ಭಾರ್ಗವಿ
ಭಾರ್ಗವಿ ನಾರಾಯಣ್
ಭಾರ್ಗವಿ ನಾರಾಯಣ್ ಪ್ರಖ್ಯಾತ ರಂಗಭೂಮಿ ಕಲಾವಿದೆ ಮತ್ತು ದೂರದರ್ಶನ ಧಾರವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿ ಪಾತ್ರಧಾರಿ ಎಂದು ಪ್ರಸಿದ್ಧರಾಗಿದ್ದವರು ಮಾತ್ರವಲ್ಲ, ನಮ್ಮ ಮಧ್ಯಮ ವರ್ಗದ ಬದುಕನ್ನು ತೆರೆಯ ಮೇಲೆ, ರಂಗದ ಮೇಲೆ ನಮ್ಮ ಬದುಕನ್ನೇ ಪ್ರತಿನಿಧಿಸುತ್ತಿದ್ದಾರೆ ಎಂಬಷ್ಟು ಅಕ್ಕರೆ ಹುಟ್ಟಿಸಿಬಿಟ್ಟಿದ್ದರು.
ಭಾರ್ಗವಿ ನಾರಾಯಣ್ 1938ರ ಫೆಬ್ರುವರಿ 4ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಡಾ. ಎಂ. ರಾಮಸ್ವಾಮಿ. ತಾಯಿ ನಾಮಗಿರಿಯಮ್ಮ. ಮಹಾರಾಣಿ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದ ನಂತರದಲ್ಲಿ ಇಂಗ್ಲಿಷ್ನಲ್ಲಿ ಎಂ.ಎ. ಪದವಿ ಪಡೆದ ಭಾರ್ಗವಿ ಅವರು ಇ.ಎಸ್.ಐ. ಕಾರ್ಪೊರೇಷನ್ನಿನಲ್ಲಿ ವ್ಯವಸ್ಥಾಪಕರ ಹುದ್ದೆ ನಿರ್ವಹಿಸಿ 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಮಹಾನ್ ಕಲಾವಿದ ಮೇಕಪ್ ನಾಣಿ ಎಂದು ಪ್ರಖ್ಯಾತರಾಗಿದ್ದ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರ ಬಾಳ ಸಂಗಾತಿಯಾಗಿದ್ದರು. ಇವರ ಮಕ್ಕಳಾದ ಸುಧಾ ಬೆಳವಾಡಿ ಮತ್ತು ಪ್ರಕಾಶ್ ಬೆಳವಾಡಿ ಸಹಾ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಗಳಲ್ಲಿ ಮಹತ್ಸಾಧನೆ ಮಾಡಿದ್ದಾರೆ.
ಹೈಸ್ಕೂಲಿನಲ್ಲಿದ್ದಾಗಲೇ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸಿಕೊಂಡ ಭಾರ್ಗವಿಯವರು ಉಪಾಧ್ಯಾಯಿನಿಯಾಗಿದ್ದ ವಿಮಲಾರವರ ಪ್ರೋತ್ಸಾಹದಂತೆ ತಮ್ಮದೇ ಗುಂಪುಕಟ್ಟಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಶಾಲಾ ಕಾಲೇಜುಗಳ ನಾಟಕಗಳಲ್ಲಿ ಭಾರ್ಗವಿಯವರು ಪ್ರಮುಖ ಪಾತ್ರವಹಿಸಿದ ನಾಟಕಕ್ಕೆ ಬಹುಮಾನ ಗ್ಯಾರಂಟಿ ಎಂಬ ಪ್ರತೀತಿಯಿತ್ತು. ಅವರು ರಾಜ್ಯ ನಾಟಕ ಸ್ಪರ್ಧೆಗಳಲ್ಲಿ ಎರಡುಬಾರಿ ‘ಉತ್ತಮ ನಟಿ’ ಪ್ರಶಸ್ತಿ ಗಳಿಸಿದರು. ರಾಜ್ಯಮಟ್ಟದ ಮಕ್ಕಳ ನಾಟಕ ಸ್ಪರ್ಧೆಗಾಗಿ ಅವರು ಬರೆದು ನಿರ್ದೇಶಿಸಿದ ಮಕ್ಕಳ ನಾಟಕ ‘ಭೂತಯ್ಯನ ಪೇಚಾಟ’ ನಾಟಕಕ್ಕೆ 1975ರಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಬಂತು.
