ಚಿತ್ರವೀಣಾ ರವಿಕಿರಣ
ಚಿತ್ರವೀಣಾ ರವಿಕಿರಣ
ನಾನೀಗ ಸಂಗೀತಲೋಕದಲ್ಲಿ ಪ್ರಸಿದ್ಧ ಹೆಸರಾದ ಎನ್. ರವಿಕಿರಣರ ಬಗ್ಗೆ ಹೇಳಲಿದ್ದೇನೆ. ಇದಕ್ಕೆ ಮುಂಚೆ ಕೆಲವು ನೆನಪುಗಳನ್ನು ಹೇಳುತ್ತೇನೆ.
ಕನ್ನಡದಲ್ಲಿ ವಿಜ್ಞಾನ ಬರಹಗಳಿಗೆ ಪ್ರಸಿದ್ಧರಾದ ಜಿ.ಟಿ. ನಾರಾಯಣರಾಯರು ಪ್ರಸಿದ್ಧ ಸಂಗೀತ ವಿಮರ್ಶಕರೂ ಆಗಿದ್ದವರು. ಹೀಗಾಗಿ ಅವರಿಗೆ ತುಂಬಾ ಜನ ಸಂಗೀತಗಾರರ ನಿಕಟ ಪರಿಚಯವಿತ್ತು.
ಐವತ್ತರ ದಶಕದಲ್ಲಿ ಮಂಗಳೂರಿನಲ್ಲಿ ಜಿ.ಟಿ.ಎನ್. ಪ್ರಾಧ್ಯಾಪಕರಾಗಿದ್ದಾಗ ಒಂದು ದಿನ ಅವರ ಕಾಲೇಜಿಗೆ ಒಬ್ಬ ತೇಜಸ್ವಿ ತರುಣರೊಬ್ಬರು ಕಾಣಲು ಬಂದರು. ತನ್ನ ಹೆಸರು ನರಸಿಂಹನ್ ಎಂದೂ, ತಾನು ಗೋಟುವಾದ್ಯ ವಿದ್ವಾಂಸ ಮೈಸೂರು ನಾರಾಯಣ ಅಯ್ಯಂಗಾರ್ಯರ ಪುತ್ರನೆಂದೂ ಪರಿಚಯ ಮಾಡಿಕೊಂಡರು. ತನ್ನ ತಂದೆ ಅವರನ್ನು ಭೇಟಿಮಾಡಲು ಇಚ್ಛಿಸಿರುವುದಾಗಿಯೂ, ಈಗ ಸಧ್ಯಕ್ಕೆ ಅವರು ಛತ್ರದಲ್ಲಿದ್ದಾರೆಂದೂ, ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಒದಗಿದೆಯೆಂದು ಹೇಳಿದಾಗ, 'ಇಂಥ ದೊಡ್ಡ ವಿದ್ವಾಂಸರ ಸ್ಥಿತಿ ಹೀಗಾಯಿತೆ?' ಎಂದು ದುಃಖವಾಗಿ ಜಿಟಿಎನ್ ಅವರಿದ್ದಲ್ಲಿಗೆ ಹೋದರು. ಹರಕು ಚಾಪೆಯ ಮೇಲೆ ಕುಳಿತಿದ್ದ ಗೋಟುವಾದ್ಯ ಭೀಷ್ಮರನ್ನು ನೋಡಿ ಅವರಿಗೆ ವೇದನೆಯಾಯಿತು. ಅವರಿಂದ ಒಂದು ಕಚೇರಿ ನಡೆಸಿ ಸಾಕಷ್ಟು ಹಣ ಸಂಗ್ರಹಿಸಿ ಕೊಡುವ ನಿರ್ಧಾರ ಮಾಡಿದರು. ಆದರೆ ಮಂಗಳೂರಿನಲ್ಲಿ ಅಂದಿನ ದಿನದಲ್ಲಿ ಕರ್ನಾಟಕ ಸಂಗೀತದ ಅಭಿಮಾನಿಗಳು ಕಡಿಮೆ. ಆದರೂ ತಮ್ಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಸಹಕಾರದಿಂದ ಅಂತೂ ಒಂದು ಗೋಟುವಾದ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಯ್ತು. ಪತ್ರಿಕೆಗಳಲ್ಲಿ ಸಾಕಷ್ಟು ಪ್ರಚಾರವನ್ನೂ ಮಾಡಲಾಯ್ತು. ಅಂತೂ ಸುಮಾರು ಮುನ್ನೂರು ರುಪಾಯಿಯಷ್ಟು ಹಣ ಸಂಗ್ರಹವೂ ಆಯಿತು.
