹಿಸಿ ಉಚಿತವಾಗಿ ವಿತರಿಸಲಾಗಿದೆ.

ನಿಡಸಾಲೆ ಪುಟ್ಟಸ್ವಾಮಯ್ಯನವರು ತಮ್ಮ ಸೇವಾ ನಿವೃತ್ತಿಯ ನಂತರದಲ್ಲಿ ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವಂತಹ ಸದಭಿರುಚಿಯ ಚಲನಚಿತ್ರಗಳಾದ
“ಸಿದ್ಧಗಂಗಾ”, “ವ್ಹಾವ್‌ ಮುರುಗೇಶ್‌?", "ನೀರು ತಂದವರು”, "ಅನುತ್ತರ'' ಮತ್ತು ““ಅಗ್ನಿವರ್ಷ'' ಎಂಬ 5 ಚಲನಚಿತ್ರಗಳ ನಿರ್ಮಾಣ ಮಾಡಿದ್ದಾರೆ. 

ನಿಡಸಾಲೆ ಪುಟ್ಟಸ್ವಾಮಯ್ಯನವರಿಗೆ 2011ನೇ ಸಾಲಿನ ‘ಕೆಂಪೇಗೌಡ ಪ್ರಶಸ್ತಿ 'ಸೇವಾರತ್ನ ಪ್ರಶಸ್ತಿ’, ಹಾಗೂ ‘ವಿಶ್ವೇಶ್ವರಯ್ಯ ಪ್ರಶಸ್ತಿ’ಗಳೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಗೌರವಗಳು ಸಂದಿವೆ. ಇವರಿಗೆ  2011ರಲ್ಲಿ 60 ವರ್ಷ ತುಂಬಿದ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಬಿ.ಜಿ. ಸತ್ಯಮೂರ್ತಿ ಅವರ ಸಂಪಾದಕತ್ವದಲ್ಲಿ “ಸುಗ್ಗಿಯ ಸೊಬಗು” ಅಭಿನಂದನಾ ಗ್ರಂಥ ಹಾಗೂ “ನಲ್ಮೆಯ ನಿಡಸಾಲೆ” ಸ್ಮರಣ ಸಂಚಿಕೆಗಳು ಬಿಡುಗಡೆಗೊಂಡು, ಡಾ. ದೇಜಗೌ, ಡಾ. ಸಾ.ಶಿ. ಮರುಳಯ್ಯ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌, ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ಅನೇಕ ಮಹನೀಯರ ಗಣ್ಯ ಉಪಸ್ಥಿತಿಯಲ್ಲಿ ನಿಡಸಾಲೆ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಉದಯ ಟಿ.ವಿ.ಯ ಪರಿಚಯ ಹಾಗೂ ಬೆಂಗಳೂರು ದೂರದರ್ಶನದ ಬೆಳಗು ಕಾರ್ಯಕ್ರಮಗಳಲ್ಲಿ ಇವರ ಬದುಕು-ಬರೆಹ ಹಾಗೂ ಸಂಘಟನೆಗಳ ಬಗ್ಗೆ ಸಂವಾದಗಳು ಮೂಡಿಬಂದಿವೆ.

ಈ 2025 ವರ್ಷದಲ್ಲಿ ನಡೆದ ನಿಡಸಾಲೆ ಪುಟ್ಟಸ್ವಾಮಯ್ಯನವರ 75 ಸಂದರ್ಭದಲ್ಲಿನ ವರ್ಣಮಯ ಸಮಾರಂಭದಲ್ಲಿ ಅವರ 75 ಪ್ರಾತಿನಿಧಿಕ ಕಿರುಗತೆಗಳ ಸಂಕಲನ, ಅಮೃತ ಕಥಾನಕ ಅಭಿನಂದನಾ ಗ್ರಂಥ, ಸ್ನೇಹಮಯಿ ಸ್ಮರಣ ಸಂಚಿಕೆ, ತೋರಿದ ದಾರಿ ಸಾಕ್ಷ್ಯಚಿತ್ರಗಳು ಲೋಕಾರ್ಪಣೆಗೊಂಡಿವೆ. 

ಹಿರಿಯ ಸಾಧಕರಾದ ನಿಡಸಾಲೆ ಪುಟ್ಟಸ್ವಾಮಯ್ಯನವರಿಗೆ ಹಾರ್ದಿಕ ಶುಭಹಾರೈಕೆಗಳು.

Happy birthday Nidasale Puttaswamaiah Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