ಭಾರ್ಗವಿ ನಾರಾಯಣ್ ಅವರು 1955ರಿಂದಲೂ ಆಕಾಶವಾಣಿಯ ಕಲಾವಿದೆಯಾಗಿ ಭಾಗವಹಿಸಿದ ನಾಟಕಗಳ ಜೊತೆಗೆ ಹಲವಾರು ನಾಟಕಗಳನ್ನೂ ಬರೆದು ನಿರ್ದೇಶಿಸಿದರು. ಪ್ರೊಫೆಸರ್ ಹುಚ್ಚೂರಾಯ ಚಲನ ಚಿತ್ರದಲ್ಲಿನ ನಟನೆಗಾಗಿ ಅವರಿಗೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಸಂದಿತ್ತು. ಎರಡು ಕನಸು, ಹಂತಕನ ಸಂಚು, ಪಲ್ಲವಿ, ಪಲ್ಲವಿ ಅನುಪಲ್ಲವಿ, ಬಾ ನಲ್ಲೆ ಮಧುಚಂದ್ರಕೆ, ಕಾಡ ಬೆಳದಿಂಗಳು,
ಮುಯ್ಯಿ, ರಾಜಕುಮಾರ, ಬಟರ್ ಫ್ಲೈ ಮುಂತಾದವು ಅವರು ನಟಿಸಿದ ಚಿತ್ರಗಳಲ್ಲಿ ಕೆಲವು. ಮುಕ್ತ, ಮಂಥನ, ಮನೆ ಮನೆ ಕಥೆ ಸೇರಿದಂತೆ ಅನೇಕ ದೂರದರ್ಶನ ಧಾರಾವಾಹಿಗಳಲ್ಲೂ ಪಾತ್ರ ನಿರ್ವಹಿಸಿದ್ದರು. ಭಾರ್ಗವಿ ನಾರಾಯಣರು ಝೀ ಟಿ.ವಿ. ದೈನಿಕ ಧಾರಾವಾಹಿ ಋತುಮಾನಕ್ಕಾಗಿ ಚಿತ್ರಕಥೆ, ಸಂಭಾಷಣೆ ರಚಿಸಿರುವುದಲ್ಲದೆ, ಬಾಳೇ ಬಂಗಾರ ಕಾರ್ಯಕ್ರಮಕ್ಕೆ ಕ್ರಿಯಾಶೀಲ ಸಲಹೆ ಮಾರ್ಗದರ್ಶನಗಳನ್ನೂ ನೀಡಿದ್ದರು. ಉಳಿದಂತೆ ಕೂಡಾ ಅನೇಕ ಟಿ.ವಿ. ಧಾರವಾಹಿಗಳಿಗೂ ಚಿತ್ರಕತೆ, ಸಂಭಾಷಣೆ ರಚಿಸಿದ್ದ ಭಾರ್ಗವಿ ನಾರಾಯಣ್ ಅವರಿಗೆ ‘ಕವಲೊಡೆದ ದಾರಿ’ ಧಾರಾವಾಹಿಗಾಗಿ ಮಂಗಳೂರಿನ ಪ್ರತಿಷ್ಠಿತ ಸಂದೇಶ ಪ್ರಶಸ್ತಿ ಲಭಿಸಿತು.
ರಂಗಭೂಮಿಯಿಂದ ಪಡೆದ ಅನುಭವದಿಂದ ಅವಿಭಕ್ತ ಕುಟುಂಬವನ್ನು ಪ್ರೀತಿಸುವ, ಎಲ್ಲರೊಡನೆ ಬೆರೆತು ಸಂತೋಷಿಸುವ, ಇರದುದರೆಡೆಗೆ ಜೀವ ತುಯ್ಯದೆ, ಇರುವುದರೆಡೆಗೆ ಸಂತೃಪ್ತ ಭಾವ ತಾಳಿದ್ದ ತೃಪ್ತ ಕಲಾವಿದೆಯಾಗಿದ್ದರು ಭಾರ್ಗವಿ ನಾರಾಯಣ್. 'ನಾನು ಭಾರ್ಗವಿ' ಎಂಬುದು ಭಾರ್ಗವಿ ನಾರಾಯಣ್ ಅವರ ಆತ್ಮಕಥನ. ಈ ಕೃತಿಗಾಗಿ ಅವರಿಗೆ ಎಂ. ಕೆ. ಇಂದಿರಾ ಪ್ರಶಸ್ತಿ ಸಂದಿತ್ತು.
ಭಾರ್ಗವಿ ನಾರಾಯಣ್ ಅವರಿಗೆ 1998ರಲ್ಲಿ ಕರ್ನಾಟಕ ನಾಟಕ ಅಕಾಡಮಿಯಿಂದ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮುಂತಾದ ಅನೇಕ ಗೌರವಗಳೂ ಸಂದಿದ್ದವು. ನಾಟಕ ಅಕಾಡಮಿಯ ಸದಸ್ಯೆಯಾಗಿಯೂ ಸಹಾ ಅವರು ಸೇವೆ ಸಲ್ಲಿಸಿದ್ದರು.
1992ರಲ್ಲಿ ನಾವು ಆಯೋಜಿಸಿದ್ದ ನಾಟಕೋತ್ಸವದಲ್ಲಿ ಅವರೊಡನೆ ಕಳೆದ ಸಮಯ ಮರೆಯಲಾಗದ್ದು. ಅದೆಷ್ಟು ಸರಳ ಸಹಜ ಸಹೃದಯ ನಿಗರ್ವಿ ಜೀವಿಯಾಗಿದ್ದರು ಅವರು.
ಭಾರ್ಗವಿ ನಾರಾಯಣ್ 2022ರ ಫೆಬ್ರುವರಿ 14 ರಂದು ನಿಧನರಾದರು. ನಾನು ಭಾರ್ಗವಿ ಎಂದು ಬರೆದ ಇಂಥ ನಿಗರ್ವಿ ಸಹಜ ಕಲಾವಿದೆ ನಮಗಿನ್ನೆಲ್ಲಿ. ಹೀಗೆ ಬಾಳಿ ಹೋದ, ಇನ್ನೂ ಇವರು ನಮ್ಮೊಡನೆ ಶಾಶ್ವತವಾಗಿ ಇರಬೇಕು ಎಂದೆನಿಸುತ್ತಿರುವಾಗಲೇ ಹೊರಟುಬಿಡುವ ಇಂಥ ಬದುಕೇ ಧನ್ಯ. ಅದು ಭಾರ್ಗವಿ ಅಂಥ ಸಹಜ ಬದುಕುವವರಿಗೆ ಮಾತ್ರವೇ ಸಾಧ್ಯವಾಗುವಂತದ್ದು. ಈ ಮಹಾನ್ ಜೀವಿಗೆ ನಮನ.
On the birthday of my favorite artiste Bhargavi Narayan
ಕಾಮೆಂಟ್ಗಳು