ಆ ವಿದ್ವಾಂಸರು ಮೂರುಗಂಟೆಗಳ ಕಾಲ ಅಪೂರ್ವವಾದ ಕಾರ್ಯಕ್ರಮ ನಡೆಸಿಕೊಟ್ಟು ಎಲ್ಲರ ಪ್ರಶಂಸೆಗೆ ಪಾತ್ರರಾದರು. ನಂತರ ಅವರಿಗೆ ಶ್ರೀಮಂತರೊಬ್ಬರು ಗೌರವಧನ ನೀಡಿ ಮದ್ರಾಸಿಗೆ ಕಳುಹಿಸಿಕೊಡುವ ಏರ್ಪಾಟೂ ಆಯಿತು. ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ಎನ್.ರವಿಕಿರಣ್ ಎಂಬ ಬಾಲಪ್ರತಿಭೆ ಗೋಟುವಾದ್ಯದಲ್ಲಿ ಅಪ್ರತಿಮ ಸಾಧನೆ ಮಾಡಿದ ವಿಷಯ ಎಲ್ಲ ಪತ್ರಿಕೆಗಳಲ್ಲಿಯೂ ಪ್ರಕಟವಾಗಿ ಆತನ ಸಭಾ ಕಾರ್ಯಕ್ರಮ ವೀಕ್ಷಿಸಲು ಜನಸಾಗರವೇ ಸೇರುತ್ತಿತ್ತು. ಅಂತಹ ಒಂದು ಕಾರ್ಯಕ್ರಮ ಮೈಸೂರಿನಲ್ಲಿಯೂ ಏರ್ಪಾಟಾಗಿತ್ತು. ಅಲ್ಲಿ ಜಿಟಿಎನ್ ಅವರೂ ಶ್ರೋತೃಗಳಾಗಿದ್ದರು. ಬೈಠಕ್ಕು ಮುಗಿದಮೇಲೆ ಅಪರಿಚಿತರೊಬ್ಬರು ಜಿಟಿಎನ್ ಅವರ ಬಳಿ ಬಂದು ತಾನು ನರಸಿಂಹನ್ ಎಂದೂ, ಈಗ ಕಚೇರಿ ನಡೆಸಿದ ಬಾಲಕ ತನ್ನ ಮಗನೆಂದೂ ಇಪ್ಪತ್ತು ವರ್ಷಗಳ ಹಿಂದೆ ತಾನು ಮಂಗಳೂರಿಗೆ ಬಂದಿದ್ದೂ, ಆಗ ಜಿಟಿಎನ್ ಅವರು ಮಾಡಿದ ಸಹಾಯ ಎಲ್ಲವನ್ನೂ ಬಿಚ್ಚಿಟ್ಟಾಗ ಆ ಪುಟ್ಟ ಬಾಲಮಾಂತ್ರಿಕ ನಾರಾಯಣ ಅಯ್ಯಂಗಾರ್ಯರ ಮೊಮ್ಮಗನೆಂದೂ ತಿಳಿದು ಬಂತು. ತಮ್ಮ ತಂದೆಯೇ ರವಿಕಿರಣನಲ್ಲಿ ಮರುಹುಟ್ಟು ಪಡೆದಿರುವಂತೆ ತೋರುತ್ತದೆ ಎಂದಾಗ ಜಿಟಿಎನ್ ಪುಳಕಿತಗೊಂಡರು. ಈ ಪ್ರಸಂಗವನ್ನು ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಎಂ.ಎನ್. ಸುಂದರರಾಜ್ ಎಂಬುವರು ಕನ್ನಡಪ್ರಭದಲ್ಲಿ ಹಂಚಿಕೊಂಡದ್ದನ್ನು ನಾನು ಓದಿದ್ದು.
ಈಗ ನಾನು ಹೇಳುತ್ತಿರುವುದು ನಾನೇ ಸ್ವಯಂ ಚಿಕ್ಕವನಿದ್ದಾಗ ಕೇಳಿದ್ದು. ನಾನು ಮೈಸೂರಿನಲ್ಲಿ ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ನನಗಿಂತ ಆರು ವರ್ಷ ಹಿರಿಯಳಾಗಿದ್ದ ನನ್ನ ಅಕ್ಕ ಕಾಲೇಜು ಓದುತ್ತಿದ್ದಳು. ಆಕೆಯ ಸಹಪಾಠಿ ಸರಸ್ವತಿ ಎಂಬುವರು ಮೈಸೂರಿನ ಚಾಮರಾಜಾ ಜೋಡಿ ರಸ್ತೆಯ ಲಕ್ಷ್ಮೀ ಚಿತ್ರಮಂದಿರದ ಹಿಂಬಾಗದ ಸೊಪ್ಪಿನ ಕೊಳದ ಬೀದಿಯಲ್ಲಿ ಒಂದು ಕಿರುಕೋಣೆಯಂತಹ ಮನೆಯಲ್ಲಿ ತಮ್ಮ ತಾಯಿಯವರೊಂದಿಗೆ ವಾಸವಿದ್ದರು. ನನ್ನ ಅಕ್ಕನೊಂದಿಗೆ ನಾನು ಕೂಡ ಬಹಳ ಸಲ ಸರಸ್ವತಿ ಅವರ ಮನೆಗೆ ಹೋಗುತ್ತಿದ್ದೆ. ಸರಸ್ವತಿ ಅವರು ಹೇಳಿದ ಸುದ್ದಿಯೆಂದರೆ ಅವರ "ಅಕ್ಕನಿಗೆ ಜನಿಸಿದ ಮಗು ಅಂಬೆಗಾಲಿಡುವ ಸಂದರ್ಭದಲ್ಲಿಯೇ, ತನ್ನ ದಿವಂಗತ ತಾತ ನುಡಿಸುತ್ತಿದ್ದ ವಾದ್ಯವನ್ನು ಮೀಟಲು ಮುಂದಾಗುತ್ತಿತಂತೆ. ಆ ಹಿರಿಯರೆ ಆ ಮಗುವಾಗಿ ಜನಿಸಿರಬಹುದೆ ಎಂದು ಎಲ್ಲರೂ ಹೇಳುತಿದ್ದಾರಂತೆ."
"ನಿಮಗೆ ದೇವರಲ್ಲಿ ನಂಬಿಕೆ ಇಲ್ಲದಿದ್ದರೆ ನೀವು ಎನ್. ರವಿಕಿರಣ್ ಅವರನ್ನು ನೋಡಿ" ಎಂದು ಒಮ್ಮೆ ಹೇಳಿದವರು ಮತ್ಯಾರೂ ಅಲ್ಲ ವಿಶ್ವ ಪ್ರಸಿದ್ಧ ಸಿತಾರ್ ವಾದಕರಾದ ಪಂಡಿತ್ ರವಿಶಂಕರ್.
ರವಿಕಿರಣ್ ಅವರು 5 ನೇ ವರ್ಷದಲ್ಲಿದ್ದಾಗ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಸಂಗೀತ ವಿದ್ವಾಂಸರು ಬರೆದ ಅಭಿಪ್ರಾಯವೆಂದರೆ "ಐದು ವರ್ಷದ ಮಗು ಹೀಗೆ ಹಾಡುವುದನ್ನು ವ್ಯಾಖ್ಯಾನಿಸುವುದಾದರೂ ಹೇಗೆ. ಅದನ್ನು ಪಾರಾಮಾರ್ಥಿಕ ಆಳದಲ್ಲಿಯೇ ಚಿಂತಿಸಬೇಕಾದದ್ದು!"
ಎನ್. ರವಿಕಿರಣ್ ಜನಿಸಿದ್ದು 1967 ವರ್ಷದ ಫೆಬ್ರವರಿ 12 ರಂದು. ತಮ್ಮ ಎರಡನೇ ವಯಸ್ಸಿನಲ್ಲೇ ಸಂಗೀತ ಕಚೇರಿ ನೀಡಿದ ರವಿಕಿರಣ್ ರಸಿಕರ ಬೆರಗು ಮೂಡಿಸಿದರು. 1969ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಸಂಗೀತ ಸಭಾದಲ್ಲಿ ಮಗುವಾಗಿ ಚೊಚ್ಚಲ ಕಚೇರಿ ನೀಡಿದರು. ಬಹಳ ಚಿಕ್ಕ ವಯಸ್ಸಿನಲ್ಲೇ ಮದ್ರಾಸ್ ಸಂಗೀತ ಅಕಾಡೆಮಿ ಆಯೋಜಿಸಿದ್ದ ಸಂಗೀತ ಕ್ವಿಜ್ನಲ್ಲಿ ಕಷ್ಟದ ತಾಂತ್ರಿಕ ಪ್ರಶ್ನೆಗಳಿಗೆ ಉತ್ತರಿಸಿ ಸ್ಕಾಲರ್ಶಿಪ್ ಪಡೆದರು. ಆ ಸಂದರ್ಭದಲ್ಲಿ ಸಂಗೀತ ದಿಗ್ಗಜರಾದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಪಂಡಿತ್ ರವಿಶಂಕರ್, ಎಂ.ಎಸ್. ಸುಬ್ಬುಲಕ್ಷ್ಮಿ , ಟಿ. ಆರ್. ಮಹಾಲಿಂಗಂ ಮುಂತಾದ ಮಹನೀಯರು ರವಿಕಿರಣ್ ಅವರ ಸಂಗೀತ ವಿದ್ಯೆಗೆ ಮಾರುಹೋದರು.
ಹತ್ತನೇ ವಯಸ್ಸಿನವರೆಗೆ ಗಾಯನ ಕಚೇರಿ ನೀಡುತಿದ್ದ ರವಿಕಿರಣ್ ನಂತರ ಚಿತ್ರವೀಣೆಯ ಕಡೆ ಹೊರಳಿದರು. ಗೋಟುವಾದ್ಯ ಸ್ವರೂಪದ ವಾದ್ಯಕ್ಕೆ ಚಿತ್ರವೀಣೆ ಎಂದು ನಾಮಕರಣ ಮಾಡಿದರು. ಈಗ ರವಿಕಿರಣ್ ಜಗತ್ತಿನ ಪ್ರಸಿದ್ಧ ಸಂಗೀತಗಾರರೆನಿಸಿದ್ದಾರೆ.
ಅತ್ಯಂತ ಹಳೆಯ ಸಂಗೀತ ವಾದ್ಯ ಚಿತ್ರವೀಣೆ. 21 ತಂತಿ ಹೊಂದಿರುವ ಚಿತ್ರವೀಣೆಯ ಮೇಲೆ ಹಿಡಿತ ಸಾಧಿಸಿದ ಸಂಗೀತ ಸಾಧಕರು ಬೆರಳೆಣಿಕೆಯಷ್ಟು. ಹಾಗಾಗಿ ಈ ವಾದ್ಯ ತೆರೆಮರೆಯಲ್ಲೇ ಉಳಿಯಬೇಕಾಯಿತು. ಮರೆಯಲ್ಲಿದ್ದ ಈ ಪ್ರಾಚೀನ ವಾದ್ಯಕ್ಕೆ ಹೊಸ ಆಯಾಮಕೊಟ್ಟವರು ರವಿಕಿರಣ್. ಅವರ ಅನೇಕ ಸಾಧನೆಗಳಲ್ಲಿ, ಸತತ 24 ಗಂಟೆ ಚಿತ್ರವೀಣೆ ನುಡಿಸಿ ವಿಶ್ವದ ಗಮನ ಸೆಳೆದಿದ್ದೂ ಒಂದು. 325 ರಾಗಗಳು, 175 ತಾಳಗಳಲ್ಲಿ ರವಿಕಿರಣ್ ಪ್ರಭುತ್ವ ಸಾಧಿಸಿದ್ದಾರೆ.
ಚಿತ್ರವೀಣಾ ರವಿಕಿರಣ್ ವಿಶ್ವದ ಬೇರೆ ಬೇರೆ ನಗರಗಳಲ್ಲಿ ವಿವಿಧ ರೀತಿಯ ಸಂಗೀತ ಪ್ರಬೇಧಗಳನ್ನು ಅನುಸರಿಸುತ್ತಿರುವ ಅನೇಕ ಖ್ಯಾತನಾಮ ಸಂಗೀತಗಾರರ ಜತೆಗೂಡಿ ಸಂಗೀತ ಸಾಧ್ಯತೆಗಳನ್ನು ತೋರಿಸಿಕೊಟ್ಡಿದ್ದಾರೆ. 'ಇಂಟರ್ನ್ಯಾಷನಲ್ ಪೌಂಡೇಶನ್ ಆಫ್ ಕರ್ನಾಟಿಕ್ ಮ್ಯೂಸಿಕ್' ಸಂಸ್ಥೆ ಸ್ಥಾಪಿಸಿ ಆ ಮೂಲಕ ಹಲವು ದೇಶಗಳ ನಡುವಿನ ಸಾಂಸ್ಕೃತಿಕ ಬೆಸುಗೆ ಆಗಿದ್ದಾರೆ.
ರವಿಕಿರಣ್ ಹಲವು ಪುಸ್ತಕ ಬರೆದಿದ್ದಾರೆ. 'ಅಪ್ರಿಷಿಯೇಟಿಂಗ್ ಕರ್ನಾಟಿಕ್ ಮ್ಯೂಸಿಕ್', `ಪರ್ಪೆಕ್ಟಿಂಗ್ ಕರ್ನಾಟಿಕ್ ಮ್ಯೂಸಿಕ್' ಕೃತಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಮೈಲುಗಲ್ಲುಗಳೆನಿಸಿವೆ. 'ಟೆಲಿ ಟೀಚಿಂಗ್' ಕಂಪ್ಯೂಟರ್ ಕಾರ್ಯಕ್ರಮದ ಮೂಲದ ವಿಶ್ವದಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿರುವ ಅವರು ಸಂಗೀತದ ಬಗ್ಗೆ ಯಾವುದೇ ಅನುಮಾನಗಳಿಗೆ ಉತ್ತರಿಸುತ್ತಾರೆ.
ಅಪಾರ ಅಂತಾರಾಷ್ಟ್ರೀಯ, ರಾಷ್ಟ್ರೀಯ ಪ್ರಶಸ್ತಿಗಳು ರವಿಕಿರಣ್ ಅವರಿಗೆ ಸಂದಿವೆ. ತಮ್ಮ ಆರನೇ ವಯಸ್ಸಿನಲ್ಲೇ ಅವರಿಗೆ ಪ್ರತಿಷ್ಠಿತ 'ಅರುಲ್ ಇಸ್ಕ್ರೆ ಸೆಲ್ವನ್' ಬಿರುದು ಲಭಿಸಿತು. ಕಲಾಕ್ಷೇತ್ರದಲ್ಲಿನ ಮಹತ್ವದ ಸಾಧನೆಗಾಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ಅತ್ಯಂತ ಕಿರಿಯ (39 ನೆಯ ವಯಸ್ಸಿನಲ್ಲಿ) ಎಂಬ ಹೆಗ್ಗಳಿಕೆ ಅವರದ್ದು. ಇದಲ್ಲದೆ ಅಂತಾರಾಷ್ಟ್ರೀಯ ಪ್ರಶಸ್ತಿಗಳಾದ ರಷ್ಯಾದ 'ಮಿಲೇನಿಯಂ' ಪ್ರಶಸ್ತಿ, ಅಮೆರಿಕಾದ 'ನ್ಯೂ ಏಜ್ ವಾಯ್ಸ್ ಅವಾರ್ಡ್', 'ಕಲೈಮಾಮಣಿ' ಪ್ರಶಸ್ತಿ, 'ವಿಸ್ಡಮ್ ಇಂಟರ್ನ್ಯಾಷನಲ್', `ಕುಮಾರ ಗಂಧರ್ವ', `ಸಂಸ್ಕೃತಿ ಸಮ್ಮಾನ', 'ಸಂಗೀತ ಕಲಾನಿಧಿ' ಮುಂತಾದ ಅನೇಕ ಪ್ರತಿಷ್ಟಿತ ಪ್ರಶಸ್ತಿಗಳು ರವಿಕಿರಣ್ ಅವರನ್ನು ಅರಸಿಬಂದಿವೆ.
Musician N. Ravikiran
ಕಾಮೆಂಟ್ಗಳು